Advertisement

Ration: ದ.ಕ., ಉಡುಪಿಯಲ್ಲಿ 1.5 ಕೋ.ರೂ.ಗೂ ಅಧಿಕ ಬಾಕಿ

02:54 PM Aug 29, 2023 | Team Udayavani |

ಕಾರ್ಕಳ: ರಾಜ್ಯ ಸರಕಾರ ಅನ್ನಭಾಗ್ಯ ಯೋಜನೆಯಲ್ಲಿ 10 ಕೆಜಿ ಅಕ್ಕಿ ಘೋಷಣೆ ಮಾಡಿದಾಗ ಹೆಚ್ಚಿನ ಕಮಿಷನ್‌ ದೊರಕಬಹುದು ಎಂಬ ನಿರೀಕ್ಷೆ ವಿತರಕರದ್ದಾಗಿತ್ತು. ಆದರೆ ಸರಕಾರ ಏಕಾಏಕಿ ಅಕ್ಕಿಯ ಪ್ರಮಾಣವನ್ನೇ ಕಡಿತಗೊಳಿಸಿದ ಕಾರಣ ಅವರ ಕಮಿಷನ್‌ಗೂ ಹೊಡೆತ ಬಿದ್ದಿದೆ. ಜತೆಗೆ ಹಿಂದಿನ ತಿಂಗಳುಗಳ ಕಮಿಷನ್‌ ಪಾವತಿಯಾಗದೆ ಜೀವನ ಕಷ್ಟ ಎನ್ನುವ ಪರಿಸ್ಥಿತಿ ಅವರದ್ದಾಗಿದೆ.

Advertisement

ದ.ಕ. ಜಿಲ್ಲೆಯಲ್ಲಿ 900 ಮತ್ತು ಉಡುಪಿಯಲ್ಲಿ 292 ಮಂದಿ ಒಳಗೊಂಡಂತೆ ರಾಜ್ಯದಲ್ಲಿ 20,295 ಪಡಿತರ ವಿತರಕರಿದ್ದಾರೆ. ಒಬೊಬ್ಬರಿಗೆ ಸರಾಸರಿ 15 ಸಾವಿರ ರೂ.ಗಳಂತೆ ಉಭಯ ಜಿಲ್ಲೆಗಳಲ್ಲಿ ಒಟ್ಟು ಒಂದೂ ಮುಕ್ಕಾಲು ಕೋಟಿ ರೂಪಾಯಿಗೂ ಅಧಿಕ, ರಾಜ್ಯದಲ್ಲಿ ಸುಮಾರು 31 ಕೋ.ರೂ. ಬಾಕಿ ಇದೆ. ಎಲ್ಲ ಮಾದರಿಯ ಪಡಿತರ ಕಾರ್ಡ್‌ದಾರರಿಗೆ ಪಡಿತರ ಒದಗಿಸುವ ಮಹತ್ವದ ಜವಾಬ್ದಾರಿ ಇವರದ್ದು. ಜನರ ಹಸಿವು ನೀಗಿಸುವಲ್ಲಿ ಸಹಕರಿಸುವ ವಿತರಕರಿಗೆ ಸಲ್ಲಬೇಕಾದ ಕಮಿಷನ್‌ ಹಣವನ್ನು ಕಾಲಕಾಲಕ್ಕೆ ನೀಡುವ ವಿಚಾರದಲ್ಲಿ ಸರಕಾರ ಆಸಕ್ತಿ ತೋರಿದಂತಿಲ್ಲ.

ವಿತರಣೆಯಲ್ಲೂ ವ್ಯತ್ಯಾಸ

ಜಿಲ್ಲಾಧಿಕಾರಿ ಕಚೇರಿಯ ಮೂಲಕ ಈ ಮೊತ್ತ ಪಾವತಿಯಾಗುವುದು ಕ್ರಮ. ಆದರೆ ಸರಕಾರದಿಂದ ನಿಯಮಿತವಾಗಿ ಅನುದಾನ ಬಾರದ ಕಾರಣ ಸಕಾಲಕ್ಕೆ ಕಮಿಷನ್‌ ಸಿಗುತ್ತಿಲ್ಲ. ಪಾವತಿಯಲ್ಲಿ ಜಿಲ್ಲಾವಾರು ವ್ಯತ್ಯಾಸವೂ ಕಂಡು ಬರುತ್ತಿದೆ. ಬೆಂಗಳೂರು ಸಹಿತ ಕೆಲವೆಡೆ ಜೂನ್‌, ಜುಲೈ ತಿಂಗಳ ಕಮಿಷನ್‌ ಬಾಕಿಯಿದ್ದರೆ, ದ.ಕ. ಮತ್ತು ಉಡುಪಿಯಲ್ಲಿ ಎಪ್ರಿಲ್‌ನಿಂದ ಆಗಸ್ಟ್‌ ತನಕ ಐದು ತಿಂಗಳಿನದು ಬಾಕಿಯಿದೆ.

ಕಮಿಷನ್‌ ಮೊತ್ತವೂ ಅಲ್ಪ

Advertisement

25ರಿಂದ 30 ವರ್ಷಗಳಿಂದ ಜನರಿಗೆ ಪಡಿತರ ವಿತರಿಸುತ್ತಿರುವ ವಿತರಕರು ಇದ್ದಾರೆ. ಒಂದು ಕ್ವಿಂಟಾಲ್‌ ದವಸ ವಿತರಣೆಗೆ 124 ರೂ. ಕಮಿಷನ್‌ ಮಾತ್ರ ಲಭಿಸುತ್ತದೆ. ಈ ಮೊತ್ತದಲ್ಲಿ ನಾವು ಎಲ್ಲ ಖರ್ಚುಗಳನ್ನು ನಿಭಾಯಿಸಿಕೊಂಡು ಜೀವನ ನಡೆಸುವುದು ಕಷ್ಟವಾಗಿದೆ. ಕಮಿಷನ್‌ ಅನ್ನು ಒಂದು ಕ್ವಿಂಟಾಲಿಗೆ 250 ರೂ.ಗಳಿಗೆ ಹೆಚ್ಚಿಸಬೇಕು ಎಂಬುದು ವಿತರಕರ ಆಗ್ರಹ.

ಕಾರ್ಡ್‌ಗೆ 10 ರೂ. ಭರವಸೆಯೂ ಠುಸ್‌

3 ವರ್ಷಗಳ ಹಿಂದೆ ಬೆರಳಚ್ಚು ನೀಡಿ ಪಡಿತರ ಕಾರ್ಡ್‌ನ ಫ‌ಲಾನುಭವಿಗಳನ್ನು ದೃಢೀಕರಿಸಿಕೊಳ್ಳಬೇಕಿತ್ತು. ಆಗ ಒಂದು ಕಾರ್ಡ್‌ಗೆ 10 ರೂ.ಗಳಂತೆ ಪಾವತಿಸುವುದಾಗಿ ವಿತರಕರಿಗೆ ಭರವಸೆ ನೀಡಲಾಗಿತ್ತು. ಆದರೆ ಆ ಮೊತ್ತವೂ ವಿತರಕರ ಖಾತೆಗೆ ಜಮೆಯಾಗಿಲ್ಲ.

ದಾಸ್ತಾನು ಮಾಹಿತಿಯೂ ಸಿಗುತ್ತಿಲ್ಲ

ಆನ್‌ಲೈನ್‌ ಆಧಾರಿತವಾಗಿ ದಾಖಲೆಗಳ ಮೂಲಕ ಪಡಿತರ ಸಾಮಗ್ರಿ ವಿತರಣೆಯಾಗುತ್ತಿದೆ. ಕಳೆದೊಂದು ತಿಂಗಳಿನಿಂದ ಸಮರ್ಪಕವಾಗಿ ಪೋರ್ಟಲ್‌ ತೆರೆದುಕೊಳ್ಳದ ಕಾರಣ, ಆಹಾರ ದಾಸ್ತಾನಿನ ಅಂಕಿ-ಅಂಶ ಕೂಡ ಸಮರ್ಪಕವಾಗಿ ಅರಿವಿಗೆ ಬರುತ್ತಿಲ್ಲ. ಸಾಮಗ್ರಿ ವಿತರಣೆಯಾಗಿದ್ದರೂ ಆನ್‌ಲೈನ್‌ಲ್ಲಿ ದಾಸ್ತಾನು ಇದೆ ಎಂಬ ಅಂಕಿ – ಅಂಶ ತೋರಿಸುತ್ತಿರುವುದು ವಿತರಕರಿಗೆ ಇನ್ನೊಂದು ತಲೆನೋವಾಗಿದೆ. ಸರಬರಾಜಿನಲ್ಲೂ ವ್ಯತ್ಯಾಸ ಆಗುತ್ತಿರುವುದು ಮತ್ತೂಂದು ಸಮಸ್ಯೆ.

ಸರಕಾರ ಮೇ ತನಕದ ಕಮಿಷನ್‌ ಬಿಡುಗಡೆಗೊಳಿಸಿದೆ. ಅನಂತರದ ಎರಡು ತಿಂಗಳಿನದ್ದು ಬಾಕಿಯಿದೆ. ಕೆಲವು ಜಿಲ್ಲೆಗಳಲ್ಲಿ ಹಿಂದಿನ ಕಮಿಷನ್‌ ಸಿಗದೇ ಇದ್ದಲ್ಲಿ ಅದಕ್ಕೆ ಸ್ಥಳೀಯವಾಗಿ ಆಗಿರುವ ಸಮಸ್ಯೆ ಕಾರಣವಾಗಿರಬಹುದು. ಸೆಪ್ಟಂಬರ್‌ ಬಳಿಕ 10 ಕೆಜಿ ಅಕ್ಕಿ ವಿತರಿಸುವುದಾಗಿ ಸರಕಾರ ಭರವಸೆ ನೀಡಿದೆ. ಅಕ್ಕಿ ನೀಡಲು ಸಾಧ್ಯವಾಗದಿದ್ದಲ್ಲಿ ಇತರ ಧಾನ್ಯಗಳನ್ನು ನೀಡುವಂತೆ ಮನವೊಲಿಸಿದ್ದೇವೆ. ಕಮಿಷನ್‌ ಹೆಚ್ಚಿಸುವಂತೆಯೂ ಸರಕಾರದ ಗಮನಕ್ಕೆ ತಂದಿದ್ದೇವೆ. – ಟಿ. ಕೃಷ್ಣಪ್ಪ, ರಾಜ್ಯಾಧ್ಯಕ್ಷ ಪಡಿತರ ವಿತರಕರ ಸಂಘ, ಬೆಂಗಳೂರು

ವಿತರಕರಿಗೆ 5 ಕೆ.ಜಿ ಅಕ್ಕಿ ವಿತರಣೆಯ ಕಮಿಷನ್‌ ಕಾಲಕಾಲಕ್ಕೆ ಪಾವತಿಯಾಗುತ್ತಿದೆ. 2 ತಿಂಗಳ ಕಮಿಷನ್‌ ಬಂದಿಲ್ಲ ಎನ್ನುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ನಾನು ಇತ್ತೀಚೆಗಷ್ಟೆ ಅಧಿಕಾರ ವಹಿಸಿಕೊಂಡಿದ್ದು, ಈ ಬಗ್ಗೆ ಪರಿಶೀಲಿಸುವೆ. – ರವೀಂದ್ರ, ಉಪನಿರ್ದೇಶಕ (ಪ್ರಭಾರ), ಆಹಾರ, ಮತ್ತು ನಾಗರಿಕ ಪೂರೈಕೆ ಇಲಾಖೆ ಉಡುಪಿ

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next