Advertisement

ಸಾಂವಿಧಾನಿಕ ನೆಲೆಯಲ್ಲಿ ಭಾರತದ ರಾಷ್ಟ್ರಾಧ್ಯಕ್ಷರು

11:24 PM Jun 23, 2022 | Team Udayavani |

“ಭಾರತಕ್ಕೆ ಓರ್ವ ರಾಷ್ಟಾಧ್ಯಕ್ಷ ಇರತಕ್ಕದ್ದು’ ಎಂಬುದಾಗಿ ನಮ್ಮ ಸಂವಿಧಾನ 5ನೇ ವಿಭಾಗದ ಮೊದಲ ವಿಧಿ 52ರಲ್ಲಿ ವಿಧಿಸಿದೆ. ತನ್ಮೂಲಕ ಸಹಸ್ರಾರು ವರ್ಷಗಳ ರಾಜಪ್ರಭುತ್ವ ಆ ಬಳಿಕ ಬ್ರಿಟಿಷ್‌ ಕಂಪೆನಿ ಹಾಗೂ ನೇರ ಆಂಗ್ಲರಾಳ್ವಿಕೆಯ ಪಳೆಯುಳಿಕೆಗಳಿಂದ ಹೊರಬಂದು ಗಣರಾಜ್ಯದ ಉದಯರಾಗ ನಮ್ಮ ರಾಜ್ಯಾಂಗ ಘಟನೆ ಮೊಳಗಿಸಿದೆ. ಬ್ರಿಟನ್‌, ಜಪಾನ್‌ ಮುಂತಾದ ರಾಷ್ಟ್ರಗಳು ಪ್ರಜಾತಂತ್ರದೊಂದಿಗೆ ರಾಜ ಪ್ರಭುತ್ವ ಅಥವಾ ಅರಸೊತ್ತಿಗೆಗೆ ಇನ್ನೂ ಎತ್ತರದ ಸ್ತರ ಕಲ್ಪಿಸಿದರೆ, ನಮ್ಮ ಸಂವಿಧಾನದ ವಿಶಾಲ ನೆಲದಲ್ಲಿ ಜನತಂತ್ರ ಹಾಗೂ ಗಣರಾಜ್ಯ ಪದ್ಧತಿಯನ್ನು ಏಕಕಾಲದಲ್ಲಿ ಒಡಮೂಡಿಸಿದೆ. ಮುಂದೆ 52ನೇ ವಿಧಿಯಿಂದ ಒಂದೊಂದಾಗ 5ನೇ ವಿಭಾಗದಲ್ಲಿ ಮಾತ್ರವಲ್ಲ ರಾಜ್ಯ ಸರಕಾರದ ವಿವರಣೆ ತುಂಬಿದ 6ನೇ ವಿಭಾಗಕ್ಕೂ ವ್ಯಾಪಿಸಿ, ರಾಷ್ಟ್ರಾಧ್ಯಕ್ಷರ ಅಧಿಕಾರದ ಎತ್ತರ, ಬಿತ್ತರದ ವಿಶಾಲ ಕಕ್ಷೆಯನ್ನು ನಮ್ಮ ಸಂವಿಧಾನ ತುಂಬಿ ನಿಂತಿದೆ. ಅದೇ ರೀತಿ ಕೇಂದ್ರ ಹಾಗೂ ರಾಜ್ಯದ ಚುನಾ ಯಿತ ಪ್ರತಿನಿಧಿಗಳೆಲ್ಲರೂ ಭಾಗಿಯಾಗುವ ಪರೋಕ್ಷ ಮತ ಚಲಾಯಿಸಿ ಈ ಉನ್ನತ ಹುದ್ದೆಗೆ 5 ವರ್ಷಗಳಿಗೊಮ್ಮೆ ಹೊಸಮುಖ ಪರಿಚಯಿಸುವ ಪರಿಪಾಠಕ್ಕೆ ಅನುವು ಮಾಡಿಕೊಟ್ಟಿದೆ. ಭಾರತದ ಪ್ರಜೆಯಾಗಿರಬೇಕು, ಸಂಸತ್‌ ಸದಸ್ಯನಾಗುವ ಎಲ್ಲ ಅರ್ಹತೆ ತುಂಬಿಕೊಂಡಿರಬೇಕು, ಕನಿಷ್ಠ 35 ವರ್ಷ ವಯಸ್ಕನಾಗಿರಬೇಕು ಎಂಬ ಉÇÉೇಖಕ್ಕೆ, ಉಮೇದುವಾರಿಕೆಗೆ 50 ಮಂದಿಯಷ್ಟಾದರೂ ಸೂಚನೆ ಹಾಗೂ 50 ಮಂದಿಯಷ್ಟಾದರೂ ಅನು ಮೋದನೆ ಈ ಚುನಾವಣ ಕಣದ (Electoral College) ಮತದಾರರಿಂದ ಮೂಡಿ ಬರಬೇಕು ಎಂಬ ವ್ಯಾಖ್ಯಾನವೂ ಸೇರಿಕೊಂಡಿದೆ.

Advertisement

ಭಾರತ ಸಂವಿಧಾನ ನಿರ್ಮಿಸಿದ ಅತ್ಯಂತ ವೈಶಿಷ್ಟ ಪೂರ್ಣ ಹುದ್ದೆ ರಾಷ್ಟ್ರಪತಿಯವರದು. ಅಷ್ಟೇ ಸಾಂವಿಧಾನಿಕ ವೈಚಿತ್ರÂಗಳು (Constitutional Paradoxes) ತುಂಬಿ ನಿಂತ ಎತ್ತರದ ಸ್ಥಾನವೂ ಇದೇ ಎಂದು ವಿಶ್ಲೇಷಿಸಬೇಕಾಗಿದೆ. ರಾಷ್ಟ್ರಪತಿ ರಾಷ್ಟ್ರದ ವರಿಷ್ಠಾಧಿಕಾರಿ ಆದರೂ ಪ್ರಪ್ರಥಮ ಪ್ರಜೆ! ಭಾರತ ಒಕ್ಕೂಟದ ಕಾರ್ಯಾಂಗದ ಅಧಿಕಾರ ಈ ಸ್ಥಾನಕ್ಕೆ ನೀಡಲಾಗಿದೆ ಹಾಗೂ ಸ್ವತಃ ತಾನು ಅಥವಾ ತನ್ನ ಕೈಕೆಳಗಿನವರ ಮೂಲಕ ಆ ಅಧಿಕಾರವನ್ನು ರಾಷ್ಟ್ರಾಧ್ಯಕ್ಷರು ಚಲಾಯಿಸುತ್ತಾರೆ’ ಎಂಬುದು 53ನೇ ವಿಧಿಯ ಒಕ್ಕಣೆ. ಅದಕ್ಕೆ ಸಂವಾದಿಯಾಗಿ “ಪ್ರಧಾನ ಮಂತ್ರಿಯ ನೇತೃತ್ವದ ಸಚಿವ ಸಂಪುಟ ರಾಷ್ಟ್ರಪತಿ ಯವರಿಗೆ ಅವರ ಕಾರ್ಯಕ್ರಮಗಳಿಗೆ ಸಹಕರಿಸಲು ಹಾಗೂ ಸಲಹೆ ನೀಡಲು ಇರತಕ್ಕದ್ದು’ ಎಂಬ ವ್ಯಾಖ್ಯಾನ 74ನೇ ವಿಧಿಯಲ್ಲಿದೆ. “ಪ್ರಧಾನ ಮಂತ್ರಿ ಹಾಗೂ ಅವರ ನೇತೃತ್ವದ ಸಚಿವ ಸಂಪುಟ ನೀಡುವ ಸಲಹೆಯನ್ನು ರಾಷ್ಟ್ರಾಧ್ಯಕ್ಷರು ಕಡ್ಡಾಯ ಮಾನ್ಯ ಮಾಡತಕ್ಕದ್ದು’ ಎಂಬ ಇಂದಿರಾ ಗಾಂಧಿ ಸರಕಾರದ 42ನೇ ತಿದ್ದುಪಡಿಗೆ 1978ರ 44ನೇ ತಿದ್ದುಪಡಿ ಮೂಲಕ ಅಂಥ ಸಲಹೆಯನ್ನು ಸಚಿವ ಸಂಪುಟದ ಮರು ಪರಿಶೀಲನೆಗೆ ಕಳುಹಿಸುವ ಅಧಿಕಾರವನ್ನು ಅಧ್ಯಕ್ಷರಿಗೆ ಮೊರಾರ್ಜಿ ದೇಸಾಯಿ ಸರಕಾರ ನೀಡಿತು.

ಇಲ್ಲಿ ಗಮನಿಸಬೇಕಾದ ಸೂಕ್ಷ್ಮ ಅಂಶಗಳೆಂದರೆ ಒಂದರ ಮೇಲೊಂದರಂತೆ ಭಾರತ ಒಕ್ಕೂಟದ ಅಧಿಕಾರದ ಗೊಂಚಲು ಬೀಗದ ಕೈಯನ್ನು ಸಾಂವಿ ಧಾನಿಕವಾಗಿ ಹಸ್ತಾಂತರಿಸಿದುದು ರಾಷ್ಟ್ರಪತಿ ಯವರಿಗೆ! ಆದರೆ ಅದರ ನೈಜ ಅಧಿಕಾರ ಪ್ರಧಾನ ಮಂತ್ರಿ ಹಾಗೂ ಅವರ ಸಚಿವ ಸಂಪುಟದ ಪಾಲಿಗೆ. ಇಲ್ಲಿ ಬ್ರಿಟನಿನ ರಾಜ ಗದ್ದುಗೆ (Crown) ಹಾಗೂ ಪ್ರಧಾನಿ ಪಟ್ಟದ ಛಾಯೆ ದಟ್ಟವಾಗಿರುವುದು ಗಮನಾರ್ಹ. ಅಲ್ಲಿ ಸರಕಾರ “Her Majesty’s Government’ ಎಂದೂ ಕರೆದರೂ ರಾಷ್ಟ್ರ ನೌಕೆಯ ನೈಜ ಕ್ಯಾಪ್ಟನ್‌ ಪ್ರಧಾನ ಮಂತ್ರಿ! ನಮ್ಮಲ್ಲಿಯೂ ಕೇಂದ್ರದಲ್ಲಿ ರಾಷ್ಟ್ರಪತಿ ಇರದೆ ಒಂದು ದಿನವೂ ಸರಕಾರ ಇರಲು ಅವಕಾಶವಿಲ್ಲ; ಅದೇ ರೀತಿ ಪ್ರಧಾನಿ ರಹಿತವಾಗಿ ಒಂದು ದಿನವೂ ರಾಷ್ಟ್ರ ರಥ ಮುಂದೆ ಸಾಗುವಂತಿಲ್ಲ!

ರಾಜ್ಯದಲ್ಲಾದರೆ 356 ವಿಧಿ ಪ್ರಯೋಗದೊಂದಿಗೆ ಮುಖ್ಯಮಂತ್ರಿ, ರಾಜ್ಯ ಸಚಿವ ಸಂಪುಟ ರಹಿತವಾಗಿ, ರಾಜ್ಯಪಾಲರೇ ಕೈಗೆತ್ತಿಕೊಳ್ಳಬಹುದು. ಆದರೆ ಆ ಅವಧಿಯನ್ನು “ರಾಷ್ಟ್ರಪತಿ ಆಳ್ವಿಕೆ’ ಎಂದು ಸಂಬೋಧಿಸಲಾಗುತ್ತದೆ ವಿನಾ “ರಾಜ್ಯಪಾಲರ ಆಳ್ವಿಕೆ’ ಎಂದು ನಮೂದಿಸಲಾಗುವುದಿಲ್ಲ. ಇಲ್ಲೆಲ್ಲ ಸಾಂವಿಧಾನಿಕ ಸೂಕ್ಷ್ಮಗಳು ಮಿಂಚುತ್ತವೆ. ನೂತನ ರಾಷ್ಟ್ರಪತಿ ಪದಗ್ರಹಣ ಸಂದರ್ಭದಲ್ಲಿ ಮಾತ್ರ “ತಾನು ಸಂವಿಧಾನವನ್ನು ಎತ್ತಿ ಹಿಡಿಯುತ್ತೇನೆ ಹಾಗೂ ಸಂರಕ್ಷಿಸುತ್ತೇನೆ’ ಎಂಬುದಾಗಿ ಉಚ್ಚರಿಸ ಬೇಕಾಗುತ್ತದೆ. ಆದರೆ ಪ್ರಧಾನ ಮಂತ್ರಿ, ಮುಖ್ಯ ಮಂತ್ರಿ ಆದಿಯಾಗಿ ಉಳಿದ ಎಲ್ಲ ಸಚಿವರು, ಶಾಸಕರು “ತಾವು ಸಂವಿಧಾನಕ್ಕೆ ಬದ್ಧರಾಗಿರುತ್ತೇವೆ’ ಎಂಬುದಾಗಿ ಪ್ರತಿಜ್ಞಾ ವಿಧಿ ಪೂರೈಸುತ್ತಾರೆ. ಇಲ್ಲಿ ಸಮಗ್ರ ರಾಷ್ಟ್ರದ ಸಾಂವಿಧಾನಿಕ ವ್ಯವಸ್ಥೆಯ ಸಂರಕ್ಷ ತಣ್ತೀ ರಾಷ್ಟ್ರಪತಿಯ ಹೆಗಲೇರಿದ ಅಂಶ ಗಮನಾರ್ಹ. ಒಂದು ವೇಳೆ, ಆ ಕಾರ್ಯದಲ್ಲಿ ಸ್ವತಃ ಈ ಪ್ರಪ್ರಥಮ ಪ್ರಜೆಯ ತಪ್ಪಿದ್ದಲ್ಲಿ ಆಗ 61ನೇ ವಿಧಿ ಪ್ರಯೋಗದ ಮೂಲಕ ಮಹಾಭಿಯೋಗ (Impeachment) ಅರ್ಥಾತ್‌ ಪದಚ್ಯುತಿಗೂ ಸಂವಿಧಾನ ಕದ ತೆರೆದಿದೆ.

ಓರ್ವ ಯಾವುದೇ ವಿದೇಶಿ ವಿದ್ಯಾರ್ಥಿಗೆ ಆಶ್ಚರ್ಯ ಪಡುವಷ್ಟು ಪುಂಖಾನುಪುಂಖವಾಗಿ ಅಧಿಕಾರದ ಸಾಲು ಸಾಲುಗಳು ರಾಷ್ಟ್ರಪತಿ ಭವನದಲ್ಲಿ ತುಂಬಿರುವುದು ವಾಸ್ತವಿಕತೆ ಪ್ರಧಾನ ಮಂತ್ರಿ, ಕೇಂದ್ರ ಸಚಿವ ಸಂಪುಟದ ನೇಮಕ, ಪ್ರಮಾಣ ವಚನ, ಬೋಧನೆ, ಸಂಸತ್ತಿನ ಉದ್ಘಾಟನೆ, ಮಸೂದೆಯೊಳಗೆ ಸಹಿ, ಸರ್ವೋಚ್ಚ ನ್ಯಾಯಾಲಯ, ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರ ನೇಮಕ, ಕ್ಷಮಾದಾನ, ರಾಜ್ಯಪಾಲರ ನೇಮಕದಿಂದ ಹಿಡಿದು, ಯುದ್ಧ ಘೋಷಣೆ, ತುರ್ತು ಪರಿಸ್ಥಿತಿ ಹೇರಿಕೆಯವರೆಗೆ ಚುನಾವಣ ಆಯೋಗದಿಂದ ಹಿಡಿದು ರಿಸರ್ವ್‌ ಬ್ಯಾಂಕ್‌ ಗವರ್ನರ್‌ವರೆಗೆ, ವಿದೇಶಿ ರಾಯಭಾರಿ ಕಳುಹಿಸುವ ಹಾಗೂ ಕರೆಸಿಕೊಳ್ಳುವ ಹೀಗೆ ರಾಷ್ಟ್ರಾಧ್ಯಕ್ಷರ ಅಗಾಧ ಅಧಿಕಾರದ ಕಕ್ಷೆ ಬೆರಗುಗೊಳಿಸುವಂತಹದು. ಸ್ವತಃ ಪ್ರಪ್ರಥಮ ರಾಷ್ಟ್ರಪತಿ ಡಾ| ರಾಜೇಂದ್ರ ಪ್ರಸಾದರೇ, ತಮ್ಮ ಅಧಿಕಾರದ “ಸಪ್ತಪದಿ’ ಎಷ್ಟೇ ತುಳಿಯಬಹುದು ಎಂಬ ಜಿಜ್ಞಾಸೆಯನ್ನು, ಹೊಸದಿಲ್ಲಿಯ ಸಾಂವಿ ಧಾನಿಕ ತಜ್ಞರ ಸಭೆಯ ಮುಂದಿಟ್ಟಿದ್ದರು.

Advertisement

ಇಲ್ಲಿ ಕೆಲವೊಂದು ಸಾಂವಿಧಾನಿಕ ಸತ್‌ ಸಂಪ್ರದಾಯಕ್ಕೆ ಟಿಸಿಲೊಡೆಯಲೆಂದೇ ಒಂದಿಷ್ಟು ಮೃದು ನೆಲವನ್ನು ಸಂವಿಧಾನ ಜನಕರು ಒದಗಿಸಿದ್ದಾರೆ ಹಾಗೂ ಅದರೊಂದಿಗೇ “ಸರ್ವಾಧಿಕಾರ ತಣ್ತೀದ’ ಸಾಧ್ಯತೆಗಳಿಗೂ ಕದ ಮುಚ್ಚಿದ್ದಾರೆ ! ಮೊರಾರ್ಜಿ ದೇಸಾಯಿ ಹಾಗೂ ಚೌಧುರಿ ಚರಣ್‌ ಸಿಂಗ್‌ ರಾಜೀನಾಮೆಯ ಬಳಿಕ ಜಗಜ್ಜೀವನ ರಾಂ ಅವರನ್ನು ಪ್ರಧಾನಿಯಾಗಿಸಲು ನಿರಾಕರಿಸಿ, ಮಹಾ ಚುನಾವಣೆಗೆ ಆದೇಶಿಸಿದ ನೀಲಂ ಸಂಜೀವ ರೆಡ್ಡಿಯಂತಹ ಸಾಂದರ್ಭಿಕ ಚಿತ್ರಣ ಹೊರತು ಪಡಿಸಿದರೆ ಬಹುತೇಕ ಅಧ್ಯಕ್ಷ- ಪ್ರಧಾನಿ ಸಹಯೋಗ ಪೂರಕ ಪಥದಲ್ಲೇ ಸಾಗಿದೆ. ಜೈಲ್‌ ಸಿಂಗ್‌-­ ರಾಜೀವ್‌ ಗಾಂಧಿ ದಿನಗಳಲ್ಲಿ ಆರಂಭಿಕವಾಗಿ ಒಂದಿನಿತು 36ರ ಚಿತ್ರಣ ಮೂಡಿ ಬಂದರೂ ಮುಂದೆ 63ರ ಯೋಗ ಕೂಡಿ ಬಂದುದೂ ಈಗ ಇತಿಹಾಸ. ಈ ನಿಟ್ಟಿನಲ್ಲಿ ಭಾರತ ಒಕ್ಕೂಟ ಒಂದಾಗಿ, ಮುಂದಾಗಿ ಸಾಗುವಲ್ಲಿ ರಾಷ್ಟ್ರಪತಿ ಭವನದ ನೇತಾರಿಕೆ ಪ್ರಧಾನ ಭೂಮಿಕೆ ಹೊಂದಿದೆ ಎಂಬುದು ಗಮನಾರ್ಹ. ಆದರೆ ಫ್ರಾನ್ಸ್‌, ಶ್ರೀಲಂಕಾ ಮುಂತಾದ ದೇಶಗಳಲ್ಲಿ ಪ್ರಧಾನಿ ಪಟ್ಟಕ್ಕಿಂತ ರಾಷ್ಟ್ರಾಧ್ಯಕ್ಷರದೇ ಹೆಚ್ಚಿನ ಕಾರುಬಾರು ಎಂಬ ನೈಜತೆಗೆ ನಮ್ಮ ಸಂವಿಧಾನ ನೀರೆರೆದಿಲ್ಲ.

– ಡಾ| ಪಿ.ಅನಂತಕೃಷ್ಣ ಭಟ್‌, ಮಂಗಳೂರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next