ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ನಡುವಿನ ಬ್ರೇಕಪ್ ಕುರಿತ ಅಂತೆ-ಕಂತೆಗಳು ಜೋರಾಗಿ ಓಡಾಡುತ್ತಿರುವಾಗಲೇ ರಶ್ಮಿಕಾ ಕುರಿತು ಮತ್ತೂಂದು ಸುದ್ದಿ ಹೊರಬಿದ್ದಿದೆ. ಅದು ಅವರ ಸಿನಿಮಾಕ್ಕೆ ಸಂಬಂಧಪಟ್ಟಿದ್ದು. ರಶ್ಮಿಕಾ “ವೃತ್ರ’ ಎಂಬ ಸಿನಿಮಾದಲ್ಲಿ ನಟಿಸಲಿದ್ದಾರೆಂಬ ಸುದ್ದಿಯನ್ನು ನೀವು ಕೇಳಿರುತ್ತೀರಿ. ಆದರೆ, ಈಗ ರಶ್ಮಿಕಾ ಆ ಸಿನಿಮಾದಿಂದ ಹೊರಬಂದಿದ್ದಾರೆ. ಹಾಗಾಗಿ, ಚಿತ್ರತಂಡ ಹೊಸ ನಟಿಯ ಹುಡುಕಾಟದಲ್ಲಿ ತೊಡಗಿದೆ.
ಈ ಚಿತ್ರವನ್ನು ಗೌತಮ್ ಎನ್ನುವವರು ನಿರ್ದೇಶಿಸುತ್ತಿದ್ದಾರೆ. ಎಲ್ಲಾ ಓಕೆ, ರಶ್ಮಿಕಾ “ವೃತ್ರ’ ದಿಂದ ಹೊರಬರಲು ಕಾರಣವೇನೆಂದು ನೀವು ಕೇಳಬಹುದು. ಡೇಟ್ಸ್ ಸಮಸ್ಯೆಯಿಂದ ರಶ್ಮಿಕಾ ಈ ಚಿತ್ರವನ್ನು ಕೈ ಬಿಟ್ಟಿದ್ದಾರೆ. ಅತ್ತ ಕಡೆ ತೆಲುಗಿನಲ್ಲಿ ರಶ್ಮಿಕಾ ಬಿಝಿಯಾಗಿದ್ದು, ಈ ಸಿನಿಮಾಕ್ಕೆ ಡೇಟ್ಸ್ ಹೊಂದಾಣಿಕೆಯಾಗದ ಕಾರಣ ಚಿತ್ರದಿಂದ ಹೊರಬಂದಿದ್ದಾರೆ. ಈ ಬಗ್ಗೆ ಮಾತನಾಡುವ ನಿರ್ದೇಶಕ ಗೌತಮ್, “ರಶ್ಮಿಕಾ ಅವರು ಈ ಕಥೆಯನ್ನು ತುಂಬಾ ಇಷ್ಟಪಟ್ಟು ಒಪ್ಪಿಕೊಂಡಿದ್ದರು.
ಆದರೆ, ಈಗ ಅವರ ಡೇಟ್ಸ್ ಹೊಂದಾಣಿಕೆಯಾಗುತ್ತಿಲ್ಲ. ಹೀಗಾಗಿ ಸಿನಿಮಾ ಮುಂದಕ್ಕೆ ಹೋಗುತ್ತಲೇ ಇತ್ತು. ಸಿನಿಮಾ ತಡವಾಗುವುದು ಬೇಡ ಎಂಬ ಕಾರಣಕ್ಕೆ ರಶ್ಮಿಕಾ ಅವರು ಚಿತ್ರದಿಂದ ಹೊರಬಂದಿದ್ದಾರೆ. ಅದು ಬಿಟ್ಟರೆ ತಂಡದ ಹಾಗೂ ಅವರ ಮಧ್ಯೆ ಯಾವುದೇ ಮನಸ್ತಾಪವಿಲ್ಲ. ಈಗ ಅವರ ಜಾಗಕ್ಕೆ ಹೊಸಬರನ್ನು ಹುಡುಕುತ್ತಿದ್ದೇವೆ. ಸದ್ಯದಲ್ಲೇ ಸಿನಿಮಾ ಆರಂಭವಾಗಲಿದೆ’ ಎನ್ನುತ್ತಾರೆ ಗೌತಮ್.
ಅಂದಹಾಗೆ, ಗೌತಮ್ ಅವರಿಗೆ ಇದು ಚೊಚ್ಚಲ ಸಿನಿಮಾ. ಚೆನ್ನೈನಲ್ಲಿ ಕಾಲೇಜು ಮುಗಿಸಿಕೊಂಡು ನೇರವಾಗಿ ಪರಂವಾ ಸ್ಟುಡಿಯೋ ಸೇರಿದ ಗೌತಮ್, ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಈ ಸಂದರ್ಭದಲ್ಲೇ ಅವರೊಂದು ಕಥೆ ಕೂಡಾ ಮಾಡಿಟ್ಟುಕೊಂಡಿದ್ದರಂತೆ. ಆ ಕಥೆಯನ್ನು ರಶ್ಮಿಕಾ ಅವರಿಗೆ ಹೇಳಿದಾಗ ಅವರು ಕಥೆ ಇಷ್ಟಪಟ್ಟು ನಟಿಸಲು ಒಪ್ಪಿದ್ದರು.
ಸಹಜವಾಗಿಯೇ ಖುಷಿಯಾಗಿದ್ದ ಗೌತಮ್ ಈಗ ರಶ್ಮಿಕಾ ಬಿಝಿಯಾಗಿರುವ ಕಾರಣ ಹೊಸಬರತ್ತ ಮುಖ ಮಾಡಿದ್ದಾರೆ. “ಚಲೋ’ ಚಿತ್ರದ ಮೂಲಕ ತೆಲುಗಿಗೆ ಎಂಟ್ರಿಕೊಟ್ಟ ರಶ್ಮಿಕಾ ಇತ್ತೀಚೆಗೆ ತೆರೆಕಂಡ “ಗೀತಾ ಗೋವಿಂದಂ’ ಚಿತ್ರದ ಮೂಲಕ ತೆಲುಗು ಸಿನಿ ಪ್ರೇಮಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದರು. ಈ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗುವ ಮೂಲಕ ರಶ್ಮಿಕಾ ಬೇಡಿಕೆ ಕೂಡಾ ತೆಲುಗು ಚಿತ್ರರಂಗದಲ್ಲಿ ಹೆಚ್ಚಿದೆ.
ಸದ್ಯ ರಶ್ಮಿಕಾ ತೆಲುಗಿನಲ್ಲಿ ವಿಜಯ್ ದೇವರಕೊಂಡ ನಾಯಕರಾಗಿರುವ “ಡಿಯರ್ ಕಾಮ್ರೆಡ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ನಡುವೆಯೇ ರಶ್ಮಿಕಾ ಮತ್ತೂಂದು ತೆಲುಗು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆನ್ನಲಾಗಿದೆ. ಕನ್ನಡದಲ್ಲಿ ದರ್ಶನ್ ನಾಯಕರಾಗಿರುವ “ಯಜಮಾಬನ’ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸಿದ್ದಾರೆ.