Advertisement

ಆರಾಧಿಸೋ ರಾರಾಜಿಸೋ ರಾಜರತ್ನ

11:17 AM Mar 25, 2017 | |

ಬರೀ ಫ್ಯಾಮಿಲಿ ಸೆಂಟಿಮೆಂಟ್‌ ಅಷ್ಟೇ ಅಲ್ಲ, ದೇಶದ ಕಮಿಟ್‌ಮೆಂಟ್‌ ಸಹ ಮುಖ್ಯ ಎಂದು ನಂಬಿರುವವನು ಅವನು. ಅದೇ ಕಾರಣಕ್ಕೆ ದೂರದ ಆಸ್ಟ್ರೇಲಿಯಾದಲ್ಲಿದ್ದರೂ, ಭಾರತದ ವಿಷಯ ಬಂದಾಗ, ಕನ್ನಡಿಗರಿಗೆ ಸಮಸ್ಯೆ ಎದುರಾದಾಗ ಮೊದಲು ಬರುವವನೇ ಅವನು. ಅವನಪ್ಪ, ಅವನಿಗಿಂತಲೂ ಒಂದು ಕೈ ಮುಂದು. ಅಲ್ಲಿ ದೊಡ್ಡ ಬಿಝಿನೆಸ್‌ಮ್ಯಾನ್‌ ಆಗಿರುವ ಆತ, ಅಲ್ಲಿದ್ದುಕೊಂಡೇ ಪೋಲಿಯೋ ಮುಕ್ತ ಕರ್ನಾಟಕ ಮಾಡಬೇಕೆಂದು ಶ್ರಮಿಸುವವನು.

Advertisement

ಇಂಥ ಅಪ್ಪನು, ಅವನಿಗೆ ತಕ್ಕ ಮಗನು ಸದ್ಬುದ್ಧಿಗಳಿಂದ ಸಮಾಜದ ಪರಿವರ್ತನೆಯ ಕೆಲಸದಲ್ಲಿ ತೊಡಗಿಸಿಕೊಂಡಿರುವಾಗ ಒಂದು ಅನಾಹುತವಾಗುತ್ತದೆ. ಅಲ್ಲಿಂದ ಅವನ ಲೈಫೇ ಚೇಂಜ್‌. ಇದು “ರಾಜಕುಮಾರ’ ಚಿತ್ರದ ಮೊದಲಾರ್ಧದವರೆಗಿನ ವಿಷಯವಷ್ಟೇ. ಅಲ್ಲಿಂದ ನಂತರ ಇನ್ನೂ ಏನೇನೋ ಆಗುತ್ತದೆ. ನಿಜ ಹೇಳಬೇಕೆಂದರೆ, ಚಿತ್ರ ಟೇಕಾಫ್ ಆಗುವುದೇ ಅಲ್ಲಿಂದ. ಮೊದಲಾರ್ಧ ಪೂರ್ತಿ ಆಸ್ಟ್ರೇಲಿಯಾದಲ್ಲಿ ನಡೆಯುವ ಕಥೆಯು, ಮಧ್ಯಂತರದ ನಂತರ ಬೆಂಗಳೂರಿಗೆ ಶಿಫ್ಟ್ ಆಗುತ್ತದೆ. ಅಲ್ಲಿಂದ ಇನ್ನೊಂದು ತಿರುವು ಪಡೆಯುತ್ತದೆ. ಆ ತಿರುವೇನು ಎಂಬುದನ್ನು ಚಿತ್ರದಲ್ಲೇ ನೋಡಬೇಕು.

ಹೊಸ ಬೆಳಕೊಂದು ಹೊಸಿಲಿಗೆ ಬಂದು
ಬೆಳಗಿದೆ ಮನೆಯ ಮನಗಳ ಇಂದು
ಆರಾಧಿಸೋ ರಾರಾಜಿಸೋ ರಾಜರತ್ನನು

“ರಾಜಕುಮಾರ’ ಚಿತ್ರದ ಕಥೆಯೇನು ಎಂದರೆ ಈ ಮೂರು ಸಾಲುಗಳನ್ನು ತೋರಿಸಬಹುದು. ಹಾಡಿನ ಇದೇ ಮೂರು ಸಾಲುಗಳಲ್ಲಿ ಚಿತ್ರದ ಕಥೆಯು ಬಚ್ಚಿಟ್ಟುಕೊಂಡಿದೆ. ಹೊಸ ಬೆಳಕೊಂದು ಆಸ್ಟ್ರೇಲಿಯಾದಿಂದ ಭಾರತದ ಹೊಸಿಲಿಗೆ ಬರುವ ಮೂಲಕ ಪ್ರಾರಂಭವಾಗುವ ಕಥೆಯು, ಮುಂದಿನ ದಿನಗಳಲ್ಲಿ ಆ ಬೆಳಕು ಆರಾಧಿಸೋ ರಾರಾಜಿಸೋ ರಾಜರತ್ನನಾಗುವ ಮೂಲಕ ಚಿತ್ರದ ಮುಗಿಯುತ್ತದೆ.

ಈ ಕಥೆಯನ್ನು ತಮ್ಮದೇ ಶೈಲಿಯಲ್ಲಿ, ಪುನೀತ ಅವರ ಇಮೇಜ್‌ ಇಟ್ಟುಕೊಂಡು, ಪುನೀತ್‌ ಅಭಿಮಾನಿಗಳ ಬಯಕೆಗೆ ತಕ್ಕ ಹಾಗೆ ಕಥೆ ರೂಪಿಸಿದ್ದಾರೆ ನಿರ್ದೇಶಕ ಸಂತೋಷ್‌ ಆನಂದರಾಮ್‌. ಇಲ್ಲಿ ಏನಿದೆ, ಏನಿಲ್ಲ ಎಂದು ಹೇಳುವುದು ಕಷ್ಟ. ಇಲ್ಲಿ ಪ್ರಮುಖವಾಗಿ ಒಂದು ಸಾಮಾಜಿಕ ಕಳಕಳಿಯಿದೆ. ಹಾಡುಗಳಿವೆ, ಫೈಟುಗಳಿವೆ, ಮಜವಾದ ಸಂಭಾಷಣೆಗಳಿವೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸೆಂಟಿಮೆಂಟು ಸ್ವಲ್ಪ ಜಾಸ್ತಿಯೇ ಇದೆ. ಇವೆಲ್ಲವನ್ನೂ ಸೇರಿಸಿ “ರಾಜಕುಮಾರ’ನನ್ನಾಗಿಸಿದ್ದಾರೆ ಸಂತೋಷ್‌. ಇ

Advertisement

ಲ್ಲಿ ಏನಿಲ್ಲ ಎಂದು ಹೇಳುವುದಕ್ಕಿಂತ, ಇರುವುದೆಲ್ಲವನ್ನು ಇನ್ನಷ್ಟು ಚುರುಕಾಗಿ, ಚೆನ್ನಾಗಿ ತೋರಿಸಬಹುದಿತ್ತು. ಅದೇ ಚಿತ್ರದ ಒಂದು ಪ್ರಮುಖ ಸಮಸ್ಯೆ ಎಂದರೆ ತಪ್ಪಿಲ್ಲ. ಸಂತೋಷ್‌ ಇಲ್ಲಿ ಹಿರಿಯರನ್ನು ಅನಾಥರನ್ನಾಗಿಸುತ್ತಿರುವ ವೃದ್ಧಾಶ್ರಮದ ಕುರಿತು ಹೇಳುವ ಪ್ರಯತ್ನ ಮಾಡಿದ್ದಾರೆ. ಅದರಲ್ಲೂ ಹಿರಿಯರು ತಮ್ಮ ಜೀವನ ಪೂರ್ತಿ ಒದ್ದಾಡಿ, ಕೊನೆಯ ದಿನಗಳನ್ನು ಮನೆಯವರಿಂದ ದೂರಾಗಿ, ಅನಾಥವಾಗಿ ಬದುಕುತ್ತಿರುವ ವಿಷಯವನ್ನು ಸಂತೋಷ್‌ ಹಲವು ಪ್ರಕರಣ ಮತ್ತು ಉದಾಹರಣೆಗಳ ಮೂಲಕ ಹೇಳುತ್ತಾ ಹೋಗುತ್ತಾರೆ.

ಆ ಎಲ್ಲಾ ಘಟನೆಗಳು, ಪ್ರೇಕ್ಷಕರ ಕಣ್ಣುಗಳಿಂದ ನೀರು ತರಿಸಿದರೆ, ಗಂಟಲು ಉಬ್ಬಿ ಬಂದರೆ ಆಶ್ಚರ್ಯವಿಲ್ಲ. ಹೀಗೆ ಸೆಂಟಿಮೆಂಟ್‌ ದೃಶ್ಯಗಳನ್ನು ಬಹಳ ಚೆನ್ನಾಗಿ ಕಟ್ಟಿಕೊಡುವ ಸಂತೋಷ್‌ ಯಶಸ್ವಿಯೇನೋ ಆಗುತ್ತಾರೆ. ಆದರೆ, ಅವೆಲ್ಲವೂ ಚಿತ್ರಕ್ಕೇನು ಸಂಬಂಧ ಎಂದು ಹುಡುಕಿದರೆ ಉತ್ತರ ಸಿಗುವುದು ಕಷ್ಟ. ಇಲ್ಲಿ ಪ್ರಮುಖವಾಗಿ ನಾಯಕ ಸಿದ್ಧಾರ್ಥ ಯಾವುದೋ ಕಾರಣಕ್ಕೆ ಬೆಂಗಳೂರಿಗೆ ಬರುತ್ತಾನೆ. ಅಲ್ಲಿ ಅವನಿಗೊಂದು ವಿಷಯ ಗೊತ್ತಾಗುತ್ತದೆ. ಅದನ್ನು ಬೇಧಿಸಿಕೊಂಡು ಹೋಗುತ್ತಿದ್ದಂತೆ ಒಂದು ದೊಡ್ಡ ಷಡ್ಯಂತ್ರ ಇರುವುದು ಗೊತ್ತಾಗುತ್ತದೆ.

ಹೀಗೆ ಕಥೆ ಒಂದು ಟ್ರಾಕ್‌ನಲ್ಲಿ ಹೋಗುತ್ತಿರುವಾಗ, ಮಿಕ್ಕಿದ್ದೆಲ್ಲವೂ ತುರುಕಿದಂತೆ ಅನಿಸಿದರೆ ಆಶ್ಚರ್ಯವಿಲ್ಲ. ಹೀಗೆ ಅದು, ಇದು ಎಂದು ಚಿತ್ರ ಸ್ವಲ್ಪ ಉದ್ಧವೂ, ಮತ್ತಷ್ಟು ನಿಧಾನವಾಗಿಯೂ ಸಾಗುತ್ತದೆ. ಆದರೆ, ಇವೆಲ್ಲವನ್ನೂ ಮರೆಸುವುದು ಪುನೀತ್‌ ರಾಜಕುಮಾರ್‌. ಚಿತ್ರದಲ್ಲಿ ಹೇಗೆ ಅವರು ತಮ್ಮ ಒಂದು ಸ್ಟೈಲ್‌ನಿಂದ ಎಲ್ಲವನ್ನೂ ಗೆಲ್ಲುತ್ತಾರೋ, ಪ್ರೇಕ್ಷಕರನ್ನು ಸಹ ಅದೇ ಸ್ಟೈಲ್‌ನಿಂದು ಹೊಡೆದುರುಳಿಸಿಬಿಡುತ್ತಾರೆ. ಹಾಡು ಮತ್ತು ಫೈಟುಗಳಲ್ಲಿ ಅವರ ಚುರುಕುತನ, ಸೆಂಟಿಮೆಂಟ್‌ ದೃಶ್ಯಗಳಲ್ಲಿ ಅವರ ತನ್ಮಯತೆ ಎಲ್ಲವೂ ಖುಷಿಕೊಡುತ್ತದೆ.

ಪುನೀತ್‌ ಬಿಟ್ಟರೆ ಅನಂತ್‌ ನಾಗ್‌, ಪ್ರಕಾಶ್‌ ರೈ, ಅವಿನಾಶ್‌, ಭಾರ್ಗವಿ ನಾರಾಯಣ್‌ ಇಷ್ಟವಾಗುತ್ತಾರೆ. ಪ್ರಿಯಾ ಆನಂದ್‌ಗೆ ಒಳ್ಳೆಯ ಪಾತ್ರವಿದೆ. ಆದರೆ, ಅವರು ಅದನ್ನು ಅಷ್ಟೇನೂ ಚೆನ್ನಾಗಿ ಬಳಸಿಕೊಂಡಿಲ್ಲ. ರಂಗಾಯಣ ರಘು, ಸಾಧು ಕೋಕಿಲ, ಚಿಕ್ಕಣ್ಣ ಇದ್ದರೂ ಕಾಮಿಡಿ ವಕೌಟ್‌ ಆಗಿಲ್ಲ. ನಗು ತರಿಸುವುದಕ್ಕೆ ದೃಶ್ಯಗಳು ಸೋತರೂ, ಕೆಲವು ಸಂಭಾಷಣೆಗಳು ಗೆಲ್ಲುತ್ತವೆ. ವೆಂಕಟೇಶ್‌ ಅಂಗುರಾಜ್‌ ಅವರು ಆಸ್ಟ್ರೇಲಿಯಾವನ್ನು ಹಿಡಿದುಕೊಟ್ಟಿರುವ ರೀತಿ ಖುಷಿ ಕೊಡುತ್ತದೆ. ಇನ್ನು ವಿ. ಹರಿಕೃಷ್ಣ ಸಂಗೀತ ನಿರ್ದೇಶನದಲ್ಲಿ ಒಂದೆರೆಡು ಹಾಡುಗಳು ಗುನುಗುನುಗುವಂತಿವೆ.

ಚಿತ್ರ: ರಾಜಕುಮಾರ
ನಿರ್ಮಾಣ: ವಿಜಯ್‌ ಕುಮಾರ್‌ ಕಿರಗಂದೂರು
ನಿರ್ದೇಶನ: ಸಂತೋಷ್‌ ಆನಂದರಾಮ್‌
ತಾರಾಗಣ: ಪುನೀತ್‌ ರಾಜಕುಮಾರ್‌, ಪ್ರಿಯಾ ಆನಂದ್‌, ಅನಂತ್‌ ನಾಗ್‌, ಪ್ರಕಾಶ್‌ ರೈ, ಶರತ್‌ ಕುಮಾರ್‌ ಮುಂತಾದವರು

* ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next