Advertisement

ದೇಶದಲ್ಲಿ ಸಂವಿಧಾನ ತಿದ್ದುಪಡಿ ಹುನ್ನಾರ; ಡಾ|ರಾಜರತ್ನ ಅಂಬೇಡ್ಕರ್‌

06:23 PM Jan 05, 2023 | Team Udayavani |

ಸಂಕೇಶ್ವರ: ಸದ್ಯ ದೇಶದಲ್ಲಿ ಸಂವಿಧಾನ ತಿದ್ದುಪಡಿ, ಮೀಸಲಾತಿ ಕಿತ್ತುಕೋಳ್ಳುವ ಹುನ್ನಾರ ಮನುವಾದಿಗಳು ಮಾಡುತಿದ್ದು, ಇದರ ಬಗ್ಗೆ ದಲಿತರು ಎಚ್ಚರದ ಹೆಜ್ಜೆ ಇಡುವ ಮೂಲಕ ಜಾಗೃತಿ ವಹಿಸಬೇಕಾಗಿದೆ ಎಂದು ಬುದ್ಧಿಸ್ಟ್‌ ಸೊಸೈಟಿ ಆಫ್‌ ಇಂಡಿಯಾದ ಅಧ್ಯಕ್ಷ, ಡಾ| ಬಿ.ಆರ್‌.ಅಂಬೇಡ್ಕರ್‌ ಮರಿಮೊಮ್ಮಗ ಡಾ| ರಾಜರತ್ನ ಅಂಬೇಡ್ಕರ್‌ ಹೇಳಿದರು.

Advertisement

ಸಂಕೇಶ್ವರದಲ್ಲಿ ಭೀಮಾ-ಕೊರೆಗಾಂವ ವಿಜಯೋತ್ಸವದ 205ನೇ ವರ್ಷಾಚರಣೆ ಹಾಗೂ ಸಾವಿತ್ರಿಬಾಯಿ ಫುಲೆ ಜಯಂತಿ ನಿಮಿತ್ತ ಡಾ| ಬಿ.ಆರ್‌.ಅಂಬೇಡ್ಕರ್‌ ಜನಜಾಗ್ರತಿ ವೇದಿಕೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸದ್ಯ ದೇಶದಲ್ಲಿ ಡಾ| ಅಂಬೇಡ್ಕರ್‌ ಅವರು ನೀಡಿರುವ ಸಂವಿಧಾನ ಬದಲಿಸುವ ಪ್ರಯತ್ನಗಳು ನಡೆದಿವೆ. ದಲಿತರಿಗಾಗಿ ಡಾ. ಅಂಬೇಡ್ಕರ್‌ ಅವರು ಪಟ್ಟಿರುವ ಶ್ರಮವನ್ನು ನಾವಿಂದು ನೆನಪಿಸಿ ಮುನ್ನಡೆಯಬೇಕಿದೆ. ಡಾ| ಅಂಬೇಡ್ಕರರು ಇಲ್ಲವಾಗಿದ್ದರೆ ನಾವು ಎಲ್ಲಿ ಇರುತ್ತಿದ್ದೇವೆ ಎಂದು ಗೊತ್ತಾಗುತ್ತಿರಲಿಲ್ಲ ಎಂದು ನುಡಿದರು.

ಡಾ| ಅಂಬೇಡ್ಕರ್‌ ಅವರಿಗೆ ಶಾಹು ಮಹಾರಾಜ, ಮಹಾತ್ಮ ಫುಲೆ, ಶಿವಾಜಿ ಮಹಾರಾಜರು ನೀಡಿದ ಪ್ರೇರಣೆಯನ್ನು ನಾವು ಎಂದಿಗೂ ಮರೆಯಲು ಸಾಧ್ಯಇಲ್ಲ. ಅಲ್ಲದೆ ಸಾವಿತ್ರಿಬಾಯಿ ಫುಲೆ ಅವರು ಶಿಕ್ಷಣಕ್ಕೆ ನೀಡಿದ ಕೊಡುಗೆಯನ್ನು ಯಾರು ಮರೆಯುವಂತಿಲ್ಲ. ಸದ್ಯ ಭಾರತ ಸರಕಾರ 5ನೇ ತರಗತಿ ಮೇಲಿನ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಬೋಧನೆ ಮಾಡಲು ಹೊರಟಿದೆ. ವೇದ ಕಲಿಸಿ ನಮ್ಮನ್ನು ಮತ್ತೆ ಶೂದ್ರರಾಗಿ ಕಾಣುವ ಕಾಲ ಬರಬಹುದು. ಸದ್ಯ ದೇಶದ ಶಿಕ್ಷಣ ಕ್ಷೇತ್ರದಲ್ಲಿ ಎಲ್ಲವನ್ನು ವ್ಯಾಪಾರೀಕರಣ ಮಾಡಲಾಗುತ್ತಿದೆ.

ದೇಶದಲ್ಲಿ ಶಿಕ್ಷಣವನ್ನು ಹಿಂದಿ ಭಾಷೆಯಲ್ಲಿ ಕಲಿಸುವ ಹುನ್ನಾರ ನಡೆಯುತ್ತಿದೆ. ಇದರಿಂದ ನಮ್ಮ ಹಿಂದೂಳಿದ ಜನರು ಮತ್ತೆ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ನುಡಿದರು. 205 ವರ್ಷಗಳ ಹಿಂದೆ ಪೇಶ್ವೆಗಳ ವಿರುದ್ದ ಮಹಾರರು ಗಳಿಸಿದ ವಿಜಯವು ಭಾರತದ ಇತಿಹಾಸದಲ್ಲಿ ದಾಖಲು ಆಗಲೇ ಇಲ್ಲ. ಮನುವಾದಿಗಳು ಅಂಥ ಸತ್ಯವನ್ನು ದಾಖಲಿಸಲೇ ಇಲ್ಲ. ಈಗ ಪುಃನ ಸತ್ಯವನ್ನು ದೇಶದ ಜನರಿಗೆ ತಿಳಿಸುವ ಕಾಲ ಬಂದಿದೆ ಎಂದು ಅವರು ಹೇಳಿದರು.

ದೇಶದ ಸಂವಿಧಾನದಂತೆ ಅನೇಕ ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಲಿತರಿಗಾಗಿ ರೂಪಿಸಿದ್ದು, ಅವುಗಳ ಲಾಭ ಪಡೆಯಬೇಕು. ಇದರಿಂದ ದಲಿತರ ಒಟ್ಟು ಅಭಿವೃದ್ಧಿ ಆಗುತ್ತದೆ. ಪ್ರಧಾನಿ ಮೋದಿ ಅವರು ದೇಶದಲ್ಲಿ ಒನ್‌ ನೇಶನ್‌, ಒನ್‌ ಎಜ್ಯುಕೇಶನ್‌ ನೀತಿಯನ್ನು ಜಾರಿ ತರಲಿ ಎಂದು ಒತ್ತಾಯಿಸಿದರು. ಸಾನ್ನಿಧ್ಯ ವಹಿಸಿದ್ದ ಹೆಬ್ಟಾಳದ ಬಸವ ಚೇತನ ದೇವರು ಮಾತನಾಡಿ, ದಲಿತರು ವೈದಿಕರ ಮಾತುಗಳನ್ನು ನಂಬಿ ದೇವರುಗಳಿಗೆ ಪ್ರಾಣಿ ಬಲಿಕೊಡುವ ಕೆಲಸವನ್ನು ತಕ್ಷಣವೇ ಕೈಬಿಡಬೇಕು. ಪ್ರತಿಯೊಬ್ಬ ದಲಿತರು ತಮ್ಮ ಬದುಕಿಗೆ ಪುನಶ್ಚೆತನ ತಂದು ಕೊಟ್ಟ ಅಂಬೇಡ್ಕರರ ಭಾವಚಿತ್ರವನ್ನು ಮನೆಯಲ್ಲಿ ಹಾಕಿ ಅವರ ತತ್ವಗಳನ್ನು ಬದುಕಿನುದ್ದಕ್ಕೂ ಪಾಲಿಸಬೇಕು ಎಂದರು.

Advertisement

ಇದೇ ಸಂದರ್ಭದಲ್ಲಿ ಡಾ. ಬಿ.ಆರ್‌. ಅಂಬೇಡ್ಕರ ಜನಜಾಗ್ರತಿ ವೇದಿಕೆಯ ವತಿಯಿಂದ 1 ಲಕ್ಷ ರೂಗಳನ್ನು ಡಾ. ರಾಜರತ್ನ ಅಂಬೇಡ್ಕರ ಅವರಿಗೆ ನೀಡಲಾಯಿತು. ವೇದಿಕೆಯ ಅಧ್ಯಕ್ಷ ದಿಲೀಪ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಹಕಾರಿ ಧುರೀಣರಾದ ಎಸ್‌.ಎಸ್‌. ಶಿರಕೋಳಿ, ಶ್ರೀಕಾಂತ ಹತನೂರಿ, ಪುರಸಭೆ ಸದಸ್ಯ ಜಿತೇಂದ್ರ ಮರಡಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಉಮಾ ಸಾಲಿಗೌಡರ, ವಿಕ್ರಂ ಕರನಿಂಗ, ಬಸವರಾಜ ಕೋಳಿ, ಆನಂದ ಕೆಳಗಡೆ ಮುಂತಾದವರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next