Advertisement

Ranji;ಪ್ರಭ್‌ಸಿಮ್ರಾನ್‌ ಸಿಂಗ್‌ ಶತಕ:ದ್ವಿತೀಯ ಸರದಿಯಲ್ಲಿ ಪಂಜಾಬ್‌ ಹೋರಾಟ

12:20 AM Jan 08, 2024 | Team Udayavani |

ಹುಬ್ಬಳ್ಳಿ: ಆತಿಥೇಯ ಕರ್ನಾಟಕ ಎದುರಿನ ರಣಜಿ ಪಂದ್ಯದಲ್ಲಿ ಭಾರೀ ಹಿನ್ನಡೆಗೆ ಸಿಲುಕಿದ ಪಂಜಾಬ್‌ ದ್ವಿತೀಯ ಇನ್ನಿಂಗ್ಸ್‌ ನಲ್ಲಿ ಬ್ಯಾಟಿಂಗ್‌ ಹೋರಾಟದಲ್ಲಿ ತೊಡಗಿದೆ. ಆರಂಭಕಾರ ಪ್ರಭ್‌ಸಿಮ್ರಾನ್‌ ಸಿಂಗ್‌ ಅವರ ಶತಕ ಹಾಗೂ ಅಭಿಷೇಕ್‌ ಶರ್ಮ ಅವರ 91 ರನ್‌ ಸಾಹಸದಿಂದ 3ನೇ ದಿನದಾಟದ ಅಂತ್ಯಕ್ಕೆ 3 ವಿಕೆಟಿಗೆ 238 ರನ್‌ ಪೇರಿಸಿದೆ.

Advertisement

ಆದರೆ ಪಂಜಾಬ್‌ ಆತಂಕದಿಂದ ಪಾರಾಗಿಲ್ಲ. ಇನ್ನೂ 124 ರನ್‌ ಹಿನ್ನಡೆಯಲ್ಲಿದೆ. ಪಂದ್ಯವಿನ್ನೂ 2 ದಿನ ಕಾಣಲಿಕ್ಕಿದೆ. ಬೌಲರ್ ಮೇಲುಗೈ ಸಾಧಿಸಿದರೆ ಕರ್ನಾಟಕ ದೊಡ್ಡ ಗೆಲುವನ್ನು ಸಾಧಿಸುವುದರಲ್ಲಿ ಅನುಮಾನವಿಲ್ಲ.
ಪಂಜಾಬ್‌ ಮೊದಲ ಇನ್ನಿಂಗ್ಸ್‌ನಲ್ಲಿ 152ಕ್ಕೆ ಕುಸಿದಿತ್ತು. ಜವಾಬಿತ್ತ ಕರ್ನಾಟಕ 8 ವಿಕೆಟಿಗೆ 514 ರನ್‌ ಪೇರಿಸಿತು. 6ಕ್ಕೆ 461 ರನ್‌ ಗಳಿಸಿದಲ್ಲಿಂದ ರವಿವಾರದ ಆಟ ಮುಂದುವರಿಸಿತ್ತು. ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸುತ್ತಿದ್ದ ಎಸ್‌. ಶರತ್‌ ಔಟಾದ ಕೂಡಲೇ ನಾಯಕ ಮಾಯಾಂಕ್‌ ಅಗರ್ವಾಲ್‌ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿದರು. 55 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ಶರತ್‌ 76 ರನ್‌ ಗಳಿಸಿ ಕೌಲ್‌ ಎಸೆತದಲ್ಲಿ ಲೆಗ್‌ ಬಿಫೋರ್‌ ಆದರು.
ಇದಕ್ಕೂ ಮುನ್ನ ವಿಜಯ್‌ಕುಮಾರ್‌ ವೈಶಾಖ್‌ 27 ರನ್‌ ಗಳಿಸಿ ಪೆವಿಲಿಯನ್‌ ಸೇರಿದ್ದರು. ವಿದ್ವತ್‌ ಕಾವೇರಪ್ಪ 22 ರನ್‌ ಮಾಡಿ ಔಟಾಗದೆ ಉಳಿದರು.ಪಂಜಾಬ್‌ ಪರ ಅರ್ಷದೀಪ್‌ ಸಿಂಗ್‌ 3, ಪ್ರೇರಿತ್‌ ದತ್ತ ಮತ್ತು ನಮನ್‌ ಧಿರ್‌ ತಲಾ 2 ವಿಕೆಟ್‌ ಕೆಡವಿದರು.

192 ರನ್‌ ಜತೆಯಾಟ
362 ರನ್‌ ಹಿನ್ನಡೆಗೆ ಸಿಲುಕಿದ ಪಂಜಾಬ್‌ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕರ್ನಾಟಕದ ಬೌಲಿಂಗ್‌ ಆಕ್ರಮಣವನ್ನು ಮೆಟ್ಟಿ ನಿಂತಿತು. ಆರಂಭಿಕರಾದ ಪ್ರಭ್‌ಸಿಮ್ರಾನ್‌ ಸಿಂಗ್‌ ಮತ್ತು ಅಭಿಷೇಕ್‌ ಶರ್ಮ ಸೇರಿಕೊಂಡು ರನ್‌ ರಾಶಿ ಪೇರಿಸುತ್ತ ಹೋದರು. 44.3 ಓವರ್‌ಗಳ ತನಕ ಇವರ ಬ್ಯಾಟಿಂಗ್‌ ಸಾಗಿತು. ಮೊದಲ ವಿಕೆಟಿಗೆ 192 ರನ್‌ ಹರಿದು ಬಂತು.
ಈ ಸಂದರ್ಭದಲ್ಲಿ ಪಾರ್ಟ್‌ಟೈಮ್‌ ಬೌಲರ್‌ ಆಗಿ ಬಂದ ಆರ್‌. ಸಮರ್ಥ್ ಪಂಜಾಬ್‌ ಆರಂಭಿಕರನ್ನು ಬೇರ್ಪಡಿಸಲು ಯಶಸ್ವಿಯಾದರು. 91 ರನ್‌ ಮಾಡಿದ ಅಭಿಷೇಕ್‌ ಶರ್ಮ ಬೌಲ್ಡ್‌ ಆಗಿ ವಾಪಸಾದರು. ಶರ್ಮ ಆಟ ಅತ್ಯಂತ ಆಕ್ರಮಣಕಾರಿ ಆಗಿತ್ತು. 123 ಎಸೆತ ಎದುರಿಸಿದ ಅವರು 9 ಬೌಂಡರಿ, 3 ಸಿಕ್ಸರ್‌ ಸಿಡಿಸಿದರು.
ಪ್ರಭ್‌ಸಿಮ್ರಾನ್‌ ಸಿಂಗ್‌ 146 ಎಸೆತ ನಿಭಾ ಯಿಸಿ ಭರ್ತಿ 100 ರನ್‌ ಕೊಡುಗೆ ಸಲ್ಲಿಸಿದರು. ಬೀಸಿದ್ದು 17 ಬೌಂಡರಿ. ವಿದ್ವತ್‌ ಕಾವೇರಪ್ಪ ಮುಂದಿನ ಓವರ್‌ನಲ್ಲೇ ಈ ಬಹು ಮೂಲ್ಯ ವಿಕೆಟ್‌ ಹಾರಿಸಿದರು. ಹೀಗೆ 192ರ ಮೊತ್ತದಲ್ಲೇ ಪಂಜಾಬ್‌ ಆರಂಭಿಕ ರಿಬ್ಬರೂ ಪೆವಿಲಿಯನ್‌ ಸೇರಿಕೊಂಡರು. ಕರ್ನಾಟಕ ನಿಟ್ಟುಸಿರು ಬಿಟ್ಟಿತು.
ಸ್ಕೋರ್‌ 220ಕ್ಕೆ ಏರಿದಾಗ ಶುಭಾಂಗ್‌ ಹೆಗ್ಡೆ ಮತ್ತೂಂದು ಯಶಸ್ಸು ತಂದಿತ್ತರು. 20 ರನ್‌ ಮಾಡಿದ ನಮನ್‌ ಧಿರ್‌ ಅವರಿಗೆ ಪೆವಿಲಿಯನ್‌ ಹಾದಿ ತೋರಿಸಿದರು. ನಾಯಕ ಮನ್‌ದೀಪ್‌ ಸಿಂಗ್‌ 15 ರನ್‌ ಮತ್ತು ನೇಹಲ್‌ ವಧೇರ 9 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್‌
ಪಂಜಾಬ್‌-152 ಮತ್ತು 3 ವಿಕೆಟಿಗೆ 238 (ಪ್ರಭ್‌ಸಿಮ್ರಾನ್‌ 100, ಅಭಿಷೇಕ್‌ ಶರ್ಮ 91, ನಮನ್‌ ಧಿರ್‌ 20, ಸಮರ್ಥ್ 12ಕ್ಕೆ 1, ವಿದ್ವತ್‌ 28ಕ್ಕೆ 1, ಶುಭಾಂಗ್‌ 54ಕ್ಕೆ 1). ಕರ್ನಾಟಕ-8 ವಿಕೆಟಿಗೆ 514 ಡಿಕ್ಲೇರ್‌ (ಪಡಿಕ್ಕಲ್‌ 193, ಪಾಂಡೆ 118, ಶರತ್‌ 76, ಸಮರ್ಥ್ 38, ಅರ್ಷದೀಪ್‌ 92ಕ್ಕೆ 3, ನಮನ್‌ ಧಿರ್‌ 46ಕ್ಕೆ 2, ಪ್ರೇರಿತ್‌ ದತ್ತ 84ಕ್ಕೆ 2).

ಬಿಹಾರಕ್ಕೆ ಫಾಲೋಆನ್‌
ಪಾಟ್ನಾ: ಮುಂಬಯಿ ವಿರುದ್ಧದ ರಣಜಿ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫ‌ಲ್ಯಕ್ಕೆ ಸಿಲುಕಿದ ಆತಿಥೇಯ ಬಿಹಾರ ಫಾಲೋಆನ್‌ಗೆ ಸಿಲುಕಿದೆ. ಪುನಃ ಕುಸಿತ ಅನುಭವಿಸಿ ಇನ್ನಿಂಗ್ಸ್‌ ಸೋಲಿನತ್ತ ಮುಖ ಮಾಡಿದೆ.
ಮುಂಬಯಿಯ 251 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಉತ್ತರವಾಗಿ ಬಿಹಾರ ಸರಿಯಾಗಿ 100 ರನ್ನಿಗೆ ಕುಸಿಯಿತು. 151 ರನ್‌ ಹಿನ್ನಡೆಗೆ ಸಿಲುಕಿದ ಕಾರಣ ಮುಂಬಯಿ ನಾಯಕ ಶಮ್ಸ್‌ ಮುಲಾನಿ ಎದುರಾಳಿಗೆ ಫಾಲೋಆನ್‌ ವಿಧಿಸಿದರು. ದ್ವಿತೀಯ ಇನ್ನಿಂಗ್ಸ್‌ನಲ್ಲೂ ಬಿಹಾರದ ಬ್ಯಾಟಿಂಗ್‌ ಪರದಾಟ ತಪ್ಪಲಿಲ್ಲ. 91 ರನ್ನಿಗೆ 6 ವಿಕೆಟ್‌ ಕಳೆದುಕೊಂಡಿದೆ. ಇನ್ನಿಂಗ್ಸ್‌ ಸೋಲಿನಿಂದ ಪಾರಾಗಲು ಇನ್ನೂ 60 ರನ್‌ ಮಾಡಬೇಕಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಮೋಹಿತ್‌ ಅವಸ್ಥಿ 6 ವಿಕೆಟ್‌ ಉರುಳಿಸಿದರೆ, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಶಿವಂ ದುಬೆ ಕೇವಲ 7 ರನ್ನಿತ್ತು 4 ವಿಕೆಟ್‌ ಕೆಡವಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next