Advertisement

ರಣಜಿ: ಇಂದು ಕರ್ನಾಟಕಕ್ಕೆ ಹಿ.ಪ್ರ. ಎದುರಾಳಿ

10:05 AM Dec 25, 2019 | sudhir |

ಮೈಸೂರು: ಬುಧವಾರದಿಂದ ಕರ್ನಾಟಕ ಕ್ರಿಕೆಟ್‌ ತಂಡ ಮತ್ತೂಂದು ಮಹತ್ವದ ಹೋರಾಟಕ್ಕೆ ಸಿದ್ಧವಾಗಿದೆ. ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಮೈದಾನದಲ್ಲಿ, ಕರ್ನಾಟಕವು ಹಿಮಾಚಲ ಪ್ರದೇಶ ತಂಡದ ವಿರುದ್ಧ ತನ್ನ 3ನೇ ರಣಜಿ ಪಂದ್ಯವನ್ನಾಡಲಿದೆ. ಸದ್ಯದ ಸ್ಥಿತಿಯಲ್ಲಿ ಎರಡೂ ಸಮಾನ ಬಲಿಷ್ಠ ತಂಡಗಳೇ. ಆತಿಥೇಯ ತಂಡವಾಗಿರುವುದರಿಂದ ಕರ್ನಾಟಕದ ಸ್ಥಿತಿ ಉತ್ತಮವೆನ್ನಬಹುದು.

Advertisement

ಈ ಸಾಲಿನ ಸೋಲು ಗೆಲುವಿನ ಲೆಕ್ಕ ಹಾಕಿದರೂ ಕರ್ನಾಟಕವೇ ತುಸು ಮುಂದಿದೆ. ಕರ್ನಾಟಕ ತನ್ನ ಮೊದಲ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಗೆಲುವು ಸಾಧಿಸಿದೆ. ತನ್ನದೇ ನೆಲ ಹುಬ್ಬಳ್ಳಿಯಲ್ಲಿ ನಡೆದ 2ನೇ ಪಂದ್ಯದಲ್ಲಿ, ಉತ್ತರಪ್ರದೇಶ ವಿರುದ್ಧ ಡ್ರಾ ಸಾಧಿಸಿದೆ. ಇದಕ್ಕೆ ತದ್ವಿರುದ್ಧವೆಂಬಂತೆ ಅಂಕಿತ್‌ ಕಲ್ಸಿ ನಾಯಕತ್ವದ ಹಿಮಾಚಲಪ್ರದೇಶ ತಂಡ, ತನ್ನದೇ ನೆಲದಲ್ಲಿ ಸೌರಾಷ್ಟ್ರ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಸೋತುಹೋಗಿದೆ. ಆದರೆ ಡಿಂಡಿಗಲ್‌ನಲ್ಲಿ ನಡೆದ ಆತಿಥೇಯ ತಮಿಳುನಾಡು ವಿರುದ್ಧದ 2ನೇ ಪಂದ್ಯದಲ್ಲಿ 71 ರನ್‌ ಜಯ ಸಾಧಿಸಿದೆ.

ಗಮನಿಸಬೇಕಾದ ಸಮಾನ ಅಂಶವೆಂದರೆ ಎರಡೂ ತಂಡಗಳು ಗೆದ್ದಿರುವುದು ತಮಿಳುನಾಡು ವಿರುದ್ಧ. ಅದೂ ಡಿಂಡಿಗಲ್‌ನಲ್ಲಿ. ಆದರೆ ಎರಡೂ ತಂಡಗಳು ತಮ್ಮದೇ ನೆಲದಲ್ಲಿ ಹಿನ್ನಡೆ ಅನುಭವಿಸಿವೆ. ಹಿಮಾಚಲ ಸೋತು ಹೋಗಿದ್ದರೆ, ಕರ್ನಾಟಕ ಡ್ರಾ ಮಾಡಿಕೊಂಡಿದೆ. ಪ್ರಸ್ತುತ ಪಂದ್ಯದಲ್ಲಿ ಕರ್ನಾಟಕ ಮತ್ತೂಮ್ಮೆ ತನ್ನ ನೆಲದಲ್ಲಿ ಹೋರಾಟ ಮಾಡಲಿದೆ. ಚಿರಪರಿಚಿತ ಶ್ರೀಕಂಠದತ್ತ ಒಡೆಯರ್‌ ಮೈದಾನದಲ್ಲಿ ರಾಜ್ಯ ತಂಡ ಈ ಹಿಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿದೆ. ಈ ಪಂದ್ಯದಲ್ಲೂ ಅದನ್ನು ಮುಂದುವರಿಸಲು ಕಷ್ಟವೇನೂ ಆಗಲಾರದು.

ನಾಯಕ ಕರುಣ್‌ ಲಯದಲ್ಲಿಲ್ಲ
ಮನೀಷ್‌ ಪಾಂಡೆ ಗೈರಿನಲ್ಲಿ ಕರುಣ್‌ ನಾಯರ್‌ ನಾಯಕರಾಗಿ ಮುಂದುವರಿದಿದ್ದಾರೆ. ಗಮನಾರ್ಹ ಸಂಗತಿಯೆಂದರೆ ಭಾರತ ತಂಡದ ಪರವಾಗಿ ಆಡಿ ಮೆರೆದಿರುವ, ಮಾಯಾಂಕ್‌ ಅಗರ್ವಾಲ್‌ ತಂಡಕ್ಕೆ ಲಭ್ಯರಿದ್ದಾರೆ. ಇದು ರಾಜ್ಯದ ಮನಃಸ್ಥೈರ್ಯವನ್ನು ವೃದ್ಧಿಸಿದೆ. ಭಾರೀ ಮೊತ್ತ ಪೇರಿಸುವ ಭರವಸೆ ಉಂಟುಮಾಡಿದೆ. ಇನ್ನೊಂದು ಕಡೆ ತಂಡದ ಖಾಯಂ ನಾಯಕ ಮನೀಷ್‌ ಪಾಂಡೆ, ಕೆ.ಎಲ್‌.ರಾಹುಲ್‌ ಅಲಭ್ಯತೆ ತುಸು ಮಟ್ಟಿಗೆ ಹಿನ್ನಡೆಯೆಂದು ಹೇಳಬಹುದು.

ಆದರೂ ರಾಜ್ಯದಲ್ಲಿ ಪ್ರತಿಭಾವಂತ ಬ್ಯಾಟ್ಸ್‌ ಮನ್‌ಗಳಿಗೆ ತೊಂದರೆಯಿಲ್ಲ. ಅವರೆಲ್ಲ ಈ ದಿಗ್ಗಜರ ಗೈರಿನಲ್ಲಿ ಮೆರೆದಾಡಲು ಒಂದು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಈ ಹಿಂದೆಯೂ ದಿಗ್ಗಜರ ಗೈರಿನಲ್ಲಿ ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದಾರೆ. ಆತಂಕವೇನೆಂದರೆ ರಾಷ್ಟ್ರೀಯ ಟೆಸ್ಟ್‌ ತಂಡಕ್ಕೆ ಮರಳಲು ಯತ್ನಿಸುತ್ತಿರುವ ಕರುಣ್‌ ನಾಯರ್‌, ಸಂಪೂರ್ಣ ಲಯ ಕಳೆದುಕೊಂಡಿದ್ದಾರೆ. ಹಿಂದಿನ ಎರಡೂ ಪಂದ್ಯಗಳಲ್ಲಿ ಪೂರ್ಣ ವೈಫ‌ಲ್ಯ ಕಂಡಿದ್ದಾರೆ. ಇದರಿಂದ ತಂಡ ಇಕ್ಕಟ್ಟಿನಲ್ಲಿದೆ.

Advertisement

ಆದರೆ ಬ್ಯಾಟ್ಸ್‌ಮನ್‌ ದೇವದತ್ತ ಪಡಿಕ್ಕಲ್‌, ಆಲ್‌ರೌಂಡರ್‌ ಶ್ರೇಯಸ್‌ ಗೋಪಾಲ್‌ ಇವರೆಲ್ಲ ತಂಡಕ್ಕೆ ಆಧಾರಸ್ತಂಭವಾಗಿ ನಿಂತಿದ್ದಾರೆ. ಉಳಿದವರ ವೈಫ‌ಲ್ಯವನ್ನು ಮರೆಮಾಚಲು ಸಾಧ್ಯವಾಗಿದೆ. ಬಿ.ಆರ್‌.ಶರತ್‌, ಡಿ.ನಿಶ್ಚಲ್‌ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ.

ಬ್ಯಾಟಿಂಗ್‌ ಸಮಸ್ಯೆ
ಸದ್ಯದ ಸ್ಥಿತಿಯಲ್ಲಿ ಹಿಮಾಚಲಪ್ರದೇಶ ತಂಡದ ಸಾಮರ್ಥ್ಯ ಅಂದಾಜಿಸುವುದು ತುಸು ಕಷ್ಟದ ಕೆಲಸ. ಹಿಂದಿನೆರಡೂ ಪಂದ್ಯಗಳಲ್ಲಿ ಆ ತಂಡ ಬೌಲಿಂಗ್‌ನಲ್ಲಿ ಮಿಂಚಿದೆ. ಆದರೆ ಅದರ ಬ್ಯಾಟಿಂಗ್‌ ವಿಭಾಗ ಪೂರ್ಣವಾಗಿ ಕೈಕೊಟ್ಟಿದೆ. ಇದನ್ನು ಸರಿಪಡಿಸಿಕೊಳ್ಳದಿದ್ದರೆ, ಕರ್ನಾಟಕ ವಿರುದ್ಧ ಸೋಲುವುದು ಬಹುತೇಕ ಖಾತ್ರಿಯಾಗಿದೆ.

ರೋನಿತ್‌ಗೆ ಗಾಯ, ಮಿಥುನ್‌ ಮೇಲೆ ಹೊರೆ
ತಂಡದ ಪ್ರಮುಖ ಬೌಲರ್‌ ರೋನಿತ್‌ ಮೋರೆ ಗಾಯಗೊಂಡಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಬೌಲಿಂಗ್‌ನ ಹೆಚ್ಚುವರಿ ಹೊಣೆಯನ್ನು ಹೊತ್ತುಕೊಳ್ಳಬೇಕಾದ ಅನಿವಾರ್ಯದಲ್ಲಿ ಅಭಿಮನ್ಯು ಮಿಥುನ್‌ ಇದ್ದಾರೆ. ಹಿಂದಿನ ಪಂದ್ಯದಲ್ಲಿ ಉತ್ತರಪ್ರದೇಶ ವಿರುದ್ಧ ಮಿಥುನ್‌ 6 ವಿಕೆಟ್‌ ಕಿತ್ತು ಮಿಂಚಿದ್ದರು. ಮೊದಲ ಪಂದ್ಯದಲ್ಲಿ ಸವ್ಯಸಾಚಿ ಕೆ.ಗೌತಮ್‌ 6 ಮತ್ತು 8 ವಿಕೆಟ್‌ ಕಬಳಿಸಿ, ತಮಿಳುನಾಡಿನ ಸೋಲಿಗೆ ಕಾರಣವಾಗಿದ್ದರು. ರಾಜ್ಯದ ಈ ಅನುಭವಿ ಆಟಗಾರರ ಬಲದಿಂದ, ರೋನಿತ್‌ ಮೋರೆ ಅನುಪಸ್ಥಿತಿಯಲ್ಲೂ ಬೌಲಿಂಗ್‌ ವಿಭಾಗ ಬಲಿಷ್ಠವಾಗಿಯೇ ಇದೆ.

Advertisement

Udayavani is now on Telegram. Click here to join our channel and stay updated with the latest news.

Next