Advertisement

ತವರು ಮಾದರಿಗೆ ರಣಜಿ

09:03 AM Jul 31, 2017 | |

ಹೊಸದಿಲ್ಲಿ: ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿ ಮತ್ತೆ “ತವರು ಮಾದರಿ’ಗೆ ಮರಳುವ ಹಾದಿಯಲ್ಲಿದೆ. 2017-18ರ ಋತುವಿನಿಂದ ಈ ಪುರಾತನ ದೇಶಿ ಕ್ರಿಕೆಟ್‌ ಕೂಟವನ್ನು ತಟಸ್ಥ ಕೇಂದ್ರದಿಂದ ಬೇರ್ಪಡಿಸಿ ತವರಿನಂಗಳದಲ್ಲೇ ಆಡುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಆ. 2ರಂದು ಸೌರವ್‌ ಗಂಗೂಲಿ ನೇತೃತ್ವದಲ್ಲಿ ಕೋಲ್ಕತಾದಲ್ಲಿ ನಡೆಯುವ ತಾಂತ್ರಿಕ ಸಮಿತಿ ಸಭೆಯಲ್ಲಿ ಇದಕ್ಕೆ ಸಂಬಂಧಿಸಿದಂತೆ ಅಂತಿಮ ನಿರ್ಣಯವನ್ನು ತೆಗೆದುಕೊಳ್ಳುವ ಎಲ್ಲ ಸಾಧ್ಯತೆ ಇದೆ.

Advertisement

2015-16ರ ಋತುವಿನ ತನಕ ರಣಜಿ ಪಂದ್ಯಗಳನ್ನು ತವರು ಮತ್ತು ಹೊರಗಿನ ಅಂಗಳದಲ್ಲಿ ಆಡುವ ಸಂಪ್ರದಾಯವಿತ್ತು. ಆದರೆ ರಣಜಿ ಟ್ರೋಫಿಗೆ ಹೊಸತನ ನೀಡಬೇಕೆಂಬ ಉದ್ದೇಶದಿಂದ ಮಂಡಳಿಯ ಸದಸ್ಯರು ತಟಸ್ಥ ಕೇಂದ್ರಗಳಲ್ಲಿ ಪಂದ್ಯಗಳನ್ನು ಆಡಿಸುವ ನಿರ್ಧಾರಕ್ಕೆ ಬಂದರು. ತವರಿನ ಕ್ರಿಕೆಟ್‌ ಮಂಡಳಿ ತನ್ನ ತಂಡಕ್ಕೆ ಅನುಕೂಲಕರವಾಗುವಂಥ ಪಿಚ್‌ಗಳನ್ನು ನಿರ್ಮಿಸುತ್ತದೆ ಎಂಬ ದೂರು ಕೂಡ ಈ ಬದಲಾವಣೆಗೆ ಕಾರಣ. ಅದರಂತೆ 2016-17ರ ರಣಜಿ ಪಂದ್ಯಗಳಿಗೆ ತವರಿನ ಭಾಗ್ಯ ಲಭಿಸಲಿಲ್ಲ. ಎಲ್ಲವೂ ತಟಸ್ಥ ಅಂಗಳದಲ್ಲೇ ನಡೆದವು. 

ವೀಕ್ಷಕರ ಕೊರತೆ…
ಆದರೆ ಕ್ರಿಕೆಟ್‌ ಮಂಡಳಿಯ ಈ ಯೋಜನೆ ಸಂಪೂರ್ಣ ವಿಫ‌ಲಗೊಂಡಿತು. ಕಾರಣ, ತವರಿನಂಗಳದಲ್ಲಿ ಪಂದ್ಯ ನಡೆಯದಿದ್ದುದರಿಂದ ವೀಕ್ಷಕರು ಸ್ಟೇಡಿಯಂ ಕಡೆ ತಲೆಯನ್ನೇ ಹಾಕಲಿಲ್ಲ. ತಮ್ಮ ನೆಚ್ಚಿನ ತಂಡದ ಆಟವನ್ನು ಕಾಣಲಾಗದಿದ್ದ ಮೇಲೆ ಇಂಥ ಪಂದ್ಯಾವಳಿಯ ಅಗತ್ಯವಾದರೂ ಏನು ಎಂಬ ಅಸಮಾಧಾನ ಕೂಡ ವ್ಯಕ್ತವಾಯಿತು. 

“ದೇಶದ ಬಹುತೇಕ ಕ್ರಿಕೆಟ್‌ ಮಂಡಳಿಗಳು ತಟಸ್ಥ ಕೇಂದ್ರದ ಮಾದರಿಗೆ ವಿರೋಧ ವ್ಯಕ್ತಪಡಿಸಿವೆ. ಹೀಗಾಗಿ ನಾವು ಹಳೆಯ ಮಾದರಿಗೇ ಮರಳುವ ಯೋಜನೆಯಲ್ಲಿದ್ದೇವೆ. ಆಗ ತವರಿನ ವೀಕ್ಷಕರಿಗೆ ಕನಿಷ್ಠ 4 ಪಂದ್ಯಗಳನ್ನಾದರೂ ವೀಕ್ಷಿಸುವ ಅವಕಾಶ ಲಭಿಸುತ್ತದೆ. ಸುಮಾರು ಮೂರೂವರೆ ತಿಂಗಳ ಕಾಲ ಕ್ರಿಕೆಟಿಗರು ಹೊರಗಡೆ ಸುತ್ತಾಡುತ್ತ ಇರಬೇಕಾದ್ದರಿಂದ ಅವರಿಗೆ “ಹೋಮ್‌ ಸಿಕ್‌ನೆಸ್‌’ ಕೂಡ ಕಾಡಲಾರಂಭಿಸುತ್ತದೆ. ಹಳೆ ಮಾದರಿಯಲ್ಲಿ ಇದಕ್ಕೆ ಆಸ್ಪದವಿಲ್ಲ…’ ಎಂದು ಬಿಸಿಸಿಐ ವಕ್ತಾರರೊಬ್ಬರು ಪಿಟಿಐ ಜತೆ ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next