Advertisement

ರೈತರ ಸುತ್ತ ರಣಂ

09:10 AM May 11, 2019 | Team Udayavani |

‘ರಣಂ’ ಚಿತ್ರೀಕರಣ ಸಾಹಸ ದೃಶ್ಯದ ವೇಳೆ ದುರಂತವೊಂದು ಸಂಭವಿಸಿದ್ದು ನಿಮಗೆ ನೆನಪಿರಬಹುದು. ಆ ಮೂಲಕ ಚಿತ್ರ ದೊಡ್ಡ ಸುದ್ದಿಗೆ ಗ್ರಾಸವಾಯಿತು. ಈಗ ಚಿತ್ರತಂಡ ಚಿತ್ರದ ಪ್ರಮೋಶನ್‌ ಕಾರ್ಯಗಳಲ್ಲಿ ನಿರತವಾಗಿದೆ. ಮೊದಲ ಹಂತವಾಗಿ ಇತ್ತೀಚೆಗೆ ಚಿತ್ರದ ಪೋಸ್ಟರ್‌ ಬಿಡುಗಡೆ ನಡೆಯಿತು. ಚೇತನ್‌ ಹಾಗೂ ಚಿರಂಜೀವಿ ಸರ್ಜಾ ನಾಯಕರಾಗಿರುವ ಈ ಚಿತ್ರವನ್ನು ಕನಕಪುರ ಶ್ರೀನಿವಾಸ್‌ ನಿರ್ಮಿಸುತ್ತಿದ್ದು, ಸಮುದ್ರ ಅವರ ನಿರ್ದೇಶನವಿದೆ.

Advertisement

‘ರಣಂ’ ಚಿತ್ರ ಇಂದಿನ ಯುವಕರು ಮತ್ತು ರೈತರ ಕುರಿತಾದ ಚಿತ್ರ ಎಂಬುದು ಚಿತ್ರತಂಡದ ಮಾತು. ಚಿತ್ರದಲ್ಲಿ ರೈತ ಕುಟುಂಬದಿಂದ ಬಂದ ನಾಲ್ವರು ಸಾಮಾನ್ಯ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಲು ಏನೇನು ತೊಂದರೆಗಳನ್ನು ಅನುಭವಿಸುತ್ತಾರೆ. ರೈತ ಕುಟುಂಬಗಳ ನೋವುಗಳೇನು, ಅದಕ್ಕೆ ಪರಿಹಾರಗಳೇನು ಎನ್ನುವುದೇ ಚಿತ್ರದ ಕಥಾಹಂದರ. ಹಾಗಾಗಿ ಇದು ಇಂದಿನ ಯುವಕರಿಂದ ಹಿಡಿದು ಪೋಷಕರವರೆಗೆ ಎಲ್ಲರಿಗೂ ಕನೆಕ್ಟ್ ಆಗುವ ಚಿತ್ರ ಎನ್ನುತ್ತದೆ ಚಿತ್ರತಂಡ.

ನಾಯಕ ಚೇತನ್‌ ಈ ಚಿತ್ರದ ಪಾತ್ರ ತುಂಬಾ ಖುಷಿ ಕೊಟ್ಟಿದೆಯಂತೆ. ನಿಜ ಜೀವನಕ್ಕೆ ತುಂಬಾ ಹತ್ತಿರವಾದ ಪಾತ್ರ ಎಂಬುದು ಅವರ ಪಾತ್ರ. ಚಿತ್ರದಲ್ಲಿ ತೆಲುಗು ನಟಿ ವರಲಕ್ಷ್ಮೀ ನಾಯಕಿಯಾಗಿ ನಟಿಸಿದ್ದು, ಅವರಿಲ್ಲಿ ಸಿಬಿಐ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರಂತೆ. ಇನ್ಸ್‌ಪೆಕ್ಟರ್‌ ಆಗಿ ಚಿರಂಜೀವಿ ಸರ್ಜಾ, ಕಾಲೇಜು ವಿದ್ಯಾರ್ಥಿನಿ ಪಾತ್ರದಲ್ಲಿ ಹಾಸನದ ನೀತೂಗೌಡ ನಟಿಸಿದ್ದಾರೆ. ಉಳಿದಂತೆ ತೆಲುಗು ನಟರಾದ ದೇವಗಿಲ್‌, ಮಧು ಖಳನಟರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಉಳಿದಂತೆ ಸಾಧುಕೋಕಿಲ ಮತ್ತಿತರ ಕಲಾವಿದರು ಚಿತ್ರ ಇತರೆ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಚೇತನ್‌ಕುಮಾರ್‌. ಎ.ಪಿ.ಅರ್ಜುನ್‌ ಸಾಹಿತ್ಯವಿದೆ. ಚಿತ್ರಕ್ಕೆ ರವಿವರ್ಮ, ಥ್ರಿಲ್ಲರ್‌ ಮಂಜು ಸಾಹಸವಿದ್ದು, ನಿರಂಜನ್‌ ಬಾಬು ಛಾಯಾಗ್ರಹಣವಿದೆ. ಸದ್ಯಕ್ಕೆ ಕನ್ನಡ ಮತ್ತು ತೆಲುಗಿನಲ್ಲಿ ಮಾತ್ರ ಚಿತ್ರವನ್ನು ನಿರ್ಮಿಸುತ್ತಿದ್ದು, ತಮಿಳಿಗೆ ಚಿತ್ರವನ್ನು ಡಬ್‌ ಮಾಡುವ ಬಗ್ಗೆ ಯೋಚಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next