Advertisement

ಗೋಕಾಕ್‌ಗೆ ರಮೇಶ್‌ ಮತ್ತೆ ಸಾವ್ಕಾರ

09:57 PM Dec 09, 2019 | Lakshmi GovindaRaj |

ಬೆಳಗಾವಿ: ಮೈತ್ರಿ ಸರ್ಕಾರದ ಪತನದಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದ ರಮೇಶ ಜಾರಕಿಹೊಳಿ ಬಿಜೆಪಿಯಿಂದ ತಮ್ಮ ಅಗ್ನಿ ಪರೀಕ್ಷೆ ಎದುರಿಸಿ ಗೆದ್ದು ಬಂದಿದ್ದಾರೆ. ಇದರ ಮೂಲಕ ಜನತಾ ನ್ಯಾಯಾಲಯದಲ್ಲಿ ತಮಗೆ ಅಂಟಿಕೊಂಡಿದ್ದ ಅನರ್ಹತೆ ಕಳಂಕವನ್ನು ನಿವಾರಿಸಿಕೊಂಡಿದ್ದಾರೆ.

Advertisement

ಮುಖ್ಯಮಂತ್ರಿಗಳ ಅಭಯ: ಬಿಜೆಪಿಗೆ ಬಂದ ನಂತರ ಸಾಕಷ್ಟು ಸವಾಲು, ಸಮಸ್ಯೆಗಳನ್ನು ಎದುರಿಸಿದ್ದ ರಮೇಶ ಜಾರಕಿಹೊಳಿ ಅವರಿಗೆ ಸಹೋದರ ಬಾಲಚಂದ್ರ ಜಾರಕಿಹೊಳಿ ಚುನಾವಣೆ ಸಮಯದಲ್ಲಿ ಸೂಕ್ತ ಮಾರ್ಗದರ್ಶನ ಮಾಡಿದರು. ಪ್ರಚಾರ ಹಾಗೂ ಗೆಲುವಿನ ಉಸ್ತುವಾರಿ ವಹಿಸಿ ಕೊಂಡರು. ಅದಕ್ಕೆ ಮುಖ್ಯಮಂತ್ರಿ ಯಡಿ ಯೂರಪ್ಪ ಬೆಂಬಲವಾಗಿ ನಿಂತರು.

ಮುಖ್ಯ ಮಂತ್ರಿಗಳ ಕಟ್ಟುನಿಟ್ಟಿನ ಸೂಚನೆ ಮೇರೆಗೆ ಬಿಜೆಪಿಯ ಪ್ರಭಾವಿ ಲಿಂಗಾಯತ ನಾಯಕರು ರಮೇಶ ಜಾರಕಿಹೊಳಿ ಪರ ಪ್ರಚಾರಕ್ಕೆ ಧುಮುಕಿದರು. ಈ ಎಲ್ಲ ಅಂಶಗಳು ರಮೇಶಗೆ ಹೆಚ್ಚಿನ ಜಯದ ಅಂತರ ತಂದುಕೊಟ್ಟವು. ಕಾಂಗ್ರೆಸ್‌ನಿಂದ ಸಹೋದರ ಲಖನ್‌ ಜಾರಕಿಹೊಳಿ ಸ್ಪರ್ಧೆ ಮಾಡಿದ್ದರೂ, ಒಮ್ಮೆಯೂ ಅವರಿಂದ ರಮೇಶ್‌ಗೆ ಭಯ ಎದುರಾಗಲಿಲ್ಲ. ಬದಲಾಗಿ ಅವರಿಬ್ಬರ ನಡುವೆ ಹೊಂದಾಣಿಕೆ ಯಾಗಿದೆ ಎಂಬ ಮಾತುಗಳು

ಕೇಳಿಬಂದವು. ಇನ್ನು ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದ ಅಶೋಕ್‌ ಪೂಜಾರಿ ಅವರು ಜಾರಕಿಹೊಳಿ ಸಹೋದರರ ಅರ್ಭಟದ ಮುಂದೆ ಸಪ್ಪೆಯಾಗಿ ಹೋದರು. ಆತ್ಮವಿಶ್ವಾಸ ತುಂಬುವ ಕೆಲಸ: ಬಿಜೆಪಿ ಸೇರ್ಪಡೆ ನಂತರ ಹೊಸ ಮತದಾರರನ್ನು ಸೆಳೆಯುವ ದೊಡ್ಡ ಸವಾಲು ಎದುರಿಸಿದ ರಮೇಶ್‌ ಜಾರಕಿಹೊಳಿ ಗ್ರಾಮಗಳಲ್ಲಿ ಸಭೆ ನಡೆಸಿ ಜನರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡಿದರು. ಪ್ರಮುಖ ಸಮಾಜದ ಮುಖಂಡರ ಜತೆ ಸಮಾಲೋಚನೆ ನಡೆಸಿ ಅವರಲ್ಲಿ ತಮ್ಮ ಬಗ್ಗೆ ನಂಬಿಕೆ ಮೂಡಿಸಿದರು. ಇದು ಮುಂದೆ ರಮೇಶ ಜಾರಕಿಹೊಳಿಗೆ ಹೆಚ್ಚಿನ ಮತಗಳನ್ನು ಪಡೆಯಲು ಸಹಾಯಮಾಡಿತು.

ಇನ್ನು ಈ ಉಪ ಚುನಾವಣೆಯಲ್ಲಿ ದೊಡ್ಡ ಹೊಡೆತ ತಿಂದವರು ಜೆಡಿಎಸ್‌ನ ಅಶೋಕ್‌ ಪೂಜಾರಿ. ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಹಲವು ನಾಯಕರ ಮನವೊಲಿಕೆಗೆ ಜಗ್ಗದ ಅಶೋಕ ಪೂಜಾರಿ ಬಿಜೆಪಿ ಬಿಡುವ ತೀರ್ಮಾನ ಮಾಡಿದರು. ತಮ್ಮ ಮನೆಗೆ ಬಂದ ರಮೇಶ ಜಾರಕಿಹೊಳಿ, ಮಹಾಂತೇಶ ಕವಟಗಿಮಠ ಅವರನ್ನು ನಿರ್ಲಕ್ಷ್ಯ ಮಾಡಿದರು. ಇದು ಅವರಿಗೆ ಬಹಳ ದುಬಾರಿಯಾಗಿ ಪರಿಣಮಿಸಿತು.

Advertisement

ಮೂರನೇ ಸ್ಥಾನಕ್ಕೆ ಅಶೋಕ್‌: ಕಾಂಗ್ರೆಸ್‌ ಟಿಕೆಟ್‌ಗಾಗಿ ಕೊನೆಯ ಗಳಿಗೆಯವರೆಗೆ ಕಾದಿದ್ದ ಅಶೋಕ ಪೂಜಾರಿಗೆ ಕೊನೆಗೆ ಬಂದಿದ್ದು ನಿರಾಸೆಯ ಉತ್ತರ. ಹಟಕ್ಕೆ ಬಿದ್ದು, ಜೆಡಿಎಸ್‌ ಟಿಕೆಟ್‌ ಪಡೆದು ಸ್ಪರ್ಧೆ ಮಾಡಿದರು. ಆದರೆ ಮತದಾರರ ಮುಂದೆ ಪೂಜಾರಿ ಅವರ ಆಟ ನಡೆಯಲಿಲ್ಲ. ಹೀಗಾಗಿ ಕಳೆದ ಚುನಾವಣೆಯಲ್ಲಿ 2ನೇ ಸ್ಥಾನದಲ್ಲಿದ್ದ ಪೂಜಾರಿ ಈ ಬಾರಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು.

ಗೆದ್ದವರು
ರಮೇಶ ಜಾರಕಿಹೊಳಿ (ಬಿಜೆಪಿ)
ಪಡೆದ ಮತ: 87,450
ಗೆಲುವಿನ ಅಂತರ‌: 29,006

ಸೋತವರು
ಲಖನ್‌ ಜಾರಕಿಹೊಳಿ (ಕಾಂಗ್ರೆಸ್‌)
ಪಡೆದ ಮತ: 58,444

ಅಶೋಕ್‌ ಪೂಜಾರಿ(ಜೆಡಿಎಸ್‌)
ಪಡೆದ ಮತ: 27,948

ರಮೇಶ್‌ ಗೆದ್ದದ್ದು ಹೇಗೆ?
-ಬಿಜೆಪಿಯ ಸಂಘಟಿತ ಪ್ರಚಾರ. ಕರಾರುವಾಕ್‌ ಕಾರ್ಯ ತಂತ್ರ. ಭರ್ಜರಿ ಕಾರ್ಯಕರ್ತರ ಪಡೆ

-ಮುಖ್ಯಮಂತ್ರಿ ಯಡಿಯೂರಪ್ಪ ಅವರ ಎರಡು ಬಾರಿಯ ಪ್ರಚಾರ. ಸಚಿವಗಿರಿ ಭರವಸೆ

-ರಮೇಶ ಜಾರಕಿಹೊಳಿ ಅವರ ಪ್ರಭಾವ ಹಾಗೂ ಸಹೋದರರ ಆಂತರಿಕ ಹೊಂದಾಣಿಕೆ

ಲಖನ್‌ ಸೋತದ್ದು ಹೇಗೆ?
-ಕಾಂಗ್ರೆಸ್‌ ನಾಯಕರಲ್ಲಿ ಚುನಾವಣೆಯ ಕೊನೆ ಹಂತದವರೆಗೂ ಕಾಡಿದ ಮನಸ್ತಾಪ ಮತ್ತು ಕೊನೆ ಕ್ಷಣದಲ್ಲಿ ಆದ ಬದಲಾವಣೆಗಳು

-ಸಿದ್ದರಾಮಯ್ಯ ಹೊರತುಪಡಿಸಿ ಉಳಿದ ನಾಯಕರು ಪ್ರಚಾರದಿಂದ ದೂರ

-ನಿರ್ಣಾಯಕ ಮತದಾರರು ಬಿಜೆಪಿ ಕಡೆ ವಾಲಿದ್ದು. ಸರಿಯಾಗಿ ಪ್ರಚಾರ ಮಾಡದೆ ಇರುವುದು ಮತ್ತು ಪಕ್ಷದಲ್ಲಿ ಸರಿಯಾದ ಬೆಂಬಲ ದೊರಕದಿರುವುದು

ಈ ಗೆಲುವು ಹೊಸ ಇತಿಹಾಸ ನಿರ್ಮಾಣ ಮಾಡಿದೆ. ಜಿಲ್ಲೆಯಲ್ಲಿ ಉಂಟಾದ ಪ್ರವಾಹದ ಸಂದರ್ಭವನ್ನು ಮರೆತು ಜನರು ನನಗೆ ಆಶೀರ್ವಾದ ಮಾಡಿದ್ದಾರೆ. ಅವರ ಈ ಋಣವನ್ನು ಯಾವತ್ತೂ ಮರೆಯುವುದಿಲ್ಲ. ಬರುವ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿ ಮಾಡುವ ಮೂಲಕ ಅವರ ಸೇವೆ ಮಾಡುತ್ತೇನೆ.
-ರಮೇಶ ಜಾರಕಿಹೊಳಿ, ಬಿಜೆಪಿ ವಿಜೇತ ಅಭ್ಯರ್ಥಿ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ರಮೇಶ ಜಾರಕಿಹೊಳಿ ಅವರನ್ನು ಗೆಲ್ಲಿಸಿದ್ದು, ಮುಂದೆ ಉತ್ತಮವಾಗಿ ಕೆಲಸ ಮಾಡಲಿ. ಹಳ್ಳಿಗಳನ್ನು ಅಭಿವೃದ್ಧಿ ಗೊಳಿಸಲಿ. ಯಾವುದೇ ಸಮಸ್ಯೆ ಬಂದರೂ ಬಾಲಚಂದ್ರ ನಮ್ಮ ಬಳಿ ಬನ್ನಿ ಅಂತಾ ಹೇಳಿದ್ದಾರೆ. ಇದನ್ನು ಸ್ವಾಗತ ಮಾಡುತ್ತೇವೆ.
-ಲಖನ್‌ ಜಾರಕಿಹೊಳಿ, ಕಾಂಗ್ರೆಸ್‌ ಪರಾಜಿತ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next