Advertisement

ಜನಾಶಿರ್ವಾದ ಸಿಕ್ಕರೆ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಬಹುದು : ರಮೇಶ್‌ ಕುಮಾರ್‌

07:58 PM Apr 04, 2021 | Team Udayavani |

ಬೆಂಗಳೂರು: “ಎಲ್ಲರಿಗೂ ವಿನಂತಿ ಮಾಡುತ್ತೇನೆ. ದಯಮಾಡಿ ನಮ್ಮ ನಾಯಕರನ್ನು ಮಾಜಿ ಮುಖ್ಯಮಂತ್ರಿ ಎಂದು ಕರೆಯಬೇಡಿ. ಅವರು ಹಿಂದೆ ಮುಖ್ಯಮಂತ್ರಿ ಆಗಿದ್ದರು. ಆಗ ಏನು ಒಳ್ಳೆಯ ಕೆಲಸ ಮಾಡಲು ಸಾಧ್ಯವಿತ್ತೋ ಅದನ್ನು ಮಾಡಿದ್ದಾರೆ. ಸಂದರ್ಭಗಳು ಬೇರೆ ರೀತಿಯಾಗಿ ಅವರು ಆ ಸ್ಥಾನವನ್ನು ಬಿಟ್ಟು ಬಂದಿದ್ದಾರೆ. ಜನರಿಗೆ ಇಷ್ಟವಿದ್ದರೆ ಹಾಗೂ ಅವಕಾಶ ಸಿಕ್ಕರೆ ಮತ್ತೂಮ್ಮೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬಹುದು’.

Advertisement

ಹೀಗೆ..ವಿಧಾನಸಭೆ ಮಾಜಿ ಸಭಾಪತಿ ರಮೇಶ್‌ ಕುಮಾರ್‌, ತಮ್ಮ ಪಕ್ಷದ ನಾಯಕ ಸಿದ್ದರಾಮಯ್ಯರನ್ನು ಮಾಜಿ ಮುಖ್ಯಮಂತ್ರಿ ಎಂದು ಕರೆಯಬೇಡಿ. ಇದು ಅವರಿಗೆ ಅಪಮಾನ ಮಾಡಿದಂತೆ ಎಂದು ಹೇಳುವ ಜತೆಗೆ, ರಾಜ್ಯದ ಜನ ಆಶೀರ್ವಾದ ಮಾಡಿದರೆ ಮತ್ತೂಮ್ಮೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಚುಕ್ಕಾಣಿ ಏರಲಿದ್ದಾರೆ ಎಂದು ಸಿದ್ದರಾಮಯ್ಯನವರ ಸಮ್ಮುಖದಲ್ಲೇ ವಿಶ್ವಾಸ ವ್ಯಕ್ತಪಡಿಸಿದರು.

ಡಾ.ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯ, ಕರ್ನಾಟಕ ಗಾಂಧಿ ಸ್ಮಾರಕ ನಿಧಿಯಿಂದ ನಗರದ ಗಾಂಧಿ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹೆಡ್‌ಮಾಸ್ಟರ್‌ ಕೆಂಗರಾಮಯ್ಯ ಕೃತಿ ಲೋಕಾರ್ಪಣೆ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.

“ಪದೇ ಪದೆ ನಮ್ಮ ನಾಯಕರನ್ನು ಮಾಜಿ ಮುಖ್ಯಮಂತ್ರಿ ಎನ್ನಬೇಡಿ. ಮಾಜಿ ಮುಖ್ಯಮಂತ್ರಿ ಎಂದು ಕರೆದು ಏನು ಮಾಡುತ್ತೀರಾ? ಉಪ್ಪಿನಕಾಯಿ ಹಾಕುತ್ತೀರಾ? ಇದು ಅವರಿಗೆ ಅಪಮಾನ ಮಾಡಿದಂತೆ. ಹೀಗಾಗಿ, ಮಾಜಿ ಮುಖ್ಯಮತ್ರಿ ಬದಲಾಗಿ ಸಿದ್ದರಾಮಯ್ಯನವರೆ ಅಥವಾ ವಿರೋಧ ಪಕ್ಷದ ನಾಯಕರೇ ಎಂದು ಕರೆಯಿರಿ’ ಎಂದು ಮನವಿ ಮಾಡಿದರು.

ಸಿದ್ದು ಆ.. ದಾರಿಯಲ್ಲಿ ಸಾಗುತ್ತಿದ್ದಾರೆ:
“ರಾಜ್ಯದ ಜನರು ಇಷ್ಟಪಟ್ಟರೆ ಮಾತ್ರ, ಸಿದ್ದರಾಮಯ್ಯನವರು ಮತ್ತೆ ಮುಖ್ಯಮಂತ್ರಿ ಆಗಬಹುದು. ಜನರು ಷ್ಟಪಡುವುದು, ಜನರ ಹತ್ತಿರ ಇದ್ದು ಅವರ ನೋವನ್ನು ಅರ್ಥ ಮಾಡಿಕೊಂಡಾಗ ಮಾತ್ರ. ಅವರ ಸಮಸ್ಯೆಗಳಿಗೆ ಸ್ಪಂದಿಸಿದಾಗ, ಅವರ ಭಾಷೆಯನ್ನು ನಮ್ಮ ಭಾಷೆಯನ್ನಾಗಿ, ಅವರ ನೋವನ್ನು ನಮ್ಮ ನೋವನ್ನಾಗಿ ಪರಿವರ್ತನೆ ಮಾಡಿದಾಗ ಜನರು ಇಷ್ಟಪಡುತ್ತಾರೆ. ಬಹುಶಃ ಸಿದ್ದರಾಮಯ್ಯ ಅವರು ಆ ದಾರಿಯಲ್ಲಿ ಸಾಗುತ್ತಿದ್ದಾರೆ. ಮುಂದೆ ಮತ್ತೆ ಮುಖ್ಯಮಂತ್ರಿ ಆಗುವ ಅವಕಾಶ ಜನರೇ ನೀಡಬಹುದು’ ಎಂದು ಪರೋಕ್ಷವಾಗಿ ಸಿದ್ದರಾಮಯ್ಯನವರು ಮತ್ತೆ ಸಿಎಂ ಚುಕ್ಕಾಣಿಗಾಗಿ ಜನರಿಗೆ ಹತ್ತಿರವಾಗುತ್ತಿದ್ದಾರೆ ಎಂದರು.

Advertisement

ಇದನ್ನೂ ಓದಿ :ಕೋವಿಡ್ ಹಿನ್ನೆಲೆ : ಯುಗಾದಿ ಜಾತ್ರೆಯಂದು ಮಹದೇಶ್ವರ ಬೆಟ್ಟಕ್ಕೆ ಭಕ್ತಾದಿಗಳ ಪ್ರವೇಶ ನಿರ್ಬಂಧ

ನಮ್ಮ ಪಂಚೇಂದ್ರಿಯಗಳೆಲ್ಲಾ ಸತ್ತು ಹೋಗುತ್ತಿವೆ:
“ನಮಗೆ ನಮ್ಮ ಪಂಚೇಂದ್ರಿಯಗಳೆಲ್ಲಾ ಕ್ರಮೇಣವಾಗಿ ಸತ್ತು ಹೋಗುತ್ತಿವೆ. ನಾಚಿಕೆ ಎನ್ನುವ ಪದ ನಮಗೆ ಮರೆತು ಹೋಗಿದೆ. ಕೃತಜ್ಞತೆ ಎಂಬುದು ನಮ್ಮ ಶಬ್ಧಕೋಶದಲ್ಲೇ ಇಲ್ಲ. ನ್ಯಾಯ, ಅನ್ಯಾಯಗಳ ಬಗ್ಗೆ ಹೆಚ್ಚಿನ ಸಮಯ ಕೊಡಲು ಆಗುವುದಿಲ್ಲ. ಕೆಟ್ಟ ದುರ್ವಾಸನೆ ಹತ್ತಿರ ಬಂದರೂ ಅದು ನಮಗೆ ಗೋಚರವಾಗುವುದಿಲ್ಲ. ಏಕೆಂದರೆ, ನಮ್ಮ ಪಂಚೇಂದ್ರಿಗಳು ಕೆಲಸ ಮಾಡುತ್ತಿಲ್ಲ. ಈ ರೀತಿಯ ಪರಿಸ್ಥಿತಿಯಲ್ಲಿರುವ ನಾವು ಈ ರೀತಿಯ ಪುಸ್ತಕಗಳನ್ನು ಓದುವ ಅಗತ್ಯವಿದೆ. ಉತ್ತಮ ವಿಷಯಗಳನ್ನು ನೋಟ್‌ ಮಾಡಿ ಇಟ್ಟುಕೊಂಡರೆ ಸ್ವಲ್ಪವಾದರೂ ಸಹಾಯವಾಗಲಿದೆ’ ಎಂದರು.

ಗಂಡ ಆಸ್ತಿ ಬೇಡವೆಂದರೂ ಹೆಂಡತಿ ಬಿಡಲ್ಲ:
ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, “ಪ್ರಸ್ತುತ ಸಮಾಜದಲ್ಲಿ ತಾರತಮ್ಯ ತಾಂಡವವಾಡುತ್ತಿದೆ. ಜಾತ್ಯತೀತತೆ ಮತ್ತು ಶಿಕ್ಷಣ ಸಂಸ್ಕೃತಿಯ ವಂಚನೆ ಇದಕ್ಕೆ ಕಾರಣ. ಬಹುಸಂಖ್ಯಾತ ಜನರು ಅಕ್ಷರದಿಂದ ವಂಚಿತರಾಗಿದ್ದಾರೆ. ಎಲ್ಲರಿಗೂ ಶಿಕ್ಷಣ ಪಡೆಯುವ ಅವಕಾಶ ಸಿಕ್ಕಿದ್ದರೆ ಈ ರೀತಿ ಸಮಾಜ ಸೃಷ್ಟಿಯಾಗುತ್ತಿರಲಿಲ್ಲ. ಆದರೆ, ಕೆಂಗರಾಮಯ್ಯ, ವಿದ್ಯೆ ಕೊಡುವುದೇ ಆಸ್ತಿ ಎಂದು ನಂಬಿದ್ದರು. ಎಂದೂ ದೂರಾಸೆ ಪಟ್ಟವರಲ್ಲ. ತಮ್ಮ ಪಿತ್ರಾರ್ಜಿತ ಆಸ್ತಿ ಪಡೆಯದೆ, ಸಹೋದರರಿಗೆ ಬಿಟ್ಟು ಕೊಟ್ಟಿ¨ªಾರೆ. ಪ್ರಸ್ತುತ ಯಾರಾದರೂ ಈ ರೀತಿ ಆಸ್ತಿ ಕೊಡಲು ಸಾಧ್ಯವೇ? ಗಂಡಂದಿರು ಬಿಟ್ಟರೂ ಹೆಂಡತಿಯರು ಬಿಡಲ್ಲ ಅಲ್ವಾ..’ ಎಂದು ನಗೆ ಚಟಾಕಿ ಹಾರಿಸಿದರು.

ಇದನ್ನೂ ಓದಿ :ತ್ರಿಬಲ್ ರೈಡಿಂಗ್: ನಿಯಂತ್ರಣ ಕಳೆದು ಹಳ್ಳಕ್ಕೆ ಬಿದ್ದ ಬೈಕ್, ಇಬ್ಬರ ಸಾವು, ಓರ್ವನಿಗೆ ಗಾಯ

ಕೆಂಗರಾಮಯ್ಯ ಒಬ್ಬ ಆದರ್ಶ ಶಿಕ್ಷಕ:
“ಹೆಡ್‌ ಮಾಸ್ಟರ್‌ ಕೆಂಗರಾಮಯ್ಯ ಒಬ್ಬ ಆದರ್ಶ ಶಿಕ್ಷಕ. ವಿವೇಕಾನಂದ ಮತ್ತು ಮಹಾತ್ಮಗಾಂಧಿ ವಿಚಾರಧಾರೆ ಅವರ ಮೇಲೆ ಗಾಢವಾಗಿ ಪ್ರಭಾವ ಬೀರಿದ್ದವು. ಸಾಮಾನ್ಯ ಕುಟುಂಬದಲ್ಲಿ ಬೆಳೆದು ಬಿಎಸ್ಸಿ ಪದವಿ ಪಡೆದು, ಶಿಕ್ಷಕ ವೃತ್ತಿ ರಂಭಿಸಿದ್ದರು. ನಿವೃತ್ತಿವರೆಗೂ ಬದ್ಧತೆಯಿಂದ ಶಿಕ್ಷಕ ವೃತ್ತಿ ನಿರ್ವಹಿಸಿದ್ದಾರೆ. ತನ್ನ ಜೀವನದಲ್ಲಿ ಜಾತ್ಯತೀತ ತತ್ವ ಅಳವಡಿಸಿಕೊಂಡು, ಎಲ್ಲ ವಿದ್ಯಾರ್ಥಿಗಳನ್ನು ತನ್ನ ಮಕ್ಕಳು ಎಂಬ ದೊಡ್ಡ ಗುಣ ಅಳವಡಿಸಿಕೊಂಡಿದ್ದರು. ಸಂಜೆ ವೇಳೆ ಅವರ ಮನೆಯಲ್ಲಿ ಎಲ್ಲ ಜಾತಿಯ ಮಕ್ಕಳಿಗೆ ಉಚಿತವಾಗಿ ಪಾಠ ಮಾಡುತ್ತಿದ್ದರು. ಒಬ್ಬ ಮಾದರಿ ಶಿಕ್ಷಕ ಹೇಗಿರಬೇಕು ಎಂಬುದನ್ನು ಅವರ ಜೀವನ ಚರಿತ್ರೆಯಲ್ಲಿ ಕಾಣಬಹುದು’ ಎಂದು ಹೇಳಿದರು.

ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್‌ ಮಾತನಾಡಿ, “ಹೆಡ್‌ ಮಾಸ್ಟರ್‌ ಕೆಂಗರಾಮಯ್ಯ ಪುಸ್ತಕ ಕೈಗೆ ಬರುವ ತನಕ ನನ್ನ ತಂದೆಯ ಬಗ್ಗೆ ನನಗೆ ಎಲ್ಲ ತಿಳಿದಿದೆ ಎಂದು ಭಾವಿಸಿದ್ದೆ. ಆದರೆ, ಪುಸ್ತಕ ಕೈಗೆ ಬಂದ ಮೇಲೆ ತಿಳಿಯಿತು, ನಾನು ಅರ್ಧದಷ್ಟು ತಿಳಿದಿಲ್ಲ ಎಂದು. ಅವರು ತಮ್ಮ ಜೀವನದಲ್ಲಿ ಶಿಸ್ತು, ಬದ್ಧತೆ, ಜಾತ್ಯತೀತತೆ ಮತ್ತು ಸರಳತೆಯನ್ನು ಅಳವಡಿಸಿಕೊಂಡಿದ್ದರು’ ಎಂದು ಹೇಳಿದರು.

ಸಮಾರಂಭದಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಜಿ ಶಾಸಕ ಕೆ.ಎನ್‌.ರಾಜಣ್ಣ, ಕೆಪಿಸಿಸಿ ವಕ್ತಾರ ಮುರಳೀಧರ ಹಾಲಪ್ಪ, ಕೃತಿಕಾರ ಡಾ.ನಂದೀಶ್ವರ್‌, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ.ಕೃಷ್ಣ, ವಿಶ್ರಾಂತ ಪ್ರಾಧ್ಯಾಪಕ ಡಾ.ವಿವೇಕಾನಂದ ಮತ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next