Advertisement

Cambodia; ಕಾಂಬೋಡಿಯಾದ ಕಲೆಗಳಲ್ಲಿ ರಾಮಾಯಣ!

12:26 AM Jan 13, 2024 | Team Udayavani |

ಕಾಂಬೋಡಿಯಾದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬೌದ್ಧ ಧರ್ಮೀಯರಿದ್ದಾರೆ. ಈ ಹಿಂದೆ ದೇಶದಲ್ಲಿ ಹಿಂದೂ ಧರ್ಮೀಯರ ಬಾಹುಳ್ಯವಿತ್ತು. ಇದಕ್ಕೆ ಮುಖ್ಯ ಕಾರಣ ಒಡಿಶಾ ಹಾಗೂ ತಮಿಳು ವ್ಯಾಪಾರಿಗಳು. ಸರಕು-ಸಾಮಗ್ರಿಗಳ ಆಮದು ಹಾಗೂ ರಫ್ತಿ ಗಾಗಿ ದಕ್ಷಿಣ ಏಷ್ಯಾ ದೇಶಗಳಿಗೆ ಇವರು ನಿರಂತರವಾಗಿ ಭೇಟಿ ನೀಡುತ್ತಿದ್ದರು. ಇವರಿಂದಾಗಿ ಕಾಂಬೋಡಿಯಾದಲ್ಲೂ ಹಿಂದೂ ಧರ್ಮೀಯರ ಆಚಾರ-ವಿಚಾರಗಳು ಪ್ರಸರಣಗೊಳ್ಳುವಂತಾಯಿತು. ಇಲ್ಲಿನ ಅಂಕೋರ್‌ ವಾಟ್‌ ಅಥವಾ ಅಂಕೋರ ಧಾಮದಲ್ಲಿರುವ ದೇಗುಲ ಸಂಕೀರ್ಣದ ಗೋಡೆಗಳಲ್ಲಿ ರಾಮಾಯಣ ಹಾಗೂ ಮಹಾಭಾರತದ ಚಿತ್ರಣಗಳ ಕೆತ್ತನೆಗಳನ್ನು ಕಾಣಬಹುದು. ದೇಶದ ವಿವಿಧೆಡೆ ರಾಮಾಯಣದ ಹಾಗೂ ಮಹಾಭಾರತದ ಕಥೆಗಳು ಪ್ರಚಲಿತದಲ್ಲಿವೆ.

Advertisement

ಕಾಂಬೋಡಿಯದ ರಾಮಾಯಣವನ್ನು “ರೀಮಕರ’ (ರಾಮಕೀರ್ತಿ) ಎಂದು ಕರೆಯಲಾಗುತ್ತದೆ. ಇದರ ಅರ್ಥ “ರಾಮನ ಮಹಿಮೆ’ ಎಂಬುದಾಗಿದೆ. ಹಿಂದೂ ಮತ್ತು ಬೌದ್ಧ ಧರ್ಮದ ವಿಷಯಗಳನ್ನು ಒಳಗೊಂಡ ಖಮೇರ್‌ ಸಾಹಿತ್ಯದ ಭಾಗ ಇದಾಗಿದೆ ಎಂದು ಹೇಳಲಾಗುತ್ತದೆ. ಇಲ್ಲಿ ರಾಮನನ್ನು ಫ್ರೀಹ ರೀಮ ಹಾಗೂ ಸೀತಾಮಾತೆಯನ್ನು ನಿಯಾಂಗ ಸೆಡಾ ಎಂದು ಕರೆಯಲಾಗುತ್ತದೆ. ಅಂಕೋರ್‌ ವಾಟ್‌ ದೇಗುಲದ ಕಾರಿಡಾರ್‌ನಲ್ಲಿ ರಾಮಾಯಣವನ್ನು ಕೆತ್ತಲಾಗಿದೆ. ರಾಮನು ಸೀತಾ ಸ್ವಯಂವರದಲ್ಲಿ ಬಿಲ್ಲನ್ನು ಮುರಿದಿದ್ದರಿಂದಲೇ ಪ್ರಾಚೀನ ಕಾಂಬೋಡಿಯಾದಲ್ಲಿ ಅತ್ಯಂತ ಜನಪ್ರಿಯವಾಗಿದ್ದನು ಎಂದು ಇಲ್ಲಿನ ಶಿಲಾಶಾಸನಗಳಲ್ಲಿ ಉಲ್ಲೇಖವಾಗಿವೆ. 1620ರಲ್ಲಿ ಖಮೇರ್‌ ಸಾಹಿತ್ಯದ ಲೇಖಕನಾದ ಪಂಜ ಟಾಟ್‌ ಬರೆದ “ಅಂಕೋರ್‌ ವಾಟ್‌ನ ಕಥೆಗಳು’ ಎಂಬ ಸಾಹಿತ್ಯ ಕೃತಿಯಲ್ಲೂ ರೀಮಕರದ ಬಗ್ಗೆ ಉಲ್ಲೇಖವಿದೆ. ಅಂಕೋರ್‌ ವಾಟ್‌ನ ದೇಗುಲಗಳಲ್ಲಿ ರಾಮಾಯಣದ ಕಥೆಗಳ ಕೆತ್ತನೆಯ ಬಗ್ಗೆಯೂ ವಿವರವಿದೆ.

1900ರಲ್ಲಿ ತಾ ಕ್ರೂಡ್‌ ಹಾಗೂ ತಾ ಚಕ ಎನ್ನುವ ಇಬ್ಬರು ವ್ಯಕ್ತಿಗಳು ಇಡೀ ರೀಮಕರದ ಕಥೆಯನ್ನು ಅತ್ಯಂತ ಸುಂದರವಾಗಿ, ಸಂಜ್ಞೆಗಳ ಮೂಲಕ, ಮೌಖೀಕವಾಗಿ ಚಾಚುತಪ್ಪದೇ ಪ್ರಸ್ತುತ ಪಡಿಸುತ್ತಿದ್ದರಂತೆ. 1920ರಲ್ಲಿ ತಾ ಚಕ, ಅಂಕೋರ್‌ ವಾಟ್‌ ದೇಗುಲದ ದಕ್ಷಿಣ ದಿಕ್ಕಿನಲ್ಲಿ ಲಾಟನೈಯರ್‌ ಎಲೆಗಳಲ್ಲಿ ರೀಮಕರದ ಕಥೆಗಳ ಹಸ್ತಪ್ರತಿಗಳನ್ನು ಕಾಣುತ್ತಾನೆ ಹಾಗೂ ಅದರ ಪೂರ್ಣ ಕಥೆಯನ್ನು ಕಲಿತು ಬಾಯಿಪಾಠ ಮಾಡಿಕೊಳ್ಳುತ್ತಾನೆ. 1969ರಲ್ಲಿ ಈ ಕಥೆಗಳನ್ನು ತಾ ಚಕನು ಮೌಖೀಕವಾಗಿ ಪ್ರಸ್ತುತಪಡಿಸುವುದನ್ನು ಸುಮಾರು 10 ದಿನಗಳ ಕಾಲದ ಸಮಯದಲ್ಲಿ ರೆಕಾರ್ಡ್‌ ಮಾಡಲಾಗುತ್ತದೆ.
ರೀಮಕರದ ಹಲವಾರು ಆವೃತ್ತಿಗಳು ಇಂದು ಕಾಂಬೋಡಿಯಾದಲ್ಲಿ ಲಭ್ಯವಿವೆ. ರೀಮಕರವನ್ನು ಕಾಂಬೋಡಿಯಾದ ರಾಷ್ಟ್ರೀಯ ಗ್ರಂಥ ಎಂದು ಗುರುತಿಸಲಾಗಿದೆ. ಜತೆಗೆ ಕಾಂಬೋಡಿಯಾದ ಸಾಹಿತ್ಯ, ಕಲೆ, ನೃತ್ಯ, ನಾಟಕ, ಸಂಸ್ಕೃತಿಯಲ್ಲಿಯೂ ರೀಮಕರ ತನ್ನದೇ ಛಾಪನ್ನು ಹೊಂದಿದೆ.

ಕಾಂಬೋಡಿಯಾದ ಅಂಕೋರ್‌ ವಾಟ್‌ನ ದೇಗುಲಗಳ ಗೋಡೆಗಳಲ್ಲಿ ಅತೀ ವಿಸ್ತೃತವಾಗಿ ರಾಮಾಯಣ ಹಾಗೂ ಮಹಾಭಾರತದ ಕಥೆಗಳನ್ನು ಕೆತ್ತಲಾಗಿದೆ. ಪ್ರತೀ ಕಥೆಯೂ ಬೌದ್ಧ ಧರ್ಮದ ಪ್ರಭಾವವನ್ನು ಹೊಂದಿದೆ. ಬೌದ್ಧ ಧರ್ಮ ಇಲ್ಲಿ ಬರುವ ಮೊದಲು ಇಲ್ಲಿನ ಕೆಲವು ನಗರಗಳನ್ನು ಪರಮ ವಿಷ್ಣು ಲೋಕ ಎಂದು ಕರೆಯಲಾಗುತ್ತಿತ್ತು. ಇಲ್ಲಿನ ಮದುವೆ ಶಾಸ್ತ್ರದಲ್ಲೂ ಹಿಂದೂ ಧರ್ಮದ ಕೆಲವು ವಿಧಾನಗಳನ್ನು ಅನುಸರಿಸಲಾಗುತ್ತದೆ. ಅಂಕೋರ್‌ ವಾಟ್‌ನಲ್ಲಿರುವ ರಾಮಾಯಣದ ಪ್ರಾಚೀನ ಭಿತ್ತಿಚಿತ್ರಗಳ ಸಂರಕ್ಷಣೆಗೆ ಭಾರತವು ಕಾಂಬೋಡಿಯಾಕ್ಕೆ ಆರ್ಥಿಕ ನೆರವನ್ನು ನೀಡುತ್ತಿದೆ.

ದುಬಾರಿ ಟಿವಿ ರಾಮಾಯಣ

Advertisement

ರಮಾನಂದ ಸಾಗರರ ರಾಮಾಯಣ 1987 ರಲ್ಲಿ ದೂರದರ್ಶನದಲ್ಲಿ ಪ್ರಸಾರ ಆರಂಭವಾಯಿತು. ಒಟ್ಟು 78 ಕಂತುಗಳ ಧಾರಾವಾಹಿ ಅತ್ಯಂತ ಜನಪ್ರಿಯವಾಗಿತ್ತು. ವಿಶೇಷವೆಂದರೆ ಪ್ರತೀ ಕಂತು ನಿರ್ಮಾಣಕ್ಕೆ 9 ಲಕ್ಷ ರೂ. ಬಜೆಟ್‌ ನಿಗದಿಯಾಗಿತ್ತು ಆಗಿನ ದಿನಗಳಲ್ಲಿ ಅದೇ ಅತ್ಯಂತ ದುಬಾರಿ ಧಾರಾವಾಹಿ.

Advertisement

Udayavani is now on Telegram. Click here to join our channel and stay updated with the latest news.

Next