Advertisement

ನಾಡು, ಭಾಷೆಯನ್ನು ತಾಯಿಯಂತೆ ಗೌರವಿಸಿ: ಯಡಿಯೂರಪ್ಪ

11:27 PM Nov 07, 2020 | sudhir |

ಬೆಂಗಳೂರು: ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿ ನಮ್ಮ ಅಸ್ಮಿತೆಯ ಭಾಗವಾಗಿದ್ದು, ಭಾಷೆ ಮತ್ತು ಜನ್ಮಭೂಮಿ ಹೆತ್ತ ತಾಯಿಗೆ ಸಮಾನವಾಗಿದೆ. ಹೀಗಾಗಿ ಹೆತ್ತ ತಾಯಿಗೆ ಸಲ್ಲುವಂತಹ ಗೌರವ, ಆದರಗಳು ನಮ್ಮ ಭಾಷೆ ಮತ್ತು ತಾಯ್ನಾಡಿಗೂ ಸಲ್ಲಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ 65 ಮಂದಿ ಸಾಧಕರಿಗೆ ಈ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನಿಸಿ ಮಾತನಾಡಿದ ಅವರು, ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಅಗ್ರಸ್ಥಾನ. ಕನ್ನಡವನ್ನು ನಾವು ಇಲ್ಲಿ ಬೆಳಸದಿದ್ದರೆ ಬೇರೆಲ್ಲೂ ಬೆಳಸಲು ಸಾಧ್ಯವಿಲ್ಲ ಎಂದರು.

ಕನ್ನಡವು ನಮ್ಮ ಹೃದಯ ಭಾಷೆಯಾಗಿದ್ದು, ಇದು ವ್ಯವಹಾರದ ಭಾಷೆಯಾಗಬೇಕು. ಕನ್ನಡವನ್ನು ದೈನಂದಿನ ವ್ಯವಹಾರದಲ್ಲಿ ಹೆಚ್ಚೆಚ್ಚು ಬಳಸಬೇಕು. ಭಾಷೆಯನ್ನು ಬಳಸಿದಂತೆ ಅದು ಬೆಳೆಯುತ್ತದೆ ಎಂದ ಅವರು, ಈ ಬಾರಿ 65 ಮಂದಿ ಸಾಧಕರನ್ನು ನಾಡಿನ ವಿವಿಧ ಮೂಲೆಗಳನ್ನು ಶೋಧಿಸಿ ಪಾರದರ್ಶಕವಾಗಿ ಪ್ರಶಸ್ತಿಗೆ ಆರಿಸಲಾಗಿದೆ ಎಂದು ಹೇಳಿದರು.

ಸಾಧಕ ಮುತ್ತುಗಳನ್ನು ಹೆಕ್ಕಿದ್ದೇವೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ. ಟಿ. ರವಿ ಮಾತನಾಡಿ, ರಾಜ್ಯೋತ್ಸವ ಪ್ರಶಸ್ತಿಗಾಗಿ ಸುಮಾರು 1,872 ಅರ್ಜಿಗಳು ಬಂದಿದ್ದವು. ಸಾಧಕರನ್ನು ಮುತ್ತುಗಳನ್ನು ಹೆಕ್ಕಿ ತೆಗೆದ ರೀತಿಯಲ್ಲಿ ಆಯ್ಕೆ ಮಾಡಲಾಗಿದೆ. ಇನ್ನಷ್ಟು ಮಂದಿ ಅರ್ಹರಾಗಿದ್ದರೂ, ಪ್ರಶಸ್ತಿ ಸಂಖ್ಯೆ ಕಡಿಮೆ ಇದ್ದ ಕಾರಣ ಆಯ್ಕೆ ಮಾಡಲಾಗಿಲ್ಲ ಎಂದರು.

“ಕಲಾತಂಡ’ ಆ್ಯಪ್‌ ಬಿಡುಗಡೆ
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕಲಾವಿದರ ಆನುಕೂಲಕ್ಕಾಗಿ “ಕಲಾತಂಡ’ ಆ್ಯಪ್‌ ಅನ್ನು ಬಿಡುಗಡೆ ಮಾಡಿದರು.

Advertisement

ಪ್ರಶಸ್ತಿ ಮೊತ್ತ ಸಿಎಂ ಪರಿಹಾರ ನಿಧಿಗೆ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪರವಾಗಿ ಹಿರಿಯ ಪತ್ರಕರ್ತ ಟಿ. ವೆಂಕಟೇಶ್‌ ಹಾಗೂ ಚಿಕ್ಕಬಳ್ಳಾಪುರ ಮೂಲದ ಪರಿಸರವಾದಿ, ನಿವೃತ್ತ ಐಎಎಸ್‌ ಅಧಿಕಾರಿ ಕೆಂಪರೆಡ್ಡಿ ಅಮರನಾರಾಯಣ ಅವರು ತಮಗೆ ದೊರೆತ 1 ಲ. ರೂ. ಪ್ರಶಸ್ತಿ ಮೊತ್ತವನ್ನು ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದರು. ಕಲಬುರಗಿ ಮೂಲದ ಕೃಷಿ ಸಾಧಕ ಡಾ| ಸಿದ್ರಾಮಪ್ಪ ಬಸವಂತರಾವ್‌ ಪಾಟೀಲ್‌ ಧಂಗಾಪೂರ ಅವರು 50 ಸಾ. ರೂ. ಅನ್ನು ರೈತರ ನೆರವಿಗಾಗಿ ಸಿಎಂ ಪರಿಹಾರ ನಿಧಿಗೆ ಮತ್ತು ಉಳಿದ 50 ಸಾ. ರೂ.ಅನ್ನು ಹುಟ್ಟೂರು ಧಂಗಾಪುರದ ದೇವಸ್ಥಾನಕ್ಕೆ ನೀಡುವುದಾಗಿ ಘೋಷಿಸಿದರು.

ತಪ್ಪು ಮಾಹಿತಿ ನೀಡಿದ್ದ ಕೇಶಪ್ಪ
ಕೇಶಪ್ಪ ಶಿಳ್ಳೇಕ್ಯಾತರ್‌ ಅವರು ಸುಳ್ಳು ಮಾಹಿತಿಯನ್ನು ನೀಡಿದ್ದರು. ವಿಶೇಷ ಪ್ರಕರಣ ಹೊರತುಪಡಿಸಿದರೆ ಸಾಮಾನ್ಯವಾಗಿ ಈ ಪ್ರಶಸ್ತಿ ಪಡೆಯಲು 60 ವಯಸ್ಸಾಗಬೇಕು. ಆದರೆ ಕೇಶಪ್ಪ ಅವರಿಗೆ 46 ವರ್ಷವಾಗಿತ್ತು. ಇದು ಅವರ ಆಧಾರ್‌ ಕಾರ್ಡ್‌ ಸಹಿತ ಇನ್ನಿತರ ಪೂರಕ ದಾಖಲೆಗಳ ಪರಿಶೀಲನೆ ಸಂದರ್ಭ ಗಮನಕ್ಕೆ ಬಂದಿದೆ. ಆ ಹಿನ್ನೆಲೆಯಲ್ಲಿ ಆ ಪ್ರಶಸ್ತಿಯನ್ನು ಹಿರಿಯ ರಂಗಭೂಮಿ ಕಲಾವಿದೆ ವಂದನಾ ಅವರಿಗೆ ನೀಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್‌.ರಂಗಪ್ಪ ಸ್ಪಷ್ಟಪಡಿಸಿದ್ದಾರೆ.

ಮೋಡ ಬಿತ್ತನೆ ಮಾಡಿ
ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ಚಿತ್ರದುರ್ಗ ಜಿಲ್ಲೆಯ ಬೀದಿಗೆರೆ ಹಳ್ಳಿಯ ಕೃಷಿ ಸಾಧಕಿ ಎಸ್‌.ವಿ. ಸುಮಂಗಲಮ್ಮ ಅವರು, ಬರಗಾಲದಿಂದ ತತ್ತರಿಸಿರುವ ಚಿತ್ರದುರ್ಗ ಸಹಿತ ಇನ್ನಿತರ ಪ್ರದೇಶಗಳಲ್ಲಿ ಮೋಡ ಬಿತ್ತನೆ ಮಾಡುವಂತೆ ಸರಕಾರಕ್ಕೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next