Advertisement

ರಾಜ್ಯಸಭೆಯಲ್ಲಿ ಎನ್‌ಆರ್‌ಸಿ ಗದ್ದಲ

06:00 AM Jul 31, 2018 | |

ಹೊಸದಿಲ್ಲಿ: ಅಸ್ಸಾಂನಲ್ಲಿ ಬಿಡುಗಡೆಯಾದ ರಾಷ್ಟ್ರೀಯ ನಾಗರಿಕರ ನೋಂದಣಿ(ಎನ್‌ಆರ್‌ಸಿ) ಅಂತಿಮ ಕರಡು ವರದಿಯು ಸೋಮವಾರ ರಾಜ್ಯಸಭೆ ಕಲಾಪವನ್ನು ನುಂಗಿಹಾಕಿತು. ಎನ್‌ಆರ್‌ಸಿ ವಿಚಾರದಲ್ಲಿ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಪ್ರತಿಪಕ್ಷಗಳು ತೀವ್ರ ಗದ್ದಲ ಎಬ್ಬಿಸಿದ ಕಾರಣ, ಕಲಾಪವನ್ನು ಮುಂದೂಡಬೇಕಾಯಿತು.

Advertisement

ರಾಜ್ಯಸಭೆಯಲ್ಲಿ ಕಲಾಪ ಆರಂಭವಾದೊಡನೆ ಎಸ್‌ಪಿ ಮತ್ತು ತೃಣಮೂಲ ಕಾಂಗ್ರೆಸ್‌ ಸದಸ್ಯರು ಎನ್‌ಆರ್‌ಸಿ ಕುರಿತು ಚರ್ಚೆಗೆ ಆಗ್ರಹಿಸಿ ಕೋಲಾಹಲ ಎಬ್ಬಿಸಿದರು. ಸತತ ಮೂರು ಬಾರಿ ಕಲಾಪ ಮುಂದೂಡಲ್ಪಟ್ಟರೂ, ಗದ್ದಲ ನಿಲ್ಲಲೇ ಇಲ್ಲ. ಟಿಎಂಸಿ ನಾಯಕ ಡೆರೆಕ್‌ ಒಬ್ರಿಯಾನ್‌ ಅವರು, ಎನ್‌ಆರ್‌ಸಿ ಕುರಿತು ಚರ್ಚೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದರು. ಆದರೆ, ಇದಕ್ಕೆ ಒಪ್ಪದ ಸಭಾಪತಿ ವೆಂಕಯ್ಯ ನಾಯ್ಡು ಅವರು, ನಾನು ಈಗಾಗಲೇ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ರನ್ನು ಇಲ್ಲಿಗೆ ಬಂದು, ಪ್ರತಿಕ್ರಿಯೆ ನೀಡುವಂತೆ ಸೂಚಿಸಿದ್ದೇನೆ ಎಂದರು. ಸಚಿವರು ಆಗಮಿಸಿದ ಬಳಿಕವೂ, ಪ್ರತಿಪಕ್ಷ ಸದಸ್ಯರು ಗದ್ದಲ ಮುಂದುವರಿಸಿದ ಕಾರಣ, ಒಂದು ಹಂತದಲ್ಲಿ ಆಕ್ರೋಶಗೊಂಡ ಸಭಾಪತಿ ನಾಯ್ಡು, “ನೀವೂ ಏನನ್ನೂ ಮಾತನಾಡುತ್ತಿಲ್ಲ, ಸಚಿವರಿಗೂ ಮಾತನಾಡಲು ಬಿಡುತ್ತಿಲ್ಲ ಎಂದರೆ ಹೇಗೆ’ ಎಂದು ಪ್ರಶ್ನಿಸಿ, ಕಲಾಪವನ್ನು 10 ನಿಮಿಷ ಮುಂದೂಡಿದರು.

ಮತ್ತೆ ಕಲಾಪ ಆರಂಭವಾದಾಗ ಒಬ್ರಿಯಾನ್‌ ಅವರು ಮಾತನಾಡಿ, ಎನ್‌ಆರ್‌ಸಿ ವಿಚಾರವು ರಾಜಕೀಯ ವಿಷಯವಲ್ಲ. ಅದು ಮಾನವ ಹಕ್ಕುಗಳು, ಮಾನವತೆ ಮತ್ತು ರಾಷ್ಟ್ರೀಯ ವಿಚಾರ. ಹೀಗಾಗಿ ಮಾತನಾಡಲು ಅವಕಾಶ ನೀಡಬೇಕು ಎಂದರು. ಇದಕ್ಕೆ ನಾಯ್ಡು ಅವರು, ಮಂಗಳವಾರ ಬೆಳಗ್ಗೆ ಮಾತ ನಾಡಲು ಅವಕಾಶ ನೀಡುತ್ತೇನೆ ಎಂದರು. ತೃಪ್ತರಾಗದ ಟಿಎಂಸಿ ಸದಸ್ಯರು ಗದ್ದಲ ನಡೆಸಿದ್ದರಿಂದ ಕಲಾಪ ಮುಂದೂಡಲಾಯಿತು.

ತನಿಖೆಯಾಗಲಿ: ಕೈಗಾರಿಕೋದ್ಯಮಿಗಳ ಅನುಕೂಲಕ್ಕಾಗಿ ಯುಪಿಎ ಅವಧಿಯಲ್ಲಿ 80:20 ಚಿನ್ನ ಆಮದು ಯೋಜನೆ ಜಾರಿ ಮಾಡಲಾಗಿತ್ತು. ಇದರಿಂದ ಒಂದು ಲಕ್ಷ ಕೋಟಿ ರೂ. ನಷ್ಟವಾಗಿದೆ. ಹೀಗಾಗಿ, ಈ ಕುರಿತು ಅಂದಿನ ಹಣಕಾಸು ಸಚಿವರು, ಆರ್‌ಬಿಐ ಗವರ್ನರ್‌ ವಿರುದ್ಧ ಸಿಬಿಐ ಅಥವಾ ಇ.ಡಿ.ತನಿಖೆ ನಡೆಸಬೇಕು ಎಂದು ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next