Advertisement
ಸ್ವಾತಂತ್ರ್ಯಪೂರ್ವದ ದಿನಗಳಲ್ಲಿ ‘ವಿದೇಶ’ವೆಂಬ ಪದ ಸಾಮಾನ್ಯವಾಗಿ ಇಂಗ್ಲೆಂಡ್ಗಷ್ಟೇ ಸೀಮಿತವಾಗಿತ್ತು. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ನೆಲೆಸುವವರ ಪೈಕಿ ಅತ್ಯಂತ ಹೆಚ್ಚಿನ ಪ್ರಭಾವ, ಸಾಮರ್ಥ್ಯ ತೋರುತ್ತಿರುವುದು ಭಾರತೀಯರೇ, ಕಾರಣ, ಅವರು ವಿದ್ಯೆ, ವೃತ್ತಿ ಪರಿಣತಿ ಹಾಗೂ ಆದಾಯಗಳಿಕೆಯಲ್ಲಿ ವಿಶ್ವದ ಇತರೆಲ್ಲರಿಗಿಂತ ಮುಂದೆ ಇದ್ದಾರೆ. ಈ ನಡುವೆ ಆಗಿರುವ ಹೊಸ ಬೆಳವಣಿಗೆಯೆಂದರೆ, ಕೊಲ್ಲಿ ರಾಷ್ಟ್ರಗಳಲ್ಲಿ ಅಥವಾ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಮ್ಮವರು ಹೋಗಿ ನೆಲೆಸಿರುವುದು. ತೈಲ ರಾಷ್ಟ್ರಗಳಿಗೆ ಹೀಗೆ ಭಾರತೀಯರು ಹೋಗಿ ನೆಲೆಸುವ ಪ್ರವೃತ್ತಿ ಆರಂಭವಾದುದು ಸುಮಾರು 50 ವರ್ಷಗಳ ಹಿಂದೆ.
ಬೆಂಗಳೂರಿನಲ್ಲಿ ನಡೆದಿರುವ ಪ್ರವಾಸಿ ದಿವಸದ ವಿಶೇಷತೆಯೆಂದರೆ ವೆಸ್ಟಿಂಡೀಸ್, ದಕ್ಷಿಣಾಫ್ರಿಕ, ದಕ್ಷಿಣ ಶಾಂತಸಾಗರೀಯ ರಾಷ್ಟ್ರಗಳಿಂದ ಬಂದ ಮೂಲ ಭಾರತೀಯರಿಗೆ ಹೆಚ್ಚಿನ ಗಮನ ನೀಡಲಾಗಿರುವುದು. ಇವರುಗಳ ಪೂರ್ವಿಕರನ್ನು ಬ್ರಿಟಿಷ್, ಫ್ರೆಂಚ್ ಹಾಗೂ ಡಚ್ ಸರಕಾರಗಳು ಅಕ್ಷರಶಃ ಗುಲಾಮರಂತೆ ತಮ್ಮ ರಾಷ್ಟ್ರಗಳಿಗೆ ಒಯ್ದಿದ್ದವು. ಗುಲಾಮ ಚಾಕರಿ ಕಾಯ್ದೆಯನ್ನು ನಿಷೇಧಿಸಿದ ಪರಿಣಾಮವಾಗಿ ಬ್ರಿಟಿಷ್ ವಸಾಹತು ಪ್ರದೇಶಗಳಲ್ಲಿ, ವಿಶೇಷವಾಗಿ ಕೃಷಿ ಕಾರ್ಮಿಕರ ಕೊರತೆ ಕಂಡುಬಂತು. ಹೀಗಾಗಿ ಭಾರತದ ತಮಿಳುನಾಡು, ಆಂಧ್ರಪ್ರದೇಶ, ಬಿಹಾರ ಹಾಗೂ ಉತ್ತರ ಪ್ರದೇಶಗಳಿಂದ ಬಡಕಾರ್ಮಿಕರನ್ನು ಆಯ್ದು, ಅವರನ್ನು ಕುಟುಂಬ ಸಮೇತವಾಗಿ ದಕ್ಷಿಣಾಫ್ರಿಕ ಮತ್ತು ಇತರ ರಾಷ್ಟ್ರಗಳಿಗೆ ಹಡಗಿನ ಮೂಲಕ ‘ಸಾಗಿಸ’ಲಾಯಿತು. ಬೆಂಗಳೂರಿನಲ್ಲಿ ಪ್ರವಾಸಿದಿನದಲ್ಲಿ ಪಾಲ್ಗೊಳ್ಳಲು ಬಂದವರು ಇಂಥ ‘ಬದ್ಧಕಾರ್ಮಿಕರ’ ಕುಟುಂಬಗಳ ಇಂದಿನ ಪೀಳಿಗೆಯವರು.
Related Articles
Advertisement
ಹೊರ ರಾಷ್ಟ್ರಗಳನ್ನು ಸೇರಿರುವ ನಮ್ಮ ಭಾರತೀಯರು ಆಯಾರಾಷ್ಟ್ರಗಳಲ್ಲಿ ವಿವಿಧ ವೃತ್ತಿ/ಹುದ್ದೆಗಳಲ್ಲಿ ಹಾಗೂ ಅಲ್ಲಿನ ರಾಜಕೀಯ ಕ್ಷೇತ್ರದಲ್ಲಿ ಕೂಡ ಒಳ್ಳೆಯ ಸಾಧನೆಯನ್ನು ಮಾಡಿದ್ದಾರೆ. ತಮ್ಮ ಕೃತಿಗಳಲ್ಲಿ ಭಾರತದ ವಿದ್ಯಮಾನಗಳನ್ನು ವಿಮರ್ಶಿಸುವ ಟ್ರಿನಿಡಾಟ್ ಮತ್ತು ಟೊಬಾಗೋದ ನೊಬೆಲ್ ಪುರಸ್ಕೃತ ಲೇಖಕ ಸರ್.ವಿ.ಎಸ್. ನೈಪಾಲ್ ಅತ್ಯುತ್ತಮ ಉದಾಹರಣೆ. ಇನ್ನು, ರಾಜಕೀಯ ಕ್ಷೇತ್ರದಲ್ಲಿ ಎದ್ದು ತೋರುವ ಹೆಸರೆಂದರೆ, ಗಯಾನದ ಹಿಂದಿನ ಅಧ್ಯಕ್ಷ ಡಾ| ಛೇದಿ ಜಗನ್. ಗಯಾನದ ಇನ್ನೋರ್ವ ಅಧ್ಯಕ್ಷರಾಗಿದ್ದ ಮೋಸೆಸ್ ನಗಮೋಟೋ ಅವರೂ ಭಾರತೀಯ ಮೂಲದವರೇ. ಕಾಮನ್ವೆಲ್ತ್ ಒಕ್ಕೂಟದ ಮಹಾಕಾರ್ಯದರ್ಶಿ ಸರ್ ಶ್ರೀದತ್ತ್ ರಾಂಪಾಲ್ ಅವರೂ ಭಾರತದ ಕೊಡುಗೆಯೇ. ಟ್ರಿನಿಡಾಡ್ ಮತ್ತು ಟೊಬಾಗೊದ ಮಾಜಿ ಪ್ರಧಾನಿ ಕಮಲಾ ಪರ್ಸಾದ್ ಬಿಸ್ಸೇಸ್ಸರ್ (ಕಮಲಾ ಪ್ರಸಾದ್ ವಿಶ್ವೇಶ್ವರ್) ಭಾರತೀಯರೇ. ಇನ್ನು ಮಾರಿಷಸ್ಗೆ ಬಂದರೆ ಅಲ್ಲಿ ರಾಷ್ಟ್ರಾಧ್ಯಕ್ಷರಾಗಿ ಸೇವೆಸಲ್ಲಿಸಿದ್ದ ಸರ್ ಸಿವುಸಾಗರ್ (ಶಿವ್ಸಾಗರ್) ರಾಮ್ಗುಲಾಂ ಮೂಲತಃ ಇಲ್ಲಿನವರೇ.
ಆದರೆ ಈಚೆಗಿನ ದಶಗಳಲ್ಲಿ ಈ ರಾಷ್ಟ್ರಗಳ ಜನರು ಹೇಗೋ ಹಾಗೇ ಅಲ್ಲಿನ ವಸಾಹತುಶಾಹಿ ನಾಯಕರು ಸಂವಿಧಾನದಲ್ಲಿ ಅಥವಾ ಕಾಯ್ದೆಗಳಲ್ಲಿ ತಿದ್ದುಪಡಿ ಇರುವ ಮೂಲಕ ಭಾರತೀಯ ಮೂಲದ ವ್ಯಕ್ತಿಗಳ ಬಗೆಗಿನ ತಮ್ಮ ತಾರತಮ್ಯ ಧೋರಣೆಯನ್ನು ಖಂಡಿತಕ್ಕೂ ಮೆರೆದಿದ್ದಾರೆ. ಗಯಾನದಲ್ಲಿ ಛೇದಿ ಜಗನ್ ಸೋಲು ಕಂಡದ್ದು ಹೀಗೆ. ಫಿಜಿಯಲ್ಲಂತೂ ಅತ್ಯಂತ ಕೆಟ್ಟ ವಿದ್ಯಮಾನ ಘಟಿಸಿತು; 2000ದ ಇಸವಿಯಲ್ಲಿ ಅಲ್ಲೊಂದು ಮಿಲಿಟರಿ ದಂಗೆ ನಡೆದು ಅಲ್ಲಿನ ಭಾರತೀಯ ಮೂಲದ ಪ್ರಧಾನಿ ಮಹೇಂದ್ರ ಚೌಧುರಿಯವರನ್ನು ಅಧಿಕಾರದಿಂದ ಕಿತ್ತೂಗೆಯಲಾಯಿತು. ಇದರ ಹಿಂದೆ ಕೆಲಸ ಮಾಡಿದ್ದು, ಫಿಜಿಯಲ್ಲಿನ ಶೇ. 32ರಷ್ಟು ಹಿಂದುಗಳ ಬಗ್ಗೆ ವಿನಾಕಾರಣ ವಿರೋಧಿ ಧೋರಣೆ ತಳೆದಿದ್ದ ಮೆಥಡಿಸ್ಟ್ ಚರ್ಚೆಗಳು. ಅಲ್ಲಿ ತೋರಿಬರುತ್ತಿರುವ ತಾರತಮ್ಯ ಧೋರಣೆಯಿಂದಾಗಿ ಅನೇಕ ಭಾರತೀಯ ಮೂಲದ ಫಿಜಿಯವರು ಆ ದೇಶದಿಂದ ಕಾಲ್ತೆಗೆಯುತ್ತಿದ್ದಾರೆ. ಹೀಗಿದ್ದರೂ ಅಲ್ಲಿ ಜೈರಾಂ ರೆಡ್ಡಿಯವರಂಥ ವಿಪಕ್ಷ ನಾಯಕರು ಆಗಿ ಹೋಗಿದ್ದಾರೆ. ಗಾಲ್ಫ್ ಚಾಂಪಿಯನ್ ಆಗಿದ್ದ ವಿಜಯ್ ಸಿಂಗ್ರಂಥವರನ್ನೂ ಫಿಜಿ ವಿಶ್ವಕ್ಕೆ ದೇಣಿಗೆಯಾಗಿ ನೀಡಿದೆ. ದಕ್ಷಿಣ ಶಾಂತಸಾಗರದ ಸೋಲೊಮನ್ ದ್ವೀಪದಲ್ಲಿ ಭಾರತೀಯ ಮೂಲದ ಜೂಲಿಯನ್ ಮೋಟೋ ಅವರು ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದ್ದರು.
ಪಾಕ್, ಬಾಂಗ್ಲಾದವರು ಭಾರತೀಯರಲ್ಲವೇ?ಪ್ರವಾಸೀ ಭಾರತೀಯ ಸ್ಥಾನಮಾನವನ್ನು ಪಾಕಿಸ್ಥಾನ ಹಾಗೂ ಬಾಂಗ್ಲಾದೇಶದಲ್ಲಿರುವ ಹಿಂದುಗಳಿಗೆ ನೀಡಲು ನಾವೇಕೆ ಹಿಂಜರಿಯುತ್ತಿದ್ದೇವೆ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಆದರೆ ಇದಕ್ಕೆ ಅಡ್ಡಿಯಾಗಿರುವುದು ನಮ್ಮ ಜಾತ್ಯತೀತ ನೀತಿ! ಇಂಥ ಸ್ಥಾನಮಾನವನ್ನು ಬರೇ ಹಿಂದೂಗಳಿಗಷ್ಟೆ ನೀಡಿದರೆ ಸಾಲದು, ಪಾಕಿಸ್ಥಾನ ಮತ್ತು ಬಾಂಗ್ಲಾ ದೇಶದಲ್ಲಿರುವ ಎಲ್ಲ ಅಲ್ಪಸಂಖ್ಯಾಕರಿಗೂ (ಪಾರ್ಸಿಗಳು, ಸಿಕ್ಖರು ಹಾಗೂ ಬೌದ್ಧರಿಗೂ) ನೀಡಬೇಕಾಗುತ್ತದೆ ಎಂಬ ವಾದವೀಗ ಕೇಳಿಬರುತ್ತಿದೆ. ಆದರೆ ಭಾರತ ಸರಕಾರ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಚೀನ, ಭೂತಾನ್, ನೇಪಾಳ ಹಾಗೂ ಶ್ರೀಲಂಕಾಗಳನ್ನು ‘ಭಾರತೀಯ ಮೂಲದ ವ್ಯಕ್ತಿಗಳ’ ಪ್ತಿಪ್ತಿಯಿಂದ ಹೊರಗಿರಿಸಿದೆ. ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ನಮ್ಮ ವಿದೇಶಾಂಗ ನೀತಿಯಲ್ಲಿ ಗಮನಾರ್ಹವಾದ ಬದಲಾವಣೆ ಆಗಿದೆ. ದೀರ್ಘಕಾಲದಿಂದ ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾ ಹಾಗೂ ಪಾಕ್ ಮೂಲದ ಹಿಂದುಗಳಿಗೆ ಭಾರತ ಸರಕಾರ ಆಧಾರ್ ಕಾರ್ಡ್, ಪಾನ್ಕಾರ್ಡ್ ಹಾಗೂ ಡ್ರೈವಿಂಗ್ ಲೈಸೆನ್ಸ್ ನೀಡಲು ಯೋಚಿಸುತ್ತಿದೆ. ಭಾರತೀಯ ಪೌರತ್ವವನ್ನು ನೀಡುವ ನಿಟ್ಟಿನಲ್ಲಿ ಪೌರತ್ವ ಕಾಯ್ದೆಗೆ ತಿದ್ದುಪಡಿ ತರುವ ಬಗೆಗೂ ಯೋಚಿಸಲಾಗುತ್ತಿದೆ. ಹೀಗಿದ್ದರೂ ಬಹುತೇಕ ಸಾಗರೋತ್ತರ ಭಾರತೀಯರ ಮನಸ್ಸಿನಲ್ಲಿ ಒಂದು ಕೊರಗು ಇನ್ನೂ ಉಳಿದುಕೊಂಡಿದೆ. ‘ನಮ್ಮ ಬಗ್ಗೆ ಭಾರತದಲ್ಲಿ ಯಾರಿಗೂ ಗೊತ್ತಿಲ್ಲ; ಎಂದೋ ಚದುರಿ ಹೋಗಿ ಮರೆವಿಗೆ ಸಂದವರು ನಾವು? ಎಂಬ ಕೊರಗು ಇದು. ಹಿಂದೂ ಮಹಾಸಾಗರದಲ್ಲಿನ ಫ್ರಾನ್ಸ್ ಆಡಳಿತ ಪುನಸ್ಸಂಘಟಿತ ದ್ವೀಪಗಳಲ್ಲಿ (ರೀಯೂನಿಯನ್ ಐಲೆಂಡ್ಸ್) ಭಾರತೀಯ ಮೂಲದವರಿದ್ದಾರೆಂಬುದಾಗಲಿ, ವೆನೆಜುವೆಲಾದಲ್ಲಿ ಸುಮಾರು 400 ಮಂದಿ ಭಾರತೀಯರು ನೆಲೆಸಿದ್ದಾರೆಂಬುದಾಗಲಿ ನಮ್ಮಲ್ಲಿ ಎಷ್ಟು ಜನರಿಗೆ ಗೊತ್ತು? – ಅರಕೆರೆ ಜಯರಾಮ್