Advertisement

ಗಡಿನಾಡಲ್ಲಿ ರಾಜಮೌಳಿ ಆರ್‌ಆರ್‌ಆರ್‌ ಆರ್ಭಟ!

01:28 PM Mar 26, 2022 | Team Udayavani |

ರಾಯಚೂರು: ಬಾಹುಬಲಿ ಖ್ಯಾತಿಯ ನಿರ್ದೇಶಕ ಎಸ್‌.ಎಸ್‌. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಆರ್‌ಆರ್‌ಆರ್‌ ಸಿನಿಮಾ ಶುಕ್ರವಾರ ಬಿಡುಗಡೆಯಾಗಿದ್ದು, ಬಹುತಾರಾಗಣದ ಸಿನಿಮಾ ನೋಡಲು ಅಭಿಮಾನಿಗಳಿಂದ ನೂಕುನುಗ್ಗಲು ನಡೆದಿದೆ.

Advertisement

ಬೆಳ್ಳಬೆಳಗ್ಗೆಯೇ ಸಿನಿಮಾ ಪ್ರದರ್ಶನ ಆರಂಭಿಸಲಾಯಿತು. ನಗರದ ಪೂರ್ಣಿಮಾ ಚಿತ್ರಮಂದಿರದಲ್ಲಿ ಗೇಟ್‌ ಮುರಿದು ಪ್ರೇಕ್ಷಕರು ನುಗ್ಗಿದ ಪ್ರಸಂಗಗಳು ನಡೆದವು. ಬಾಗಿಲು, ಕಿಟಕಿಗಳನ್ನು ಮುರಿಯುವ ಮೂಲಕ ಪ್ರೇಕ್ಷಕರು ಅತಿರೇಕದ ವರ್ತನೆ ತೋರಿದ್ದಾರೆ. ಅಭಿಮಾನಿಗಳ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು.

ಟಿಕೆಟ್‌ ಪಡೆದವರು ಬಿಟ್ಟು ಬೇರೆಯವರೇ ಸಿನಿಮಾ ನೋಡಿದ್ದು, ಹಣ ಕೊಟ್ಟವರಿಗೆ ಸಿನಿಮಾ ನೋಡಲಾಗಿಲ್ಲ ಎಂದು ಚಿತ್ರಮಂದಿರ ಮಾಲೀಕರು ತಿಳಿಸಿದ್ದಾರೆ.

ಮಿರಾಜ್‌ ಸಿನಿಮಾದಲ್ಲಿ ಹೆಚ್ಚು ಪ್ರದರ್ಶನಗಳನ್ನು ಆಯೋಜಿಸಿದ್ದು, ಮೂರು ನಾಲ್ಕು ಪರದೆಗಳಲ್ಲಿ ಸಿನಿಮಾವನ್ನು ನಿರಂತರವಾಗಿ ಓಡಿಸಲಾಗಿದೆ. ಬಹುತೇಕ ಎಲ್ಲ ಪ್ರದರ್ಶನಗಳು ಹೌಸ್‌ಫುಲ್‌ ಪ್ರದರ್ಶನ ಕಂಡಿವೆ. ಗಡಿ ಜಿಲ್ಲೆಯಾದ ಕಾರಣ ತೆಲುಗು ಪ್ರಭಾವ ಹೆಚ್ಚಾಗಿದ್ದು, ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೇ, ಲಾಕ್‌ಡೌನ್‌ನಿಂದ ದೊಡ್ಡ ಸಿನಿಮಾಗಳು ಈಗಷ್ಟೇ ಬಿಡುಗಡೆಯಾಗುತ್ತಿರುವುದು ಮತ್ತೊಂದು ಕಾರಣ.

ಖ್ಯಾತ ನಟರಾದ ಜ್ಯೂ.ಎನ್‌ಟಿಆರ್‌ ಹಾಗೂ ರಾಮ್‌ ಚರಣ್‌ ಹಾಗೂ ರಾಜಮೌಳಿ ನಿರ್ದೇಶನದ ಸಿನಿಮಾ ಎಂಬ ಕಾರಣಕ್ಕೂ ಭಾರೀ ಪ್ರತಿಕ್ರಿಯೆ ಬಂದಿದೆ. ಈ ಅವಕಾಶ ಬಳಸಿಕೊಂಡ ಚಿತ್ರಮಂದಿರದ ಮಾಲೀಕರು ಟಿಕೆಟ್‌ ದರವನ್ನು ಹೆಚ್ಚಿಸಿದ್ದರು. 150 ರೂ. ಇದ್ದ ಟಿಕೆಟ್‌ ದರ 300 ರೂ. ಹೆಚ್ಚಿಸಲಾಗಿತ್ತು. ಟಿಕೆಟ್‌ ಸಿಗದ ಅಭಿಮಾನಿಗಳು ಬೇರೆಯವರ ಟಿಕೆಟ್‌ಗಳನ್ನು ಕಲರ್‌ ಝೆರಾಕ್ಸ್‌ ಮಾಡಿಸಿ ಸಿನಿಮಾ ನೋಡಲು ಯತ್ನಿಸಿದ ಪ್ರಸಂಗಗಳು ನಡೆದಿವೆ.

Advertisement

ಕನ್ನಡ ಡಬ್ಬಿಂಗ್‌; ಸಿಗದ ಸ್ಪಂದನೆ

ಆರ್‌ಆರ್‌ ಆರ್‌ ಸಿನಿಮಾ ತೆಲುಗು, ಕನ್ನಡ ಸೇರಿದಂತೆ ಬಹುಭಾಷೆಯಲ್ಲಿ ಬಿಡುಗಡೆಯಾಗಿದೆ. ಆದರೆ, ಜಿಲ್ಲೆಯಲ್ಲಿ ಕನ್ನಡ ಡಬ್ಬಿಂಗ್‌ ಸಿನಿಮಾ ಜತೆಗೆ ತೆಲುಗು ಸಿನಿಮಾ ಪ್ರದರ್ಶನವೇ ಹೆಚ್ಚಾಗಿದ್ದು, ಕನ್ನಡ ಡಬ್ಬಿಂಗ್‌ ಸಿನಿಮಾಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಿರಾಜ್‌ ಸಿನಿಮಾಸ್‌ನಲ್ಲಿ ಎರಡ್ಮೂರು ಪರದೆ ಮೇಲೆ ತೆಲುಗು ಸಿನಿಮಾ ಪ್ರದರ್ಶಿಸಿದರೆ, ಒಂದು ಪರದೆಯಲ್ಲಿ ಮಾತ್ರ ಕನ್ನಡ ಡಬ್ಬಿಂಗ್‌ ಸಿನಿಮಾ ಪ್ರದರ್ಶಿಸುತ್ತಿದ್ದು, ಅದಕ್ಕೂ ಪ್ರೇಕ್ಷಕರ ಕೊರತೆ ಕಂಡು ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next