Advertisement

ರಾಜಾಧಿರಾಜ…ಬಹುಪರಾಕ್‌

06:02 PM Oct 11, 2018 | |

ಮೈಸೂರು: ರಾಜಾಧಿರಾಜ, ರಾಜ ಮಾರ್ತಾಂಡ, ಸಾರ್ವಭೌಮ, ಯದುಕುಲ ತಿಲಕ, ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಬಹುಪರಾಕ್‌, ಬಹುಪರಾಕ್‌, ಬಹುಪರಾಕ್‌… ಎಂದು ರಾಜಭಟರು ಘೋಷಣೆಗಳನ್ನು ಕೂಗುತ್ತಿದ್ದಂತೆ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌, ರತ್ನಖಚಿತ ಸಿಂಹಾಸನಾರೋಹಣ
ಮಾಡುವ ಮೂಲಕ ಖಾಸಗಿ ದರ್ಬಾರ್‌ಗೆ ಚಾಲನೆ ನೀಡಿದರು.

Advertisement

ನಾಡಹಬ್ಬ ದಸರೆಗೆ ಚಾಲನೆ ದೊರೆತ ಬೆನ್ನಲ್ಲೆ, ಅಂಬಾವಿಲಾಸ ಅರಮನೆಯಲ್ಲಿ ನವರಾತ್ರಿ ಉತ್ಸವದ ಸಂಭ್ರಮ ಆರಂಭ ಗೊಂಡಿದೆ. ರಾಜಪೋಷಾಕು, ಚಿನ್ನಾಭರಣ ಧರಿಸಿ, ರಾಜಪೇಟ ತೊಟ್ಟು ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ಅಂಬಾ ವಿಲಾಸ ಅರಮನೆಯ ದರ್ಬಾರ್‌ ಹಾಲ್‌ನಲ್ಲಿ ರತ್ನಖಚಿತ ಸಿಂಹಾಸನವನ್ನೇರಿ ಖಾಸಗಿ ದರ್ಬಾರ್‌ ಆರಂಭಿಸಿದರು. ಇದರೊಂದಿಗೆ ಅರಮನೆಯಲ್ಲಿ ನವರಾತ್ರಿ ಉತ್ಸವದ ಧಾರ್ಮಿಕ ವಿಧಿ ವಿಧಾನಗಳ ಆಚರಣೆಗೂ ವಿಧ್ಯುಕ್ತ ಚಾಲನೆ ದೊರೆಯಿತು.

ಖಾಸಗಿ ದರ್ಬಾರ್‌ ಹಿನ್ನೆಲೆಯಲ್ಲಿ ಅರಮನೆಯಲ್ಲಿನ ಸಿಂಹಾಸನಕ್ಕೆ ಸಿಂಹದ ಶಕ್ತಿಯನ್ನು ಆಹ್ವಾನಿಸುವ ವಿಧಿವಿಧಾನಗಳು ಬೆಳಗ್ಗೆ 5.30ರಿಂದ ಸಕಲ ಧಾರ್ಮಿಕ ಆಚರಣೆ ನೆರವೇರಿಸಲಾಯಿತು. ಬಳಿಕ ರಾಜವಂಶಸ್ಥ ಯದುವೀರ್‌ಗೆ ಅಭ್ಯಂಜನ ಸ್ನಾನ ನೆರವೇರಿಸಿ, ಮುತ್ತೈದೆಯರು ಮತ್ತು ಪುರೋಹಿತ ಮನೆತನದ ಹೆಂಗಸರು ಆರತಿ ಬೆಳಗಿದರು. 

ಯದುವೀರ್‌ ಚಾಮುಂಡಿ ತೊಟ್ಟಿಯಲ್ಲಿ ಗಣಪತಿಗೆ ಪೂಜೆ ಮಾಡಿದ ಬಳಿಕ ಕಳಶಪೂಜೆ, ಕಂಕಣಪೂಜೆ ಮಾಡಿದರು. ಮುಂಜಾನೆ 7.55ರಿಂದ 8.15ಕ್ಕೆ ಸಿಂಹಾಸನ ಸಿದ್ಧತಾ ಕಾರ್ಯ ಮುಕ್ತಾಯವಾಯಿತು. ಬಳಿಕ 8.20 ರಿಂದ 9.10ಕ್ಕೆ ಕುಲದೇವತೆ ಚಾಮುಂಡಿ ಸನ್ನಿಧಿ ಯಲ್ಲಿ ಪತ್ನಿ ತ್ರಿಷಿಕಾಕುಮಾರಿ ಕಂಕಣ ಕಟ್ಟಿದರು.

ಶಕ್ತಿ ದೇವತೆ ಪೂಜೆ: ಈ ವೇಳೆ ದುರ್ಗೆಯ ದಿವ್ಯಸ್ವರೂಪಗಳಾದ ಬ್ರಹ್ಮಿಣಿ, ಕೌಮಾರಿ, ವೈಷ್ಣ, ವಾರಾ, ಇಂದ್ರಾಣಿ, ಮಹೇಶ್ವರಿ, ದುರ್ಗಾ,ಕಾಳಿ, ಚಂಡಿಕೆಗೆ ಎಲ್ಲಾ ಶಕ್ತಿದೇವತೆಗಳನ್ನೂ ಆರಾಧಿಸಿ ಶಿವಸನ್ನಿಧಿ, ಕೃಷ್ಣಸನ್ನಿಧಿ, ಚಾಮುಂಡಿ ಸನ್ನಿಧಿ ಮುಂತಾದ ದೇವ-ದೇವಿಯರ ಸನ್ನಿಧಿ ಗಳಲ್ಲಿ ಪೂಜೆ ಸಲ್ಲಿಸಿದರು. ಬಳಿಕ ದೇವಿ ಭಾಗ ವತ, ರಾಮಾಯಣ ಪಾರಾಯಣ ಮಾಡಿದರು. ಬಳಿಕ ಗಣಪತಿ ಪೂಜೆ, ಅಷ್ಟದಿಕಾ³ಲಕರ ಪೂಜೆ, ನವಗ್ರಹ ಪೂಜೆ, ಬ್ರಹ್ಮ, ವಿಷ್ಣು, ಮಹೇಶ್ವರ, ಮಹಾಕಾಳಿ, ಮಹಾಸರಸ್ವತಿ, ಮಹಾಲಕ್ಷ್ಮೀ ಪೂಜೆ ನೆರವೇರಿಸಿದರು. ಬಳಿಕ ಸ್ವರ್ಣ ವರ್ಣದ ನಿಲುವಂಗಿ, ಕಡು ನೀಲಿ ವರ್ಣದ ಪೈಜಾಮಾ, ಮುತ್ತಿನ ಮಣಿ ಜೋಡಿಸಿರುವ ನೀಲಿ ಬಣ್ಣದ ರಾಜಪೇಟ, ರಾಜಲಾಂಛನ ಗಂಢ ಭೇರುಂಡ ಚಿನ್ನಾಭರಣಧರಿಸಿ ರಾಜಪೋಷಾಕು ಧರಿಸಿದ ಯದುವೀರ್‌ ಆತ್ಮವಿಲಾಸ ಗಣಪತಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಅಲ್ಲಿಂದ  ನೇರವಾಗಿ ಖಾಸಗಿ ದರ್ಬಾರ್‌ ಸಭಾಂಗಣಕ್ಕೆ ಪ್ರವೇಶಿಸಿದರು.

Advertisement

ಕಳಶ ಪೂಜೆ: ಬಳಿಕ 32 ಕಳಶ ಪೂಜೆ ನೆರವೇರಿಸಲಾಯಿತು. 11.40ರಿಂದ 12.10ರ ವರೆಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಸಿಂಹಾಸನ ಪೂಜೆ ಮಾಡಿ, ಸಿಂಹಾಸನಕ್ಕೆ ಮೂರು ಪ್ರದಕ್ಷಿಣೆ ಹಾಕಿ, ರಾಜಗಾಂಭೀರ್ಯ ದಿಂದ ರತ್ನಸಿಂಹಾಸನ ಏರಿದ ಯದುವೀರ್‌, ಆಸ್ಥಾನಕ್ಕೆ ಬಲಗೈ ಎತ್ತಿ ಸಲ್ಯೂಟ್‌ ಮಾಡಿ ರಾಜಗಾಂಭೀರ್ಯದಿಂದ ಖಾಸಗಿ ದರ್ಬಾರ್‌ ಆರಂಭಿಸಿದರು. ಈ ವೇಳೆ ಕರ್ನಾಟಕ ಪೊಲೀಸ್‌ ಬ್ಯಾಂಡ್‌ ಸಿಬ್ಬಂದಿ ಕಾಯೋ ಶ್ರೀ ಗೌರಿ ಗೀತೆ ನುಡಿಸಿ ಗೌರವ ಸಲ್ಲಿಸಿದರು. ಅಲ್ಲದೆ ಶ್ರೀ ಮಹಾಗಣಪತಿಂ, ಸರಸ್ವತಿ ಭಗವತಿಂ, ಸರಸ್ವತಿ, ಬ್ರಹ್ಮಮುರಾರಿ, ಐಗಿರಿ ನಂದಿನಿ, ಜಯಾಂಬಿಕೆ, ಶ್ರೀ ಚಾಮುಂಡೇಶ್ವರಿ, ಭಾಗ್ಯದ ಲಕ್ಷಿ$¾ ಬಾರಮ್ಮ ಹಾಡು ನುಡಿಸಿದರು.

ವಿವಿಧ ದೇಗುಲ ಪ್ರಸಾದ ಸ್ವೀಕಾರ: ಸಿಂಹಾಸನವೇರಿದ ಬಳಿಕ ಚಾಮುಂಡಿಬೆಟ್ಟ, ಪರಕಾಲಮಠ, ನಂಜನಗೂಡು, ಮೇಲು ಕೋಟೆ, ಶ್ರೀರಂಗಪಟ್ಟಣ, ಶೃಂಗೇರಿ ಸೇರಿದಂತೆ ವಿವಿಧ ದೇವಾಲಯಗಳಿಂದ ತಂದಿದ್ದ ಪೂರ್ಣಫ‌ಲ ಪ್ರಸಾದ್ನ ಸ್ವೀಕರಿಸಿದರು. ಅಲ್ಲದೇ ಗಂಗೆಯ ಸಂಪ್ರೋಕ್ಷಣೆ ಆದ ಬಳಿಕ ದರ್ಬಾರ್‌ಗೆ ಸಹಕಾರ ನೀಡಿದವರಿಗೆ ಯದವೀರ್‌, ಕಿರುಕಾಣಿಕೆ ನೀಡಿಗೌರವ ಸಲ್ಲಿಸಿ ಸಿಂಹಾನಸದಿಂದ ಇಳಿದರು. ಬಳಿಕ ದರ್ಬಾರ್‌ ಮುಗಿಸಲು ಎದ್ದು ನಿಂತು ಸಲ್ಯೂಟ್‌ ಮಾಡಿದರು. ಈ ವೇಳೆ ಮತ್ತೆ ಕಾಯೋ ಶ್ರೀ ಗೌರಿ ಗೀತೆ ಮೊಳಗಿತು. ನವರಾತ್ರಿಯ ಮೊದಲನೆ ದಿನವಾದ ಪಾಡ್ಯದ ದಿನದಂದು ಬೆಳಗ್ಗೆ ಖಾಸಗಿ ದರ್ಬಾರ್‌ ನಡೆಯುತ್ತದೆ.

ಉಳಿದ ದಿನಗಳಲ್ಲಿ ಸಂಜೆ ವೇಳೆಯಲ್ಲಿ ನಡೆಯುತ್ತದೆ. ದ್ವಾರಪಾಲಕರು, ಪರಾಕು ಹೇಳುವವರು, ಒಡೆಯರ್‌ ಆಪ್ತ ಸಿಬ್ಬಂದಿ, ರಾಜದಂಡ ಹಿಡಿದ ಆಸ್ಥಾನ ಅಧಿಕಾರಿಗಳು, ರಾಜಪುರೋತರು, ವಿದ್ವಾಂಸರು, ಒಡೆಯರ್‌ ವಂಶಸ್ಥರು, ಬಂಧು ಮಿತ್ರರೆಲ್ಲರೂ ಖಾಸಗಿ ದರ್ಬಾರಿನಲ್ಲಿ ಭಾಗವಹಿಸಿದ್ದರು. 

ವಿಜಯದಶಮಿಯ ಹತ್ತು ದಿನಗಳ ಅವಧಿಯಲ್ಲಿ 108 ಸಲ ದೇವಿ ಭಾಗವತ ಪಠಣ, 10 ಮಂದಿ ವೇದಮೂರ್ತಿ
ಗಳಿಂದ ಸಪ್ತಶತಿ ಪಠಣ, ನವಮಿ ರಾತ್ರಿ ಆಲಮೇಲಮ್ಮನ ದೇವಸ್ಥಾನದಲ್ಲಿ ಪೂಜೆ, ಆಯುಧಶಾಲೆಯಲ್ಲಿ ಆಯುಧಪೂಜೆ,
ವಿಜಯದಶಮಿಯಂದು ಜಟ್ಟಿಗಳ ವಜ್ರಮುಷ್ಠಿ ಕಾಳಗ, ಶಮೀಪೂಜೆ ಅತ್ಯಂತ ಶ್ರದ್ಧಾಭಕ್ತಿಯಿಂದ ಶಾಸ್ತ್ರೋಕ್ತವಾಗಿ ನೆರವೇರಿಸಲಾಗುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next