Advertisement

ಮಕ್ಕಳಲ್ಲಿ ಆಧ್ಯಾತ್ಮಿಕ-ಧಾರ್ಮಿಕತೆ ಜಾಗೃತಿ ಮೂಡಿಸಿ

05:52 PM Feb 05, 2022 | Team Udayavani |

ಸವಣೂರ: ಆಧ್ಯಾತ್ಮಿಕ ಮತ್ತು ಧಾರ್ಮಿಕ ಚಿಂತನೆಯ ಮೇಲೆ ಸಮಾಜವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಮುಂದಿನ ಪೀಳಿಗೆಗೆ ವಹಿಸುವ ನಿಟ್ಟಿನಲ್ಲಿ, ಬಾಲ್ಯದಿಂದಲೇ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಹಿರಿಯರು ಮಾಡಬೇಕಾದ ಅವಶ್ಯಕತೆಯಿದೆ ಎಂದು ಅರೆ ಮಾದನಹಳ್ಳಿ ಮಹಾ ಸಂಸ್ಥಾನಮಠದ ವಿಶ್ವಕರ್ಮ ಜಗದ್ಗುರು ಪೀಠದ ಅನಂತಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಹೇಳಿದರು.

Advertisement

ಪಟ್ಟಣದ ಕಾಳಿಕಾದೇವಿ ದೇವಸ್ಥಾನದ ನೂತನ ಕಟ್ಟಡ ಲೋಕಾರ್ಪಣೆ, ಕಾಳಿಕಾದೇವಿ ಮೂರ್ತಿಯ ಪುನಃ ಪ್ರಾಣ ಪ್ರತಿಷ್ಠಾಪನೆ ಹಾಗೂ ಗೋಪುರದ ಕಳಸಾರೋಹಣ ಕಾರ್ಯಕ್ರಮದ ಪ್ರಯುಕ್ತ ನಡೆದ ಧರ್ಮಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ನಮ್ಮ ಮಕ್ಕಳು ಧರ್ಮ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಬಿಟ್ಟು, ಪಾಶ್ಚಾತ್ಯ ಸಂಸ್ಕೃತಿಯತ್ತ ಮುಖ ಮಾಡುತ್ತಿರುವುದರಿಂದ ಸಮಾಜ ಆತಂಕದ ಸ್ಥಿತಿಯಲ್ಲಿದೆ. ಈ ಕುರಿತು ಮಕ್ಕಳಲ್ಲಿ
ಸಂಸ್ಕಾರವನ್ನು ತುಂಬುವ ಮನಸ್ಸು ತಂದೆ, ತಾಯಂದಿರಲ್ಲಿ ಜಾಗೃಗೊಳ್ಳಬೇಕಿದೆ.

ಜಗತ್ತಿನ ಪ್ರತಿಯೊಬ್ಬ ಮನುಷ್ಯನ ಬದುಕಿಗೆ ಅವಶ್ಯಕವಾಗಿ ಬೇಕಾದ ಪಂಚ ಶಿಲ್ಪಗಳ ಮೂಲಕ ಎಲ್ಲವನ್ನು ನಿರ್ಮಾಣ ಮಾಡಿಕೊಡುವಲ್ಲಿ ಆದಿಯಿಂದ ಇಂದಿನವರೆಗೆ ಸೇವೆ ಸಲ್ಲಿಸಿದ ವಿಶಿಷ್ಟ ಸಮುದಾಯ ಎಂದರೆ ವಿಶ್ವಕರ್ಮ ಸಮುದಾಯವಾಗಿದೆ. ಬೇಲೂರು, ಹಳೆಬೀಡು, ಸೋಮನಾಥಪುರ, ಕೈದಾಳ ಇತ್ಯಾದಿ ಶಿಲ್ಪಗಳ ಕೊಡುಗೆ ಕೊಟ್ಟ ಅಮರಶಿಲ್ಪಿ ಜಕಣಾಚಾರ್ಯರ ಬಗ್ಗೆ ಇತ್ತೀಚಿನ ದಿನಮಾನಗಳಲ್ಲಿ ಕಾಲ್ಪನಿಕ ವ್ಯಕ್ತಿ ಎಂಬ ಹೇಳಿಕೆಗಳು ಕೇಳಿಬರುತ್ತಿರುವುದು
ವಿಷಾದನೀಯವಾಗಿದೆ. ಇದು ಕೇವಲ ವಿಶ್ವಕರ್ಮ ಸಮುದಾಯಕ್ಕಲ್ಲದೇ, ಭಾರತೀಯ ಶಿಲ್ಪ ಪರಂಪರೆಗೆ ಮಾಡುತ್ತಿರುವ ಅವಮಾನವಾಗಿದೆ ಎಂದರು.

ಶಿಲ್ಪಿಗಳು ಕೇವಲ ಒಂದು ಸಮುದಾಯಕ್ಕಾಗಿ ಶಿಲ್ಪಕಲೆಗಳನ್ನು ಮಾಡದೇ, ಜಗತ್ತಿನಲ್ಲಿ ಅತ್ಯಂತ ಸಾಮರಸ್ಯದಿಂದ ಬದುಕುತ್ತಿರುವ ದೇಶವಾದ ಭಾರತದಲ್ಲಿ ಧಾರ್ಮಿಕ ಅನೇಕ ಗುಡಿ, ಗೋಪುರಗಳನ್ನು, ಮಠ, ಮಂದಿರಗಳನ್ನು, ಮಸೀದಿ-ಚರ್ಚ್‌ಗಳನ್ನು, ಜೈನ ತೀರ್ಥಂಕರರ ಮೂರ್ತಿಗಳನ್ನು, ಅಜಂತಾ, ಯಲ್ಲೋರಾಗಳಲ್ಲಿನ ಶಿಲ್ಪಕಲೆಗಳನ್ನು ನೀಡಿದ ಸಮುದಾಯ ವಿಶ್ವಕರ್ಮ ಸಮುದಾಯವಾಗಿದೆ.ಆದರೆ, ಇಂದು ವಿಶ್ವಕರ್ಮ ಸಮುದಾಯ ಜಾಗೃತಗೊಳ್ಳಬೇಕಿದೆ.

ನಮ್ಮ ಮಕ್ಕಳನ್ನು, ಯುವ ಪೀಳಿಗೆಗಳನ್ನು ಜಾಗೈತಗೊಳಿಸಬೇಕಿದೆ. ಧಾರ್ಮಿಕ ತಳಹದಿಯ ಮೇಲೆ ಅವರನ್ನು ನಡೆಸಬೇಕಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಜೊತೆಗೆ ಧಾರ್ಮಿಕ ಶಿಕ್ಷಣದ ಸಂಸ್ಕಾರವನ್ನೂ ನೀಡಬೇಕಿದೆ ಎಂದರು. ವಿಶ್ವಕರ್ಮ ಮಹಾಸಂಸ್ಥಾನ ಸಾವಿತ್ರಿಪೀಠ, ಕಾಶೀ ಪೀಠ ವಡ್ನಾಳದ ಅಷ್ಟೋತ್ತರ ಶತ ಶ್ರೀ ಶಂಕರಾತ್ಮನಂದ ಸರಸ್ವತಿ ಸ್ವಾಮೀಜಿ, ಶ್ರೀಮದ್‌ ಆನೆಗುಂದಿ ಮಹಾಸಂಸ್ಥಾನ, ಸರಸ್ವತಿ ಪೀಠ ವಿಶ್ವಕರ್ಮ ಏಕದಂಡಿಗೆ ಶಾಡ್ಲಗೇರಿ ಸೂರ್ಯನಾರಾಯಣ ಸ್ವಾಮೀಜಿ, ಹುಲಗೂರಿನ ಮೌನೇಶ್ವರ ಸ್ವಾಮೀಜಿ, ಮುರನಾಳ ಮಳೇರಾಜೇಂದ್ರಮಠದ ಶಿವಾನಂದ ಸ್ವಾಮೀಜಿ ಅವರು ದಿವ್ಯ ಸಮ್ಮುಖ ವಹಿಸಿ ಆಶೀರ್ವಚನ ನೀಡಿದರು.

Advertisement

ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಈಶ್ವರ ಅರ್ಕಸಾಲಿ ಧರ್ಮ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದನ್ವಯ ವಿವಿಧ ರೂಪದಲ್ಲಿ ದಾನ ನೀಡಿದ ಮಹನೀಯರನ್ನು ಶ್ರೀ ಕಾಳಿಕಾದೇವಿ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಗಣೇಶಪ್ಪ ಕಮ್ಮಾರ ತಾಲೂಕು ಅಧ್ಯಕ್ಷ ಪೂರ್ವಾಚಾರಿ ಬಡಿಗೇರ, ಡಾ.ಪದ್ಮಾವತಿ ಪತ್ತಾರ, ಮಹೇಂದ್ರ ಬಡಿಗೇರ, ಹನುಮಂತಗೌಡ ಮುದಿಗೌಡ್ರ, ಕು.ಸಮರ್ಥ ಮಹೇಶ ಪ್ರಸಾದ, ವಿಪ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಜೆ. ಮುಲ್ಲಾ, ಮುಖಂಡ ರಮಾಕಾಂತ ಶೆಂಡಗೆ ಸೇರಿದಂತೆ
ಸಮಾಜ ಬಾಂಧವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next