Advertisement

ಮಳೆಗಾಲದಲ್ಲಿ ರಸ್ತೆಗಳ ಬಣ್ಣ ಬಯಲು; ಕಳಪೆ ಕಾಮಗಾರಿಯಿಂದ ರಸ್ತೆಗಳು ಹಾಳು

06:21 PM Jul 29, 2022 | Team Udayavani |

ಬಂಗಾರಪೇಟೆ: ಹಾಕಿದ ಬಣ್ಣ ಮಳೆ ನೀರಿನಲ್ಲಿ ಕಳಚಿ ಹೋಗುತ್ತದೆ ಎಂಬ ಗಾದೆ ಮಾತಿನಂತೆ ಗ್ರಾಮೀಣ ಪ್ರದೇಶದ ರಸ್ತೆಗಳ ಬಣ್ಣ ಸಹ ಮಳೆಗಾಲದಲ್ಲಿ ಬಯಲಿಗೆ ಬರಲಿದೆ ಎಂಬುದಕ್ಕೆ ಪಟ್ಟಣದಿಂದ ಬಂಗಾರಪೇಟೆಯಿಂದ ಕಾಮಸಮುದ್ರಕ್ಕೆ ಹೋಗುವ ರಸ್ತೆಯೇ ಸಾಕ್ಷಿಯಾಗಿದೆ.

Advertisement

ಪಟ್ಟಣದಿಂದ ಕೇವಲ 15 ಕಿ.ಮೀ ದೂರವಿರುವ ಕಾಮಸಮುದ್ರ ಹೋಬಳಿ ಕೇಂದ್ರಕ್ಕೆ ಹೋಗುವ ಮುಖ್ಯ ರಸ್ತೆ ಅರ್ಧದಷ್ಟು ಭಾಗ ಸಂಪೂರ್ಣ ಹಾಳಾಗಿ, ವಾಹನಗಳ ಸಂಚಾರಕ್ಕೆ ಸಂಚಕಾರ ತಂದಿದೆ. ಒಂಡೆದೆ ಲೋಕೋಪಯೋಗಿ ಇಲಾಖೆ ಅನುದಾನ ಕೊರತೆಯ ನಡುವೆಯೂ ಗ್ರಾಮೀಣ ರಸ್ತೆ ಹಾಗೂ ಪ್ರಮುಖ ರಸ್ತೆಗಳಿಗೆ ಡಾಂಬರು ಭಾಗ್ಯ ಕಾಣಿಸಿ, ರಸ್ತೆಗಳ ಗುಣಮಟ್ಟಕ್ಕೆ ಶ್ರಮಿಸುತ್ತಿದ್ದರೆ. ಮತ್ತೂಂದೆಡೆ ಗುತ್ತಿಗೆದಾರರ ಕಳಪೆ ಕಾಮಗಾರಿಯಿಂದ ಡಾಂಬರು
ಕಂಡ ರಸ್ತೆಗಳು, ಕೆಲವೇ ತಿಂಗಳಲ್ಲಿ ಮತ್ತೆ ಹಳೇ ಸ್ಥಿತಿಗೆ ಮರುಳುತ್ತಿರುವುದು ವಿಪರ್ಯಾಸವಾಗಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ವಾಹನ ಸವಾರರ ಪರದಾಟ: ಪಟ್ಟಣದಿಂದ ಕಾಮಸಮುದ್ರಕ್ಕೆ ಹೋಗುವ ರಸ್ತೆ ದಿನ್ನಕೊತ್ತೂರು ಗ್ರಾಮದ ಬಳಿ ಸಂಪೂರ್ಣ ಹಾಳಾಗಿ, ಹಳ್ಳಗಳಿಂದ ಕೂಡಿದೆ. ಮೊದಲೇ ವಾಹನಗಳ ಸಂಚಾರಕ್ಕೆ ಸಾಹಸ ಮಾಡಿಕೊಂಡು ಹೋಗಬೇಕು. ಇನ್ನು ಮಳೆ ಬಂದರಂತೂ ಯಾವುದು ರಸ್ತೆ, ಯಾವುದು ಹಳ್ಳ ಎಂಬ ವ್ಯತ್ಯಾಸ ತಿಳಿಯದೆ ವಾಹನ ಸವಾರರು ಪರದಾಡುವಂತಾಗಿದೆ. ಈ ರಸ್ತೆಯನ್ನು ಇದುವರೆಗೂ 10 ಬಾರಿ ತೇಪೆ ಕೆಲಸ ಮಾಡಲಾಗಿದೆ. ಆದರೆ, ಅದು ಕೇವಲ ವಾರದೊಳಗೆ ಕಿತ್ತು ಮತ್ತೆ ಹಳೇ ಸ್ಥಿತಿಗೆ ಬಂದರೂ, ಲೋಕೋಪಯೋಗಿ ಇಲಾಖೆ ಮಾತ್ರ ಗುತ್ತಿಗೆದಾರರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ.

ಇದೇ ಮಾರ್ಗದಲ್ಲಿ ಪರವನಹಳ್ಳಿ ಕೆರೆ ಕಟ್ಟೆ ಬಳಿ ಹಾಗೂ ಪುತ್ರಸೊಣ್ಣೆನಹಳ್ಳಿ ಬಳಿಯಂತೂ ಹೇಳ ತೀರದಾಗಿದೆ. ವರದಾಪುರ ಗೇಟ್‌ ಬಳಿಯೂ ವಾಹನಗಳ ಸವಾರರು ಜನಪ್ರತಿನಿಧಿಗಳನ್ನು ಶಪಿಸಿಕೊಂಡೇ ಹೋಗುವುದು ನಿತ್ಯ ಕಾಯಕವಾಗಿದೆ.

ಎಂಜಿನಿಯರ್‌ ಬರುವುದೇ ಅಪರೂಪ: ರಾತ್ರಿ ವೇಳೆ ರಸ್ತೆ ಮಧ್ಯದಲ್ಲಿರುವ ಗುಂಡಿಗಳು ತಿಳಿಯದೆ ಹಲವು ದ್ವಿಚಕ್ರ ವಾಹನಗಳ ಸವಾರರು ಬಿದ್ದು, ಗಾಯ ಗೊಂಡಿರುವ ಉದಾಹರಣೆಗಳಿವೆ. ಇಲ್ಲಿನ ಸಹಾಯಕ ಎಂಜಿನಿಯರ್‌ ಆಗಿರುವ ಚಂದ್ರಯ್ಯ ಕಚೇರಿಗೆ ಬರುವುದೇ ಅಪರೂಪವಾಗಿದೆ. ಯಾವುದಾದರೂ ಕಾಮಗಾರಿ ಬಿಲ್‌ ಮಾಡಬೇಕಾದರೆ ಮಾತ್ರ ಕಚೇರಿ ಸಿಗಲಿದ್ದಾರೆ ಎಂದು ಆರೋಪ ಕೇಳಿ ಬರುತ್ತಿದೆ.

Advertisement

ಕಳಪೆ ಕಾಮಗಾರಿ ಕಂಡರೆ ಅಂತಹ ಗುತ್ತಿಗೆ ದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಹಲವು ಬಾರಿ ಶಾಸಕರು ಹೇಳಿದ್ದರೂ ಇದುವರೆಗೂ ಯಾವ ಗುತ್ತಿಗೆದಾರರು ಅಂತಹ ಪಟ್ಟಿಯಲ್ಲಿ ಹೆಸರು ಪಡೆದಿಲ್ಲ. ರಸ್ತೆಗಳು ಮಾತ್ರ ಕಳಪೆ ಕಾಮಗಾರಿಯಿಂದ ಕೂಡಿರುವುದು ಕಣ್ಣಿಗೆ ರಾಚುತ್ತಿದೆ. ಇನ್ನಾದರೂ ಅಧಿಕಾರಿಗಳು ಗುಣಮಟ್ಟದ ರಸ್ತೆಗಳಿಗೆ ಆದ್ಯತೆ ನೀಡಲಿ, ಅವ್ಯವಸ್ಥೆಯಿಂದ ಕೂಡಿರುವ ರಸ್ತೆಗಳಿಗೆ ಮೋಕ್ಷ ಕಲ್ಪಿಸಿ, ವಾಹನಗಳು ಮುಕ್ತವಾಗಿ ಸಂಚರಿಸಲು ಅನುವು ಮಾಡಿಕೊಡಲಿ ಎಂಬುದು ವಾಹನ ಸವಾರರು ಒತ್ತಾಯಿಸಿದ್ದಾರೆ.

ಹಲವು ಬಾರಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇದೊಂದೇ ಸ್ಥಳದಲ್ಲಿ ತೇಪೇ ಕೆಲಸ ಮಾಡಿದ್ದರೂ ಪ್ರಯೋಜನವಾಗುತ್ತಿಲ್ಲ. ಈ ಜಾಗದಲ್ಲಿ ಹಲವು ಬಾರಿ ಅಪಘಾತಗಳು ಸಂಭವಿ ಸಿದ್ದರೂ ಇದುವರೆಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಸಾರ್ವಜನಿಕರು ಹೇಳಿ ಹೇಳಿ ಸಾಕಾಗಿದೆ.
●ಕೆ.ಎಂ.ಮಂಜುನಾಥ್‌,
ಮಾಜಿ ಅಧ್ಯಕ್ಷ, ಕೆಸರನಹಳ್ಳಿ ಗ್ರಾಪಂ

ಆಯ್ದ ಭಾಗಗಳಲ್ಲಿ ರಸ್ತೆ ಅಭಿವೃದ್ಧಿಗೆ 8 ಕೋಟಿ ಅನುದಾನ ಬಿಡುಗಡೆಯಾಗಿದೆ. ಈ ರಸ್ತೆ ಅಭಿವೃದ್ಧಿಯನ್ನು ಲೋಕೋಪಯೋಗಿ ಇಲಾಖೆಯ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಎಸ್‌ಎಚ್‌ಡಿಪಿ) ಇವರು ನಿರ್ವಹಣೆ ಮಾಡಲಿದ್ದಾರೆ. ಈ ಕಾಮಗಾರಿಯು ಶೀಘ್ರದಲ್ಲೇ ಆರಂಭಗೊಳ್ಳಲಿದೆ.
●ಎಂ.ಸರಸ್ವತಿ, ಎಇಇ, ಲೋಕೋಪಯೋಗಿ
ಇಲಾಖೆ, ಬಂಗಾರಪೇಟ

●ಎಂ.ಸಿ.ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next