Advertisement

ನೀ ಬರುವ ಹಾದಿಯನು ಕಾದು ಕುಳಿತವರು ನಾವು…

04:43 PM Jun 05, 2021 | Team Udayavani |

ಸುಂದರ ಕ್ಷಣಗಳಿಗೆ ಸಾಕ್ಷಿಯಾಗುವ  ಒಂದು ಘಳಿಗೆ ಅದುವೇ ಮಳೆಗಾಲದ ಸಮಯ.  ಮಳೆ ಬರುವ ಮುನ್ನ ನಿಸರ್ಗದಲ್ಲಿ ಆಗುವ ಬದಲಾವಣೆ ಎಷ್ಟೊಂದು ಆಹ್ಲಾದಕರವಾಗಿರುತ್ತದೆ ಎಂದರೆ ಅದನ್ನು  ಪದಗಳಲ್ಲಿ ಹೇಳುವುದಕ್ಕಿಂತ  ಅನುಭವಿಸುವುದರಲ್ಲಿ ತುಂಬಾ ಖುಷಿ ಸಿಗುತ್ತದೆ. ತಂಪಾಗಿ ಬೀಸುವ   ಗಾಳಿ  ಒಂದು ಕಡೆಯಾದರೆ ಮೋಡಕವಿದ  ವಾತಾವರಣ ಮತ್ತೂಂದು ಕಡೆ. ಅದರ ಮಧ್ಯದಲ್ಲಿ ನಾನು ಏಕೆ ಸುಮ್ಮನೆ ಇರಲಿ ಎಂದು ಗುಡುಗು ಮತ್ತು ಸಿಡಿಲಿನ ನಡುವೆ ಭಯಂಕರವಾಗಿ ಸಮರಕ್ಕೆ ಸಿದ್ಧ.

Advertisement

ಈ ವರುಣನು  ಸಹ ಯಾವಾಗ ಬೇಕಾದರೂ ಬಂದು ಬಿಡುವನು. ಅವನ ಅಚಾನಕ್‌ ಆಗಮನ ನಮಗೆ  ಒಂದು ಕಡೆ ಖುಷಿಯನ್ನು  ತಂದರೆ ಮತ್ತೂಂದು ಕಡೆ  ದುಃಖಕ್ಕೆ ಆಹ್ವಾನವನ್ನು ಕೊಟ್ಟು ಅನಾಹುತಗಳ ರಹದಾರಿಯಲ್ಲಿ ತಂದು ಬಿಟ್ಟು ಬಿಡುತ್ತಾನೆ. ಆದರೂ ವರುಣನ ಆಗಮನ  ಏನೋ ಒಂದು ಹರುಷವನ್ನು  ವ್ಯಕ್ತ ಪಡಿಸುತ್ತದೇ ನೀ ಬರುವ ದಾರಿಯನ್ನು  ಕಾದು ಕುಳಿತವರು ನಾವು ಎಂದರೂ ಅತಿಶಯೋಕ್ತಿ ಇಲ್ಲ.

ಜಿಟಿಪಿಟಿ ಮಳೆ ಬರುವ ಸಮಯದಲ್ಲಿ ಬಿಸಿಯಾದ ಚಹಾ  ಜತೆಗೆ ಮಿರ್ಚಿ ಬಜ್ಜಿ ಇದ್ದರೆ ಬೇರೊಂದು ಲೋಕಕ್ಕೆ ಹೋಗಿ ಬಂದ ಹಾಗೆ  ಭಾಸವಾಗುತ್ತದೆ. ಅದರೊಂದಿಗೆ ಓದಲು ಪುಸ್ತಕ ಹಾಗೂ ಕೇಳಲು ಇಂಪಾದ ಹಾಡು ಇದ್ದರೆ ಆ ಸಂತೋಷವೇ ಬೇರೆ.

“ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ’ ಯೋಗರಾಜ್‌ ಭಟ್ಟರು ಬರೆದ  ಸಾಲುಗಳು ನೆನಪಿಗೆ ಬರುತ್ತದೆ. ಅವರು ಹೇಳಿದ ಹಾಗೇ ಮಳೆರಾಯನ ಲೀಲೆಯನ್ನು ತಿಳಿದುಕೊಂಡವರು ಯಾರೂ ಇಲ್ಲ ಎನ್ನಬಹುದು.

ಮಳೆ ಮತ್ತೇ  ಬಾಲ್ಯದ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತದೆ. ಪುಟ್ಟ ಪುಟ್ಟ ಕೊಡೆ, ರೈನ್‌ ಕೋಟ್‌ಗಳು ಅಮ್ಮ ಬೈದು ಬೈದು ಹಾಕಿದರು ಮತ್ತೆ  ಮನೆಗೆ ಮರಳುವಾಗ ತಲೆ ಎಲ್ಲ ಒದ್ದೆಯಾಗಿರುವುದನ್ನು ಕಂಡು ಮತ್ತೆ ಅವರು ಮುನಿಸಿಕೊಳ್ಳುವುದು, ಆಲಿಕಲ್ಲು ಬೀಳುವಾಗ ಅದನ್ನು ಹಿಡಿಯಲು ಮಳೆಯಲ್ಲಿ ಓಡಾಡುವುದು, ನಿಂತ ನೀರಿನಲ್ಲಿ ಸ್ನೇಹಿತರ ಜತೆಗೂಡಿ ಆಟವಾಡುವುದು, ಮಳೆರಾಯನ ಆರ್ಭಟಕ್ಕೆ ಅದೆಷ್ಟು ಸಲ ಭಯ ಪಟ್ಟಿದ್ದು ಉಂಟು.  ಅಮ್ಮನ ಮಡಿಲಲ್ಲಿ  ಹೋಗಿ ಬಚ್ಚಿಟ್ಟುಕೊಂಡಿದ್ದು ಉಂಟು. ಹೀಗೆ ಹತ್ತು ಹಲವಾರು ಕೀಟಲೆಗಳನ್ನು ಮಾಡುತ್ತಿದ್ದುದು ಉಂಟು. ಆದರೆ  ಈಗ ಅವು ನೆನಪು ಮಾತ್ರ ಅಷ್ಟೇ. ಮಳೆ , ವರುಣ, ವರ್ಷಧಾರೆ , ಹೀಗೆ ಹಲವಾರು  ರೀತಿಯಿಂದ ಕರೆಯುವ ಈ ವರುಣ ದೇವನ ಆಗಮನವೇ ಮನುಜ ಕುಲಕ್ಕೆ ಒಂದು ಹರುಷದ ವಾತಾವರಣ.

Advertisement

ರೈತನ ಮೊಗದಲ್ಲಿ ಮಂದಹಾಸವನ್ನು ಮೂಡಿಸುವವನು ಇವನೇ. ಹಾಗೆ ಕೆಲವೊಂದು ಸಲ ಎಡೆ‌ಬಿಡದೆ ಸುರಿದು ಅವರ ಖುಷಿಯನ್ನು ಹಿಂದೆ  ಪಡೆಯವವನು ಇವನೇ.  ಮಳೆ ಇಲ್ಲದೆ ಸಕಲ ಜೀವ ರಾಶಿಗಳು ಬದುಕಲು ಸಾಧ್ಯವಿಲ್ಲ.  ನಾವು ಮತ್ತೆ ನಮ್ಮ ಕನಸಿನ ಜೀವನಕ್ಕೆ ಜ್ಯೋತಿಯನ್ನು ಬೆಳಗಬೇಕು ಎಂದರೆ ಪರಿಸರ ಮಾತೆ ಯನ್ನು ರಕ್ಷಿಸಬೇಕು.  ಮತ್ತೇ ಬಾಲ್ಯದ ನೆನಪುಗಳು ಬೇಕು ಎಂದರೆ ಗಿಡಗಳನ್ನು ಬೆಳೆಸಬೇಕು. ಸದ್ಯ ಪರಿಸ್ಥಿತಿ ಒಮ್ಮೆ ಅರಿತು ಕೊಂಡರೆ  ನಾವೇ ನಮ್ಮಲ್ಲಿ ಬದಲಾವಣೆಯನ್ನು ತರಬಹುದು.

 

ಭಾಗ್ಯಶ್ರೀ ಎಸ್‌. ಆರ್‌.ಧಾರವಾಡ

Advertisement

Udayavani is now on Telegram. Click here to join our channel and stay updated with the latest news.

Next