Advertisement

ಮಳೆಗಾಲದಲ್ಲಿ ಮ್ಯಾನ್‌ಹೋಲ್‌ಗೆ ಮಳೆ ನೀರು; ಕಾದಿದೆ ಅಪಾಯ!

11:58 AM Apr 27, 2022 | Team Udayavani |

ಮಹಾನಗರ: ನಗರದಲ್ಲಿ ಮ್ಯಾನ್‌ಹೋಲ್‌ಗೆ ಮಳೆ ನೀರು ಹರಿಯಲು ಅನಧಿಕೃತ ಸಂಪರ್ಕ ಅಧಿಕವಿರುವ ಹಿನ್ನೆಲೆಯಲ್ಲಿ ಈ ಬಾರಿಯ ಮಳೆಗಾಲ ನಗರದಲ್ಲಿ ಮತ್ತಷ್ಟು ಮ್ಯಾನ್‌ ಹೋಲ್‌ ಸಮಸ್ಯೆಗೆ ಆಹ್ವಾನ ನೀಡುವ ಎಲ್ಲ ಸಾಧ್ಯತೆಗಳಿವೆ.

Advertisement

ಒಳಚರಂಡಿಗೆ ನೀರು ಹರಿಯಲು ಬೇಕಾಗುವ ಮ್ಯಾನ್‌ಹೋಲ್‌ಗೆ ಕೆಲವು ಕಟ್ಟಡದವರು ಮಳೆ ನೀರಿನ ಸಂಪರ್ಕ ಹೊಂದಿರುವ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಹಲವು ಕಡೆಯಲ್ಲಿ ಮ್ಯಾನ್‌ಹೋಲ್‌ ಸಮಸ್ಯೆ ಎದುರಾಗುತ್ತದೆ. ಪ್ರತೀ ವರ್ಷ ಈ ಸಮಸ್ಯೆ ಶುರುವಾಗುವಾಗ ಪಾಲಿಕೆ ವತಿಯಿಂದ ಎಚ್ಚರಿಕೆ ನೀಡಲಾಗುತ್ತದೆಯಾದರೂ, ಸಮಸ್ಯೆ ಮಾತ್ರ ಪರಿಹಾರ ಕಾಣಿಸುತ್ತಿಲ್ಲ. ಹೀಗಾಗಿ ಪ್ರತೀ ಮಳೆಗಾಲದಲ್ಲಿಯೂ ಚರಂಡಿ ನೀರು ರಸ್ತೆಯಲ್ಲಿಯೇ ಹರಿಯುವ ಪ್ರಸಂಗ ಸೃಷ್ಟಿಯಾಗುತ್ತಲೇ ಇರುತ್ತದೆ.

ನಗರದ ಕೆಲವು ಭಾಗದ ಕಟ್ಟಡದವರಿಗೆ ಮಳೆ ನೀರು ಸರಾಗ ಹರಿಯುವಿಕೆಗೆ ಬೇಕಾದ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲ. ಅಂಥವರು ಮಳೆ ನೀರನ್ನು ನೇರವಾಗಿ ಒಳಚರಂಡಿಗೆ ಸಂಪರ್ಕ ನೀಡಿರುತ್ತಾರೆ.

ಪರಿಣಾಮವಾಗಿ ಮಳೆ ನೀರು ಹಾಗೂ ಒಳಚರಂಡಿ ನೀರು ಜತೆಯಾಗಿ ಹರಿದು ಒತ್ತಡ ತಡೆದುಕೊಳ್ಳಲು ಸಾಧ್ಯವಾಗದೆ ಅಲ್ಲಲ್ಲಿ ಇರುವ ಮ್ಯಾನ್‌ಹೋಲ್‌ ಗಳು ಬಾಯ್ತೆರೆದು ಹೊರಬರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮಳೆ ನೀರಿನೊಂದಿಗೆ ಒಳಚರಂಡಿ ನೀರು ಕೂಡ ಸೇರಿ ಆ ಪರಿಸರವೆಲ್ಲ ಗಲೀಜಿನ ಪರಿಸ್ಥಿತಿ ಮಳೆಗಾಲ ಸಂದರ್ಭ ಉಂಟಾಗುತ್ತದೆ. ಹೀಗಾಗಿ ಮಳೆ ನೀರಿನ ಸಂಪರ್ಕವನ್ನು ಒಳಚರಂಡಿಗೆ ಹೊಂದಿರುವವರು ತತ್‌ಕ್ಷಣವೇ ತೆರವು ಮಾಡಿದರೆ ಈ ಮಳೆಗಾಲದಲ್ಲಿ ಮ್ಯಾನ್‌ಹೋಲ್‌ ಸಮಸ್ಯೆ ಹೆಚ್ಚಾಗಿ ಕಾಣಿಸದು.

ಅಪಾಯಕಾರಿ ಮ್ಯಾನ್‌ಹೋಲ್‌ಗ‌ಳು!

Advertisement

ಈ ಮಧ್ಯೆ, ನಗರದ ಅನೇಕ ಕಡೆಗಳಲ್ಲಿನ ಅರೆಬರೆ ಕಾಮಗಾರಿ ಯಿಂದಾಗಿ ಅನೇಕ ಪ್ರದೇಶಗಳಲ್ಲಿರುವ ಮ್ಯಾನ್‌ಹೋಲ್‌ಗ‌ಳು ಬಾಯಿ ತೆರೆದುಕೊಂಡು ಅಪಾಯದ ಸ್ಥಿತಿಯಲ್ಲಿದೆ. ಸಾಮಾನ್ಯವಾಗಿ ಮ್ಯಾನ್‌ ಹೋಲ್‌ಗ‌ಳು ರಸ್ತೆಗೆ ಸಮನಾಂತರವಾಗಿ ಇರಬೇಕು. ನಗರದಲ್ಲಿನ ಅನೇಕ ಮ್ಯಾನ್‌ ಹೋಲ್‌ಗ‌ಳು ಸುಮಾರು 50 ವರ್ಷ ಹಳೆಯದಾಗಿದ್ದು, ಅವುಗಳ ಪೈಕಿ ರಸ್ತೆಗಳ ಮೇಲಿರುವ ಹಲವು ಮ್ಯಾನ್‌ಹೋಲ್‌ ಗಳು ಕೆಳಕ್ಕೆ ಕುಸಿದುಕೊಂಡು ಅಪಾಯದ ಸ್ಥಿತಿಯಲ್ಲಿವೆ. ಇದರಿಂದಾಗಿ ಮ್ಯಾನ್‌ ಹೋಲ್‌ಗ‌ಳು ರಸ್ತೆ ಮಟ್ಟದಿಂದ ಸುಮಾರು ಅರ್ಧ ಅಡಿ ಕೆಳಕ್ಕೆ ಜಾರಿಗೊಂಡಿವೆ. ಈ ಕಾರಣದಿಂದಾಗಿ ಮಳೆ ಬಂದಾಗ ನೀರು ಚರಂಡಿ ಬದಲಿಗೆ ಈ ಮ್ಯಾನ್‌ಹೋಲ್‌ಗೆ ನುಗ್ಗಿ ಪಕ್ಕದ ಮ್ಯಾನ್‌ಹೋಲ್‌ ಮೂಲಕ ಹೊರಗಡೆ ಬಂದು ನಾನಾ ರೀತಿಯ ಸಮಸ್ಯೆಗೆ ಕಾರಣವಾಗುತ್ತಿವೆ.

ಅನಧಿಕೃತ ಸಂಪರ್ಕದ ವಿರುದ್ಧ ಕಾನೂನು ಕ್ರಮ

ಮ್ಯಾನ್‌ಹೋಲ್‌ ಸಹಿತ ಚರಂಡಿ ಸ್ವಚ್ಛತೆಗೆ ನಗರದಲ್ಲಿ ಆದ್ಯತೆ ನೀಡಲಾಗಿದೆ. ಅನಧಿಕೃತವಾಗಿ ಮಳೆ ನೀರಿನ ಸಂಪರ್ಕವನ್ನು ಮ್ಯಾನ್‌ ಹೋಲ್‌ಗೆ ನೀಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಅಂತಹವರ ಯುಜಿಡಿ ಸಂಪರ್ಕ ಕಡಿತಗೊಳಿಸಲಾಗುವುದು. -ಅಕ್ಷಯ್‌ ಶ್ರೀಧರ್‌, ಆಯುಕ್ತರು, ಪಾಲಿಕೆ

Advertisement

Udayavani is now on Telegram. Click here to join our channel and stay updated with the latest news.

Next