Advertisement

ಇಟ್ಟಂಗಿ ಭಟ್ಟಿ ಉದ್ಯಮಕ್ಕೆ ಅಡ್ಡಿಯಾದ ಮಳೆ

05:42 PM Dec 16, 2021 | Team Udayavani |

ಹುಬ್ಬಳ್ಳಿ: ಅಕಾಲಿಕ ಮಳೆಯಿಂದ ಇಟ್ಟಂಗಿ ತಯಾರಿಕೆ ಕಾರ್ಯ ಸ್ಥಗಿತಗೊಂಡಿದ್ದರಿಂದ ಇಟ್ಟಂಗಿ ಬೆಲೆ ಗಗನಮುಖೀಯಾಗಿದ್ದು, ದಾಸ್ತಾನು ಖಾಲಿಯಾಗಿ ಕಟ್ಟಡ ನಿರ್ಮಾಣ ಮೇಲೆ ಪರಿಣಾಮ ಬೀರತೊಡಗಿದೆ. ಸಾಮಾನ್ಯವಾಗಿ ದೀಪಾವಳಿ ನಂತರ ಆರಂಭಗೊಳ್ಳುತ್ತಿದ್ದ ಇಟ್ಟಂಗಿ ತಯಾರಿಕೆ ಕಾರ್ಯಕ್ಕೆ ಈ ಬಾರಿ ಸುರಿದ ಅಕಾಲಿಕ ಮಳೆ ಅವಕಾಶ ನೀಡಿಲ್ಲವಾಗಿದೆ.

Advertisement

ಇದರಿಂದ ಇಟ್ಟಂಗಿ ಭಟ್ಟಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಇಟ್ಟಂಗಿ ತಯಾರಿಕೆ ಕಾರ್ಮಿಕರಿಗೆ ದಿಕ್ಕೇ ತೋಚದಂತಾಗಿದೆ.ಇಟ್ಟಂಗಿ ತಯಾರಿಕೆಗೆ ಉತ್ತಮವಾದ ಬಿಸಿಲು ಅವಶ್ಯವಿದ್ದು, ಹಲವು ದಿನಗಳಿಂದ ಮೋಡ ಕವಿದ ವಾತಾವರಣ ಇದೆ. ಸುಮಾರು ಒಂದೂವರೆ-ಎರಡು ತಿಂಗಳಿಂದ ಇಟ್ಟಂಗಿ ತಯಾರಿಕೆ ಕಾರ್ಯ ಬಹುತೇಕ ಸ್ಥಗಿತಗೊಂಡಂತಾಗಿದೆ. ಹುಬ್ಬಳ್ಳಿ-ಕಲಘಟಗಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ನೂರಾರು ಇಟ್ಟಂಗಿ ಭಟ್ಟಿಗಳ ಮಾಲಿಕರು ಈಗೀಗ ನಿಧಾನವಾಗಿ ಇಟ್ಟಂಗಿ ತಯಾರಿಕೆಗೆ ಅಣಿಯಾಗುತ್ತಿದ್ದಾರೆ.

ಕಚ್ಚಾ ಸಾಮಗ್ರಿ ಏರಿಕೆ: ಇಟ್ಟಂಗಿ ನಿರ್ಮಾಣಕ್ಕೆ ಬೇಕಾಗುವ ಕಚ್ಚಾ ಸಾಮಗ್ರಿಗಳ ಬೆಲೆ ಏರಿಕೆಯೂ ಮತ್ತೂಂದು ಕಾರಣ ಎನ್ನಬಹುದಾಗಿದೆ. ಇಟ್ಟಂಗಿ ನಿರ್ಮಾಣಕ್ಕೆ ಬೇಕಾಗುವ ಹದವಾದ ಮಣ್ಣು, ಉತ್ತಮ ಗುಣಮಟ್ಟದ ಕಲ್ಲಿದ್ದಲು ಸಿಗದಾಗಿದೆ. ಈ ಹಿಂದೆ 7 ರಿಂದ 8 ಸಾವಿರ ರೂ.ಗಳಿಗೆ ಸಿಗುತ್ತಿದ್ದ ಉತ್ತಮ ಗುಣಮಟ್ಟದ ಕಲ್ಲಿದ್ದಲು ಇದೀಗ 13 ಸಾವಿರ ರೂ.ಗಳಿಗೆ ಟನ್‌ ಆಗಿದೆ.

ಇಟ್ಟಂಗಿ ಬೆಲೆ ಹೆಚ್ಚಳ: ಈ ಹಿಂದೆ 1 ಸಾವಿರ ಇಟ್ಟಂಗಿಗೆ 5 ರಿಂದ 6 ಸಾವಿರ ರೂ. ಬೆಲೆ ಇದ್ದರೆ, ಇದೀಗ 7 ರಿಂದ 7,500ರೂ. ಗೆ ಹೆಚ್ಚಳವಾಗಿದೆ. ಸಾವಿರದಿಂದ ಹಿಡಿದು 7.5 ಸಾವಿರ ರೂ.ಗಳವರೆಗೆ ಬೆಲೆ ಏರಿಕೆಯಾಗಿದೆ. ಗುಣಮಟ್ಟದ ಇಟ್ಟಂಗಿಯೂ ಸಿಗುತ್ತಿಲ್ಲವಾಗಿದೆ.

ಹುಬ್ಬಳ್ಳಿ, ಕಲಘಟಗಿ ಮತ್ತು ಶಿಗ್ಗಾವಿ ತಾಲೂಕುಗಳ ಅಂಚಟಗೇರಿ, ಕಾಡನಕೊಪ್ಪ, ಮಿಶ್ರಿಕೋಟಿ, ಕಟೂರ, ಕಲಘಟಗಿ, ಇನಾಮ ವೀರಾಪುರ, ಕಾಮಧೇನು, ಬಮ್ಮಸಮುದ್ರ, ತಬಕದ ಹೊನ್ನಳ್ಳಿ, ಅಡವಿಸೋಮಾಪುರ, ಕುನ್ನೂರು, ಭದ್ರಾಪುರ, ಕೋಣನಕೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಟ್ಟಂಗಿ ನಿರ್ಮಾಣ ಕಾರ್ಯ ಇದೀಗ ನಿಧಾನವಾಗಿ ಆರಂಭಗೊಳ್ಳುತ್ತಿದೆ.

Advertisement

ಸತತ ಮಳೆಯಿಂದ ಎರಡು ತಿಂಗಳಿಂದ ಇಟ್ಟಂಗಿ ತಯಾರಿಕೆಸಾಧ್ಯವಾಗಿಲ್ಲ. ಇದ್ದ ದಾಸ್ತಾನು ಖಾಲಿಯಾಗಿದೆ. ಪ್ರತಿ ವರ್ಷ ದೀಪಾವಳಿ ಮುಗಿದ ನಾಲ್ಕೈದು ದಿನಕ್ಕೆ ಇಟ್ಟಂಗಿ ತಯಾರಿಕೆ ಕಾರ್ಯ ಆರಂಭವಾಗುತ್ತಿತ್ತು. ಈ ಬಾರಿ ದೀಪಾವಳಿ ವೇಳೆ ಸುರಿದ ಮಳೆ ಹಾಗೂ ಅನಂತರದ ಅಕಾಲಿಕ ಮಳೆ ತಯಾರಿಕೆಗೆ ಅಡ್ಡಿಯುಂಟು ಮಾಡಿತು. ದಾಸ್ತಾನು ಇಲ್ಲದೆ ಇಟ್ಟಂಗಿ ಬೆಲೆಯಲ್ಲಿ ಹೆಚ್ಚಳವಾಗಿದೆ.
ಕಲ್ಲಪ್ಪ ಬೆಳಗಲಿ, ಕೆ.ಬಿ.ಬ್ರಿಕ್ಸ್‌ ಮಾಲಿಕರು.

ಗುತ್ತಿಗೆ ಪಡೆದು ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಇಟ್ಟಂಗಿ ದರದಲ್ಲಿ ದಿಢೀರ್‌ ಏರಿಕೆಯಿಂದ ತುಂಬಾ ಹಾನಿಯಾಗುತ್ತಿದೆ. ಆರಂಭದಲ್ಲಿ 1 ಸಾವಿರ ಇಟ್ಟಂಗಿಗೆ 5, 500ರೂ ಇದ್ದದ್ದು ಏಕಾಏಕಿ 2 ಸಾವಿರ ರೂ. ಹೆಚ್ಚಳವಾಗಿದ್ದು, ಗುತ್ತಿಗೆ ಮೇಲೆ ಕಟ್ಟಡ ನಿರ್ಮಿಸುವವರಿಗೆ ನಷ್ಟವಾಗತೊಡಗಿದೆ.
ರಾಜು ಕೇಶಣ್ಣವರ,
ಸಿವಿಲ್‌ ಇಂಜನಿಯರ್‌

-ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next