Advertisement

ರೈನ್‌ ಮೈನ್‌ ಕನ್ನಡ ಸಂಘ: ಭಾಷಾ ಶ್ರೇಯೋಭಿವೃದ್ಧಿಗೆ “ಕನ್ನಡ ಕಲಿ’ ಸಂಭ್ರಮ

12:29 PM Mar 09, 2024 | Team Udayavani |

ಫ್ರಾಂಕ್‌ಫ‌ರ್ಟ್‌:ಜರ್ಮನಿಯ ಫ್ರಾಂಕ್‌ಫ‌ರ್ಟ್‌ನಲ್ಲಿನ ಕನ್ನಡಿಗರ ವಟವೃಕ್ಷ ರೈನ್‌ಮೈನ್‌ ಕನ್ನಡ ಸಂಘ ಮಾತೃಭೂಮಿಯ ಎಲ್ಲ ದಿಕ್ಕುಗಳಿಂದ ಹಲವು ಕಾರಣಗಳಿಗಾಗಿ ಜರ್ಮನಿಯ ನೆಲದಲ್ಲಿ ವಾಸಿಸುತ್ತಿರುವ ಕನ್ನಡಿಗರಿಗೆ ನಮ್ಮ ನೆಲದ ತಂಪನ್ನು ಎರೆಯುತ್ತಿರುವ ಬೃಹತ್‌ ಮರ.

Advertisement

ಕೇವಲ ಕರುನಾಡ ಸಂಸ್ಕೃತಿ, ಕಲೆಯನ್ನಷ್ಟೇ ಅಲ್ಲದೆ ಜರ್ಮನಿಯಲ್ಲೂ ಕನ್ನಡಿಗರ ಮಕ್ಕಳು ಕನ್ನಡ ಭಾಷೆಯಿಂದ ವಂಚಿತರಾಗಬಾರದೆಂಬ ಮಹದುದ್ದೇಶದಿಂದ 2020 ಆಗಸ್ಟ್‌ 15ರಂದು ‘ಕನ್ನಡ ಕಲಿ’ ಎಂಬ ಅಕ್ಷರ ಬೀಜವನ್ನು ಬಿತ್ತಲಾಯಿತು. ಅಂದಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್‌. ನಾಗಾಭರಣರವರು ಇದನ್ನು ಉದ್ಘಾಟಿಸಿದ್ದರು. ಅಂದು 6 ಜನ ಶಿಕ್ಷಕರು ಹಾಗೂ 30 ವಿದ್ಯಾರ್ಥಿ/ನಿಯರಿಂದ ಆನ್‌ಲೈನ್‌ನಲ್ಲಿ ಪ್ರತೀ ವಾರಾಂತ್ಯದಲ್ಲಿ ಕನ್ನಡ ಕಲಿಕೆಯು ಪ್ರಾರಂಭವಾಯಿತು.

ಇಂದು ಕನ್ನಡ ಕಲಿಯೆಂಬ ಬೀಜ ಚಿಗುರೊಡೆದು ಹಲವು ಬಿಳಲುಗಳೊಂದಿಗೆ ಮತ್ತಷ್ಟು ಕನ್ನಡ ಕಲಿಕೆಯ ಆಸಕ್ತರನ್ನು ತಲುಪಿದೆ. ಭಾಷೆಯ ಒಳಹುಗಳ ಅರ್ಥೈಸಿ ಆಲಂಗಿಸಿಕೊಳ್ಳುತ್ತಿರುವವರು, ಬೋಧನೆಯೊಂದಿಗೆ ಮತ್ತಷ್ಟು ಪಕ್ವತೆ ಹೊಂದುತ್ತಿರುವವರ ಸಂಖ್ಯೆ ಇಂದು 55 (ಮಕ್ಕಳು) ಮತ್ತು 10 (ಶಿಕ್ಷಕರು)ಕ್ಕೆ ಏರಿದೆ. 2023ರ ರೈನ್‌ಮೈನ್‌ ಕನ್ನಡ ಸಂಘದ ನೂತನ ಪದಾಧಿಕಾರಿಗಳು ಸಂಘದ ಚಟುವಟಿಕೆಯನ್ನು ಚುರುಕುಗೊಳಿಸಿ ಕನ್ನಡ ಕಲಿ ಶ್ರೇಯೋಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡುತ್ತಿರುವುದು ಭಾಷಾಪ್ರೇಮವನ್ನು ಎಲ್ಲರಲ್ಲೂ ಇಮ್ಮಡಿಗೊಳಿಸಿದೆ.

ರೈನ್‌ಮೈನ್‌ ಕನ್ನಡ ಸಂಘದಿಂದ ನಡೆಯುವ ಹಲವು ಕಾರ್ಯಕ್ರಮಗಳಲ್ಲಿ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ನಲ್ಲಿಯೂ ಕನ್ನಡ ಕಲಿಕೆಯ ಬಗೆಗೆ ಜಾಹೀರಾತುಗಳನ್ನು ನೀಡಿ, ಆಸಕ್ತ ಮಕ್ಕಳಿಗೆ ಅಷ್ಟೇ ಅಲ್ಲದೆ ಕನ್ನಡ ಕಲಿಯುವ ಆಸಕ್ತ ಹಿರಿಯರಿಗೂ ಮುಕ್ತ ಅವಕಾಶವನ್ನು ಸೃಷ್ಟಿಸಿದೆ. ಕಲಿಸುವ ಆಸಕ್ತಿ ಉಳ್ಳವರಿಗೂ ಕರೆ ನೀಡಿ ಶಿಕ್ಷಕರ ಸಂಖ್ಯೆಯನ್ನೂ ಹೆಚ್ಚಿಸಿದೆ. ಸ್ವಪ್ರೇರಣೆಯಿಂದ ಕನ್ನಡ ಕಲಿಯ ಮುಂದಾಳತ್ವವನ್ನು ವಹಿಸಿರುವ ಶೋಭಾ ಚೌಹಾØಣ್‌, ಮೈಥಿಲಿ ಇಟಗಿ, ಜಯ ಬೆಳ್ಳಸ್ಕಿ ಮಠ, ಚೈತ್ರ ಮಹಾದೇವ, ವಿನುತ, ಮಧುಸೂಧನ್‌, ಪವನ್‌ ಅವರಿಗೆ ಆರ್‌.ಎಂ.ಕೆ.ಎಸ್‌. ಗೌರವಿಸುತ್ತದೆ.

ಮಕ್ಕಳ ವಯಸ್ಸಿನ ಆಧಾರದ ಮೇಲೆ 10 ಗುಂಪುಗಳಾಗಿ ಮಾಡಿ ಪ್ರತೀ ಶಿಕ್ಷಕರು ಒಂದೊಂದು ಗುಂಪಿನ ಸಂಪೂರ್ಣ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಹೊರದೇಶ (ಯುರೋಪಿಯನ್ನರು) ಹಾಗೂ ಉತ್ತರ ಭಾರತದ ಮೂಲದ ಹಿರಿಯರೂ ಸಹ ಕನ್ನಡ ಕಲಿಯುವ ಅಭೀಪ್ಸೆಯನ್ನು ವ್ಯಕ್ತಪಡಿಸಿದ್ದು ಹಿರಿಯರಿಗಾಗಿ ಒಂದು ಗುಂಪು ಮಾಡಿ ನಮ್ಮ ಭಾಷಾಮೃತದ ಸವಿಯುಣಿಸಲು ಆರ್‌.ಎಂ.ಕೆ.ಎಸ್‌. ಶ್ರಮಿಸುತ್ತಿದೆ.

Advertisement

ಇತ್ತೀಚೆಗೆ ಆರ್‌.ಎಂ.ಕೆ.ಎಸ್‌. ಕನ್ನಡ ಕಲಿಯ ವತಿಯಿಂದ ಮಕ್ಕಳು, ಶಿಕ್ಷಕರೂ ಹಾಗೂ ಪೋಷಕರು ಮುಖಾಮುಖೀ ಭೇಟಿಯಾಗಿ ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳಲು ಹಾಗೂ ಕನ್ನಡ ಕಲಿಯಲ್ಲಿ ಹೊಸತನ ಮತ್ತು ಉನ್ನತಿಗಾಗಿ ಮತ್ತಷ್ಟು ಸಲಹೆಯನ್ನೂ ಪೋಷಕರಿಂದ ಸ್ವೀಕರಿಸುವ ಮತ್ತು ಚರ್ಚೆಯನ್ನು ಏರ್ಪಡಿಸಲಾಗಿತ್ತು.

ಮಕ್ಕಳಿಂದಲೇ ಕನ್ನಡದ ಬಾವುಟ ಹಾಗೂ ಕನ್ನಡ ಕಲಿಯ ಬ್ಯಾಡ್ಜ್ ಅನ್ನು ಮಾಡಿಸಲಾಯಿತು. ಇದಕ್ಕಾಗಿ ತೇಜಸ್ವಿನಿ ಹಾಗೂ ಸುಮತಿಯವರು ಸ್ವಯಂ ಸೇವಕರಾಗಿ ಕನ್ನಡ ಕಲಿಗಾಗಿ ತಮ್ಮ ಸಹಾಯಹಸ್ತ ನೀಡಿದ್ದರು. ಮಕ್ಕಳಿಗಾಗಿ ಹಲವು ಆಟಗಳು, ಕನ್ನಡದ ನಾಲಿಗೆ ನುಲಿಗಳು, ವರ್ಣಮಾಲೆ ಹಾಗೂ ಕನ್ನಡ ಪದಬಳಕೆಗಳ ಆಟಗಳನ್ನು ಆಡಿಸಿದ್ದು ಕಲಿಕೆಯಲ್ಲಿನ ಅವರ ಪ್ರೀತಿಯನ್ನು ಹೆಚ್ಚಿಸಿತು. ಒಟ್ಟು 60 ಜನರನ್ನು ಒಳಗೊಂಡ ಕನ್ನಡ ಕಲಿಯ ಕಾರ್ಯಾಗಾರ ಮತ್ತಷ್ಟು ಇಂತಹ ಯೋಜನೆಗಳನ್ನು ಹಮ್ಮಿಕೊಳ್ಳಲು ಪ್ರೇರೇಪಿಸಿದೆ.

ಅಂತಹ ಕಾರ್ಯಕ್ರಮವನ್ನು ನಡೆಸಲು ಯೋಜನೆ ಮತ್ತು ಪ್ರೇರಣೆ ನೀಡಿ ಕನ್ನಡ ಕಲಿ ಶಿಕ್ಷಕರ ಬೆನ್ನೆಲುಬಾಗಿ ನಿಂತ ಆರ್‌.ಎಂ.ಕೆ.ಎಸ್‌.ನ ಪ್ರಸ್ತುತ ಪದಾಧಿಕಾರಿಗಳಾದ ವೇದ ಕುಮಾರಸ್ವಾಮಿ, ರಿಯಾಜ್‌ ಶಿರಸಂಗಿ, ಅಪೂರ್ವ ಬೆಳೆಯೂರು, ಲೋಕನಾಥ್‌ ರಾವ್‌, ವಿಶ್ವನಾಥ ಬಾಳೆಕಾಯಿ ಹಾಗೂ ಪ್ರದೀಪ್‌ ಶೆಟ್ಟಿ , ಅಕ್ಷಯ್‌ ಅವರ ನಿರಂತರ ಪ್ರೋತ್ಸಾಹ ಕನ್ನಡ ಕಲಿಯ ಅಭಿವೃದ್ಧಿಗೆ ಪೂರಕ. ಆರ್‌.ಎಂ.ಕೆ.ಎಸ್‌. ವತಿಯಿಂದ ನೆರೆದ ಎಲ್ಲ ಮಕ್ಕಳಿಗೂ ಕನ್ನಡದ ಪುಸ್ತಕಗಳನ್ನು ವಿತರಿಸಲಾಯಿತು. ಕಾರ್ಯಕ್ರಮ ಯಶಸ್ವಿಯಾಗಿ ಪೋಷಕರ ಮೆಚ್ಚುಗೆಯೊಂದಿಗೆ ಮುಕ್ತಾಯವಾಯಿತು. ವಿದ್ಯಾರ್ಜನೆ ಸ್ಪರ್ಧೆಯಲ್ಲಿ ಅದು ಹಸಿವು ಇದಕ್ಕಾಗಿ ನೀಡಬೇಕಾದ್ದು ನೆರವು. ನೆರವಾಗಿರುವ ಇಂತಹ ಎಲ್ಲ ಕನ್ನಡ ಮನಸ್ಸುಗಳಿಗೊಂದು ಸಲಾಂ.

*ಶೋಭಾ ಚೌಹ್ಹಾಣ್, ಫ್ರಾಂಕ್‌ಫ‌ರ್ಟ್‌

Advertisement

Udayavani is now on Telegram. Click here to join our channel and stay updated with the latest news.

Next