ಮಣಿಪಾಲ/ಬೆಂಗಳೂರು: “ಕ್ಯಾರ್’ ಚಂಡಮಾರುತದ ಪ್ರಭಾವ ಮರೆಯಾಗಿ ಜನ ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವಂತೆಯೇ ಕೊಮೊರಿನ್ ಮತ್ತು ಹಿಂದೂ ಮಹಾಸಾಗರದ ಆಸುಪಾಸಿನ ಭಾಗದಲ್ಲಿ ರೂಪುಗೊಂಡಿರುವ ನಿಮ್ನ ಒತ್ತಡ ಮತ್ತೆ ಮಳೆಯನ್ನು ತರುವುದೇ ಎಂಬ ಕಳವಳ ಉಂಟು ಮಾಡಿದೆ. ಈ ನಿಮ್ನ ಒತ್ತಡವು ಅ.30 ಮತ್ತು 31ರ ಹೊತ್ತಿಗೆ ಲಕ್ಷದ್ವೀಪ – ಮಾಲ್ಡೀವ್ಸ್ ಸಮೀಪದಲ್ಲಿ ವಾಯುಭಾರ ಕುಸಿತವಾಗಿ ಪರಿವರ್ತನೆ ಹೊಂದುವ ಸಾಧ್ಯತೆ ಇದೆ.
ಈ ವಾಯುಭಾರ ಕುಸಿತದ ಪ್ರಭಾವದಿಂದ ತಮಿಳುನಾಡು, ಕೇರಳ, ಲಕ್ಷದ್ವೀಪ ಮತ್ತು ಕರ್ನಾಟಕದಲ್ಲಿ ಅ.31ರ ವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ 24 ತಾಸುಗಳಲ್ಲಿ ಕರಾವಳಿಯಲ್ಲಿ 45-55 ಕಿ.ಮೀ. ವೇಗದಲ್ಲಿ ಬಿರುಸಿನ ಗಾಳಿ ಬೀಸುವ ಸಾಧ್ಯತೆ ಹಿನ್ನೆಲೆಯಲ್ಲಿ ಮೀನುಗಾರರು ಜಾಗ್ರತೆ ಪಾಲಿಸಬೇಕು, ಸಮುದ್ರಕ್ಕೆ ತೆರಳಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ದೂರಕ್ಕೆ ಚಲಿಸಿದ “ಕ್ಯಾರ್’: ಇದೇ ವೇಳೆ, “ಕ್ಯಾರ್’ ಚಂಡಮಾರುತ ದೇಶದ ಕರಾವಳಿಯಿಂದ ಮತ್ತಷ್ಟು ದೂರಕ್ಕೆ ಚಲಿಸಿದ್ದು, ಮಂಗಳವಾರ ಒಮಾನ್ ಕರಾವಳಿಯ ಸನಿಹ ತಲುಪಿದೆ. ಅದು ಇನ್ನೂ ಮುಂದಕ್ಕೆ ಚಲಿಸಿ, ಮುಂದಿನ ಮೂರು ದಿನಗಳಲ್ಲಿ ಒಮಾನ್-ಯೆಮನ್ ಕರಾವಳಿಯ ಆಡೆನ್ ಕೊಲ್ಲಿಯತ್ತ ಚಲಿಸಲಿದೆ. ಬಳಿಕ, ಅದು ನಿಧಾನವಾಗಿ ದುರ್ಬಲಗೊಳ್ಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಡೂರು, ಆಗುಂಬೆಯಲ್ಲಿ 3 ಸೆಂ. ಮೀ.ಮಳೆ: ಈ ಮಧ್ಯೆ, ಮಂಗಳವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ರಾಜ್ಯದ ಕರಾವಳಿಯ ಕೆಲವೆಡೆ ಮತ್ತು ಒಳನಾಡಿನ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯಾಯಿತು. ಕಡೂರು, ಆಗುಂಬೆಯಲ್ಲಿ ರಾಜ್ಯದ ಲ್ಲಿಯೇ ಅಧಿಕ, 3 ಸೆಂ.ಮೀ.ಮಳೆ ಸುರಿಯಿತು. ಕಾರವಾರ ದಲ್ಲಿ ರಾಜ್ಯದಲ್ಲಿಯೇ ಗರಿಷ್ಠ 35.8 ಡಿ.ಸೆ.ಮತ್ತು ಚಾಮರಾಜ ನಗರದಲ್ಲಿ ಕನಿಷ್ಠ 18.2 ಡಿ.ಸೆ.ತಾಪಮಾನ ದಾಖಲಾಯಿತು.