Advertisement

31ರವರೆಗೆ ಮಳೆ ಸಾಧ್ಯತೆ

10:33 PM Oct 29, 2019 | Lakshmi GovindaRaju |

ಮಣಿಪಾಲ/ಬೆಂಗಳೂರು: “ಕ್ಯಾರ್‌’ ಚಂಡಮಾರುತದ ಪ್ರಭಾವ ಮರೆಯಾಗಿ ಜನ ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವಂತೆಯೇ ಕೊಮೊರಿನ್‌ ಮತ್ತು ಹಿಂದೂ ಮಹಾಸಾಗರದ ಆಸುಪಾಸಿನ ಭಾಗದಲ್ಲಿ ರೂಪುಗೊಂಡಿರುವ ನಿಮ್ನ ಒತ್ತಡ ಮತ್ತೆ ಮಳೆಯನ್ನು ತರುವುದೇ ಎಂಬ ಕಳವಳ ಉಂಟು ಮಾಡಿದೆ. ಈ ನಿಮ್ನ ಒತ್ತಡವು ಅ.30 ಮತ್ತು 31ರ ಹೊತ್ತಿಗೆ ಲಕ್ಷದ್ವೀಪ – ಮಾಲ್ಡೀವ್ಸ್‌ ಸಮೀಪದಲ್ಲಿ ವಾಯುಭಾರ ಕುಸಿತವಾಗಿ ಪರಿವರ್ತನೆ ಹೊಂದುವ ಸಾಧ್ಯತೆ ಇದೆ.

Advertisement

ಈ ವಾಯುಭಾರ ಕುಸಿತದ ಪ್ರಭಾವದಿಂದ ತಮಿಳುನಾಡು, ಕೇರಳ, ಲಕ್ಷದ್ವೀಪ ಮತ್ತು ಕರ್ನಾಟಕದಲ್ಲಿ ಅ.31ರ ವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ 24 ತಾಸುಗಳಲ್ಲಿ ಕರಾವಳಿಯಲ್ಲಿ 45-55 ಕಿ.ಮೀ. ವೇಗದಲ್ಲಿ ಬಿರುಸಿನ ಗಾಳಿ ಬೀಸುವ ಸಾಧ್ಯತೆ ಹಿನ್ನೆಲೆಯಲ್ಲಿ ಮೀನುಗಾರರು ಜಾಗ್ರತೆ ಪಾಲಿಸಬೇಕು, ಸಮುದ್ರಕ್ಕೆ ತೆರಳಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ದೂರಕ್ಕೆ ಚಲಿಸಿದ “ಕ್ಯಾರ್‌’: ಇದೇ ವೇಳೆ, “ಕ್ಯಾರ್‌’ ಚಂಡಮಾರುತ ದೇಶದ ಕರಾವಳಿಯಿಂದ ಮತ್ತಷ್ಟು ದೂರಕ್ಕೆ ಚಲಿಸಿದ್ದು, ಮಂಗಳವಾರ ಒಮಾನ್‌ ಕರಾವಳಿಯ ಸನಿಹ ತಲುಪಿದೆ. ಅದು ಇನ್ನೂ ಮುಂದಕ್ಕೆ ಚಲಿಸಿ, ಮುಂದಿನ ಮೂರು ದಿನಗಳಲ್ಲಿ ಒಮಾನ್‌-ಯೆಮನ್‌ ಕರಾವಳಿಯ ಆಡೆನ್‌ ಕೊಲ್ಲಿಯತ್ತ ಚಲಿಸಲಿದೆ. ಬಳಿಕ, ಅದು ನಿಧಾನವಾಗಿ ದುರ್ಬಲಗೊಳ್ಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಡೂರು, ಆಗುಂಬೆಯಲ್ಲಿ 3 ಸೆಂ. ಮೀ.ಮಳೆ: ಈ ಮಧ್ಯೆ, ಮಂಗಳವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ರಾಜ್ಯದ ಕರಾವಳಿಯ ಕೆಲವೆಡೆ ಮತ್ತು ಒಳನಾಡಿನ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯಾಯಿತು. ಕಡೂರು, ಆಗುಂಬೆಯಲ್ಲಿ ರಾಜ್ಯದ ಲ್ಲಿಯೇ ಅಧಿಕ, 3 ಸೆಂ.ಮೀ.ಮಳೆ ಸುರಿಯಿತು. ಕಾರವಾರ ದಲ್ಲಿ ರಾಜ್ಯದಲ್ಲಿಯೇ ಗರಿಷ್ಠ 35.8 ಡಿ.ಸೆ.ಮತ್ತು ಚಾಮರಾಜ ನಗರದಲ್ಲಿ ಕನಿಷ್ಠ 18.2 ಡಿ.ಸೆ.ತಾಪಮಾನ ದಾಖಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next