Advertisement

ಮನೆ ಮನೆಯಲ್ಲಿ ಮಳೆ ಕೊಯ್ಲು ಚುರುಕು

12:01 AM Jul 24, 2019 | sudhir |

ಉಡುಪಿ: ಉದಯವಾಣಿ ಪತ್ರಿಕೆ ನಡೆಸುತ್ತಿರುವ ಜಲಸಾಕ್ಷರ ಅಭಿಯಾನದಿಂದ ಪ್ರೇರಣೆಗೊಂಡು ಜಿಲ್ಲೆಯಾದ್ಯಂತ ಮಳೆಕೊಯ್ಲುಗೆ ಹಲವು ಮಂದಿ ಮನಸ್ಸು ಮಾಡುತ್ತಿದ್ದಾರೆ. ಕೆಲವು ಮಂದಿ ಈಗಾಗಲೇ ಈ ಕೆಲಸ ಪೂರ್ಣಗೊಳಿಸಿದ್ದು, ಇನ್ನು ಕೆಲವರು ಇದನ್ನು ಕಾರ್ಯಗತಗೊಳಿಸಲು ಪಣ ತೊಡುತ್ತಿದ್ದಾರೆ. ಇದಕ್ಕೆ ಯುವಕರ ತಂಡವೊಂದು ಮಾಡಿದ ಕಾರ್ಯವೈಖರಿ ಹೀಗಿದೆ…

Advertisement

ಪ್ರಗತಿ ನಗರದಿಂದ ಕರ್ವಾಲೊ ಕಡೆ ನೀರಿನ ಝರಿಗಳು ಹರಿಯುತ್ತಿದ್ದವು. ಮಳೆ ನೀರು ಇದರೊಂದಿಗೆ ಸೇರಿ ನದಿಗೆ ಸೇರುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯ ಶ್ರೀಕಾಂತ್‌ ನಾಯಕ್‌, ರೋಹಿತ್‌ ಪ್ರಭು, ರಕ್ಷಿತ್‌ ಪ್ರಭು, ಕುಲ್ದೀಪ್‌ ನಾಯಕ್‌, ಸಂಜು ಪ್ರಗತಿನಗರ, ಮುತ್ತ ಪ್ರಗತಿನಗರ, ಕೃಷ್ಣ ಪ್ರಗತಿನಗರ ಅವರು ಹರಿಯುವ ನೀರನ್ನು ಕೆಂಪುಕಲ್ಲು, ಮಣ್ಣು ಹಾಕಿ ತಡೆದು ಪಕ್ಕದಲ್ಲಿದ್ದ ಗ್ರಾ.ಪಂ.ನ ಸುಮಾರು 1.5 ಎಕರೆಯಷ್ಟು ಖಾಲಿ ಜಾಗಕ್ಕೆ ಆ ನೀರನ್ನು ಹರಿಯಬಿಟ್ಟರು. ಪರಿಣಾಮ ಈಗ ಮುಕ್ಕಾಲು ಅಂಶದಷ್ಟು ನೀರು ಶೇಖರಣೆಯಾಗಿದೆ. ಈ ಕೆಲಸಕ್ಕೆ ಕೇವಲ 2.5 ತಾಸು ಸಮಯ ವ್ಯಯವಾಗಿದೆ ಎನ್ನುತ್ತಾರೆ ತಂಡದ ಸದಸ್ಯರು. ಈ ಭಾಗದ 200-300 ಮೀಟರ್‌ ವ್ಯಾಪ್ತಿಯಲ್ಲಿ ಸುಮಾರು 125 ಮನೆಗಳಿದ್ದು, ಬೇಸಗೆಯಲ್ಲಿ ನೀರಿನ ಒರತೆ ಮತ್ತಷ್ಟು ಹೆಚ್ಚಾಗಲಿದೆ ಎಂಬುದು ಇವರ ಆಶಯ. ಈ ಭಾಗದಲ್ಲಿ ಕಳೆದ ಬೇಸಗೆಯಲ್ಲಿ ತುಂಬಾ ನೀರಿನ ಸಮಸ್ಯೆ ಇತ್ತು.

ಬೇಕಿದೆ ಮತ್ತಷ್ಟು ಜಾಗೃತಿ

ಇಂತಹ ಕೆಲಸಕಾರ್ಯಗಳನ್ನು ಮಾಡುವ ಯುವಕರಿಗೆ ಮತ್ತಷ್ಟು ಹುರುಪು ತುಂಬುವ ಕೆಲಸ ಸಂಘ-ಸಂಸ್ಥೆ, ಪಂಚಾಯತ್‌, ಜಿಲ್ಲಾಡಳಿದ ವತಿಯಿಂದ ಆಗಬೇಕಿದೆ. ಮಾರ್ಗದರ್ಶನವೂ ಅಗತ್ಯವಿದೆ. ಆಯಾ ಪ್ರದೇಶದ ಯುವಕ ಮಂಡಲಗಳು ಇಂತಹ ಕಾರ್ಯಗಳಲ್ಲಿ ಕೈ ಜೋಡಿಸಿದಲ್ಲಿ ಹರಿಯುವ ನೀರು ನಿಲ್ಲಲು ಸಾಧ್ಯ.

ಅಂತರ್ಜಲ ವೃದ್ಧಿಸಲು ಹೀಗೆ ಮಾಡಿ

Advertisement

– ಇಂಗು ಕೊಳಗಳು

ಇವುಗಳು ಹೆಚ್ಚು ಆಳವಿಲ್ಲದ ತಗ್ಗುಗಳಾಗಿದ್ದು, ಪ್ರಾಕೃತಿಕವಾಗಿ ಹರಿದು ಹೋಗುವ ನೀರಿಗೆ ಎಲ್ಲಿ ಬೇಕಾದರೂ ನಿರ್ಮಿಸಬಹುದು. ಭೌಗೋಳಿಕವಾಗಿ ಸಮತಟ್ಟು ಅಥವಾ ಕಿರು ಇಳಿಜಾರು ಪ್ರದೇಶದಲ್ಲಿ ಇಂಗು ಕೊಳಗಳನ್ನು ನಿರ್ಮಿಸಬಹುದು.

– ಕೊಳವೆ ಬಾವಿಗಳ ಮರುಪೂರಣ

ಒಂದು ಕೊಳವೆ ಬಾವಿಗೆ ಜಲ ಮರುಪೂರಣ ಮಾಡುವ ಸಂದರ್ಭದಲ್ಲಿ, ಆ ಕೊಳವೆ ಬಾವಿ ಕೊರೆಯುವ ಸಂದರ್ಭದಲ್ಲಿ ಬಂದಿರುವ ಕಲ್ಲಿನ ಪದರಗಳ ವಿವರ, ಬೋರ್ವೆಲ್ ಕೊರೆಯುವ ಆಳ ಕೇಸಿಂಗ್‌ ಪೈಪಿನ ವಿವರ ಇತ್ಯಾದಿ ಗಮನದಲ್ಲಿಟ್ಟುಕೊಂಡು ಇಂಗು ಗುಂಡಿ ನಿರ್ಮಿಸಬೇಕಾಗುತ್ತದೆ.

– ತೊರೆ ಕಾಲುವೆ ಮೂಲಕ ಇಂಗು ಗುಂಡಿ ವಿಧಾನ

ನೀರು ಇಂಗುವಂತೆ ಮಾಡಲು ನೀರು ಶೇಖರಣಾ ಸ್ಥಳದ ವಿಸ್ತೀರ್ಣ ಹಾಗೂ ನೀರು ನಿಲ್ಲುವ ಕಾಲಮಿತಿ ಹೆಚ್ಚಾಗಿರಬೇಕಾಗುತ್ತದೆ. ಈ ವಿಧಾನವನ್ನು ಅಳವಡಿಸಿದ ಪ್ರದೇಶದ ಮೇಲು ಹರಿವಿನಲ್ಲಿ ನೀರು ಶೇಖರಣಾ ವ್ಯವಸ್ಥೆಯಿದ್ದಲ್ಲಿ ತೊರೆಗಳ ಮೂಲಕ ನೀರು ನಿರಂತರವಾಗಿ ಹರಿದು ಬರುತ್ತಿದ್ದು ಇಂಗುವಿಕೆಗೆ ಸಹಕಾರಿಯಾಗುತ್ತದೆ.

– ಉಸುಕಿನ ಚೀಲದ ತಡೆ

ಇವುಗಳು ಸುಭದ್ರ ತಡೆಗಳಂತಿರುತ್ತದೆ. ಇವುಗಳಲ್ಲಿ ಖಾಲಿ ಇರುವ ಸಿಮೆಂಟ್/ಗೊಬ್ಬರದ ಚೀಲಗಳಲ್ಲಿ ಮರಳನ್ನು ತುಂಬಿ ಇಳಿಜಾರಿಗೆ ಅಡ್ಡಲಾಗಿ ಇಡಲಾಗುತ್ತದೆ. ಇವುಗಳ ಉದ್ದೇಶ ಭೂಸವಕಳಿಯ ವೇಗವನ್ನು ತಡೆದು ನೀರು ಭೂಮಿಯಲ್ಲಿ ಇಂಗುವಂತೆ ಮಾಡುವುದು ಹಾಗೂ ಮಹಾಪೂರದಂತಹ ವಿಕೋಪವನ್ನು ತಡೆಯುವುದಾಗಿದೆ.

ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸಲು ಮುಂದಾಗಿದ್ದಾರೆ. ಜತೆಗೆ ತಮ್ಮ ಖುಷಿಯನ್ನು ಉಳಿದವರೊಂದಿಗೂ ಹಂಚಿಕೊಳ್ಳುತ್ತಿದ್ದಾರೆ. ಹೀಗಿರುವಾಗ, ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆಗಳಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್‌ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ.

Advertisement

Udayavani is now on Telegram. Click here to join our channel and stay updated with the latest news.

Next