Advertisement

ಮಳೆ ಮುಂಜಾಗ್ರತೆ: ಮಾಂದಲಪಟ್ಟಿಗೆ ಪ್ರವೇಶ ನಿಷೇಧ

01:07 AM Jul 25, 2019 | sudhir |

ಮಡಿಕೇರಿ: ಪ್ರಸಿದ್ಧ ಪ್ರವಾಸಿತಾಣ ಮಾಂದಲಪಟ್ಟಿಗೆ ತೆರಳುವ ರಸ್ತೆಯಲ್ಲಿ ಮಳೆಯಿಂದ ಹಾನಿಯಾಗಿರುವ ಹಿನ್ನೆಲೆ ಪ್ರವಾಸಿಗರ ಪ್ರವೇಶವನ್ನು ಆಗಸ್ಟ್‌ ತಿಂಗಳ ಅಂತ್ಯದವರೆಗೆ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

Advertisement

ಮಾಂದಲಪಟ್ಟಿ ಭಾಗದಲ್ಲಿ ಮಳೆಯಿಂದ ಭೂಕುಸಿತ ವಾಗುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಜಿಲ್ಲಾಡಳಿತ ತಾಂತ್ರಿಕ ಸಮಿತಿಯೊಂದನ್ನು ರಚಿಸಿ ವರದಿ ನೀಡಿರುವ ಹಿನ್ನೆಲೆ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ಈ ಕ್ರಮ ಕೈಗೊಂಡಿದ್ದಾರೆ.

ಮಾಂದಲಪಟ್ಟಿಗೆ ತೆರಳುವ ರಸ್ತೆಯ ಹಲವು ಭಾಗಗಳಲ್ಲಿ ಭೂಕುಸಿತ ಸಂಭವಿಸುತ್ತಿದ್ದು, ತೆರವುಗೊಳಿಸುತ್ತಿದ್ದರೂ ಕುಸಿತ ಮರುಕಳಿಸುತ್ತಿದೆ. ರಸ್ತೆಯು ಹಳ್ಳ ದಿಣ್ಣೆಗಳಿಂದ ಕೂಡಿದ್ದು, ರಸ್ತೆಯ ಮತ್ತೂಂದು ಬದಿಯಲ್ಲಿ ಆಳ ಪ್ರದೇಶ ಹಾಗೂ ತೋಟಗಳಿವೆ. ಹೆಚ್ಚಿನ ಮಳೆಯಾದರೆ ರಸ್ತೆ ಬದಿಯ ಗುಡ್ಡ ಕುಸಿಯುವ ಸಾಧ್ಯತೆಗಳು ಹೆಚ್ಚಿರುವುದರಿಂದ ಮುಂಜಾಗ್ರತಾ ಕ್ರಮ ಅನಿವಾರ್ಯವಾಗಿದೆ.

ಪ್ರವಾಸಿಗರ ಸುರಕ್ಷತೆಯ ಹಿತದೃಷ್ಟಿಯಿಂದ ಆಗಸ್ಟ್‌ ಅಂತ್ಯದವರೆಗೆ ಪ್ರವಾಸಿಗರ ಪ್ರವೇಶವನ್ನು ನಿಷೇಧ ಮಾಡುವುದು ಸೂಕ್ತ ಎಂದು ತಾಂತ್ರಿಕ ಸಮಿತಿಯು ವರದಿ ಸಲ್ಲಿಸಿದೆ. ಆದ್ದರಿಂದ ಮಡಿಕೇರಿ ತಾಲ್ಲೂಕಿನ ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ಹೆಬ್ಬೆಟ್ಟಗೇರಿ – ದೇವಸ್ತೂರು-ಕಾಲೂರು-ಮಾಂದಲಪಟ್ಟಿ ರಸ್ತೆ ಹಾಗೂ ದೇವಸ್ತೂರು-ಮಾಂದಲಪಟ್ಟಿ ಈ ಎರಡೂ ರಸ್ತೆಗಳ ಮೂಲಕ ಮಾಂದಲಪಟ್ಟಿ ಪ್ರವಾಸಿತಾಣಕ್ಕೆ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next