Advertisement

ಮಳೆ ಎಫೆಕ್ಟ್ : 384 ಸರ್ಕಾರಿ ಕಟ್ಟಡಗಳಿಗೆ ಹಾನಿ

03:44 PM Jul 22, 2022 | Team Udayavani |

ದಾವಣಗೆರೆ: ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಅಬ್ಬರದ ಮಳೆಗೆ ಈವರೆಗೆ ಒಟ್ಟು 384 ಸರ್ಕಾರಿ ಕಟ್ಟಡಗಳು ಹಾನಿಗೆ ಒಳಗಾಗಿವೆ.

Advertisement

ಕಳೆದ ಕೆಲವೇ ದಿನಗಳ ಹಿಂದೆ ಜಿಲ್ಲೆಯಲ್ಲಿ ಮಳೆಯ ಸುಳಿವೇ ಇರಲಿಲ್ಲ. ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಕಟ್ಟಡಗಳು, ಕೆರೆ, ರಸ್ತೆಗಳು ಎಲ್ಲವೂ ಹಾನಿಗೀಡಾಗಿವೆ. ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿರುವ ಮಿನಿ ವಿಧಾನಸೌಧಗಳಲ್ಲಿ ಬಹುತೇಕ ಸರ್ಕಾರಿ ಇಲಾಖಾ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ಸಮಾಜಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆಗಳಡಿಯಲ್ಲಿ ನಡೆಯುವ ಹಾಸ್ಟೆಲ್‌ಗ‌ಳ ಪೈಕಿ ಬಹುತೇಕ ಸ್ವಂತ ಕಟ್ಟಡ ಹೊಂದಿವೆ. ಹಾಗಾಗಿ ಮಳೆಯಿಂದ ತೊಂದರೆಗೀಡಾದ ಪ್ರಕರಣ ಅಷ್ಟಾಗಿ ಕಂಡುಬಂದಿಲ್ಲ.

ಭಾರೀ ಮಳೆಯಿಂದಾಗಿ ದಾವಣಗೆರೆ ತಾಲೂಕಿನಲ್ಲಿ 95, ಹರಿಹರದಲ್ಲಿ 40, ಹೊನ್ನಾಳಿಯಲ್ಲಿ 89, ಚನ್ನಗಿರಿಯಲ್ಲಿ 72 ಹಾಗೂ ಜಗಳೂರಿನಲ್ಲಿ 50 ಸೇರಿದಂತೆ 346 ಶಾಲೆ, ಹರಿಹರದಲ್ಲಿ 5, ಜಗಳೂರಿನಲ್ಲಿ ಮೂರು ಪ್ರಾಥಮಿಕ ಆರೋಗ್ಯ ಕೇಂದ್ರ, ದಾವಣಗೆರೆಯಲ್ಲಿ 7, ಚನ್ನಗಿರಿಯಲ್ಲಿ 4, ಜಗಳೂರಿನಲ್ಲಿ 19 ಇತರೆ ಸರ್ಕಾರಿ ಕಟ್ಟಡಗಳು ಹಾನಿಗೊಳಗಾಗಿವೆ. ಒಟ್ಟಾರೆ 384 ಸರ್ಕಾರಿ ಕಟ್ಟಡಗಳು ಹಾನಿಗೊಳಗಾಗಿವೆ.

ಶಾಲಾ ಕಟ್ಟಡಗಳೇ ಜಾಸ್ತಿ: ಜಿಲ್ಲೆಯಲ್ಲಿ ವ್ಯಾಪಕವಾಗಿ ಆಗುತ್ತಿರುವ ಮಳೆಯಿಂದ ಹಾನಿಗೆ ಒಳಗಾಗಿರುವ ಮತ್ತು ಸಣ್ಣ, ದೊಡ್ಡ ದುರಸ್ತಿಗೆ ಬಂದಿರುವ ಸರ್ಕಾರಿ ಕಟ್ಟಡಗಳಲ್ಲಿ ಶಾಲಾ ಕೊಠಡಿಗಳದ್ದೇ ಸಿಂಹಪಾಲು. 346 ಶಾಲೆಗಳ ದುರಸ್ತಿ ಕಾರ್ಯ ಆಗಬೇಕಿದೆ. ಚನ್ನಗಿರಿ ತಾಲೂಕಿನಲ್ಲಿ ಕೆಲವು ಕಡೆ ಕಟ್ಟಡದ ಕೊರತೆಯಿಂದಾಗಿ ಬಯಲೇ ಶಾಲೆಯಂತಾಗಿದೆ. ಜಿಲ್ಲೆಯಲ್ಲಿ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಸಂಭವಿಸುವ ಸಾಧ್ಯತೆಯನ್ನ ಅಲ್ಲಗೆಳೆಯುವಂತಿಲ್ಲ. ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಅದರಲ್ಲೂ “ಅರೆ ಮಲೆನಾಡು’ ಖ್ಯಾತಿ ಮತ್ತು ಹಿಂದುಳಿದ ಪ್ರದೇಶದ ಜಗಳೂರು ತಾಲೂಕಿನಲ್ಲಿ ಹೆಚ್ಚಾಗಬಹುದು ಎಂಬ ನಿರೀಕ್ಷೆಯೂ ಇದೆ.

ಮಳೆಗೂ ಮುನ್ನವೇ ಚನ್ನಗಿರಿ ತಾಲೂಕಿನಲ್ಲಿ 86 ಕೊಠಡಿಗಳು, ದಾವಣಗೆರೆ ಉತ್ತರದಲ್ಲಿ 43, ದಾವಣಗೆರೆ ದಕ್ಷಿಣದಲ್ಲಿ 93, ಹರಿಹರದಲ್ಲಿ 40, ಹೊನ್ನಾಳಿ ಮತ್ತು ನ್ಯಾಮತಿಯಲ್ಲಿ 117, ಜಗಳೂರಿನಲ್ಲಿ 31 ಕೊಠಡಿಗಳು ದುರಸ್ತಿಗೆ ಬಂದಿದ್ದವು. ಮಳೆ ಗಾಯದ ಮೇಲೆ ಉಪ್ಪು ಸುರಿದಂತೆ ಇನ್ನಷ್ಟು ಹಾನಿಗೆ ಕಾರಣವಾಗುತ್ತಿದೆ. ಚನ್ನಗಿರಿ ತಾಲೂಕಿನಲ್ಲಿ 86 ಕೊಠಡಿಗಳ ದುರಸ್ತಿಗೆ 118.5ಲಕ್ಷ, ದಾವಣಗೆರೆ ಉತ್ತರದಲ್ಲಿ 43 ಕೊಠಡಿಗಳಿಗೆ 52 ಲಕ್ಷ, ದಾವಣಗೆರೆ ದಕ್ಷಿಣದಲ್ಲಿ 93 ಕೊಠಡಿಗಳಿಗೆ 177 ಲಕ್ಷ, ಹರಿಹರದಲ್ಲಿ 40 ಕೊಠಡಿಗಳಿಗೆ 96.25 ಲಕ್ಷ, ಹೊನ್ನಾಳಿ ಮತ್ತು ನ್ಯಾಮತಿಯಲ್ಲಿ 117 ಕೊಠಡಿಗಳಿಗೆ 232 ಲಕ್ಷ, ಜಗಳೂರಿನಲ್ಲಿ 31 ಕೊಠಡಿಗಳಿಗೆ 75.5 ಲಕ್ಷ ಒಟ್ಟು 751.25 ಲಕ್ಷ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಈವರೆಗೆ ಅನುದಾನ ಬಂದಿಲ್ಲ. ಹಾಗಾಗಿ ಶಾಲಾ ಕೊಠಡಿಗಳು ದುರಸ್ತಿ ಭಾಗ್ಯದಿಂದ ದೂರ ಉಳಿದಿವೆ. ಮಕ್ಕಳು ಇರುವ ಸೌಲಭ್ಯದಲ್ಲೇ ಪಾಠ ಕಲಿಯುವ ಅನಿವಾರ್ಯತೆ ಇದೆ.

Advertisement

ರಾಜ್ಯ ಸರ್ಕಾರ ಆದಷ್ಟು ಬೇಗ ಅನುದಾನ ಒದಗಿಸಿದಲ್ಲಿ ಸರ್ಕಾರಿ ಕಟ್ಟಡಗಳು ಮುಖ್ಯವಾಗಿ ಶಾಲೆಗಳು ದುರಸ್ತಿ ಆಗಲಿವೆ. ಮಕ್ಕಳು ನಿರ್ಭೀತಿಯಿಂದ ಕಲಿಯುವ ವಾತಾವರಣವೂ ನಿರ್ಮಾಣ ಆಗಲಿದೆ. ಆದಷ್ಟು ಬೇಗ ಅನುದಾನ ಬಿಡುಗಡೆ ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯ. ಮಳೆ ಮತ್ತು ಮತ್ತಿತರ ಕಾರಣಗಳಿಂದ ಶಾಲಾ ಕೊಠಡಿಗಳು ದುರಸ್ತಿಗೆ ಬಂದಿವೆ. ದುರಸ್ತಿ ಕಾರ್ಯಕ್ಕೆ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದ್ದು ಅನುದಾನ ನಿರೀಕ್ಷೆಯಲ್ಲಿದ್ದೇವೆ. ಅನುದಾನ ದೊರೆತ ನಂತರ ದುರಸ್ತಿ ಕಾರ್ಯ ಪ್ರಾರಂಭವಾಗಲಿದೆ. ∙ ಜಿ.ಆರ್‌. ತಿಪ್ಪೇಶಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ

-ರಾ. ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next