ದುಬೈ: ಭಾರತದ ಬಹುತೇಕ ರಾಜ್ಯಗಳಲ್ಲಿ ಬಿಸಿಲ ಬೇಗೆ ತಾಂಡವಾಡುತ್ತಿದ್ದರೆ, ಮತ್ತೊಂದೆಡೆ ಮಧ್ಯ ಏಷ್ಯಾದ ಆರ್ಥಿಕ ಕೇಂದ್ರವಾದ ದುಬೈ ಧಾರಾಕಾರ ಮಳೆಗೆ ತತ್ತರಿಸಿ ಹೋಗಿದ್ದು, ಮರಳುಗಾಡು ದೇಶ ಇದೀಗ ಪ್ರವಾಹದಿಂದ ಕಂಗೆಟ್ಟು ಹೋಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Angry Rantman: 27ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಜನಪ್ರಿಯ ಯೂಟ್ಯೂಬರ್; ನೆಟ್ಟಿಗರು ಶಾಕ್
ದಾಖಲೆ ಪ್ರಮಾಣದ ಮಳೆಯಿಂದಾಗಿ ಹಲವಾರು ವಿಮಾನ ಸಂಚಾರ ವಿಳಂಬವಾಗಿದ್ದು, ಕಾರುಗಳು ರಸ್ತೆಯಲ್ಲೇ ನಿಂತಿರುವ ದೃಶ್ಯಗಳು ಮಾಧ್ಯಮದಲ್ಲಿ ಪ್ರಸಾರವಾಗಿದೆ.
ತುರ್ತು ಕೆಲಸ ಹೊರತುಪಡಿಸಿ ಅನಗತ್ಯವಾಗಿ ಯಾರೂ ಕೂಡಾ ದುಬೈ ವಿಮಾನ ನಿಲ್ದಾಣಕ್ಕೆ ಆಗಮಿಸಬಾರದು ಎಂದು ಅಧಿಕಾರಿಗಳು ಪ್ರಯಾಣಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಬಹುತೇಕ ವಿಮಾನಗಳು ವಿಳಂಬವಾಗಿದ್ದು, ಹಲವು ವಿಮಾನಗಳು ದುಬೈ ವಿಮಾನ ನಿಲ್ದಾಣಕ್ಕೆ ಬಂದಿಳಿಯದೇ, ಬೇರೆಡೆ ತೆರಳಿರುವುದಾಗಿ ವರದಿ ವಿವರಿಸಿದೆ.
28 ಭಾರತೀಯ ವಿಮಾನ ಯಾನವನ್ನು ರದ್ದುಗೊಳಿಸಲಾಗಿದೆ. ಪ್ರಯಾಣಿಕರು ದುಬೈನ ಹವಾಮಾನದ ಸ್ಥಿತಿಗತಿಯನ್ನು ಪರಿಶೀಲಿಸಿ ಪ್ರಯಾಣ ನಿಗದಿಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ದುಬೈನಲ್ಲಿರುವ ಪ್ರತಿಷ್ಠಿತ ಮಾಲ್ ಗಳು, ಮೆಟ್ರೋ ನಿಲ್ದಾಣಗಳು ನೀರಿನಿಂದ ಜಲಾವೃತಗೊಂಡಿದ್ದು, ಟ್ರಾಫಿಕ್ ಜಾಮ್ ಸಂಭವಿಸಿದಂತೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದುಬೈನಲ್ಲಿ ಧಾರಾಕಾರ ಮಳೆಯ ಪರಿಣಾಮ ನೆರೆಯ ಬಹ್ರೈನ್ ನಲ್ಲಿಯೂ ಪ್ರವಾಹ ಪರಿಸ್ಥಿತಿ ತಲೆದೋರಿರುವುದಾಗಿ ವರದಿ ತಿಳಿಸಿದೆ. ದುಬೈನಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಸಾರಲಾಗಿದೆ. ಪ್ರವಾಹ ಪರಿಸ್ಥಿತಿ ಇರುವ ಸ್ಥಳಗಳಲ್ಲಿ ಜನರು ಓಡಾಡದಂತೆ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.