Advertisement

ವೇಮನ ವಚನಗಳು ಬದುಕಿಗೆ ಮಾರ್ಗದರ್ಶಿ

01:20 PM Jan 20, 2020 | Naveen |

ರಾಯಚೂರು: ಸಮಾಜ ಸುಧಾರಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಅನೇಕ ಮಹಾಮಹಿಮರಲ್ಲಿ ಮಹಾಯೋಗಿ ಶ್ರೀ ವೇಮನರು ಕೂಡ ಒಬ್ಬರು. ಸಮಾಜಕ್ಕಾಗಿ ಅವರು ಮಾಡಿದ ಶ್ರಮ ಎಂದಿಗೂ ಮರೆಯಬಾರದು ಎಂದು ಕಲಬುರಗಿ ಲೇಖಕ ಮಹಿಪಾಲರೆಡ್ಡಿ ತಿಳಿಸಿದರು.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ರವಿವಾರ ನಗರದ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಹಾಯೋಗಿ ವೇಮನ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಮಹಾಯೋಗಿ ಶ್ರೀ ವೇಮನರನ್ನು ಒಂದೇ ಸಮುದಾಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಅವರು ಇಡೀ ಮನುಕುಲಕ್ಕೆ ಒಳಿತು ಮಾಡಿದ ಮಹಾನುಭಾವರು ಎಂದರು.

ವೇಮನ ಅವರು ತೆಲುಗು ಭಾಷೆಯಲ್ಲಿ 15 ಸಾವಿರಕ್ಕೂ ಅಧಿಕ ಪದ್ಯಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಬಹುತೇಕವನ್ನು ಇಂಗ್ಲಿಷ್‌ ಭಾಷೆಗೆ ಅನುವಾದ ಮಾಡಲಾಗಿದೆ. ಬ್ರಿಟಿಷ್‌ ಅಧಿಕಾರಿ ಸಿ.ಟಿ.ಬ್ರೌನ್‌ ಅವರು ವೇಮನರ ಪದ್ಯಗಳನ್ನು ಇಂಗ್ಲಿಷ್‌ಗೆ ಅನುವಾದ ಮಾಡುವ ಮೂಲಕ ಇಡೀ ವಿಶ್ಚಕ್ಕೆ ಪರಿಚಯಿಸಿದ್ದಾರೆ ಎಂದರು.

ವೇಮನರು ಐದು ಸಾವಿರ ವಚನಗಳನ್ನು ಬರೆದಿದ್ದಾರೆ. ಅವರು ಬರೆದ ವಚನಗಳು ಮತ್ತು ಪದ್ಯಗಳು ಇಡೀ ಜಗತ್ತಿಗೆ ಬೆಳಕು ನೀಡಿವೆ. ಆಂಧ್ರಪ್ರದೇಶದ ಕಡಪ ಜಿಲ್ಲೆಯ ವಿಶ್ವವಿದ್ಯಾಲಯ ಒಂದಕ್ಕೆ ವೇಮನ ಅವರ ಹೆಸರಿಡಲಾಗಿದೆ. ಕಲಬುರಗಿ ವಿಶ್ವವಿದ್ಯಾಲಯದಲ್ಲಿ ಹೇಮರೆಡ್ಡಿ ಮಲ್ಲಮ್ಮ ಅವರ ಅಧ್ಯಯನ ಪೀಠ ಸ್ಥಾಪಿಸಿದ್ದರೆ, ಧಾರವಾಡದ ವಿಶ್ವವಿದ್ಯಾಲಯದಲ್ಲಿ ವೇಮನರ ಅಧ್ಯಯನ ಪೀಠ ಸ್ಥಾಪಿಸುವ ಮೂಲಕ ಅವರ ಕುರಿತು ಅಧ್ಯಯನ ಮಾಡಲಾಗುತ್ತಿದೆ ಎಂದರು.

Advertisement

ಗ್ರಾಮೀಣ ಶಾಸಕ ಬಸನಗೌಡ ದದ್ದಲ್‌ ಮಾತನಾಡಿ, ಮಹಾಯೋಗಿ ವೇಮನರು ಒಂದು ಸಮುದಾಯದ ಆಸ್ತಿಯಲ್ಲ, ಅವರು ಇಡೀ ಭಾರತದ ಆಸ್ತಿ. ಸರ್ಕಾರ ಮಹಾನ್‌ ನಾಯಕರ ಜಯಂತಿಗಳನ್ನು ಆಚರಿಸುವ ಮೂಲಕ ಮುಂದಿನ ಪೀಳಿಗೆಗೆ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯುವಂತೆ ತಿಳಿಸುತ್ತಿದೆ. ಇಂದಿನ ಆಧುನಿಕ ಯುಗದಲ್ಲಿ ಅಂಥವರ ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದರು.

ನಗರ ಶಾಸಕ ಡಾ| ಶಿವರಾಜ ಪಾಟೀಲ ಮಾತನಾಡಿ, ಇಂಥ ಕಾರ್ಯಕ್ರಮಗಳಿಗೆ ಇತರೆ ಸಮುದಾಯದ ಮುಖಂಡರನ್ನು ಸಹ ಆಹ್ವಾನಿಸಬೇಕು ಎಂದರು. ಎಡಿಸಿ ದುರುಗೇಶ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಂಗಳಾ ನಾಯಕ, ಸಮಾಜದ ಮುಖಂಡರಾದ ರಾಮಚಂದ್ರರೆಡ್ಡಿ, ಜಿ.ಗೋಪಾಲರೆಡ್ಡಿ, ಗಿರೀಶ ಪಾಟೀಲ, ನಗರಸಭೆ ಸದಸ್ಯ ರಮೇಶ, ಬಸನಗೌಡ ಇತರರಿದ್ದರು.

ಭಾವಚಿತ್ರ ಮೆರವಣಿಗೆ: ಶ್ರೀ ಮಹಾಯೋಗಿ ವೇಮನರ ಜಯಂತಿ ಅಂಗವಾಗಿ ವಿಜೃಂಭಣೆಯಿಂದ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ನಗರದ ಶ್ರೀ ಬಸವೇಶ್ವರ ವೃತ್ತದಲ್ಲಿ ಮಹಾಯೋಗಿ ವೇಮನ ಭಾವಚಿತ್ರಕ್ಕೆ ಪೂಜೆ ಮತ್ತು ಮಾಲಾರ್ಪಣೆ ಮಾಡುವ ಮೂಲಕ ಶಾಸಕ ಡಾ| ಶಿವರಾಜ ಪಾಟೀಲ ಮೆರವಣಿಗೆಗೆ ಚಾಲನೆ ನೀಡಿದರು.

ಪ್ರಮುಖ ವೃತ್ತ, ರಸ್ತೆಗಳಲ್ಲಿ ಸಂಚರಿಸಿದ ಮೆರವಣಿಗೆ ರಂಗಮಂದಿರಕ್ಕೆ ಆಗಮಿಸಿ ಸಭೆಯಾಗಿ ಮಾರ್ಪಟ್ಟಿತು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು. ಸಸಿ ನೆಟ್ಟು ವೇಮನ ಜಯಂತಿ ಆಚರಣೆ: ನಗರದ ಡಿಎಆರ್‌ ಪೊಲೀಸ್‌ ಕಚೇರಿಯಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆ, ಗ್ರೀನ್‌ ರಾಯಚೂರು, ಜಿಲ್ಲಾಡಳಿತ, ನಗರಸಭೆ, ಶಿಲ್ಪಾ ಫೌಂಡೇಶನ್‌, ವಿವಿಧ ಸಂಘ, ಸಂಸ್ಥೆಗಳಿಂದ ಶ್ರೀ ಮಹಾಯೋಗಿ ವೇಮನ ಜಯಂತಿ ನಿಮಿತ್ತ ಸಸಿಗಳನ್ನು ನೆಡಲಾಯಿತು. ಎಸ್‌ಪಿ ಡಾ| ಸಿ.ಬಿ.ವೇದಮೂರ್ತಿ ನೇತೃತ್ವದಲ್ಲಿ ಮಕ್ಕಳು ಪ್ಲಾಸ್ಟಿಕ್‌ ಪ್ಯಾಕೆಟ್‌ಗಳಲ್ಲಿ ಮಣ್ಣು ತುಂಬಿ ಬೀಜಗಳನ್ನು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next