Advertisement

ಸಾಮರ್ಥ್ಯ ಆಧರಿಸಿ ನನ್ನನ್ನು ಅಳೆಯಿರಿ: ಲಂಡನ್‌ನಲ್ಲಿ ರಾಹುಲ್‌ ಗಾಂಧಿ

09:45 AM Aug 27, 2018 | Team Udayavani |

ಲಂಡನ್‌: ಸಾಮರ್ಥ್ಯ ಆಧರಿಸಿ ನನ್ನನ್ನು ಅಳೆಯಿರಿ. ಬದಲಿಗೆ ನನ್ನ ಕುಟುಂಬದ ಹಿನ್ನೆಲೆಯನ್ನಿಟ್ಟುಕೊಂಡು ಹೀಗಳೆಯಬೇಡಿ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ. ಲಂಡನ್‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಆಯ್ಕೆ ನಿಮ್ಮದು. ನನ್ನ ಸಾಮರ್ಥ್ಯವನ್ನು ಆಧರಿಸಿ ಅಳೆಯಬೇಕೋ ಅಥವಾ ನನ್ನ ಕುಟುಂಬದ ಹಿನ್ನೆಲೆಯನ್ನಿಟ್ಟು ಕೊಂಡು ಹೀಗಳೆಯಬೇಕೋ ಎಂಬುದು ನಿಮಗೆ ಬಿಟ್ಟದ್ದು. ನಾನು ಅದನ್ನು ಹೇಳಲಾಗದು. ನನ್ನ ತಂದೆ ಪ್ರಧಾನಿಯಾದ ನಂತರ ನನ್ನ ಕುಟುಂಬದ ಯಾರೂ ಪ್ರಧಾನಿಯಾಗಿಲ್ಲ ಎಂಬುದನ್ನು ಟೀಕಾಕಾರರು ಮರೆತಂತಿದೆ ಎಂದಿದ್ದಾರೆ.

Advertisement

ಆರೆಸ್ಸೆಸ್‌ನ ಟೀಕೆಯೇ ನನಗೆ ನೆರವು: ಆರೆಸ್ಸೆಸ್‌ ನನ್ನ ಮೇಲೆ ಎಲ್ಲ ರೀತಿಯಿಂದಲೂ ದಾಳಿ ನಡೆಸಿರುವುದೇ ನನಗೆ ರಾಜಕೀಯವಾಗಿ ಬೆಳೆಯಲು ಸಾಧ್ಯವಾಗಿದೆ ಎಂದು ರಾಹುಲ್‌ ಹೇಳಿದ್ದಾರೆ. ಆರೆಸ್ಸೆಸ್ಸನ್ನು ಮುಸ್ಲಿಂ ಬ್ರದರ್‌ಹುಡ್‌ ಉಗ್ರ ಸಂಘಟನೆಯ ಜೊತೆಗೆ ಹೋಲಿಸಿ ಮಾತನಾಡಿದ್ದು, ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ರಾಹುಲ್‌ ಈ ಮಾತುಗಳನ್ನಾಡಿದ್ದಾರೆ.

ಬಿಜೆಪಿ ಮುಖಂಡರನ್ನು ಭೇಟಿ ಮಾಡಿದ್ದ ಮಲ್ಯ: ದೇಶ ತೊರೆದು ಲಂಡನ್‌ಗೆ ತೆರಳವುದಕ್ಕೂ ಮುನ್ನ ಉದ್ಯಮಿ ವಿಜಯ್‌ ಮಲ್ಯ ಬಿಜೆಪಿ ಮುಖಂಡರನ್ನು ಭೇಟಿ ಮಾಡಿದ್ದರು ಎಂದು ರಾಹುಲ್‌ ಹೇಳಿದ್ದಾರೆ. ಅಲ್ಲದೆ, ಭಾರತದ ಜೈಲುಗಳು ಚೆನ್ನಾಗಿಯೇ ಇವೆ. ಮಲ್ಯ 9 ಸಾವಿರ ಕೋಟಿ ರೂ. ಸಾಲ ಮರುಪಾವತಿ ಮಾಡದೇ ವಿದೇಶಕ್ಕೆ ತೆರಳಿದ ಮಾತ್ರಕ್ಕೆ ಅವರಿಗೆ ಉತ್ತಮ ಗುಣಮಟ್ಟದ ಜೈಲು ನಿರ್ಮಿಸಿಕೊಡಲು ಸಾಧ್ಯವಿಲ್ಲ ಎಂದು ರಾಹುಲ್‌ ಹೇಳಿದ್ದಾರೆ.
ಪ್ರಧಾನಿ ಮಹತ್ವಾಕಾಂಕ್ಷೆಯಿಲ್ಲ: ನನಗೆ ಪ್ರಧಾನಿಯಾಗ ಬೇಕೆಂಬ ಮಹತ್ವಾಕಾಂಕ್ಷೆಯಿಲ್ಲ. ಸೈದ್ಧಾಂತಿಕ ಹೋರಾಟದ ಮೇಲೆ ನನಗೆ ವಿಶ್ವಾಸವಿದೆ. ಈ ಬಗ್ಗೆ ನನಗೆ 2014ರಲ್ಲೇ ಅರಿವು ಮೂಡಿದೆ ಎಂದು ರಾಹುಲ್‌ ಹೇಳಿದ್ದಾರೆ. ಬಿಜೆಪಿ ಮತ್ತು ಆರೆಸ್ಸೆಸ್‌ ಅನ್ನು ಅಧಿಕಾರದಿಂದ ದೂರವಿಟ್ಟ ನಂತರ, ಚುನಾವಣೆ ಮುಗಿದ ಮೇಲೆ ನಾಯಕತ್ವದ ಬಗ್ಗೆ ಚರ್ಚೆ ನಡೆಯಲಿದೆ ಎಂದಿದ್ದಾರೆ.

ಎಲ್ಲ ಸಂಸ್ಥೆಗಳೂ ಛಿದ್ರ: ದೇಶದಲ್ಲಿನ ನ್ಯಾಯಾಂಗ, ಚುನಾವಣಾ ಆಯೋಗ, ಆರ್‌ಬಿಐಗಳನ್ನೆಲ್ಲ ಮೋದಿ ಸರಕಾರ ಛಿದ್ರಗೊಳಿಸಿದೆ. ಅಷ್ಟೇ ಅಲ್ಲ, 2014ಕ್ಕೂ ಮೊದಲು ಅಭಿವೃದ್ಧಿಯೇ ನಡೆದಿಲ್ಲ ಎಂದು ಹೇಳುವ ಮೂಲಕ ಪ್ರತಿಯೊಬ್ಬ ಭಾರತೀಯನಿಗೆ ಅವಮಾನ ಮಾಡಿದ್ದಾರೆ ಎಂದು ರಾಹುಲ್‌ ಹೇಳಿದ್ದಾರೆ. ವಿಶ್ವವೇ ಭಾರತಕ್ಕೆ ಭವಿಷ್ಯವಿದೆ ಎಂದಿದೆ. ಇದು ಸಾಧ್ಯವಾಗಿದ್ದು ಜನರಿಂದ. ಕಾಂಗ್ರೆಸ್‌ ಈ ಜನರಿಗೆ ನೆರವಾಗಿದೆ. ಅಭಿವೃದ್ಧಿಯೇ ಆಗಿಲ್ಲ ಎಂದು ಹೇಳುವ ಮೂಲಕ ಜನರನ್ನು ಮೋದಿ ಅವಮಾನಿಸುತ್ತಿದ್ದಾರೆ ಎಂದು ರಾಹುಲ್‌ ಹೇಳಿದ್ದಾರೆ.

ಸಿಕ್ಖ್ ವಿರೋಧಿ ದಂಗೆ ಅನಂತರದ ಕ್ರಮ ಪಟ್ಟಿ ಮಾಡಿದ ಕಾಂಗ್ರೆಸ್‌ 
1984ರ ಸಿಕ್ಖ್ ವಿರೋಧಿ ದಂಗೆಯಲ್ಲಿ ಕಾಂಗ್ರೆಸ್‌ ಕೈವಾಡವಿಲ್ಲ ಎಂದು ರಾಹುಲ್‌ ಹೇಳಿದ್ದರಿಂದ ಕೇಳಿಬರುತ್ತಿರುವ ಟೀಕೆಗೆ ಪ್ರತಿಕ್ರಿಯೆಯಾಗಿ, ಸಿಕ್ಖ್ ದಂಗೆ ನಂತರ ಕೈಗೊಂಡ ಕ್ರಮಗಳನ್ನು ಕಾಂಗ್ರೆಸ್‌ ಪಟ್ಟಿ ಮಾಡಿದೆ. ಕಾಂಗ್ರೆಸ್‌ ಈ ಘಟನೆಯನ್ನು ಸಾವಿರಕ್ಕೂ ಹೆಚ್ಚು ಬಾರಿ ಖಂಡಿಸಿದೆ ಎಂದು ಕಾಂಗ್ರೆಸ್‌ ಮುಖಂಡ ಅಭಿಷೇಕ್‌ ಮನುಸಿಂ Ì ಹೇಳಿದ್ದಾರೆ. ಇದೇ ವೇಳೆ, ರಾಹುಲ್‌ ಹೇಳಿಕೆ ಬೆಂಬಲಿಸಿರುವ ಪಂಜಾಬ್‌ ಸಿಎಂ ಅಮರಿಂದರ್‌ ಸಿಂಗ್‌, ಸಿಕ್ಖ್ ವಿರೋಧಿ ದಂಗೆಯಲ್ಲಿ ಪಕ್ಷವಾಗಿ ಕಾಂಗ್ರೆಸ್‌ ಕೈವಾಡವಿಲ್ಲ. ಯಾರು ಇದರಲ್ಲಿ ಭಾಗವಹಿಸಿದ್ದರೂ ಅವರನ್ನು ಗಲ್ಲಿಗೇರಿಸಲಿ ಎಂದಿದ್ದಾರೆ. ಪಕ್ಷದ ಕೈವಾಡವಿಲ್ಲ ಎನ್ನುವ ಮೂಲಕ ಸಿಕ್ಖರ ಗಾಯಕ್ಕೆ ಕಾಂಗ್ರೆಸ್‌ ಉಪ್ಪು ಸವರಿದೆ ಎಂದು ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖಬೀರ್‌ ಸಿಂಗ್‌ ಬಾದಲ್‌ ಆರೋಪಿಸಿದ್ದರು.

Advertisement

ಸಿಖ್‌ ವಿರೋಧಿ ದಂಗೆಯಿಂದ ಕಾಂಗ್ರೆಸ್‌ ಪಕ್ಷದ ಕೈಗೆ ಅಂಟಿರುವ ಕಳಂಕವನ್ನು ತೊಳೆಯಲು ರಾಹುಲ್‌ ಯತ್ನಿಸುತ್ತಿದ್ದಾರೆ. ಈಗಾಗಲೇ ಅನ್ಯಾಯದಿಂದ ನೊಂದಿರುವ ಸಿಕ್ಖರಿಗೆ ರಾಹುಲ್‌ ಹೇಳಿಕೆ ಇನ್ನಷ್ಟು ನೋವುಂಟು ಮಾಡಿದೆ ಮಾತ್ರವಲ್ಲ, ವಾತಾವರಣವನ್ನು ಮತ್ತಷ್ಟು ಕೆಡಿಸುವಂತಿದೆ.
ಆರ್‌.ಪಿ. ಸಿಂಗ್‌,  ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next