Advertisement

ವಯನಾಡ್‌ನಿಂದಲೂ ರಾಹುಲ್‌ ಸ್ಪರ್ಧೆ

12:53 AM Apr 01, 2019 | Team Udayavani |

ಹೊಸದಿಲ್ಲಿ: ದಕ್ಷಿಣ ಭಾರತದಲ್ಲಿ ಕಾಂಗ್ರೆಸ್‌ ಬಲವರ್ಧನೆ ಉದ್ದೇಶದಿಂದ ಈ ಬಾರಿ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಕೇರಳದ ವಯನಾಡ್‌ ಲೋಕಸಭೆ ಕ್ಷೇತ್ರದಿಂದಲೂ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಈಗಾಗಲೇ ಉತ್ತರ ಪ್ರದೇಶದ ಅಮೇಠಿಯಲ್ಲಿ ರಾಹುಲ್‌ ಸ್ಪರ್ಧಿಸಲಿದ್ದಾರೆ ಎಂದು ಘೋಷಿಸಲಾಗಿದೆ.

Advertisement

ಇದರೊಂದಿಗೆ ವಯನಾಡ್‌ನಿಂದಲೂ ರಾಹುಲ್‌ ಸ್ಪರ್ಧಿಸುತ್ತಾರೆ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಎ.ಕೆ.ಆ್ಯಂಟನಿ ರವಿವಾರ ಘೋಷಿಸಿದ್ದಾರೆ.

ಕರ್ನಾಟಕ, ತಮಿಳುನಾಡು ಹಾಗೂ ಕೇರಳದ ಮುಖಂಡರು ರಾಹುಲ್‌ ಗಾಂಧಿ ತಮ್ಮ ರಾಜ್ಯ ದಿಂದಲೇ ಸ್ಪರ್ಧಿಸಲಿ ಎಂದು ಒತ್ತಾಯ ಮಾಡುತ್ತಿದ್ದರು. ಇನ್ನೊಂದೆಡೆ ಈ ಹಿಂದೆ 1978ರಲ್ಲಿ ಇಂದಿರಾ ಗಾಂಧಿ ಹಾಗೂ 1999 ರಲ್ಲಿ ಸೋನಿಯಾ ಗಾಂಧಿ ಕರ್ನಾಟಕದಲ್ಲೇ ಸ್ಪರ್ಧಿಸಿದ್ದರಿಂದ ಈ ಬಾರಿ ರಾಹುಲ್‌ ಕೂಡ ಕರ್ನಾಟಕದಿಂದಲೇ ಸ್ಪರ್ಧಿಸಬೇಕು ಎಂಬ ಒತ್ತಡವೂ ಕೇಳಿಬಂದಿತ್ತು. ಕೇರಳದಲ್ಲಿ 20 ಲೋಕಸಭೆ ಕ್ಷೇತ್ರಗಳು, ತಮಿಳುನಾಡಿನ 39 ಮತ್ತು ಕರ್ನಾಟಕದ 28 ಕ್ಷೇತ್ರಗಳಲ್ಲಿ ರಾಹುಲ್‌ ಸ್ಪರ್ಧೆಯ ಪರಿಣಾಮ ಉಂಟಾಗಲಿದೆ ಎಂದು ಕಾಂಗ್ರೆಸ್‌ ನಿರೀಕ್ಷಿಸಿದೆ.

ಆದರೆ ಇದಕ್ಕೆ ಸಿಪಿಎಂ ಆಕ್ಷೇಪ ವ್ಯಕ್ತಪಡಿಸಿದೆ. ಕೇರಳ ದಲ್ಲಿ ಬಿಜೆಪಿ ವಿರುದ್ಧ ಹೋರಾಡುತ್ತಿರುವುದರಲ್ಲಿ ಎಲ್‌ಡಿಎಫ್ ಮುಂಚೂಣಿಯಲ್ಲಿದ್ದು, ಎಲ್‌ಡಿಎಫ್ ವಿರುದ್ಧವೇ ಕಾಂಗ್ರೆಸ್‌ ಸ್ಪರ್ಧಿಸಿದಂತಾಗಿದೆ. ಈ ಮೂಲಕ ಕಾಂಗ್ರೆಸ್‌ ತನ್ನ ಮೈತ್ರಿಧರ್ಮವನ್ನು ಮುರಿದಿದೆ ಎಂದು ಸಿಪಿಎಂ ಮುಖಂಡ ಪ್ರಕಾಶ್‌ ಕಾರಟ್‌ ಆಕ್ಷೇಪಿಸಿದ್ದಾರೆ. ಇನ್ನೊಂ ದೆಡೆ ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಕೂಡ ಈ ಬೆಳ ವಣಿಗೆಗೆ ಪ್ರತಿಕ್ರಿಯಿಸಿದ್ದು, ಅಮೇಠಿಯಲ್ಲಿ ಜನರು ಏನು ಕೆಲಸ ಮಾಡಿದ್ದೀರಿ ಎಂದು ಕೇಳುತ್ತಾರೆ ಎಂಬ ಕಾರಣಕ್ಕೆ ರಾಹುಲ್‌ ಅಮೇಠಿಯಿಂದ ಓಡಿ ಹೋಗುತ್ತಿದ್ದಾರೆ ಎಂದಿದ್ದಾರೆ.

2014ರ ಚುನಾವಣೆಯಲ್ಲಿ ಕೇರಳದಲ್ಲಿ 15 ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಎಂಟು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆದ್ದಿದೆ. ಈ ಪೈಕಿ ಮೈತ್ರಿ ಪಕ್ಷ ಇಂಡಿಯನ್‌ ಯೂನಿಯನ್‌ ಮುಸ್ಲಿಮ್‌ ಲೀಗ್‌ ಎರಡು ಕ್ಷೇತ್ರಗಳಲ್ಲಿ ಮತ್ತು ಕೇರಳ ಕಾಂಗ್ರೆಸ್‌ ಮಣಿ ಹಾಗೂ ರಿವೊಲ್ಯೂಶನರಿ ಸೋಷಿಯಲಿಸ್ಟ್‌ ಪಾರ್ಟಿ ತಲಾ ಒಂದು ಕ್ಷೇತ್ರದಲ್ಲಿ ಜಯಗಳಿಸಿವೆ.

Advertisement

ಕಾರ್ಯಕರ್ತರ ಸಂಭ್ರಮ
ರಾಹುಲ್‌ ವಯನಾಡಿನಿಂದ ಸ್ಪರ್ಧಿಸಲಿದ್ದಾರೆ ಎಂಬುದು ತಿಳಿದು ಬರುತ್ತಿದ್ದಂತೆ, ಕಾಂಗ್ರೆಸ್‌ ಕಚೇರಿ ಎದುರು ಸೇರಿದ್ದ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ. ರಾಜ್ಯದ ಎಲ್ಲೆಡೆ ಕಾಂಗ್ರೆಸ್‌ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು. ಇನ್ನು ಕೆಲವೇ ದಿನಗಳಲ್ಲಿ ಕ್ಷೇತ್ರದ ಎಲ್ಲೆಡೆ ರೋಡ್‌ ಶೋ ಹಾಗೂ ಮನೆ ಮನೆ ಕ್ಯಾಂಪೇನ್‌ಗಳನ್ನು ನಡೆಸ ಲಾಗುತ್ತದೆ ಎಂದು ಕಾರ್ಯಕರ್ತರು ಉತ್ಸಾಹದಿಂದ ಹೇಳಿಕೊಂಡಿದ್ದಾರೆ.

ಅಮೇಠಿಯೇ ಕುಟುಂಬ
ಪಕ್ಷದ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ರಾಹುಲ್‌ ವಯನಾಡ್‌ನ‌ಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಆದರೆ ಅಮೇಠಿಯು ರಾಹುಲ್‌ಗೆ ಕುಟುಂಬವಿದ್ದಂತೆ. ಇಲ್ಲಿಂದ ಮೂರು ಬಾರಿ ರಾಹುಲ್‌ ಆಯ್ಕೆ ಯಾಗಿದ್ದಾರೆ ಎಂದು ಜಿಲ್ಲಾ ಕಂಗ್ರೆಸ್‌ ಮುಖಂಡರು ಹೇಳಿದ್ದಾರೆ. ಕಳೆದ ಬಾರಿ ಪರಿಸ್ಥಿತಿ ಬೇರೆಯಾಗಿತ್ತು. ಈ ಬಾರಿ 5 ಲಕ್ಷ ಮತಗಳ ಅಂತರದಿಂದ ರಾಹುಲ್‌ ಜಯ ಸಾಧಿಸಲಿದ್ದಾರೆ ಎಂದು ಅಮೇಠಿ ಯೂನಿಟ್‌ ಅಧ್ಯಕ್ಷ ಯೋಗೇಂದ್ರ ಮಿಶ್ರಾ ಹೇಳಿದ್ದಾರೆ

ಅಹಿಂಸಾತ್ಮಕ ಅಸ್ತ್ರವೇ “ನ್ಯಾಯ್‌’
“ಕಾಂಗ್ರೆಸ್‌ ಘೋಷಿಸಿರುವ ಕನಿಷ್ಠ ಆದಾಯ ಯೋಜನೆಯಾದ ನ್ಯಾಯ್‌ ಎನ್ನುವುದು ದೇಶದ ಬಡವರ ಏಳಿಗೆಗಾಗಿ ಬಳಸಲಾಗುವ ಅಹಿಂಸಾತ್ಮಕ ಅಸ್ತ್ರವಾಗಿದ್ದು, ನಾವು ಬಡತನದ ವಿರುದ್ಧವೇ ಸರ್ಜಿಕಲ್‌ ದಾಳಿ ನಡೆಸಲು ತೀರ್ಮಾನಿಸಿದ್ದೇವೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ. ಆಂಧ್ರಪ್ರದೇಶದ ವಿಜಯ ವಾಡದಲ್ಲಿ ರವಿವಾರ ರ್ಯಾಲಿ ನಡೆಸಿದ ಅವರು, “ಮೋದಿ ಅವರು ನೋಟು ಅಮಾನ್ಯ ಮಾಡುವ ಮೂಲಕ ಬಡವರ ಮೇಲೆ ಸರ್ಜಿಕಲ್‌ ದಾಳಿ ನಡೆಸಿದರು. ನಾವು ಬಡತನದ ಮೇಲೆ ಸರ್ಜಿಕಲ್‌ ದಾಳಿ ನಡೆಸುತ್ತೇವೆ’ ಎಂದಿದ್ದಾರೆ.

ನೋಟಾ ಒತ್ತುವ ಬೆದರಿಕೆ
ಈ ಚುನಾವಣೆಯಲ್ಲಿ ನಾವು ರೈತರನ್ನೆಲ್ಲ ಒಂದುಗೂಡಿಸಿ “ನೋಟಾ’ಗೆ ಮತ ಚಲಾಯಿಸುವಂತೆ ಮಾಡುತ್ತೇವೆ ಎಂದು ಒಡಿಶಾದ ವಿವಿಧ ರೈತ ಸಂಘಟನೆಗಳ ಒಕ್ಕೂಟವಾದ ಪಶ್ಚಿಮ ಒಡಿಶಾ ಕೃಷಕ್‌ ಸಂಘಟನ್‌ ಸಮನ್ವಯ ಸಮಿತಿ ಎಚ್ಚರಿಕೆ ನೀಡಿದೆ. ಈ ಸಂಘಟನೆಯಲ್ಲಿ 50 ಲಕ್ಷಕ್ಕೂ ರೈತರು ಸದಸ್ಯರಾಗಿದ್ದಾರೆ. ಸಂಪೂರ್ಣ ಸಾಲ ಮನ್ನಾ, ಸ್ವಾಮಿನಾಥನ್‌ ಆಯೋಗದ ಶಿಫಾರಸಿನ ಅನುಷ್ಠಾನ, ರಾಜ್ಯ ಮಟ್ಟ ದಲ್ಲಿ ಕೃಷಿ ಉತ್ಪನ್ನಗಳಿಗೆ ಬೋನಸ್‌ ಇವರ ಬೇಡಿಕೆಗಳಾಗಿವೆ

ವಯನಾಡ್‌ ಆಯ್ಕೆ ಏಕೆ?
ಉತ್ತರ ಕೇರಳದಲ್ಲಿ ಬರುವ ವಯನಾಡ್‌, ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಇಲ್ಲಿ ರಾಹುಲ್‌ ಸ್ಪರ್ಧಿಸಿದರೆ ದಕ್ಷಿಣ ಮೂರು ರಾಜ್ಯಗಳ ಮೇಲೆ ಪ್ರಭಾವ ಬೀರಿದಂತಾಗುತ್ತದೆ

2009ರ ಲೋಕಸಭೆ ಚುನಾವಣೆಗೂ ಮುನ್ನ ನಡೆದ ಸೀಮಾ ನಿರ್ಣಯ ವೇಳೆ ಈ ಕ್ಷೇತ್ರವನ್ನು ಹೆಸರಿಸಲಾಯಿತು.

ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ ನಾಯಕ ಎಂ.ಐ. ಶಾನವಾಜ್‌ 1.53 ಲಕ್ಷ ಮತಗಳ ಅಂತರದಿಂದ ವಯನಾಡ್‌ನ‌ಲ್ಲಿ ಗೆಲುವು ಸಾಧಿಸಿದರು

2014ರ ಚುನಾವಣೆಯಲ್ಲಿ ಅವರು ಕೇವಲ 20 ಸಾವಿರ ಮತಗಳ ಅಂತರದಿಂದ ಜಯ ಗಳಿಸಿದರು.

ಈಗ ರಾಹುಲ್‌ ಗಾಂಧಿ ಅವರು ಸಿಪಿಐ ಯುವ ನಾಯಕ ಪಿ.ಪಿ.ಸುನೀರ್‌ ವಿರುದ್ಧ ಸ್ಪರ್ಧಿಸಲಿದ್ದಾರೆ. ಬಿಜೆಪಿ ಈ ಕ್ಷೇತ್ರವನ್ನು ಬಿಡಿಜೆಎಸ್‌ಗೆ ಬಿಟ್ಟು ಕೊಟ್ಟಿದೆ. ಆದರೆ ಈಗ ಇಲ್ಲಿ ಪ್ರಬಲ ಅಭ್ಯರ್ಥಿ ಘೋಷಿಸುವ ಸಾಧ್ಯತೆ ಇದೆ.

ವಯನಾಡ್‌ ಕ್ಷೇತ್ರದಲ್ಲಿ ಅತಿ ಹೆಚ್ಚು ಮುಸ್ಲಿಂ ಮತದಾರರಿದ್ದಾರೆ. ಒಟ್ಟಾರೆ ಇಲ್ಲಿನ ಮತದಾರರ ಪೈಕಿ ಮುಸ್ಲಿಮರ ಪ್ರಮಾಣ ಶೇ.56 ರಷ್ಟಿದೆ.

ಇಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದ ಪ್ರಾಬಲ್ಯವೂ ಹೆಚ್ಚಿದೆ. ಹಿಂದೂಗಳ ಪೈಕಿ ಶೇ.35.4ರಷ್ಟು ಮಂದಿ ಎಸ್‌ಸಿ ಹಾಗೂ ಶೇ.7.6ರಷ್ಟು ಮಂದಿ ಎಸ್‌ಟಿ ಸಮುದಾಯಕ್ಕೆ ಸೇರಿದ್ದಾರೆ.

ಒಟ್ಟಿನಲ್ಲಿ ಎಲ್ಲ ದಿಕ್ಕಿ ನಿಂದಲೂ ಈ ಕ್ಷೇತ್ರವು ರಾಹುಲ್‌ಗೆ ಸುರಕ್ಷಿತ ಎಂದು ಪರಿಗಣಿಸಲಾಗಿದೆ

2014ರಲ್ಲಿ ಗುಜರಾತ್‌ನ ವಡೋದರಾ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ವಾರಾಣಸಿಯಲ್ಲೂ ಸ್ಪರ್ಧಿಸಿದ್ದರು. ಅಂದರೆ ಗುಜರಾತ್‌ನಲ್ಲಿ ಅವರಿಗೆ ಸೋಲಿನ ಭಯವಿತ್ತೇ? ಇಂತಹ ಅಪ್ರಬುದ್ಧ ಚಿಂತನೆಗಳನ್ನು ಹರಿಬಿಡುವುದರ ಬದಲಿಗೆ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಲಿ. ಅಷ್ಟಕ್ಕೂ ಬಿಜೆಪಿಗೇಕೆ ಭಯ?
– ರಣದೀಪ್‌ ಸುರ್ಜೆವಾಲ, ಕಾಂಗ್ರೆಸ್‌ ವಕ್ತಾರ

ರಾಹುಲ್‌ ಹೋರಾಟವು ಬಿಜೆಪಿ ವಿರುದ್ಧವಾಗಿ ದ್ದರೆ, ಅವರು ಬಿಜೆಪಿ ವಿರುದ್ಧ ಸ್ಪರ್ಧಿಸಬೇಕು. ಕೇರಳದಲ್ಲಿ ಸ್ಪರ್ಧೆ ಇರುವುದು ಎಲ್‌ಡಿಎಫ್ ಮತ್ತು ಯುಡಿಎಫ್ ಮಧ್ಯೆ. ಈಗಿನ ಸನ್ನಿವೇಶ ನೋಡಿದರೆ ಅವರು ಎಡಪಕ್ಷಗಳ ವಿರುದ್ಧವೇ ಸ್ಪರ್ಧಿಸಿದಂತಿದೆ.
– ಪಿಣರಾಯಿ ವಿಜಯನ್‌, ಕೇರಳ ಸಿಎಂ

ಈ ಲೋಕಸಭೆ ಚುನಾವಣೆಯು ದೇಶದ ಬಡ ಜನರ ಬಗ್ಗೆ ಅತೀವ ಕಾಳಜಿ ಇರುವಂಥ ಪ್ರಧಾನಿ ನರೇಂದ್ರ ಮೋದಿಯ ವರನ್ನು ಮರು ಆಯ್ಕೆ ಮಾಡಲು ಇರುವಂಥ ಔಪಚಾರಿಕತೆ ಅಷ್ಟೆ. ಮೋದಿಯವರು ದೇಶವನ್ನು ಇನ್ನಷ್ಟು ಎತ್ತರಕ್ಕೇರಿಸುವ ನಾಯಕ.
– ನಳಿನ್‌ ಕೊಹ್ಲಿ, ಬಿಜೆಪಿ ವಕ್ತಾರ

ಇಂದೋರ್‌ನ ಬಿಜೆಪಿ ಅಭ್ಯರ್ಥಿ ಹೆಸರನ್ನು ಇನ್ನೂ ಪ್ರಕಟಿಸಿಲ್ಲ ಎಂಬ ಬಗ್ಗೆ ಎಲ್ಲರಿಗೂ ಕುತೂಹಲ ಉಂಟಾಗಿದೆ. ಯಾರಿಗೆ ಟಿಕೆಟ್‌ ನೀಡಬೇಕು ಎಂಬುದನ್ನು ಸೂಕ್ತ ಸಮಯದಲ್ಲಿ ಪಕ್ಷ ನಿರ್ಧರಿಸಲಿದೆ. ಬಿಜೆಪಿಯ ಗೆಲುವಿಗಾಗಿ ನಾನು ಶ್ರಮಿಸಿದ್ದೇನೆ, ಮುಂದೆಯೂ ಶ್ರಮಿಸುವೆ.
– ಸುಮಿತ್ರಾ ಮಹಾಜನ್‌, ಲೋಕಸಭೆ ಸ್ಪೀಕರ್‌

ಬಿಜೆಪಿಯಲ್ಲಿ ಮೊದಲು ಪ್ರಜಾಪ್ರಭುತ್ವ ಇತ್ತು. ಆದರೆ, ಮೋದಿ-ಅಮಿತ್‌ ಶಾ ಬಂದ ಮೇಲೆ ಪಕ್ಷದಲ್ಲಿ ಸರ್ವಾ ಧಿ ಕಾ ರ ಬೆಳೆದಿದೆ. ನಮ್ಮ ಕೌಟುಂಬಿಕ ಸ್ನೇಹಿತರೂ ಆಗಿರುವ ಲಾಲು ಪ್ರಸಾದ್‌ ಸಲಹೆಯಂತೆ ನಾನು ಕಾಂಗ್ರೆಸ್‌ಗೆ ಸೇರುತ್ತಿದ್ದೇನೆ.
– ಶತ್ರುಘ್ನ ಸಿನ್ಹಾ, ಬಿಜೆಪಿ ಸಂಸದ

ಭೀಮ್‌ ಆರ್ಮಿ ಮುಖ್ಯಸ್ಥ ಚಂದ್ರಶೇಖರ್‌ ಆಜಾದ್‌ರನ್ನು ವಾರಾಣಸಿಯಲ್ಲಿ ಕಣಕ್ಕಿಳಿ ಸಿರುವುದು ದಲಿತರ ಮತಗಳನ್ನು ವಿಭಜಿಸಲು ಬಿಜೆಪಿ ಹೂಡಿರುವ ಸಂಚು. ಹಾಗಾಗಿ ಯಾವ ಕಾರಣಕ್ಕೂ ಆಜಾದ್‌ಗೆ ಮತ ಚಲಾಯಿಸುವ ಮೂಲಕ ಮತಗಳನ್ನು ವ್ಯರ್ಥವಾಗಿಸಬೇಡಿ.
– ಮಾಯಾವತಿ, ಬಿಎಸ್ಪಿ ನಾಯಕಿ

ಬಾಲಕೋಟ್‌ನಲ್ಲಿ ನಡೆದ ವೈಮಾನಿಕ ದಾಳಿಯ ಕ್ರೆಡಿಟ್‌ ಅನ್ನು ಅಷ್ಟೊಂದು ತರಾತುರಿಯಲ್ಲಿ ಪಡೆದ ನರೇಂದ್ರ ಮೋದಿ ಸರಕಾರವು, 40 ಯೋಧರ ಸಾವಿಗೆ ಕಾರಣವಾದ ಪುಲ್ವಾಮಾ ದಾಳಿಯ ಹೊಣೆಯನ್ನೇಕೆ ಹೊರಲಿಲ್ಲ?
– ದಿನಕರ್‌ ಲಂಕಾ, ಟಿಡಿಪಿ ವಕ್ತಾರ

ಕಾಂಗ್ರೆಸ್‌ ಇಷ್ಟು ವರ್ಷಗಳಲ್ಲಿ ಬಡತನವನ್ನು ನಿರ್ಮೂಲನೆ ಮಾಡಿದ್ದರೆ ಈಗ “ನ್ಯಾಯ್‌’ ಯೋಜನೆ ಜಾರಿಗೆ ತರಬೇಕಾದ ಅಗತ್ಯವಿತ್ತೇ? ದೇಶದ ರಕ್ಷಣೆಯ ವಿಷಯದಲ್ಲಿ ಪ್ರಧಾನಿ ಮೋದಿ ನಿರ್ಣಾಯಕ ನಾಯಕತ್ವ ವಹಿಸಿರುವಾಗ ಅದರ ಕ್ರೆಡಿಟ್‌ ಪಡೆದುಕೊಂಡರೆ ತಪ್ಪೇನು?
– ನಿರ್ಮಲಾ ಸೀತಾರಾಮನ್‌, ರಕ್ಷಣಾ ಸಚಿವೆ

Advertisement

Udayavani is now on Telegram. Click here to join our channel and stay updated with the latest news.

Next