Advertisement

ಹಿಜಾಬ್‌ ಪ್ರಕರಣ: ಅಂತಾರಾಷ್ಟ್ರೀಯ ಷಡ್ಯಂತ್ರ: ತನಿಖೆಗೆ ರಘುಪತಿ ಭಟ್‌ ಆಗ್ರಹ

11:56 PM Mar 23, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಹಿಜಾಬ್‌ ಪ್ರಕರಣದ ಹಿಂದೆ ದೊಡ್ಡ ಮಟ್ಟದ ಅಂತಾರಾಷ್ಟ್ರೀಯ ಸಂಚಿದೆ. ಈ ಬಗ್ಗೆ ವಿಸ್ತೃತ ತನಿಖೆ ನಡೆಯಬೇಕು ಎಂದು ಬಿಜೆಪಿ ಶಾಸಕ ಕೆ. ರಘುಪತಿ ಭಟ್‌ ಆಗ್ರಹಿಸಿದರು.

Advertisement

ವಿಧಾನಸಭೆಯಲ್ಲಿ ನಿಯಮ 69ರ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒಂದು ಅತ್ಯಾಚಾರ ಪ್ರಕರಣದ ವಿರುದ್ಧ ಎಬಿವಿಪಿ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ಆ ಪ್ರತಿಭಟನೆಯಲ್ಲಿ ಕೆಲವು ಮುಸ್ಲಿಂ ಯುವತಿಯವರು ಪಾಲ್ಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಒಂದು ಮತೀಯ ಸಂಘಟನೆ ಸಿಎಫ್ಐ ಮಕ್ಕಳ ಪಾಲಕರನ್ನು ಸಂಪರ್ಕಿಸಿ ತಮ್ಮ ಮಕ್ಕಳಿಗೆ ಹಿಜಾಬ್‌ ಕಡ್ಡಾಯವಾಗಿ ಹಾಕಿಕೊಳ್ಳಲು ಅವಕಾಶ ನೀಡುವಂತೆ ಒತ್ತಡ ಹೇರುವಂತೆ ಮಾಡಿದ್ದರು. ಅವರ ಒತ್ತಾಯದಂತೆ 12 ಮಕ್ಕಳು ಹಿಜಾಬ್‌ ಹಾಕಲು ಅವಕಾಶ ನೀಡಬೇಕು ಎಂದು ಪ್ರಾಂಶುಪಾಲರಿಗೆ ಮನವಿ ಮಾಡಿದ್ದರು. ಅವರ ಮನವೊಲಿಕೆ ಪ್ರಯತ್ನ ನಡೆಸಿದ ಅನಂತರ ಆರು ಮಕ್ಕಳು ಹಿಜಾಬ್‌ ಇಲ್ಲದೆ ಬರಲು ಒಪ್ಪಿದ್ದರು ಎಂದರು.

ಸಿಎಫ್ಐ ಸಂಘಟನೆ ಕುಮ್ಮಕ್ಕು
ಆರು ಜನ ಮಕ್ಕಳು ಹಿಜಾಬ್‌ ಹಾಕಲು ಅವಕಾಶ ನೀಡುವಂತೆ ಲಿಖಿತವಾಗಿ ಬೇಡಿಕೆ ಸಲ್ಲಿಸಿದ್ದರು. ಅವರ ಮನವೊಲಿಸಲು ಮುಸ್ಲಿಂ ಮುಖಂಡರು ಪ್ರಯತ್ನ ನಡೆಸಿದ್ದರು. ಆದರೂ, ಆರು ಮಕ್ಕಳು ಹಾಗೂ ಅವರ ಕುಟುಂಬದವರು ಯಾರ ಮಾತನ್ನೂ ಕೇಳಿಲ್ಲ. ಸಿಎಫ್ಐನವರು ಉಡುಪಿಯಲ್ಲಿ ಯಶಸ್ವಿಯಾಗದಿ¨ªಾಗ ಕುಂದಾಪುರಕ್ಕೆ ಹೋಗಿ ಅಲ್ಲಿನ ಪ್ರಥಮ ದರ್ಜೆ ಕಾಲೇಜಿನ ಅಲ್ಲಿನ ಹೆಣ್ಣುಮಕ್ಕಳಿಗೆ ಹಿಜಾಬ್‌ ಹಾಕಿಕೊಂಡು ಬರಲು ಕುಮ್ಮಕ್ಕು ನೀಡಿದ್ದರು. ಅದನ್ನು ನೋಡಿದ ಹಿಂದೂ ಯುವಕರು ತಮಗೂ ಕೇಸರಿ ಶಾಲು ಹಾಕಿಕೊಳ್ಳಲು ಅವಕಾಶ ನೀಡಬೇಕೆಂದು ಕೋರಿದರು. ಅವರೇ ಶಾಲು ಹಾಕಿಕೊಂಡು ಕಾಲೇಜಿಗೆ ಬಂದರು. ಅನಂತರ ಅದು ಎಲ್ಲ ಕಡೆ ಹರಡಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಯಿತು ಎಂದರು.

ಮಣಿಪಾಲದಲ್ಲಿ ನಡೆದಿತ್ತು ತರಬೇತಿ
12 ಮಂದಿ ವಿದ್ಯಾರ್ಥಿನಿಯರಿಗೆ ಸಿಎಫ್ಐನವರು ಮಣಿಪಾಲದ ಬಳಿ ತರಬೇತಿ ನೀಡಿದ್ದಾರೆ ಎಂದು ಅದರಲ್ಲಿ ವಾಪಸ್‌ ಬಂದ ಆರು ಜನ ವಿದ್ಯಾರ್ಥಿನಿಯರು ಪಾಲಕರ ಮುಂದೆ ಹೇಳಿದ್ದಾರೆ. ಆ ವಿದ್ಯಾರ್ಥಿನಿಯರೇ ತರಬೇತಿ ಪಡೆದ ಅನಂತರ ತಮ್ಮ ಪಕ್ಕದಲ್ಲಿಯೇ ಕುಳಿತುಕೊಳ್ಳುವ ಹಿಂದೂ ಯುವತಿಯರ ಮೇಲೆ ದ್ವೇಷ ಹುಟ್ಟಲು ಕಾರಣವಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರ ಬಳಿ ಹೆಚ್ಚಿನ ಮಾಹಿತಿ ಇದೆ ಎಂದು ರಘುಪತಿ ಭಟ್‌ ತಿಳಿಸಿದರು.

ಹೊರಗಿನವರಿಂದ ಗಲಾಟೆ
ಉಡುಪಿ ಜಿಲ್ಲೆಯಲ್ಲಿ ಯಾವಾಗಲೂ ಸೌಹಾರ್ದತೆ ಇದೆ. ಹಿಜಾಬ್‌ ವಿಚಾರದಲ್ಲಿಯೂ ಸ್ಥಳೀಯರು ಯಾರೂ ಗಲಾಟೆ ಮಾಡಿಲ್ಲ. ಹೊರಗಿನವರು ಬಂದು ಗಲಾಟೆ ಮಾಡಿದ್ದಾರೆ. ಈಗಲೂ ಉಡುಪಿಯಲ್ಲಿ ಹಿಂದೂ-ಮುಸ್ಲಿಮರು ಅನ್ಯೋನ್ಯವಾಗಿಯೇ ಇದ್ದೇವೆ. ಹಿಜಾಬ್‌ ವಿಚಾರದ ಹಿಂದೆ ಅಂತಾರಾಷ್ಟ್ರೀಯ ಷಡ್ಯಂತ್ರವಿದೆ. ಈ ಬಗ್ಗೆ ದೊಡ್ಡ ಮಟ್ಟದ ತನಿಖೆ ನಡೆಯಬೇಕು ಎಂದು ರಘುಪತಿ ಭಟ್‌ ಆಗ್ರಹಿಸಿದರು.

Advertisement

ಆರ್ಕಿಟೆಕ್ಟ್ ಗಳಿಗೆ ಅವಕಾಶ ಕೊಡುವಂತೆ ಆಗ್ರಹ
ಬೆಂಗಳೂರು: ಭೂ ಪರಿವರ್ತಿತ ಜಮೀನುಗಳಲ್ಲಿ 1 ಎಕ್ರೆವರೆಗೆ 11ಎ ನಕ್ಷೆಗಾಗಿ ಬಡಾವಣೆಗಾಗಿ ವಿನ್ಯಾಸ ಅನುಮೋದನೆ ಪಡೆಯಲು ಈ ಹಿಂದಿನಂತೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಜಿ.ಪಂ.ನಿಂದ ನೇಮಿಸಲ್ಪಟ್ಟ ಸ್ಥಳೀಯ ನೊಂದಾಯಿತ ಆರ್ಕಿಟೆಕ್ಟ್ ಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ಶಾಸಕ ಕೆ. ರಘುಪತಿ ಭಟ್‌ ಅವರು ಸದನದಲ್ಲಿ ಸರಕಾರವನ್ನು ಆಗ್ರಹಿಸಿದರು.

ಪ್ರಸ್ತುತ ಸ್ಥಳೀಯ ಪ್ರಾಧಿಕಾರವು ಅನುಮತಿ ನೀಡುವ ಮೊದಲು ಪಟ್ಟಣ ಮತ್ತು ಗ್ರಾಮಾಂತರ ಯೋಜನ ನಿರ್ದೇಶಕರ ಅಥವಾ ನಗರ ಯೋಜನೆ ಸಹಾಯಕ ನಿರ್ದೇಶಕರ ಪೂರ್ವಾನುಮೋದನೆ ಪಡೆಯಬೇಕೆಂದು ಹೊರಡಿಸಿರುವ ಅಧಿಸೂಚನೆಯಿಂದ ಸಾರ್ವಜನಿಕ ಸೇವೆಗಳು ವಿಳಂಬವಾಗುತ್ತಿದೆ. ನೂರಾರು ಕಡತಗಳು ಬಾಕಿ ಇರುವಂತಾಗಿದ್ದು, ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ ಎಂದು ತಿಳಿಸಿದರು.

ಗೋಡೆ ಬರೆಹ - ಪ್ರಸ್ತಾವ
ಉಡುಪಿ: ದೇವಸ್ಥಾನಗಳ ಉತ್ಸವ, ಜಾತ್ರೆ ಸಂದರ್ಭದಲ್ಲಿ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬಾರದು ಎಂಬಂತಹ ಭಿತ್ತಿ ಪತ್ರಗಳನ್ನು ಹಾಕಿರುವವರ ಮೇಲೆ ಕ್ರಮ ಕೈಗೊಳ್ಳುವ ಕುರಿತು ಸದನದಲ್ಲಿ ಕಾಂಗ್ರೆಸ್‌ ಶಾಸಕರು ವಿಷಯ ಪ್ರಸ್ತಾವಿಸಿದಾಗ ಹಿಜಾಬ್‌ ಪರವಾದ ಗೋಡೆ ಬರೆಹ, ಭಿತ್ತಿ ಪತ್ರಗಳನ್ನು ಹಾಕಿರುವವರ ಮೇಲೂ ಕ್ರಮ ಕೈಗೊಳ್ಳುವ ಬಗ್ಗೆ ಸದನದಲ್ಲಿ ಶಾಸಕ ರಘುಪತಿ ಭಟ್‌ ಧ್ವನಿಯೆತ್ತಿದರು.

Advertisement

Udayavani is now on Telegram. Click here to join our channel and stay updated with the latest news.

Next