Advertisement

ರಾಘವೇಶ್ವರ ಶ್ರೀ ಹೈಕೋರ್ಟ್‌ಗೆ ಮೊರೆ: ಸರ್ಕಾರಕ್ಕೆ ನೋಟಿಸ್‌

03:45 AM Jul 08, 2017 | |

ಬೆಂಗಳೂರು:  ಹೊಸನಗರ ರಾಮಚಂದ್ರಾಪುರ ಮಠದಲ್ಲಿ ಅವ್ಯವಹಾರ ನಡೆದಿದೆ ಎನ್ನಲಾದ ಆರೋಪಗಳಿಗೆ ಸಂಬಂಧಿಸಿದಂತೆ ವಿಚಾರಣೆ  ನಡೆಸುವಂತೆ ಮುಜರಾಯಿ ಇಲಾಖೆ  ಆಯುಕ್ತರಿಗೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಹೊರಡಿಸಿದ್ದ ಆದೇಶ ರದ್ದು ಕೋರಿ ರಾಘವೇಶ್ವರ ಭಾರತೀ ಶ್ರೀಗಳು  ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

Advertisement

ಶುಕ್ರವಾರ ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್‌ ಬಿ. ಹಿಂಚಿಗೇರಿ ಅವರಿದ್ದ ಏಕಸದಸ್ಯ ಪೀಠ, ಪ್ರತಿವಾದಿಗಳಾದ ರಾಜ್ಯಸರ್ಕಾರ, ಮುಖ್ಯ ಕಾರ್ಯದರ್ಶಿ ಸುಭಾಷ್‌ ಚಂದ್ರ ಸಿ. ಖುಂಟಿಯಾ, ಮುಜರಾಯಿ ಇಲಾಖೆ ಆಯುಕ್ತರು, ಎದುರ್ಕುಳ ಈಶ್ವರಭಟ್‌, ಜಯಕೃಷ್ಣ ಅವರಿಗೆ ನೋಟೀಸ್‌ ಜಾರಿಗೊಳಿಸಿದೆ.

ವಿಚಾರಣೆ ವೇಳೆ ವಾದ ಮಂಡಿಸಿದ ಮಠದ ಪರ ವಕೀಲರು, ಮಠದ ಆಂತರಿಕ ವಿಚಾರಗಳಿಗೆ ಸಬಂಧಪಟ್ಟಂತೆ ನಿರಾಧಾರ ಆರೋಪಗಳ ಹಿನ್ನೆಲೆಯಲ್ಲಿ ವಿಚಾರಣೆ ನಡೆಸುವಂತೆ ಮುಖ್ಯಕಾರ್ಯದರ್ಶಿ, ಮುಜರಾಯಿ ಇಲಾಖೆ ಆಯುಕ್ತರಿಗೆ ನೀಡಿರುವ ಆದೇಶ  ಕಾನೂನು ಬಾಹಿರವಾಗಿದೆ. ಜೊತೆಗೆ ಮಠಗಳ ವ್ಯಾಪ್ತಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮ ದತ್ತಿ ಕಾಯಿದೆ ಅಡಿ ಬರುವುದಿಲ್ಲ. ಹೀಗಾಗಿ ಮಠಗಳು ವಿಚಾರಣಾ  ವ್ಯಾಪ್ತಿಯಿಂದ ಹೊರಗುಳಿಯಲಿದೆ. ಹೀಗಾಗಿ ಮುಖ್ಯಕಾರ್ಯದರ್ಶಿಗಳ ಆದೇಶ ರದ್ದುಪಡಿಸಬೇಕು ಎಂದು  ಕೋರಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರದ ಪರ ವಕೀಲ  ಡಿ. ಲಕ್ಷ್ಮೀನಾರಾಯಣ್‌, ಹೈಕೋರ್ಟ್‌ ಆದೇಶ ಪಾಲಿಸಿರುವ ಮುಖ್ಯಕಾರ್ಯದರ್ಶಿಗಳು ಮುಜರಾಯಿ ಇಲಾಖೆ ಆಯುಕ್ತರಿಗೆ ಆದೇಶ ನೀಡಿದ್ದಾರೆ. ಹೀಗಾಗಿಯೇ ಇಲಾಖೆ ಆಯುಕ್ತರು ಮಠದ ಕುರಿತ ಆರೋಪಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಸತ್ಯಶೋಧನಾ ಸಮಿತಿ ರಚಿಸಿ ವರದಿ ನೀಡಲಿದೆಯೇ ವಿನ: ಕ್ರಮ ಕೈಗೊಳ್ಳುವುದಿಲ್ಲ. ಹೀಗಾಗಿ ಮುಖ್ಯ ಕಾರ್ಯದರ್ಶಿಗಳ ಆದೇಶ ರದ್ದುಗೊಳಿಸಬಾರದು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ಈ ಸಂಬಂಧ ಪ್ರತಿವಾದಿಗಳಿಗೆ ನೋಟೀಸ್‌ ಜಾರಿಗೊಳಿಸಿ ಜುಲೈ 11ಕ್ಕೆ ಅರ್ಜಿ ವಿಚಾರಣೆ ಮುಂದೂಡಿತು.

Advertisement

ಏನಿದು ಪ್ರಕರಣ?
ಹೊಸನಗರ ರಾಮಚಂದ್ರಪುರ ಮಠದಲ್ಲಿ ಅವ್ಯವಹಾರ ನಡೆಯುತ್ತಿದ್ದು, ರಾಘವೇಶ್ವರ ಶ್ರೀಗಳ ಮೇಲೆ ಹಲವು ಆಪಾದನೆಗಳಿವೆ. ಹೀಗಾಗಿ ಮಠದ ಪೀಠದಿಂದ ರಾಘವೇಶ್ವರ ಶ್ರೀಗಳನ್ನು ಕೆಳಗಿಳಿಸಬೇಕು ಹಾಗೂ ಮಠಕ್ಕೆ ಆಡಳಿತಾಧಿಕಾರಿ ನೇಮಕಗೊಳಿಸಲು ಆದೇಶಿಸಬೇಕು ಎಂದು ಎದುರ್ಕುಳ ಈಶ್ವರಭಟ್‌, ಜಯಕೃಷ್ಣ  ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಇತ್ಯರ್ಥಗೊಳಿಸಿದ್ದ ವಿಭಾಗೀಯ ಪೀಠ, ಈ ಪ್ರಕರಣ ಸಂಬಂಧ ರಾಜ್ಯಸರ್ಕಾರ ಅರ್ಜಿದಾರರು ಹಾಗೂ ಪ್ರತಿವಾದಿಗಳ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿತ್ತು. ಈ ನಿಟ್ಟಿನಲ್ಲಿ ವಿಚಾರಣೆ ನಡೆಸಿದ್ದ ಮುಖ್ಯಕಾರ್ಯದರ್ಶಿ, ಮಠದ ವಿರುದ್ಧ ಕೇಳಿ ಬಂದ ಆರೋಪಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ಕಂದಾಯ ಇಲಾಖೆಗೆ ವರದಿ ನೀಡುವಂತೆ ಮೇ 23ರಂದು ಮುಜರಾಯಿ ಇಲಾಖೆಗೆ ಆದೇಶ ನೀಡಿದ್ದರು. ಈ ಆದೇಶದ ಅನ್ವಯ ಆಯುಕ್ತರು ಸತ್ಯಶೋಧನಾ ಸಮಿತಿ ರಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next