Advertisement

ಮತ್ತೆ ನಿರ್ಮಾಣಕ್ಕೆ ರಾಧಿಕಾ: ಭೈರಾದೇವಿಗೆ ಚಾಲನೆ

02:57 PM Feb 12, 2018 | |

“ಸ್ವೀಟಿ’ ಚಿತ್ರದ ನಂತರ ರಾಧಿಕಾ ನಿರ್ಮಾಣದಿಂದ ದೂರವೇ ಉಳಿದಿದ್ದರು. ಸಾಕಷ್ಟು ಕಥೆಗಳನ್ನು ಕೇಳುತ್ತಿದ್ದರೂ ಯಾವುದೂ ಅವರಿಗೆ ಹಿಡಿಸಿರಲಿಲ್ಲ. ಈ ನಡುವೆಯೇ ಶಿವರಾಜಕುಮಾರ್‌ಗೆ ಸಿನಿಮಾ ಮಾಡುತ್ತಾರೆಂಬ ಸುದ್ದಿಯೂ ಬಂತು. ಈಗ ಸದ್ದಿಲ್ಲದೇ ಸಿನಿಮಾವೊಂದನ್ನು ನಿರ್ಮಿಸಲು ಮುಂದಾಗಿದ್ದಾರೆ ರಾಧಿಕಾ. ಈ ಚಿತ್ರಕ್ಕೆ ಸೋಮವಾರ ಮುಹೂರ್ತ ಬಂಡಿ ಮಾಕಾಳಮ್ಮ ದೇವಸ್ಥಾನದಲ್ಲಿ ಮುಹೂರ್ತ ನಡೆದಿದೆ.

Advertisement

ಈ ಚಿತ್ರಕ್ಕೆ “ಭೈರಾದೇವಿ’ ಎಂಬ ಟೈಟಲ್‌ ಇಡಲಾಗಿದೆ. ಶ್ರೀಜಯ್‌ ಈ ಚಿತ್ರದ ನಿರ್ದೇಶಕರು. ವಿಜಯ್‌ ಅವರ “ಆರ್‌ಎಕ್ಸ್‌ ಸೂರಿ’ ಚಿತ್ರವನ್ನು ನಿರ್ದೇಶಿಸಿರುವ ಶ್ರೀಜಯ್‌ಗೆ ಇದು ಎರಡನೇ ಚಿತ್ರ. ಈ ಬಾರಿ “ಭೈರಾದೇವಿ’ ಮೂಲಕ ಔಟ್‌ ಅಂಡ್‌ ಔಟ್‌ ಫ್ಯಾಮಿಲಿ ಸಿನಿಮಾ ಮಾಡಲು ಹೊರಟಿದ್ದಾರೆ. ಇದು ಶಮಿಕಾ ಎಂಟರ್‌ಪ್ರೈಸಸ್‌ನಡಿ ನಿರ್ಮಾಣವಾಗುತ್ತಿರುವ ಮೂರನೇ ಚಿತ್ರ.

ಚಿತ್ರಕ್ಕೆ ರಾಧಿಕಾ ಅವರ ಸಹೋದರ ರವಿರಾಜ್‌ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಚಿತ್ರದ ಮುಖ್ಯಭೂಮಿಕೆಯಲ್ಲಿ ರಮೇಶ್‌ ಅರವಿಂದ್‌ ಹಾಗೂ ರಾಧಿಕಾ ನಟಿಸುತ್ತಿದ್ದಾರೆ. ಉಳಿದಂತೆ ಅನುಪ್ರಭಾಕರ್‌, ಸ್ಕಂದ ಅಶೋಕ್‌ ಸೇರಿದಂತೆ ಅನೇಕರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ರವಿರಾಜ್‌, “ಕಥೆ ತುಂಬಾ ಚೆನ್ನಾಗಿದೆ. ಎಲ್ಲಾ ರೀತಿಯ ಅಂಶಗಳು ಈ ಕಥೆಯಲ್ಲಿ ಒಳಗೊಂಡಿರುವುದರಿಂದ ಈ ಸಿನಿಮಾ ಮಾಡಲು ಮುಂದಾದೆವು’ ಎನ್ನುತ್ತಾರೆ.

ಚಿತ್ರದ ಚಿತ್ರೀಕರಣ ವಾರಣಾಸಿ, ಬೆಂಗಳೂರು ಸೇರಿದಂತೆ ಅನೇಕ ಕಡೆ ನಡೆಯಲಿದೆ. ಚಿತ್ರಕ್ಕೆ ವೇಣು ಅವರ ಛಾಯಾಗ್ರಹಣವಿದೆ. ಇದು ರಾಧಿಕಾ ಅವರ ನಿರ್ಮಾಣದ ವಿಷಯವಾದರೆ, ಸದ್ಯ ರಾಧಿಕಾ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. “ಕಾಂಟ್ರ್ಯಾಕ್ಟ್’ ಹಾಗೂ “ರಾಜೇಂದ್ರ ಪೊನ್ನಪ್ಪ’ ಚಿತ್ರಗಳು ರಾಧಿಕಾ ಕೈಯಲ್ಲಿವೆ. ಸಿನಿಮಾ ನಿರ್ಮಾಣದ ಬಗ್ಗೆ ಮಾತನಾಡುವ ರಾಧಿಕಾ, “ನನಗೆ ಸಿನಿಮಾ ಬಿಟ್ಟಿರುವುದಕ್ಕಾಗಲ್ಲ. ಹಾಗಾಗಿ, ಒಳ್ಳೆಯ ಕಥೆಗಳನ್ನು ಕೇಳುತ್ತಲೇ ಇರುತ್ತೇನೆ.

ಹಾಗೆ ಸಿಕ್ಕಿದ್ದು ಈ ಕಥೆ. ಶ್ರೀಜಯ್‌ ಅವರು ಒಳ್ಳೆಯ ಕಥೆ ಮಾಡಿಕೊಂಡು ಬಂದಿದ್ದಾರೆ. ಸಿನಿಮಾ ಬಗ್ಗೆ ಅವರಿಗೆ ಆಸಕ್ತಿ ಇದೆ. ಇಂದಿನ ಟ್ರೆಂಡ್‌ಗೆ ಹೊಂದಿಕೆಯಾಗುವಂತಹ ಕಥೆ. ನನ್ನ ಪಾತ್ರ ಕೂಡಾ ಹೊಸತದಿಂದ ಕೂಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಿನಿಮಾಗಳನ್ನು ನಿರ್ಮಿಸುವ ಆಸೆ ಇದೆ’ ಎಂದು ಸಿನಿಮಾ ಬಗ್ಗೆ ಹೇಳುತ್ತಾರೆ ರಾಧಿಕಾ. ಅಂದಹಾಗೆ, ಈ ಚಿತ್ರ ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ತಯಾರಾಗುತ್ತಿದೆ.  

Advertisement
Advertisement

Udayavani is now on Telegram. Click here to join our channel and stay updated with the latest news.

Next