Advertisement

ಒಳ್ಳೆಯ ಪಾತ್ರಗಳಿಗೆ ರಾಧಿಕಾ ಚೇತನ್‌ ಚೇಸ್‌!

11:22 AM Apr 11, 2018 | |

ರಾಧಿಕಾ ಚೇತನ್‌ ಈಗಂತೂ ಫ‌ುಲ್‌ ಖುಷಿಯ ಮೂಡ್‌ನ‌ಲ್ಲಿದ್ದಾರೆ. ಅದಕ್ಕೆ ಕಾರಣ, ಈ ವರ್ಷ ಒಂದಲ್ಲ, ಎರಡಲ್ಲ, ಮೂರು ಚಿತ್ರಗಳು ಬಿಡುಗಡೆಯಾಗಲಿವೆ ಎಂಬುದು. ಹೌದು, ನರೇಂದ್ರಬಾಬು (ಕಬ್ಬಡಿ) ನಿರ್ದೇಶನದ “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರೀಕರಣ ಮುಗಿದಿದ್ದು, ಚುನಾವಣೆ ಬಳಿಕ ತೆರೆಗೆ ಬರಲಿದೆ. “ಅಸತೋಮ ಸದ್ಗಮಯ’ ಚಿತ್ರವೂ ಮುಗಿದಿದ್ದು, ಮುಂದಿನ ತಿಂಗಳು ಬಿಡುಗಡೆಯಾಗುವ ಸಾಧ್ಯವಿದೆ.

Advertisement

ಹರಿಯಾನಂದ್‌ ನಿರ್ದೇಶನದ “ಚೇಸ್‌’ ಚಿತ್ರದ ಚಿತ್ರೀಕರಣ ಕೂಡ ಮುಗಿಯುವ ಹಂತದಲ್ಲಿದ್ದು, ಈ ಸಿನಿಮಾ ಸಹ ಇದೇ ವರ್ಷ ತೆರೆಗೆ ಬರುವ ನಿರೀಕ್ಷೆ ಇದೆ. ಅಲ್ಲಿಗೆ ಈ ವರ್ಷ ರಾಧಿಕಾ ಚೇತನ್‌ ಅಭಿನಯದ ಮೂರು ಚಿತ್ರಗಳು ಬಿಡುಗಡೆಯಾಗಲಿವೆ. ಈ ಮೂರು ಚಿತ್ರಗಳ ಕುರಿತು ಸ್ವತಃ ರಾಧಿಕಾ ಚೇತನ್‌ ‘ಉದಯವಾಣಿ’ ಜೊತೆ ಒಂದಷ್ಟು ಮಾತನಾಡಿದ್ದಾರೆ.

“ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಸಿನಿಮಾದಲ್ಲಿ ಒಳ್ಳೆಯ ಅನುಭವ ಆಗಿದೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ವಿಶೇಷವೆಂದರೆ, ದುಬೈನ ಬುರ್ಜ್‌ ಖಲೀಫಾದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆ ಪಡೆದಿದೆ. ಅಷ್ಟೇ ಅಲ್ಲ, ಅಲ್ಲಿಯೇ ಚಿತ್ರದ ಟ್ರೇಲರ್‌ ಕೂಡ ರಿಲೀಸ್‌ ಆಗಿದೆ. ಅಲ್ಲಿನ ದುಬೈ ಕನ್ನಡಿಗರು, ಚಿತ್ರದ ಟ್ರೇಲರ್‌ ಮೆಚ್ಚಿಕೊಂಡಿದ್ದು, ಸಿನಿಮಾ ಎದುರು ನೋಡುತ್ತಿದ್ದಾರೆ.

ಚುನಾವಣೆ ಬಳಿಕ “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ರಿಲೀಸ್‌ ಆಗಲಿದೆ. ಈ ಚಿತ್ರದಲ್ಲಿ ಮರೆಯದ ಅನುಭವ ಅಂದರೆ, ಹಿರಿಯ ನಟ ಅನಂತ್‌ನಾಗ್‌ ಅವರ ಜತೆ ಕೆಲಸ ಮಾಡಿದ್ದು. ಅವರಿಂದ ನಾನು ಸಾಕಷ್ಟು ಕಲಿತುಕೊಂಡೆ. ಅಷ್ಟು ದೊಡ್ಡ ನಟರಾದರೂ, ತಮ್ಮ ಪಾತ್ರದಲ್ಲಿ ತುಂಬ ತೊಡಗಿಕೊಳ್ಳುತ್ತಿದ್ದರು. ಪ್ರತಿ ದಿನವೂ ಸ್ಕ್ರಿಪ್ಟ್ ಹಿಡಿದೇ ಸೆಟ್‌ಗೆ ಬರುತ್ತಿದ್ದರು. ನಾನು ಎಂದೂ ಸ್ಕ್ರಿಪ್ಟ್ ಹಿಡಿದು ಹೋದವಳಲ್ಲ.

ಅವರನ್ನು ನೋಡಿ ನಾನೂ ಮರುದಿನದಿಂದ ಸ್ಕ್ರಿಪ್ಟ್ ಹಿಡಿದು ಹೋಗುತ್ತಿದ್ದೆ. ನನ್ನ ಪಾತ್ರವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳಲು ನೆರವಾದರು. ಚಿತ್ರದಲ್ಲಿ ನಾನೊಬ್ಬ ಕಾಪೋರೇಟ್‌ ಜಗತ್ತಿನ ಹೆಣ್ಣುಮಗಳಾಗಿ ಕಾಣಿಸಿಕೊಂಡಿದ್ದೇನೆ. ಅದೊಂಥರಾ ಮಾಡ್ರನ್‌ ಲುಕ್‌ನಲ್ಲಿರುವ ಪಾತ್ರ. ಸಂಬಂಧಗಳ ಬಗ್ಗೆ ಬೆಳಕು ಚೆಲ್ಲುವಂತಹ ಪಾತ್ರ. ಚಿತ್ರದುದ್ದಕ್ಕೂ ಭಾವನೆ, ಭಾವುಕತೆ ಅಂಶಗಳು ಕಾಡುತ್ತವೆ.

Advertisement

ಪಿಕೆಎಚ್‌ ದಾಸ್‌ ಅವರು ಛಾಯಾಗ್ರಹಣ ಮಾಡಿದ್ದಾರೆ. ಇನ್ನು, ಮೈಸೂರು, ಬೆಂಗಳೂರು, ದುಬೈನಲ್ಲಿ ಶೂಟಿಂಗ್‌ ಆಗಿದ್ದು, ಸಂದೀಪ್‌ ಎಂಬ ಹೊಸ ಪ್ರತಿಭೆ ನನ್ನೊಂದಿಗೆ ನಟಿಸಿದ್ದಾರೆ. ಅಂತಹ ಒಳ್ಳೆಯ ತಂಡದಲ್ಲಿ ಕೆಲಸ ಮಾಡಿದ್ದು ಖುಷಿಕೊಟ್ಟಿದೆ’ ಎಂದು ತಮ್ಮ “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರ ಕುರಿತು ಹೇಳಿಕೊಳ್ಳುತ್ತಾರೆ ರಾಧಿಕಾ ಚೇತನ್‌.

“ಇನ್ನು “ಅಸತೋಮ ಸದ್ಗಮಯ’ ಚಿತ್ರದಲ್ಲಿ ನನ್ನದು ವಿದೇಶದಿಂದ ಏನನ್ನೋ ಹುಡುಕಿ ಬರುವ ಹುಡುಗಿಯ ಪಾತ್ರ. ಸಂಪೂರ್ಣ ಹೊಸ ತಂಡದ ಜತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ಅದೊಂದು ಸರ್ಕಾರಿ ಶಾಲೆ ಕುರಿತಂತಹ ಚಿತ್ರ. ಈಗಿನ ಸರ್ಕಾರಿ ಶಾಲೆಯ ದುಸ್ಥಿತಿ, ಅಲ್ಲಿ ಓದುವ ಮಕ್ಕಳ ಮನಸ್ಥಿತಿ ಕುರಿತು ಕಥೆ ಸಾಗಲಿದೆ. ಒಂದು ಮನರಂಜನೆ ಮೂಲಕ ಸರ್ಕಾರಿ ಶಾಲೆಯ ಅಪರೂಪದ ಸಂಗತಿಗಳನ್ನು ಹೇಳುವ ಪ್ರಯತ್ನ ಅಲ್ಲಿ ಮಾಡಲಾಗಿದೆ.

ಇದೂ ಕೂಡ ರಿಲೀಸ್‌ಗೆ ರೆಡಿಯಾಗಿದೆ’ ಎನ್ನುತ್ತಾರೆ ಅವರು. ಹರಿ ಆನಂದ್‌ ನಿರ್ದೇಶನದ “ಚೇಸ್‌’ ಚಿತ್ರಕ್ಕಿನ್ನೂ ಚಿತ್ರೀಕರಣ ಬಾಕಿ ಉಳಿದಿದೆಯಂತೆ. ಈ ಚಿತ್ರದಲ್ಲಿ “ಜುಗಾರಿ’ ಅವಿನಾಶ್‌ ಹೀರೋ ಆಗಿ ನಟಿಸಿದರೆ, ಶೀತಲ್‌ ಶೆಟ್ಟಿ, ಅರ್ಜುನ್‌ ಯೋಗೇಶ್‌ ಇತರರು ನಟಿಸಿದ್ದಾರೆ. ಹಿಂದಿಯ “ಎಬಿಸಿಡಿ’ ಖ್ಯಾತಿಯ ನೃತ್ಯ ನಿರ್ದೇಶಕ ಸುಶಾಂತ್‌ ಪೂಜಾರಿ ಕೂಡ ನಟಿಸಿದ್ದಾರೆ.

ಚಿತ್ರದಲ್ಲಿ ಒಂದು ನಾಯಿ ಜೊತೆ ತುಂಬ ಕ್ಲೋಸ್‌ ಆಗಿರುವಂತಹ ಪಾತ್ರವದು. ಚಿತ್ರ ಒಂದು ತನಿಖೆ ಸುತ್ತ ಸಾಗಲಿದೆ. ಅನಂತ್‌ಅರಸ್‌ ಛಾಯಗ್ರಹಣವಿದೆ. ಕಾರ್ತಿಕ್‌ ಸಂಗೀತ ನೀಡಿದ್ದಾರೆ. ಈ ವರ್ಷ ಇದು ಬಿಡುಗಡೆಗೊಂಡರೆ, ಅಲ್ಲಿಗೆ ಮೂರು ಚಿತ್ರಗಳು ತೆರೆಗೆ ಬಂದಂತಾಗುತ್ತವೆ ಎನ್ನುವ ರಾಧಿಕಾ ಚೇತನ್‌, ಸದ್ಯಕ್ಕೆ ಹೊಸ ಕಥೆ ಕೇಳುತ್ತಿದ್ದು, ಈ ವರ್ಷ ಹೊಸ ಚಿತ್ರ ಒಪ್ಪಿಕೊಳ್ಳುವುದಾಗಿಯೂ ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next