Advertisement

ಕಸ್ತೂರಿ ಮಹಲ್‌ ನಿಂದ ರಚಿತಾ ಔಟ್‌!

01:27 PM Sep 21, 2020 | Suhan S |

ಹಿರಿಯ ನಿರ್ದೇಶಕ ದಿನೇಶ್‌ ಬಾಬು ನಿರ್ದೇಶನದ ಹೊಸಚಿತ್ರದಲ್ಲಿ ರಚಿತಾ ರಾಮ್‌ ನಾಯಕಿಯಾಗಿ ಅಭಿನಯಿಸುತ್ತಿದ್ದು, ಇತ್ತೀಚೆಗಷ್ಟೇ ಈ ಚಿತ್ರದ ಮುಹೂರ್ತ ಸಮಾರಂಭಕೂಡ ಅದ್ಧೂರಿಯಾಗಿ ನಡೆದಿತ್ತು. ಆರಂಭದಲ್ಲಿ ಈ ಚಿತ್ರಕ್ಕೆ “ಕಸ್ತೂರಿ ನಿವಾಸ’ ಅಂಥ ಟೈಟಲ್‌ ಇಟ್ಟಿದ್ದ ಚಿತ್ರತಂಡ, ಆನಂತರ ಚಿತ್ರಕ್ಕೆ “ಕಸ್ತೂರಿ ಮಹಲ್‌’ ಅಂಥ ಹೊಸದಾಗಿ ನಾಮಕರಣ ಮಾಡಿತ್ತು.

Advertisement

ಇದಾದ ಕೆಲವೇ ದಿನಗಳಲ್ಲಿ ಚಿತ್ರತಂಡದ ಕಡೆಯಿಂದ ಬಿಗ್‌ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ, “ಕಸ್ತೂರಿ ಮಹಲ್‌’ ಚಿತ್ರದ ನಾಯಕಿಯ ಸ್ಥಾನದಿಂದ ರಚಿತಾ ರಾಮ್‌ ಔಟ್‌ ಆಗಿದ್ದಾರೆ!

ಹೌದು, ಸ್ವತಃ ಚಿತ್ರದ ನಿರ್ದೇಶಕ ದಿನೇಶ್‌ ಬಾಬು ಅವರೇ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಒಂದೆಡೆ “ಕಸ್ತೂರಿ ಮಹಲ್‌’ ಚಿತ್ರದ ಅಂತಿಮ ಹಂತದ ಪ್ರೀ-ಪ್ರೊಡಕ್ಷನ್‌ಕೆಲಸಗಳು ನಡೆಯುತ್ತಿರುವಂತೆಯೇ, ನಟಿ ರಚಿತಾ ರಾಮ್‌ ಚಿತ್ರದ ನಿರ್ಮಾಪಕರಿಗೆ ಈ ಚಿತ್ರದಲ್ಲಿ ಮುಂದುವರೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ಚಿತ್ರದಿಂದ ತಮ್ಮನ್ನು ಕೈ ಬಿಡುವಂತೆ ಕೇಳಿಕೊಂಡಿದ್ದಾರಂತೆ.ಕೊನೆಗೆ ರಚಿತಾ ರಾಮ್‌ ಕೋರಿಕೆಯಂತೆ ಚಿತ್ರತಂಡ “ಕಸ್ತೂರಿ ಮಹಲ್‌’ನಿಂದ ಅವರನ್ನು ಕೈ ಬಿಡುವ ನಿರ್ಧಾರಕ್ಕೆ ಬಂದಿದೆ.

ಈ ಬಗ್ಗೆ “ಉದಯವಾಣಿ’ ಜೊತೆಗೆ ಮಾತನಾಡಿರುವ ನಿರ್ದೇಶಕ ದಿನೇಶ್‌ ಬಾಬು, “ಆರಂಭದಲ್ಲಿ ರಚಿತಾ ಈ ಸಿನಿಮಾದ ಕಥೆ ಕೇಳಿ ಈ ಕ್ಯಾರೆಕ್ಟರ್‌ ಮಾಡಲು ಖುಷಿಯಿಂದ ಒಪ್ಪಿಕೊಂಡಿದ್ದರು. ಆದರೆ ಈಗ ಇದ್ದಕ್ಕಿದ್ದಂತೆ, ಈ ಸಿನಿಮಾದಲ್ಲಿ ನಟಿಸಲು ಆಗುತ್ತಿಲ್ಲ ಅಂಥ ನಿರ್ಮಾಪಕರಿಗೆ ತಿಳಿಸಿದ್ದಾರೆ.

ತಾವು ನಟಿಸಲು ಆಗದಿರುವುದಕ್ಕೆ ಸ್ಪಷ್ಟ ಕಾರಣವನ್ನೂ ನೀಡುತ್ತಿಲ್ಲ. ಒಂದು ಸಿನಿಮಾವನ್ನು ಒಪ್ಪಿ ಅಡ್ವಾನ್ಸ್‌ ಪಡೆದುಕೊಂಡು,ಕಮಿಟ್‌ ಆದ ನಂತರ ಈಗ ಏಕಾಏಕಿ ಸಿನಿಮಾ ಮಾಡಲಾಗುತ್ತಿಲ್ಲ ಅಂದ್ರೆ ಏನು ಅರ್ಥ? ಇದರಿಂದ ನಮಗೆ ಬೇಸರವಾಗಿದೆ’ ಎಂದಿದ್ದಾರೆ. “ಇದೇ ಅ.5ರಿಂದಈಸಿನಿಮಾದ ಶೂಟಿಂಗ್‌ ಮಾಡಲು ಪ್ಲಾನ್‌ ಮಾಡಿಕೊಂಡಿದ್ದೇವೆ. ಈಗ ಕೊನೆ ಹಂತದಲ್ಲಿ ರಚಿತಾ ರಾಮ್‌ ಈ ಸಿನಿಮಾ ಮಾಡಲಾಗುತ್ತಿಲ್ಲ ಎನ್ನುತ್ತಿದ್ದಾರೆ.

Advertisement

ಇದರಿಂದ ಇಡೀ ಚಿತ್ರತಂಡಕ್ಕೆ ತೊಂದರೆಯಾಗುತ್ತಿದೆ. ಇದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ನಾನು ಮೊದಲಿನಿಂದಲೂ ಸಿನಿಮಾದ ಸ್ಕ್ರಿಪ್ಟ್ ಮೇಲೆ ನಂಬಿಕೆ, ಗೌರವ ಎರಡನ್ನೂ ಇಟ್ಟುಕೊಂಡವನು. ಒಂದು ಸಿನಿಮಾದ ಜೀವಾಳ ಅದರ ಸ್ಕ್ರಿಪ್ಟ್ ಅಂಥ ನನ್ನ ಬಲವಾದ ನಂಬಿಕೆ. ಹಾಗಾಗಿ ನನ್ನ ಸಿನಿಮಾದಲ್ಲಿ ನಟಿಸುವ ಯಾವುದೋ ಹೀರೋ – ಹೀರೋಯಿನ್‌ಗಾಗಿ ಸ್ಕ್ರಿಪ್ಟ್  ನಲ್ಲಿ ಖಂಡಿತ ಬದಲಾವಣೆ ಮಾಡಿಕೊಳ್ಳಲಾರೆ. ರಚಿತಾ ಅವರು ಇರಲಿ, ಇಲ್ಲದಿರಲಿ ಅದೇ ಸ್ಕ್ರಿಪ್ಟ್ ಇಟ್ಟುಕೊಂಡು ಅಂದುಕೊಂಡ ದಿನದಂದು ಶೂಟಿಂಗ್‌ ಶುರು ಮಾಡುತ್ತೇವೆ’ ಎಂದು ಖಡಕ್‌ ಆಗಿ ಉತ್ತರಿಸಿದ್ದಾರೆ ದಿನೇಶ್‌ ಬಾಬು.

ಮತ್ತೂಂದು ಮೂಲಗಳ ಪ್ರಕಾರ ರಚಿತಾ ರಾಮ್‌ ಚಿತ್ರದ ಸ್ಕ್ರಿಪ್ಟ್ ನಲ್ಲಿ ಕೆಲ ಬದಲಾವಣೆಗಳನ್ನು ಬಯಸಿದ್ದರು ಎನ್ನಲಾಗಿದ್ದು, ಈ ಬದಲಾವಣೆಗೆ ಚಿತ್ರದ ನಿರ್ದೇಶಕ ದಿನೇಶ್‌ ಬಾಬು ಒಪ್ಪದಕಾರಣ ರಚಿತಾ “ಕಸ್ತೂರಿ ಮಹಲ್‌’ನಿಂದ ಹೊರನಡೆಯುವ ನಿರ್ಧಾರಕ್ಕೆ ಬಂದರು ಎನ್ನಲಾಗಿದೆ. ಒಟ್ಟಿನಲ್ಲಿ ಈ ಬಗ್ಗೆ ಒಂದಷ್ಟು ಅಂತೆ-ಕಂತೆಗಳು ಗಾಂಧಿನಗರದಲ್ಲಿ ಜೋರಾಗಿ ಹರಿದಾಡುತ್ತಿದ್ದು, ನಿಜಕ್ಕೂ ರಚಿತಾ ಈ ಚಿತ್ರದಿಂದ ಔಟ್‌ ಆಗಲುಕಾರಣವೇನು ಅನ್ನೋದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next