Advertisement

ರಬಕವಿ-ಬನಹಟ್ಟಿ: ನವೀಕರಣವಿಲ್ಲದೆ ನೆಲೆ ಕಾಣದ ನೇಕಾರರು

06:14 PM Oct 25, 2024 | Team Udayavani |

ಉದಯವಾಣಿ ಸಮಾಚಾರ
ರಬಕವಿ-ಬನಹಟ್ಟಿ: ಕಳೆದೆರಡು ಶತಮಾನಗಳ ಇತಿಹಾಸ ಹೊಂದಿರುವ ರಬಕವಿ-ಬನಹಟ್ಟಿ ಪಟ್ಟಣಗಳಲ್ಲಿ ಇದೀಗ ಜವಳಿ ಉದ್ಯಮ ಅಳಿವಿನಂಚಿನಲ್ಲಿದೆ. ಒಂದೆಡೆ ಮಾರುಕಟ್ಟೆ ನೆಲೆ ಸಿಗದೆ ವ್ಯಾಪಾರ ಹೀನಾಯ ಸ್ಥಿತಿಯಲ್ಲಿದ್ದರೆ, ಮತ್ತೂಂದೆಡೆ ನವೀಕರಣಗೊಳ್ಳದ ಕಾರಣ ಅದೇ ಹಳೆ ಕಾಲದ ಮಗ್ಗಗಳಿಂದಲೇ ಸೀರೆ ಉತ್ಪಾದನೆ ದೊಡ್ಡ ಸವಾಲಾಗಿದೆ.

Advertisement

ಕೈಮಗ್ಗ ನಂತರ ಅಟೋಮೆಟಿಕ್‌ ನಂತರ ಪಾವರ್‌ಲೂಮ್‌ಗೆ ಪರಿವರ್ತನೆ ಹೊಂದಿದ್ದ ನೇಕಾರರು ಕಳೆದ 50 ವರ್ಷಗಳಿಂದ ಕಿಂಚಿತ್‌ ಬದಲಾವಣೆಯಾಗದೆ ಅದೇ ಹಳೆಯ ಮಗ್ಗಗಳನ್ನೇ ಅವಲಂಬಿಸಿದ್ದರಿಂದ ಹೊಸ ನೈಪುಣ್ಯತೆ, ವಿನ್ಯಾಸದೊಂದಿಗೆ ಬದಲಾವಣೆ ಆಗದಿರುವುದೇ ಜವಳಿ ಹಿನ್ನೆ‌ಡೆಗೆ ಪ್ರಮುಖ ಕಾರಣ.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರಬಕವಿ-ಬನಹಟ್ಟಿ ತಾಲೂಕಿಗೆ ಪೂರಕ ಮೂಲಸೌಕರ್ಯ ಒದಗಿಸುವಲ್ಲಿ
ವಿಫಲಗೊಂಡಿವೆ. ಪ್ರಮುಖವಾಗಿ ಸೈಜಿಂಗ್‌, ವಾರ್ಪಿಂಗ್‌, ಕೋನ್‌ ಡೈಯಿಂಗ್‌, ನೂಲು ಅದಷ್ಟೇ ಅಲ್ಲದೆ ಜವಳಿ ಪಾರ್ಕ್‌ ಕೂಡ
ಸ್ಥಾಪನೆಗೊಂಡಿಲ್ಲ. ಈಗಾಗಲೇ ಅನುಭವ ಹೊಂದಿರುವ ನೇಕಾರ ಮಾಲಿಕರು ಅನ್ಯ ಉದ್ಯೋಗಗಳತ್ತ ವಾಲಿದ್ದಾರೆ. ಜವಳಿ ಕ್ಷೇತ್ರದಿಂದ ದೂರವಾಗುವಲ್ಲಿ ಕಾರಣವಾಗಿದ್ದರೆ, ಮತ್ತೂಂದೆಡೆ ದಿನದಿಂದ ದಿನಕ್ಕೆ ಯುವಕರು ನೇಕಾರಿಕೆಯತ್ತ ಸಾಗುವಲ್ಲಿ ಹಿಂದೇಟು ಹಾಕುತ್ತಿದ್ದಾರೆ.

ಹೈಟೆಕ್‌ ಮಗ್ಗಗಳು ಮೂಲೆಗುಂಪು: ಹೊಸ ವಿನ್ಯಾಸ, ತಾಂತ್ರಿಕತೆಯೊಂದಿಗೆ ರ್ಯಾಪಿಯರ್‌, ಕಂಪ್ಯೂಟರ್‌ ಜಕಾರ್ಡ್‌ ಸೇರಿದಂತೆ ಅನೇಕ ಮಗ್ಗಗಳು ಈಗಷ್ಟೇ ಅವಳಿ ನಗರದತ್ತ ದಾಪುಗಾಲು ಹಾಕಿವೆ. ಇವುಗಳ ನಿರ್ವಹಣೆ ದೊಡ್ಡ ಸವಾಲಾಗಿದ್ದು, ನೇಯ್ಗೆಯ ನೈಪುಣ್ಯತೆ ಹೊಂದಿರದ ಕಾರಣ ಮಾಲಿಕರು ಆರ್ಥಿಕ ಸಂಕಷ್ಟ ಎದುರಿಸುವುದರ ಜತೆಗೆ ಮಗ್ಗಗಳು ಧೂಳು ತಿನ್ನುತ್ತಿವೆ.

Advertisement

ಬೆರಳಣಿಕೆಯಷ್ಟು ಮಾಲಿಕರು ಮಾತ್ರ ಮಗ್ಗಗಳನ್ನು ಖರೀದಿಸಿದ್ದರಿಂದ ಇವರ ಹಾನಿ ಅನುಭವಿಸಿದ್ದರಿಂದ ಇತರೆ ಮಾಲಿಕರು
ಮಗ್ಗಗಳ ಖರೀದಿಗೆ ಹಿಂದೇಟು ಹಾಕುವಂತಾಗಿದೆ. ಸೀರೆ ಉತ್ಪಾದನೆಯಾಗಬೇಕಾದರೆ ಸುಮಾರು ಐದಾರು ವಿಭಾಗಗಳ ಘಟಕಗಳು ಅವಶ್ಯವಿದ್ದವು. ಪ್ರಮುಖವಾಗಿ ವಾರ್ಪಿಂಗ್‌, ಸೈಜಿಂಗ್‌, ನೂಲು ಸುತ್ತುವಿಕೆ ಸೇರಿದಂತೆ ಅನೇಕವಿದ್ದವು. ಇದೀಗ ಸೀರೆ ನೇಯ್ಗೆಗೆ ಮಾರುಕಟ್ಟೆಯಲ್ಲಿ ತಯಾರಿ ನೂಲು ದೊರಕುತ್ತಿರುವುದರಿಂದ ಕಚ್ಚಾ ಸಾಮಗ್ರಿಗಳ ಘಟಕಗಳು ನೇಪಥ್ಯಕ್ಕೆ ಸರಿಯುವುದಕ್ಕೆ ಕಾರಣವಾಗಿದೆ.

ಹಲವಾರು ಸಮಸ್ಯೆಗಳನ್ನು ಹೊತ್ತು ನಿಂತಿರುವ ಜವಳಿ ಕ್ಷೇತ್ರಕ್ಕೆ ಅಸಂಘಟನೆಯಿಂದ ಹೋರಾಟ ಅಥವಾ ಬೇಡಿಕೆಗಳಿಗೆ ಸ್ಪಂದನೆಗೆ ಸಮಸ್ಯೆ ಎದುರಾಗಿದೆ. ಪ್ರತಿ ಬಾರಿ ಸರ್ಕಾರದ ವಿರುದ್ಧ ಸಿಡಿದೇಳುತ್ತಿದ್ದ ನೇಕಾರರು ಕಳೆದೊಂದು ದಶಕದಿಂದ ಪ್ರಮುಖ ಹೋರಾಟಗಳಿಂದ ದೂರ ಉಳಿದಿದ್ದಾರೆ.

ಯೋಜನೆಗಳಿಗೆ ಸೀಮಿತ: ಸರ್ಕಾರದ ಯೋಜನೆಗಳಿಗೆ ಸೀಮಿತಗೊಂಡಿರುವ ನೇಕಾರರು ತಮ್ಮ ಕಾಯಕದ ನಿಷ್ಠೆ ಹಾಗೂ
ಪ್ರಯತ್ನ ತೋರುವಲ್ಲಿ ವಿಫಲಗೊಂಡಿದ್ದಾರೆ. ನೆರೆಯ ರಾಜ್ಯಗಳಲ್ಲಿನ ಅತಿ ವೇಗದ ಉದ್ಯೋಗ ಕ್ರಾಂತಿಗೆ ಕಿಂಚಿತ್‌ ಪೈಪೋಟಿ ಒಡ್ಡುವಲ್ಲಿ ಇಚ್ಛಾಶಕ್ತಿ ತೋರದಿರುವುದು ವಿಪರ್ಯಾಸ. 2005ಕ್ಕಿಂತಲೂ ಮೊದಲು ಸುಮಾರು 20 ಸಾವಿರಗಳಷ್ಟು ಮಗ್ಗಗಳು ಇದ್ದವು. ರಬಕವಿ-ಬನಹಟ್ಟಿ ಪಟ್ಟಣಕ್ಕೆ ಕಾಲಿಟ್ಟರೆ ಸಾಕು ಮಗ್ಗಗಳ ಶಬ್ದವೇ ಕೇಳುತ್ತಿತ್ತು. ಇದೀಗ ಕೇವಲ 6 ಸಾವಿರಕ್ಕೆ ಇಳಿಕೆ ಕಂಡು ಪಟ್ಟಣದ ಮಧ್ಯಭಾಗದಲ್ಲಿ ಮಗ್ಗಗಳಿಗೆ ಹುಡುಕಾಟ ನಡೆಸಬೇಕಾದ ಸ್ಥಿತಿ ಇದೆ.

ಜವಳಿ ಕ್ಷೇತ್ರದಲ್ಲಿ ಇದೀಗ ಸಾಕಷ್ಟು ಪೈಪೋಟಿ ನಡೆಯುತ್ತಿದ್ದು, ಇಂದಿನ ಯುವ ಜನಾಂಗ ಬೇರೆ ಬೇರೆ ಬಟ್ಟೆಗಳತ್ತ ಆಕರ್ಷಿತರಾಗುತ್ತಿದ್ದಾರೆ. ಜನರ ಅಭಿರುಚಿಗೆ ತಕ್ಕಂತೆ ಹೊಸ ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಸೀರೆಗಳನ್ನು ತರಲು ಪ್ರಯತ್ನಿಸಬೇಕಿದೆ. ಸರಕಾರ ಕೂಡಾ ಜವಳಿ ಪಾರ್ಕ್‌ ನಿರ್ಮಿಸಿ ಸೀರೆಗಳ ಮಾರಾಟಕ್ಕೆ ಅವಶ್ಯಕ ವಾತಾವರಣ ನಿರ್ಮಿಸಬೇಕಿದೆ.
*ಶಂಕರ ಜಾಲಿಗಿಡದ, ಅಧ್ಯಕ್ಷರು, ಪಾವರ್‌ಲೂಮ್‌ ಅಸೋಶಿಯೇಷನ್‌, ಬನಹಟ್ಟಿ.

■ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next