Advertisement

Rabkavi Banhatti: ನವೀಕರಣವಿಲ್ಲದೆ ನೆಲೆ ಕಾಣದ ನೇಕಾರರು

01:15 PM Oct 25, 2024 | Team Udayavani |

ರಬಕವಿ-ಬನಹಟ್ಟಿ: ಉತ್ತರ ಕರ್ನಾಟಕದ `ಮ್ಯಾಂಚೇಸ್ಟರ್’ ಎಂದೇ ಖ್ಯಾತಿ ಪಡೆದಿರುವ ರಬಕವಿ-ಬನಹಟ್ಟಿ ಅವಳಿ ಪಟ್ಟಣಗಳು ಇದೀಗ ಜವಳಿ ಉದ್ಯಮದಲ್ಲಿ ನವೀಕರಣವಿಲ್ಲದೇ ಜವಳಿ ಕ್ಷೇತ್ರ ಉಳಿವಿಗಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿರುವುದು ನಿಜಕ್ಕೂ ದುರಂತವೇ ಸರಿ.

Advertisement

ನೇಕಾರಿಕೆಗೆ ಕಳೆದೆರಡು ಶತಮಾನಗಳ ಇತಿಹಾಸ ಹೊಂದಿರುವ ಈ ಪಟ್ಟಣಗಳು ಇದೀಗ ಜವಳಿ ಉದ್ದಿಮೆ ಅಳಿವಿನಂಚಿನ ತೂಗುಯ್ಯಾಲೆಯಲ್ಲಿವೆ. ಒಂದೆಡೆ ಮಾರುಕಟ್ಟೆ ನೆಲೆ ಸಿಗದೆ ವ್ಯಾಪಾರ ಹೀನಾಯ ಸ್ಥಿತಿಯಲ್ಲಿದ್ದರೆ, ಮತ್ತೊಂದೆಡೆ ನವೀಕರಣಗೊಳ್ಳದ ಕಾರಣ ಅದೇ ಹಳೇ ಕಾಲದ ಮಗ್ಗಗಳಿಂದಲೇ ಸೀರೆ ಉತ್ಪಾದನೆ ದೊಡ್ಡ ಸವಾಲಾಗಿದೆ.

ಬದಲಾಗದ ನೇಯ್ಗೆ: ಕೈಮಗ್ಗ ನಂತರ ಅಟೋಮೇಟಿಕ್ ನಂತರ ಪಾವರ್‌ಲೂಮ್‌ಗೆ ಪರಿವರ್ತನೆ ಹೊಂದಿದ್ದ ನೇಕಾರರು ಕಳೆದ 50 ವರ್ಷಗಳಿಂದ ಕಿಂಚಿತ್ತೂ ಬದಲಾವಣೆಯಾಗದೆ ಅದೇ ಹಳೆಯ ಮಗ್ಗಗಳನ್ನೇ ಅವಲಂಬಿತರಾಗಿ ಹೊಸ ನೈಪುಣ್ಯತೆ, ವಿನ್ಯಾಸದೊಂದಿಗೆ ಬದಲಾವಣೆಯಾಗದಿರುವುದೇ ಜವಳಿ ಹಿನ್ನಡೆಗೆ ಪ್ರಮುಖ ಕಾರಣ.

ಸೌಕರ್ಯಗಳಿಲ್ಲ: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜವಳಿ ಪ್ರಧಾನ ಕ್ಷೇತ್ರವಾಗಿರುವ ರಬಕವಿ-ಬನಹಟ್ಟಿ ತಾಲೂಕಿಗೆ ಪೂರಕ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲಗೊಂಡಿದೆ. ಪ್ರಮುಖವಾಗಿ ಸೈಜಿಂಗ್, ವಾರ್ಪಿಂಗ್, ಕೋನ್ ಡೈಯಿಂಗ್, ನೂಲು ಅದಷ್ಟೇ ಅಲ್ಲದೆ ಜವಳಿ ಪಾರ್ಕ್ ಕೂಡ ಸ್ಥಾಪನೆಗೊಂಡಿಲ್ಲ.

Advertisement

ಅನ್ಯ ಉದ್ಯೋಗ: ಈಗಾಗಲೇ ಅನುಭವ ಹೊಂದಿರುವ ನೇಕಾರ ಮಾಲಿಕರು ಅನ್ಯ ಉದ್ಯೋಗಗಳತ್ತ ಸಾಗಿದ್ದು, ಜವಳಿ ಕ್ಷೇತ್ರದಿಂದ ದೂರವಾಗುವಲ್ಲಿ ಕಾರಣವಾಗಿದ್ದರೆ, ಮತ್ತೊಂದೆಡೆ ದಿನದಿಂದ ದಿನಕ್ಕೆ ಯುವಕರು ನೇಕಾರಿಕೆಯತ್ತ ಸಾಗುವಲ್ಲಿ ಹಿಂದೇಟು ಹಾಕುತ್ತಿದ್ದಾರೆ.

ಹೈಟೆಕ್ ಮಗ್ಗಗಳು ಮೂಲೆಗುಂಪು: ಹೊಸ ವಿನ್ಯಾಸ, ತಾಂತ್ರಿಕತೆಯೊಂದಿಗೆ ರ‍್ಯಾಪಿಯರ್, ಕಂಪ್ಯೂಟರ್ ಜಕಾರ್ಡ್ ಸೇರಿದಂತೆ ಅನೇಕ ಮಗ್ಗಗಳು ಈಗಷ್ಟೇ ಅವಳಿ ನಗರದತ್ತ ದಾಪುಗಾಲು ಹಾಕಿವೆ. ಇವುಗಳ ನಿರ್ವಹಣೆ ದೊಡ್ಡ ಸವಾಲಾಗಿದ್ದು, ನೇಯ್ಗೆಯ ನೈಪುಣ್ಯತೆಗಾರರು ದೊರಕದ ಕಾರಣ ಮಾಲಿಕರು ಆರ್ಥಿಕ ಸಂಕಷ್ಟ ಎದುರಿಸುವುದರ ಜೊತೆಗೆ ಮಗ್ಗಗಳು ಧೂಳು ತಿನ್ನುತ್ತಿವೆ. ಬೆರಳಣಿಕೆಯಷ್ಟು ಮಾಲಿಕರು ಮಾತ್ರ ಮಗ್ಗಗಳನ್ನು ಖರೀದಿಸಿದ್ದರಿಂದ ಇವರ ಹಾನಿಯಿಂದಾಗಿ ಇತರೆ ಮಾಲಿಕರು ಮಗ್ಗಗಳ ಖರೀದಿಗೆ ಹಿಂದೇಟು ಹಾಕುವಂತಾಗಿದೆ.

ಕಚ್ಚಾ ಸಾಮಗ್ರಿ ತಯಾರಿಕಾ ಘಟಕ ನೇಪಥ್ಯಕ್ಕೆ: ಸೀರೆ ಉತ್ಪಾದನೆ ಆಗಬೇಕಾದರೆ ಸುಮಾರು ಐದಾರು ವಿಭಾಗಗಳ ಘಟಕಗಳು ಅವಶ್ಯಕತೆ ಇದ್ದವು. ಪ್ರಮುಖವಾಗಿ ವಾರ್ಪಿಂಗ್, ಸೈಜಿಂಗ್, ನೂಲು ಸುತ್ತುವಿಕೆ ಸೇರಿದಂತೆ ಅನೇಕವಿದ್ದವು. ಇದೀಗ ಸೀರೆ ನೇಯ್ಗೆಗೆ ಮಾರುಕಟ್ಟೆಯಲ್ಲಿ ತಯಾರಿ ನೂಲು ದೊರಕುತ್ತಿರುವುದರಿಂದ ಕಚ್ಚಾ ಸಾಮಗ್ರಿಗಳ ಘಟಕಗಳು ನೇಪಥ್ಯಕ್ಕೆ ಸರಿಯುವಲ್ಲಿ ಕಾರಣ.

ಅಸಂಘಟಿತ: ಹಲವಾರು ಸಮಸ್ಯೆಗಳನ್ನು ಹೊತ್ತು ನಿಂತಿರುವ ಜವಳಿ ಕ್ಷೇತ್ರಕ್ಕೆ ಅಸಂಘಟನೆಯಿಂದ ಹೋರಾಟ ಅಥವಾ ಬೇಡಿಕೆಗಳಿಗೆ ಸ್ಪಂದನೆಗೆ ಸಮಸ್ಯೆ ಎದುರಾಗಿದೆ. ಪ್ರತಿ ಬಾರಿ ಸರ್ಕಾರದ ವಿರುದ್ಧ ಸಿಡಿದೇಳುತ್ತಿದ್ದ ನೇಕಾರರು ಕಳೆದೊಂದು ದಶಕದಿಂದ ಪ್ರಖರ ಹಾಗು ಪ್ರಮುಖ ಹೋರಾಟಗಳಿಂದ ದೂರ ಉಳಿಯುವಲ್ಲಿ ಕಾರಣವಾಗಿದೆ.

ಯೋಜನೆಗಳಿಗೆ ಸೀಮಿತ: ಸರ್ಕಾರ ಕೊಡ ಮಾಡುವ ಯೋಜನೆಗಳಿಗೆ ಸೀಮಿತಗೊಂಡಿರುವ ನೇಕಾರರು ತಮ್ಮ ಕಾಯಕದ ನಿಷ್ಠೆ ಹಾಗೂ ಪ್ರಯತ್ನ ತೋರುವಲ್ಲಿ ವೈಫಲ್ಯ ಕಾಣುವಲ್ಲಿ ಕಾರಣವಾಗಿದ್ದು, ನೆರೆಯ ರಾಜ್ಯಗಳಲ್ಲಿನ ಅತೀ ವೇಗದ ಉದ್ಯೋಗ ಕ್ರಾಂತಿಗೆ ಕಿಂಚಿತ್ತೂ ಪೈಪೋಟಿ ಒಡ್ಡುವಲ್ಲಿ ಇಚ್ಛಾಶಕ್ತಿ ತೋರದಿರುವುದು ವಿಪರ್ಯಾಸ.

ಮಗ್ಗಗಳು 20 ರಿಂದ 6 ಸಾವಿರಕ್ಕೆ: 2005ಕ್ಕಿಂತಲೂ ಮೊದಲು ಸುಮಾರು 20 ಸಾವಿರಗಳಷ್ಟು ಮಗ್ಗಗಳನ್ನು ಹೊಂದಿದ್ದ ರಬಕವಿ-ಬನಹಟ್ಟಿ ಪಟ್ಟಣಕ್ಕೆ ಕಾಲಿಟ್ಟರೆ ಸಾಕು ಮಗ್ಗಗಳ ಶಬ್ದದಿಂದಲೇ ತುಂಬುತ್ತಿತ್ತು. ಇದೀಗ ಕೇವಲ 6 ಸಾವಿರಕ್ಕೆ ಇಳಿಕೆ ಕಂಡು ಪಟ್ಟಣದ ಮಧ್ಯಭಾಗದಲ್ಲಂತು ಮಗ್ಗಗಳಿಗೆ ಹುಡುಕಾಟ ನಡೆಸಬೇಕಾದ ಸ್ಥಿತಿಯಾಗಿದೆ.

ಒಟ್ಟಾರೆ ಜವಳಿ ಕ್ಷೇತ್ರದಿಂದ ಮಂಕಾಗುವಲ್ಲಿ ಕಾರಣವಾಗುತ್ತಿರುವ ಈ ಭಾಗದ ನೇಕಾರರಿಗೆ ಸ್ವಯಂ ತಯಾರಿ ಜೊತೆಗೆ ಸರ್ಕಾರವೂ ಕೈ ಜೋಡಿಸಿದ್ದಲ್ಲಿ ಮೊದಲಿನ ಗತವೈಭವ ಮರುಕಳಿಸಲಿದೆ. ಇಲ್ಲವಾದಲ್ಲಿ ಮಗ್ಗಗಳ ಸಂಖ್ಯೆಯೊಂದಿಗೆ ನೇಕಾರರ ಸಂಖ್ಯೆಯೂ ಕಡಿಮೆಯಾಗುವುದರೊಂದಿಗೆ ಸಂಪೂರ್ಣ ಅವನತಿ ಕಾಣುವುದರಲ್ಲಿ ಎರಡು ಮಾತಿಲ್ಲ.

ಜವಳಿ ಕ್ಷೇತ್ರದಲ್ಲಿ ಇದೀಗ ಸಾಕಷ್ಟು ಪೈಪೋಟಿಗಳು ನಡೆಯುತ್ತಿದ್ದು, ಇಂದಿನ ಯುವ ಜನಾಂಗ ಬೇರೆ ಬೇರೆ ಬಟ್ಟೆಗಳತ್ತ ಆಕರ್ಷಿತರಾಗುತ್ತಿದ್ದು, ಸೀರೆಗಳ ಮಾರಾಟ ಕುಂಠಿತಗೊಂಡಿದೆ. ಅದನ್ನ ಹೊಸ ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ತರಲು ಪ್ರಯತ್ನ ಮಾಡಬೇಕಿದೆ. ಅದಕ್ಕೆ ಸರಕಾರ ಕೂಡಾ ಜವಳಿ ಪಾರ್ಕ ನಿರ್ಮಿಸಿ ಸೀರೆಗಳ ಮಾರಾಟಕ್ಕೆ ಅವಶ್ಯಕ ವಾತಾವರಣ ನಿರ್ಮಿಸಿ ಕೊಡಬೇಕಾಗಿದೆ.  –ಶಂಕರ ಜಾಲಿಗಿಡದ, ಅಧ್ಯಕ್ಷರು ಪಾವರಲೂಮ ಅಸೋಶಿಯೇಷನ್, ಬನಹಟ್ಟಿ

-ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next