Advertisement

Putturu: ವಿಶ್ವ ಹಿಂದೂ ಪರಿಷತ್‌ನಿಂದ ಸಾಮಾಜಿಕ ಸಮರಸದ ಭಾವ: ಗೋಪಾಲ್‌ ಜಿ

03:37 AM Oct 24, 2024 | Team Udayavani |

ಪುತ್ತೂರು: ಇಡೀ ದೇಶದಲ್ಲಿ ಸಾಮಾಜಿಕ ಸಮರಸದ ಭಾವವನ್ನು ಸಾರುವ ದೊಡ್ಡ ಕಾರ್ಯವನ್ನು ವಿಶ್ವ ಹಿಂದೂ ಪರಿಷತ್‌ ಮಾಡಿದೆ ಎಂದು ವಿಹಿಂಪ ಕೇಂದ್ರೀಯ ಕಾರ್ಯದರ್ಶಿ ಗೋಪಾಲ್‌ ಜಿ ಹೇಳಿದರು.

Advertisement

ನಗರದ ವಿಹಿಂಪ ನಿವೇಶನದಲ್ಲಿ ವಿಹಿಂಪನ ನೂತನ ಜಿಲ್ಲಾ ಕಾರ್ಯಾ ಲಯಕ್ಕೆ ಭೂಮಿ ಪೂಜಾ ಕಾರ್ಯಕ್ರಮದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪರಿಷದ್‌ 60 ವರ್ಷಗಳನ್ನು ಪೂರೈಸಿದ್ದು, ಈ ಅವಧಿಯಲ್ಲಿ ಸಾಮಾಜಿಕ ಪರಿವರ್ತನೆ ತರಲು ಶ್ರಮಿಸಿದೆ ಎಂದರು.

ಮತಾಂತರಕ್ಕೆ ತಡೆ ಒಡ್ಡುವ ಕಾರ್ಯದಲ್ಲಿ ವಿಎಚ್‌ಪಿ ಪಾತ್ರ ಹಿರಿದು. ಅನ್ಯಧರ್ಮಕ್ಕೆ ಮತಾಂತರವಾಗಿದ್ದ 15 ಲಕ್ಷಕ್ಕೂ ಅಧಿಕ ಮಂದಿಯನ್ನು ಮರಳಿ ಮಾತೃಧರ್ಮಕ್ಕೆ ಕರೆ ತರುವುದು, ಹಿಂದೂ ಶ್ರದ್ಧಾ ಕೇಂದ್ರಗಳ ಉಳಿವು, ಗೋಹತ್ಯೆಗೆ ತಡೆ ಮುಂತಾದ ಹಲವು ಧರ್ಮ ಕಾರ್ಯ ವನ್ನು ಮಾಡಿದೆ ಎಂದರು.

ಸಂಸ್ಕೃತಿ ಉಳಿಸುವ ಕಾರ್ಯ ಅಗತ್ಯ
ಸುಬ್ರಹ್ಮಣ್ಯ ನರಸಿಂಹ ಸಂಪುಟದ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ ಮಾತನಾಡಿ, ಸಂಸ್ಕೃತಿಯನ್ನು ಉಳಿಸುವ ಕಾರ್ಯ ಆಗಬೇಕು. ಅದರ ಭಾಗವಾಗಿ ವಿಎಚ್‌ಪಿ ಕಾರ್ಯಾಲಯ ಇದೆ. ನಮ್ಮ ಧರ್ಮ, ಭಾಷೆಯನ್ನು ಜೀವಂತವಾಗಿಡಲು ಇದ ರಲ್ಲಿ ಪೂರಕ ಕಾರ್ಯಕ್ರಮ ನಡೆಯಬೇಕು. ಹಿಂದೂ ಯುವಜನರಿಗೆ ಆತ್ಮರಕ್ಷಣೆಯ ವಿದ್ಯೆಗಳ ಅಗತ್ಯ ಇದೆ ಎಂದರು.

ವಿಹಿಂಪ ದಕ್ಷಿಣ ಪ್ರಾಂತದ ಕಾರ್ಯಾಧ್ಯಕ್ಷ ಎಂ.ಬಿ ಪುರಾಣಿಕ್‌ ಅಧ್ಯಕ್ಷತೆ ವಹಿಸಿದ್ದರು. ಕಲ್ಲಾರೆ ಶ್ರೀ ಗುರು ರಾಘವೇಂದ್ರ ಮಠದ ಅರ್ಚಕ ವೇ| ರಾಘವೇಂದ್ರ ಉಡುಪ ಭೂಮಿ ಪೂಜೆ ನೆರವೇರಿಸಿದರು. ವಿಹಿಂಪ ಕರ್ನಾಟಕ ಪ್ರಾಂತದ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರೀ, ರಾಷ್ಟ್ರೀಯ ಸ್ವಯಂಸೇವಕ ಸಂಘಚಾಲಕ್‌ ವಿನಯಚಂದ್ರ, ವಿ.ಹಿಂ.ಪ. ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಕೊಳತ್ತಾಯ ಉಪಸ್ಥಿತರಿದ್ದರು. ವಿಶಾಖ್‌ ರೈ ವೈದಿಕ ಮಂತ್ರ, ಸುಕೀರ್ತಿ, ಜಯಲಕ್ಷ್ಮಿ  ಬಳಗ ಪ್ರಾರ್ಥಿಸಿದರು. ವಿಹಿಂಪ ಜಿಲ್ಲಾಧ್ಯಕ್ಷ ಮತ್ತು ಕಟ್ಟಡ ಸಮಿತಿ ಕಾರ್ಯದರ್ಶಿ ಡಾ| ಶ್ರೀಕೃಷ್ಣಪ್ರಸನ್ನ ಸ್ವಾಗತಿಸಿದರು.

Advertisement

ವಿಎಚ್‌ಪಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಶಾಸಕ ಅಶೋಕ್‌ ರೈ!
ಪುತ್ತೂರು: ವಿಹಿಂಪ ನ ನೂತನ ಜಿಲ್ಲಾ ಕಾರ್ಯಾಲಯದ ಭೂಮಿ ಪೂಜೆ ಕಾರ್ಯಕ್ರಮ ದಲ್ಲಿ ಕಾಂಗ್ರೆಸ್‌ ಶಾಸಕ ಅಶೋಕ್‌ ಕುಮಾರ್‌ರೈ ಭಾಗವಹಿಸಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ. ಅರುಣ್‌ ಪುತ್ತಿಲ ಅವರಿಗೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಅಶೋಕ್‌ ಕುಮಾರ್‌ ರೈ ಆಗಮಿಸಿರುವ ವಿಷಯ ಸದ್ದು ಮಾಡಿದೆ. ಸಭಾ ವೇದಿಕೆಗೆ ಶಾಸಕರನ್ನು ಕರೆದು ಕೇಸರಿ ಶಾಲು ಹಾಕಿ ಸ್ವಾಗತಿಸಲಾಯಿತು. ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಕೂಡ ಪಾಲ್ಗೊಂಡಿದ್ದರು.

ಜಾಗಕ್ಕಾಗಿ ಐವರ ಶ್ರಮ
ಕಟ್ಟಡ ಸಮಿತಿ ಅಧ್ಯಕ್ಷ ಯು. ಪೂವಪ್ಪ ಮಾತನಾಡಿ, 35 ವರ್ಷಗಳ ಹಿಂದೆ ಪೇಜಾವರ ಶ್ರೀಗಳ 50ನೇ ವರ್ಷದ ಕಾರ್ಯಕ್ರಮಕ್ಕೆ ಹೋಗಿದ್ದಾಗ ಈ ಜಾಗವನ್ನು ಭೀಮ್‌ ಭಟ್‌ ಅವರು 1.5 ಲಕ್ಷ ರೂ.ಗೆ ಸೀರತ್‌ ಕಮಿಟಿಗೆ ಮಾರುತ್ತಿರುವ ವಿಷಯ ತಿಳಿಯಿತು. ನಾನು, ರಾಮಭಟ್‌, ಜಿ.ಎಲ್‌ ಆಚಾರ್ಯ ಸಹಿತ ಐವರು ಭೀಮ್‌ ಭಟ್‌ ಮನೆಗೆ ಹೋಗಿ ಕೇಳಿದಾಗ,1.60 ಲಕ್ಷ ರೂ.ನೀಡಿದರೆ ನಿಮಗೆ ಕೊಡುವೆ ಎಂದರು.

ಮನೆ ಮನೆಗೆ ತೆರಳಿ ಹಣ ಸಂಗ್ರಹಿಸಿ ಜಾಗ ಖರೀದಿಸಿ ಹಿಂದೂ ಕಲ್ಯಾಣ ಟ್ರಸ್ಟ್‌ ಹೆಸರಿನಲ್ಲಿ ನೋಂದಣಿ ಮಾಡಿದೆವು. ಕ್ರಮೇಣ ವಿಎಚ್‌ಪಿಗೆ ನೀಡಲಾಯಿತು. ಸಾಲ ಇದ್ದ ಕಾರಣ 50ರಲ್ಲಿ ಜಾಗದಲ್ಲಿ 10 ಸೆಂಟ್ಸ್‌ ಮಾರಿ, ಉಳಿಕೆ ಹಣದಲ್ಲಿ ಸಂಘಟನೆಗೋಸ್ಕರ ಬೇರೆಡೆ 3.5 ಎಕ್ರೆ ಜಾಗವನ್ನು ಖರೀದಿಸಿದೆವು ಎಂದರು. ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಶಾಸಕರಾದ ಸಂಜೀವ ಮಠಂದೂರು ಸಹಿತ ಪ್ರಮುಖರು ಉಪಸ್ಥಿತರಿದ್ದರು.

ನೋವು ವ್ಯಕ್ತಪಡಿಸಿದ ಪೂವಪ್ಪ
ಪ್ರತಿ ಹಿಂದೂ ಇಲ್ಲಿಗೆ ಬರಬೇಕು ಅನ್ನುವ ನನ್ನ ಅಪೇಕ್ಷೆಯಾಗಿತ್ತು. ಆದರೆ ಇಂದು ನಡೆದ ಘಟನೆ ನನಗೆ ನೋವು ತಂದಿದೆ. 1974ರಿಂದ ನಾನು ವಿಎಚ್‌ಪಿನಲ್ಲಿದ್ದೇನೆ. ಮೊದಲ ಬಾರಿಗೆ ಈ ಸ್ಥಳಕ್ಕೆ ಪೊಲೀಸರು ಬರುವಂತಾಯಿತು ಎಂದು ಭೂಮಿ ಪೂಜೆ ಸಂದರ್ಭದಲ್ಲಿ ಪುತ್ತಿಲ ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರ ಮಧ್ಯೆ ನಡೆದ ಸಂಘರ್ಷದ ಬಗ್ಗೆ ಯು.ಪೂವಪ್ಪ ನೋವು ತೋಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next