Advertisement

Puttur: ಪುತ್ತೂರು ಪ್ರತಿ ಬೂತ್‌ನಲ್ಲಿ ಬಿಜೆಪಿ ಮಹಾಸಂಪರ್ಕ ಅಭಿಯಾನ

10:36 AM May 01, 2023 | Team Udayavani |

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ರವಿವಾರ ಬಿಜೆಪಿ ವತಿಯಿಂದ 220 ಬೂತ್‌ಗಳಲ್ಲಿ ಮಹಾಸಂಪರ್ಕ ಅಭಿಯಾನ ನಡೆಯಿತು. ಸಾವಿರಾರು ಕಾರ್ಯಕರ್ತರು ಪಾಲ್ಗೊಂಡರು. ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರ ಸಾರಥ್ಯದಲ್ಲಿ ತಾಲೂಕಿನ ಪ್ರತಿ ಬೂತ್‌ನಲ್ಲಿ ಮತದಾರರನ್ನು ಸಂಪರ್ಕಿಸಿ, ಬಿಜೆಪಿ ಸರಕಾರದ ಸಾಧನೆಗಳನ್ನು ಮನೆ-ಮನೆಗೆ ತಲುಪಿಸಲಾಯಿತು.

Advertisement

ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಮಾತನಾಡಿ, ಕರ್ನಾಟಕದಲ್ಲಿ ಕಳೆದ ಮೂರುವರೆ ವರ್ಷದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರವು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿದೆ. ಪುತ್ತೂರು ಕ್ಷೇತ್ರಕ್ಕೆ ಸಾವಿರ ಕೋ.ರೂ. ಮಿಕ್ಕಿ ಅನುದಾನವನ್ನು ಬಿಡುಗಡೆ ಮಾಡಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದ ಕಾರಣ ಅಭಿವೃದ್ಧಿ ಸಾಧ್ಯವಾಗಿದೆ. ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಿದ್ದರೆ ಮುಂದೆಯು ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿರಬೇಕು ಎಂದರು.

ಬಹುಮತ ಪಡೆಯಲು 130ಕ್ಕೂ ಅಧಿಕ ಸ್ಥಾನಗಳನ್ನು ಬಿಜೆಪಿ ಪಡೆಯಬೇಕಿದ್ದು, ಅದಕ್ಕಾಗಿ ಒಂದೊಂದು ಕ್ಷೇತ್ರವೂ ಅಮೂಲ್ಯ. ಒಂದೊಂದು ಕ್ಷೇತ್ರದಲ್ಲೂ ಅಧಿಕಾರ ಪಡೆಯಬೇಕಿದ್ದರೆ, ಒಂದೊಂದು ಮತವೂ ಅಮೂಲ್ಯ. ಹಾಗಾಗಿ ಮತ ಪೋಲಾಗದಂತೆ ಎಚ್ಚರಿಕೆ ವಹಿಸಿ, ಬಿಜೆಪಿಯನ್ನು ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಕೇಂದ್ರಕ್ಕೆ ಬಿಜೆಪಿ ಪೂರಕ
ಪುತ್ತೂರು ಜಿಲ್ಲಾ ಕೇಂದ್ರ ಆಗಬೇಕು ಎಂಬ ಹಿನ್ನೆಲೆಯಲ್ಲಿ ಶಾಸಕ ಸಂಜೀವ ಮಠಂದೂರು ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಈ ಎಲ್ಲಾ ಅಭಿವೃದ್ಧಿ ಕಾರ್ಯಗಳು ಒಂದಕ್ಕೊಂದು ಪೂರಕ. ಆದ್ದರಿಂದ ಈಗ ನಡೆದಿರುವ ಕಾಮಗಾರಿಗಳಿಗೆ ಒಂದು ರೂಪು ನೀಡಿ, ಮತ್ತೆ ಪುತ್ತೂರನ್ನು ಜಿಲ್ಲಾ ಕೇಂದ್ರವಾಗಿ ಮಾಡಬೇಕಾದರೆ ಮತದಾರರ ಆಶೀರ್ವಾದ ಬಿಜೆಪಿ ಮೇಲಿರಬೇಕು ಎಂದು ಆಶಾ ತಿಮ್ಮಪ್ಪ ಹೇಳಿದರು.

34 ಸಾವಿರ ಮತದಾರರ ಸಂಪರ್ಕ
ಪುತ್ತೂರು ವಿಧಾನಸಭಾ ಕ್ಷೇತ್ರದ 220 ಬೂತ್‌ಗಳಲ್ಲಿ ಮನೆ ಭೇಟಿ ನಡೆಯಿತು. 4860 ಕಾರ್ಯಕರ್ತರು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದು, 11,450 ಮನೆಗಳನ್ನು ಸಂಪರ್ಕಿಸಲಾಯಿತು. 34 ಸಾವಿರ ಮತದಾರರನ್ನು ತಲುಪಲಾಯಿತು. ಬಿಜೆಪಿ ಪರವಾಗಿರುವ ಘೋಷಣೆಗಳೊಂದಿಗೆ ನಡೆದ ಅಭಿಯಾನದಲ್ಲಿ ಕಾರ್ಯಕರ್ತರು ಉತ್ಸಾಹದಿಂದ ಪಾಲ್ಗೊಂಡರು. ಕೆಲ ಕಾರ್ಯಕರ್ತರ ಮನೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮನ್‌ ಕಿ ಬಾತ್‌ ಕಾರ್ಯಕ್ರಮ ವೀಕ್ಷಿಸಲಾಯಿತು. ಅಭಿಯಾನದುದ್ದಕ್ಕೂ ಮಹಿಳೆಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next