Advertisement

ಪುತ್ತಿಲ ಪರಿವಾರ ಬಿಜೆಪಿ ವಿಲೀನ ಖಚಿತ ; ದಿನ ನಿಗದಿಯಷ್ಟೇ ಬಾಕಿ

12:50 AM Feb 09, 2024 | Team Udayavani |

ಪುತ್ತೂರು : ಸ್ಥಾನಮಾನ, ಪಕ್ಷ ಸೇರ್ಪಡೆ ಸಂಬಂಧ ಪುತ್ತಿಲ ಪರಿವಾರವು ಬಿಜೆಪಿಗೆ ನೀಡಿದ್ದ ಮೂರು ದಿನಗಳ ಗಡುವು ಫೆ.8 ರಂದು ಮುಕ್ತಾಯಗೊಳ್ಳುವ ಕೆಲ ಹೊತ್ತಲ್ಲೇ ಪುತ್ತಿಲ ಪರಿವಾರವನ್ನು ತಮ್ಮ ಪಕ್ಷದ ಜತೆ ವಿಲೀನಗೊಳಿಸುವ ಪ್ರಸ್ತಾವಕ್ಕೆ ಬಿಜೆಪಿ ವರಿಷ್ಠರು ಹಸುರು ನಿಶಾನೆ ತೋರಿದ್ದಾರೆ.

Advertisement

ಅರುಣ್‌ ಪುತ್ತಿಲ ಅವರಿಗೆ ಗೌರವಯುತ ಹುದ್ದೆ ನೀಡಲು ವರಿಷ್ಠರು ನಿರ್ಧರಿಸಿದ್ದು, ಈ ಕುರಿತ ಮಾಹಿತಿಯನ್ನು ಪುತ್ತಿಲ ಪರಿವಾರಕ್ಕೆ ರವಾನಿಸುವ ಮೂಲಕ ಒಂಭತ್ತು ತಿಂಗಳ ವಿರಸ ಶಮನಕ್ಕೆ ಮಂಗಳ ಹಾಡಲು ಮುಹೂರ್ತ ಇಟ್ಟಂತಾಗಿದೆ. ಇನ್ನು ದಿನ ನಿಗದಿಯಷ್ಟೇ ಬಾಕಿ ಇದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ , ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್‌ ಕೆ.ವಿ. ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಈ ಕುರಿತು ಅರುಣ್‌ ಪುತ್ತಿಲ ಜತೆ ಮಾತನಾ ಡಿದ್ದು ಪಕ್ಷದಲ್ಲಿ ಗೌರವಯುತ ಸ್ಥಾನ ನೀಡುವುದಾಗಿ ತಿಳಿಸಿದ್ದಾರೆ. ಪಕ್ಷದ ಹಿರಿಯರ ಮಾತಿಗೆ ಅರುಣ್‌ ಪುತ್ತಿಲ ಸಮ್ಮತಿ ಸೂಚಿಸಿರುವುದಾಗಿ ಪುತ್ತಿಲ ಪರಿ ವಾರದ ಉನ್ನತ ಮೂಲಗಳು ತಿಳಿಸಿವೆ.

ಪುತ್ತಿಲ ಪರಿವಾರ ಹಾಗೂ ಬಿಜೆಪಿಗೆ ಸೇರಿದ ಎಲ್ಲರಿಗೂ ಇಂದಿನ ಬೆಳವಣಿಗೆ ಖುಷಿ ಸಂದಿದೆ ಎಂದು ಪುತ್ತಿಲ ಪರಿವಾರ ಪ್ರತಿಕ್ರಿಯಿಸಿದೆ. ಸದ್ಯವೇ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರನ್ನು ಅರುಣ್‌ ಪುತ್ತಿಲ ಭೇಟಿಯಾಗಲಿದ್ದಾರೆ. ಪುತ್ತಿಲ ಪರಿವಾರದ ವಿಲೀನವಷ್ಟೆ ಬಾಕಿ ಎಂದು ತಿಳಿಸಿದೆ.

ಮೂರು ದಿನದ ಗಡು
ಫೆ.5 ರಂದು ನಡೆದ ಪುತ್ತಿಲ ಪರಿವಾರದ ಸಮಾಲೋಚನ ಸಭೆಯಲ್ಲಿ ಗಡುವು ನೀಡಲಾಗಿತ್ತು. ಹೀಗಾಗಿ ಬಿಜೆಪಿ ನಡೆ ಏನಿರಬಹುದು ಅನ್ನುವ ಕುತೂಹಲ ಕಾರ್ಯಕರ್ತರಲ್ಲಿ ಉಳಿದಿತ್ತು. ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್‌ ಕುಮಾರ್‌ ಪುತ್ತಿಲ ಅವರಿಗೆ ಮಂಡಲದ ಅಧ್ಯಕ್ಷ ಸ್ಥಾನ ನೀಡಬೇಕು ಅಥವಾ ಪುತ್ತಿಲ ಪರಿವಾರದ ಅಧ್ಯಕ್ಷ ಅಥವಾ ಕಾರ್ಯದರ್ಶಿಗೆ ಮಂಡಲದ ಹೊಣೆ ನೀಡಬೇಕು ಅನ್ನುವ ಬೇಡಿಕೆಯನ್ನು ಪುತ್ತಿಲ ಪರಿವಾರ ಮುಂದಿಟ್ಟಿತ್ತು. ಈ ಬೇಡಿಕೆಗೆ ಬಿಜೆಪಿ, ಸಂಘ ಪರಿವಾರದ ಕೆಲವು ನಾಯಕರು, ಅಧಿಕಾರದ ಸ್ಥಾನಮಾನ ಕೇಳಿಲ್ಲ. ಪಕ್ಷ ಸಂಘಟನೆಯ ಜವಾಬ್ದಾರಿ ಕೇಳಿದ್ದಾರೆ. ಹಾಗಾಗಿ ನೀಡಿ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರೆ, ಕೆಲವು ನಾಯಕರು ಈ ಬೇಡಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಬಹಿರಂಗ ಬೇಡಿಕೆಗಳಿಗೆ ಸ್ಪಂದಿಸಿದಲ್ಲಿ ತಪ್ಪು ಸಂದೇಶ ರವಾನಿಸಿದಂತಾದೀತು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಹೀಗಾಗಿ ಜಿಲ್ಲಾ ಸಮಿತಿಯು ಪುತ್ತಿಲ ಪರಿವಾರದ ಸೇರ್ಪಡೆ ವಿಷಯವನ್ನು ವರಿಷ್ಠರ ಅಂಗಳದಲ್ಲಿ ಇರಿಸಲಾಗಿತ್ತು.

Advertisement

ಈ ಕುರಿತು ಪ್ರತಿಕ್ರಿಯಿಸಿದ ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತ, ಇಂದಿನ ಬೆಳವಣಿಗೆ ನಮ್ಮ ನಿರೀಕ್ಷೆಗೆ ತಕ್ಕಂತೆ ನಡೆದಿದೆ. ಹೀಗಾಗಿ ಉಭಯ ಕಾರ್ಯಕರ್ತರ ಅಪೇಕ್ಷೆ ಕೆಲವು ದಿನಗಳಲ್ಲಿ ಕೈಗೂಡಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next