Advertisement

ಉಕ್ರೇನ್‌ಗೆ ಮತ್ತೆ 3 ಲಕ್ಷ ಸೈನಿಕರ ಲಗ್ಗೆ; ಪಾಶ್ಚಿಮಾತ್ಯ ದೇಶಗಳಿಗೂ ಎಚ್ಚರಿಕೆ ರವಾನೆ

07:16 PM Sep 21, 2022 | Team Udayavani |

ಮಾಸ್ಕೋ: ಉಕ್ರೇನ್‌ ವಿರುದ್ಧದ ಯುದ್ಧದಲ್ಲಿ ಹಿನ್ನಡೆ ಆಗುತ್ತಿರುವುದನ್ನು ಅರಿತ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌, ಬುಧವಾರ ಏಕಾಏಕಿ ಬರೋಬ್ಬರಿ 3 ಲಕ್ಷದಷ್ಟು ಮೀಸಲು ಯೋಧರನ್ನು ಯುದ್ಧಭೂಮಿಗೆ ಕರೆಸಿಕೊಳ್ಳುವ ಅಧ್ಯಾದೇಶಕ್ಕೆ ಸಹಿ ಹಾಕಿದ್ದಾರೆ. ಈ ಮೂಲಕ, ಯುದ್ಧವನ್ನು ಮತ್ತಷ್ಟು ತೀವ್ರಗೊಳಿಸುವ ಬೆದರಿಕೆಯೊಡ್ಡಿದ್ದಾರೆ.

Advertisement

ಹೆಚ್ಚುವರಿ ಸೇನೆಯನ್ನು ನಿಯೋಜಿಸುವ ಮುನ್ನ ದೇಶವನ್ನುದ್ದೇಶಿಸಿ ಮಾತನಾಡಿದ ಪುಟಿನ್‌, “ನಮ್ಮ ದೇಶವನ್ನು ನಾಶಮಾಡಲು ಪಾಶ್ಚಿಮಾತ್ಯ ರಾಷ್ಟ್ರಗಳು ಯತ್ನಿಸುತ್ತಿವೆ. ಆ ಇಡೀ ಪಾಶ್ಚಿಮಾತ್ಯ ಸೇನಾ ಶಕ್ತಿಯನ್ನು ಎದುರಿಸಬೇಕೆಂದರೆ ನಾವು ಇಂಥ ಕ್ರಮ ಕೈಗೊಳ್ಳಲೇಬೇಕಿದೆ. ಅವರ ನ್ಯೂಕ್ಲಿಯರ್‌ ಬ್ಲ್ಯಾಕ್‌ಮೇಲ್ ಅನ್ನು ನಾವು ನಮ್ಮೆಲ್ಲ ಶಕ್ತಿಯನ್ನು ಉಪಯೋಗಿಸುವ ಮೂಲಕ ಎದುರಿಸಿ, ನಮ್ಮ ನೆಲವನ್ನು ರಕ್ಷಿಸಿಕೊಳ್ಳಲಿದ್ದೇವೆ. ಇದು ತಮಾಷೆಯಲ್ಲ’ ಎಂದು ಎಚ್ಚರಿಸಿದ್ದಾರೆ.

ಉಕ್ರೇನ್‌ನ 4 ಪ್ರದೇಶಗಳು ರಷ್ಯಾಗೆ ಸೇರ್ಪಡೆಯಾಗುವ ಕುರಿತು ಸೆ.23-27ರ ಅವಧಿಯಲ್ಲಿ ಜನಾಭಿಪ್ರಾಯ ಸಂಗ್ರಹಿಸುವುದಾಗಿ ಘೋಷಿಸಿದ ಬೆನ್ನಲ್ಲೇ ಈ ಎಲ್ಲ ಬೆಳವಣಿಗೆಗಳು ನಡೆದಿವೆ.

ಮೋದಿ ಮಾತಿಗೆ ಮ್ಯಾಕ್ರನ್‌ ಮೆಚ್ಚುಗೆ:
ಇತ್ತೀಚೆಗೆ ನಡೆದ ಎಸ್‌ಸಿಒ ಶೃಂಗದ ವೇಳೆ ರಷ್ಯಾ ಅಧ್ಯಕ್ಷ ಪುಟಿನ್‌ಗೆ “ಇದು ಯುದ್ಧದ ಯುಗವಲ್ಲ’ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದು ಸರಿಯಾಗಿಯೇ ಇದೆ ಎಂದು ಬುಧವಾರ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವಲ್‌ ಮ್ಯಾಕ್ರನ್‌ ಅಭಿಪ್ರಾಯಪಟ್ಟಿದ್ದಾರೆ.

“ಮೋದಿ ಅವರು ಸರಿಯಾಗಿಯೇ ಹೇಳಿದ್ದಾರೆ. ಇದು ಯುದ್ಧದ ಸಮಯವಲ್ಲ. ಪಾಶ್ಚಿಮಾತ್ಯರ ವಿರುದ್ಧ ಪ್ರತೀಕಾರ ತೀರಿಸುವ ಸಮಯವೂ ಅಲ್ಲ. ನಾವೆಲ್ಲರೂ ಎದುರಿಸುವಂಥ ಸವಾಲುಗಳನ್ನು ಸಮರ್ಥವಾಗಿ, ಒಗ್ಗಟ್ಟಾಗಿ ಎದುರಿಸುವ ಸಮಯ’ ಎಂದು ಮ್ಯಾಕ್ರನ್‌ ಹೇಳಿದ್ದಾರೆ.

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next