Advertisement

ಶುದ್ಧ ನೀರಿನ ಘಟಕಗಳೇ ಅಪೂರ್ಣ

08:49 PM Mar 27, 2018 | Karthik A |

ಸುಳ್ಯ: ತಾಲೂಕಿನಲ್ಲಿ ಎರಡು ತಿಂಗಳಲ್ಲಿ ಮುಗಿಯಬೇಕಿದ್ದ 11 ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಎರಡು ವರ್ಷವಾದರೂ ಆಗದ ಕಾರಣ  ರಾಜ್ಯ ಸರಕಾರ ಸಂಸ್ಥೆಯೊಂದಕ್ಕೆ ನೀಡಿದ ಗುತ್ತಿಗೆಯನ್ನು ರದ್ದುಪಡಿಸಿದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಡಿ 93.5 ಲಕ್ಷ ರೂ. ವೆಚ್ಚದಲ್ಲಿ 11 ಘಟಕಗಳನ್ನು ನಿರ್ಮಿಸಲು ಯೋಜಿಸಿತ್ತು. ಈ ಸಂಬಂಧ ಪ್ರತಿ ಘಟಕಕ್ಕೆ 8.5 ಲಕ್ಷ ರೂ. ವೆಚ್ಚ ನಿಗದಿಪಡಿಸಿ ಬೆಂಗಳೂರಿನ ವರ್ಲ್ಡ್ವೈಡ್‌ ಸಂಸ್ಥೆಯವರಿಗೆ ಗುತ್ತಿಗೆ ನೀಡಿತ್ತು. 2016ರಲ್ಲಿ ಆರಂಭಗೊಂಡ ಕಾಮಗಾರಿ ಅಡಿಪಾಯ ಹಂತದಲ್ಲೇ ಇದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಸರಕಾರ ಕಾಮಗಾರಿ ನಿರ್ವಹಣೆ ಸಂಸ್ಥೆಯ ಗುತ್ತಿಗೆ ರದ್ದುಪಡಿಸಿದೆ.

Advertisement

ಸುಳ್ಯ ತಾಲೂಕಿನಲ್ಲಿನ ಘಟಕಗಳನ್ನೂ ಸೇರಿದಂತೆ ಜಿಲ್ಲೆಯಲ್ಲಿ 70 ಘಟಕ ನಿರ್ಮಿಸಲು 2016ರ ಫೆಬ್ರವರಿಯಲ್ಲಿ ಟೆಂಡರ್‌ ಕರೆದು, ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿತ್ತು. ಆದರೆ, ಎರಡು ವರ್ಷಗಳಾದರೂ ಪೂರ್ಣಗೊಂಡಿಲ್ಲ. ಜಿಲ್ಲೆಯಲ್ಲಿ ನಿಗದಿಪಡಿಸಲಾಗಿದ್ದ 70 ಘಟಕಗಳ ಪೈಕಿ 18 ಘಟಕ ಪೂರ್ಣ ಗೊಂಡು, 23 ಘಟಕಗಳು ಪ್ರಗತಿ ಯಲ್ಲಿವೆ. ಉಳಿದ 29 ಘಟಕಗಳನ್ನು ನಾನಾ ಕಾರಣಗಳಿಂದ ಕೈಬಿಡಲಾಗಿದೆ. ಇದರಲ್ಲಿ ಸುಳ್ಯದ 11 ಘಟಕಗಳು ಅಪೂರ್ಣಗೊಂಡಿವೆ ಎನ್ನುವ ಮಾಹಿತಿ ಡಿ.ಎಂ. ಶಾರಿಕ್‌ ಎಂಬವರ ಆರ್‌ಟಿಐ ಅರ್ಜಿಗೆ ಇಲಾಖೆ ನೀಡಿದ ಮಾಹಿತಿಯಿಂದ ಬಹಿರಂಗಗೊಂಡಿದೆ. ಗುತ್ತಿಗೆದಾರ ಸಂಸ್ಥೆಯ ನಿರ್ಲಕ್ಷ್ಯತನದ ಬಗ್ಗೆ ಎರಡು ವರ್ಷದ ಅನಂತರ ಎಚ್ಚೆತ್ತಿ ರುವ ಸರಕಾರ ಗುತ್ತಿಗೆಯನ್ನು ರದ್ದುಗೊಳಿಸಿದೆ. ಈಗಿನ ಕಾಮಗಾರಿ ಗುಣಮಟ್ಟ ಪರಿಶೀಲಿಸಿ, ಹೊಸ ಸಂಸ್ಥೆಗೆ ವಹಿಸಿ ಕೊಡುವುದೋ ಅಥವಾ ಪರ್ಯಾಯ ಮಾರ್ಗದ ಬಗ್ಗೆ ನಿರ್ಧರಿಸಲು ಮುಂದಾಗಿದೆ.

ಜಿಲ್ಲೆಗೆ ಸೂಕ್ತವಲ್ಲ
ದಕ್ಷಿಣ ಕನ್ನಡ ಜಿಲ್ಲೆಗೆ ಈ ಯೋಜನೆ ಸೂಕ್ತವಲ್ಲ ಅನ್ನುವ ಕುರಿತು ತಜ್ಞರು ಆರಂಭದಲ್ಲೇ ಅಭಿಪ್ರಾಯ ಮಂಡಿಸಿ ದ್ದರು. ಅದಕ್ಕೆ ಪೂರಕ ಎಂಬಂತೆ ಖಾಸಗಿಯಾಗಿ ಅನುಷ್ಠಾನಗೊಂಡಿರುವ ಘಟಕಗಳನ್ನು ಜನರು ಬಳಸುತ್ತಿರುವುದೇ ಅಪರೂಪ. ತಾ.ಪಂ. ಸಭೆಗಳಲ್ಲಿಯೂ ಘಟಕದ ಅನುಷ್ಠಾನದ ಕುರಿತು ಅಪಸ್ವರ ಕೇಳಿ ಬಂದಿತ್ತು. ಕೆಲ ದಿನಗಳ ಹಿಂದೆ ಜಿ.ಪಂ.ನಲ್ಲೂ ಸದನ ಸಮಿತಿ ರಚಿಸಿ ಯೋಜನೆಯ ಸಾಧಕ – ಬಾಧಕದ ಪರಾಮರ್ಶೆಗೆ ನಿರ್ಧರಿಸಲಾಗಿತ್ತು.

ಏನಿದು ಯೋಜನೆ?
ರಾಜ್ಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ 2015-16ನೇ ಸಾಲಿನಲ್ಲಿ ಖಾಸಗಿ ಮತ್ತು ಸರಕಾರಿ ಸಹಭಾಗಿತ್ವದಲ್ಲಿ ದಿನದ 24 ತಾಸು ನೀರೊದಗಿಸಲು ಜನಸಂದಣಿ ಸ್ಥಳಗಳಲ್ಲಿ ಘಟಕ ಸ್ಥಾಪಿಸಲು ಉದ್ದೇಶಿಸಿತ್ತು. ಸ್ಥಳೀಯ ಗ್ರಾ.ಪಂ. ಸಹಭಾಗಿತ್ವದಲ್ಲಿ ಸ್ಥಳ ನಿಗದಿಪಡಿಸಿ ಘಟಕ ಸ್ಥಾಪಿಸಬೇಕಿತ್ತು. 30×30 ಅಡಿ ಸ್ಥಳವನ್ನು 15 ವರ್ಷದ ತನಕ ಖಾಸಗಿ ಕಂಪೆನಿಗೆ ಗುತ್ತಿಗೆ ನೀಡಬೇಕಿತ್ತು. ಈ ಯಂತ್ರಕ್ಕೆ 1 ರೂ. ನಾಣ್ಯ ಹಾಕಿದರೆ, ಆರರಿಂದ ಎಂಟು ಲೀಟರ್‌ ತನಕ ಶುದ್ಧ ನೀರು ದೊರೆಯಲಿದೆ ಎಂದು ತಿಳಿಸಲಾಗಿತ್ತು. ಖಾಸಗಿ ಸಹಭಾಗಿತ್ವದಲ್ಲಿ ಜಿಲ್ಲೆಯಲ್ಲಿ ಸ್ಥಾಪಿಸಲಾದ ಘಟಕಗಳು ಪೂರ್ಣಗೊಂಡಿದ್ದು, ಸರಕಾರಿ ಸಹಭಾಗಿತ್ವದಲ್ಲಿ ಆರಂಭಗೊಂಡ ಘಟಕ ಅಪೂರ್ಣ ಹಂತದಲ್ಲಿವೆ.

ಎಲ್ಲೆಲ್ಲಿ ಘಟಕ?
ಐವತ್ತೂಕ್ಲು
ಕೂತ್ಕುಂಜ
ಕಳಂಜ
ಕೊಲ್ಲಮೊಗ್ರು
ಕಲ್ಲುಮಟ
ಕಲ್ಮಡ್ಕ
ಕನಕಮಜಲು
ಕೊಡಿಯಾಲ
ಸುಬ್ರಹ್ಮಣ್ಯ ಗ್ರಾಮದ ಕುಮಾರಧಾರಾ ವೃತ್ತ
ಮಡಪ್ಪಾಡಿ
ಎಣ್ಮೂರು

Advertisement

ಲಭ್ಯ ಮಾಹಿತಿ ಅನ್ವಯ ಎಣ್ಮೂರು ಮತ್ತು ಕನಕಮಜಲಿನಲ್ಲಿ ಕಾಮಗಾರಿ ಆರಂಭವೇ ಆಗಿಲ್ಲ. ಉಳಿದ ಕೆಲವೆಡೆ ಘಟಕಗಳ ಕಾರ್ಯ ಇನ್ನೂ ಆರಂಭವಾಗಿದೆಯಷ್ಟೇ. ಇನ್ನೂ ಕೆಲವೆಡೆ ಕೊಠಡಿ ಹಾಗೂ ಯಂತ್ರ ಅಳವಡಿಕೆಯ ಹಂತದಲ್ಲಿವೆ.

ಹಣ ಪಾವತಿಸಿಲ್ಲ
ಹನ್ನೊಂದು ಘಟಕಗಳೂ ಪೂರ್ಣವಾಗಿಲ್ಲ. ನಿಗದಿತ ಸಮಯದಲ್ಲಿ ಪೂರ್ಣಗೊಳಿಸದ್ದರಿಂದ ಸರಕಾರವೇ ಕಾಮಗಾರಿ ವಹಿಸಿಕೊಂಡ ಸಂಸ್ಥೆಯ ಗುತ್ತಿಗೆ ರದ್ದುಗೊಳಿಸಿದೆ. ಈಗ ಆಗಿರುವ ಕಾಮಗಾರಿಯನ್ನು ಪರಿಶೀಲಿಸಲಿದ್ದು, ಕಾಮಗಾರಿ ಹಣವನ್ನು ಇನ್ನೂ ಬಿಡುಗಡೆ ಮಾಡಿಲ್ಲ.
– ಚೆನ್ನಪ್ಪ ಮೊಯಿಲಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌

— ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next