Advertisement

Fraud: ವಸಿಷ್ಠ ಬ್ಯಾಂಕ್ ಠೇವಣಿದಾರರ ಹಣದಲಿ ಆಸ್ತಿ ಖರೀದಿ!

11:18 AM Oct 10, 2024 | Team Udayavani |

ಬೆಂಗಳೂರು: ಶ್ರೀ ವಸಿಷ್ಠ ಕ್ರೆಡಿಟ್‌ ಸೌಹಾರ್ದ ಸಹಕಾರ ಸಂಘದ ಬಹುಕೋಟಿ ವಂಚನೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ಪೊಲೀಸರು, ಬ್ಯಾಂಕ್‌ನ ಹಣವನ್ನು ಅಕ್ರಮವಾಗಿ ಹೂಡಿಕೆ ಮಾಡಿರುವುದನ್ನು ಪತ್ತೆ ಹಚ್ಚಿದ್ದಾರೆ.

Advertisement

ಇದರ ಬೆನ್ನಲ್ಲೇ ಸರ್ಕಾರದ ಆದೇಶದ ಅನುಸಾರ ಬ್ಯಾಂಕ್‌ನ ಉಪಾಧ್ಯಕ್ಷ ಹಾಗೂ ಮಹಿಳೆಯೊಬ್ಬರ ಹೆಸರಿನಲ್ಲಿದ್ದ 1.55 ಕೋಟಿ ರೂ.ಗೂ ಅಧಿಕ ಮೌಲ್ಯದ 2 ಪ್ರತ್ಯೇಕ ಸ್ಥಿರಾಸ್ತಿಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಕಳೆದ 3 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಶ್ರೀ ವಸಿಷ್ಠ ಕ್ರೆಡಿಟ್‌ ಸೌಹಾರ್ದ ಸಹಕಾರ ಸಂಸ್ಥೆಯ ವಂಚನೆ ಪ್ರಕರಣದ ತನಿಖೆ ಮತ್ತೆ ಮುನ್ನೆಲೆಗೆ ಬಂದಿದೆ.

ಇಲ್ಲಿ ಹೂಡಿಕೆ ಮಾಡಿದ ಸಾವಿರಾರು ಠೇವಣಿದಾರರು ನೀಡಿರುವ ಮಾಹಿತಿ ಆಧಾರಿಸಿ ಸಿಐಡಿ ತನಿಖಾ ತಂಡವು ಪರಿಶೀಲಿಸಿದಾಗ ಸುಮಾರು 214 ಕೋಟಿ ರೂ. ವಂಚನೆಯಾಗಿರುವುದು ಪತ್ತೆಯಾಗಿದೆ. ಇದರ ಬೆನ್ನಲ್ಲೇ ಕೋಟ್ಯಂತರ ರೂ. ಠೇವಣಿದಾರರ ದುಡ್ಡನ್ನು ಹೂಡಿಕೆ ಮಾಡಿರುವ ಜಾಡು ಹಿಡಿಯಲು ಸಿಐಡಿ ಮುಂದಾಗಿದೆ.

ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಬ್ಯಾಂಕ್‌ನ ಉಪಾಧ್ಯಕ್ಷರಾಗಿದ್ದ ಪ್ರಭಾಕರ್‌ಗೆ ಸೇರಿದ ಬೆಂಗಳೂರಿನ ಹನುಮಂತನಗರದಲ್ಲಿರುವ 1.20 ಕೋಟಿ ರೂ.ಗೂ ಅಧಿಕ ಮೌಲ್ಯದ ವಸತಿ ಹಾಗೂ ವಸತಿಯೇತರ ಕಟ್ಟಡ ಜಪ್ತಿ ಮಾಡಿಕೊಳ್ಳಲಾಗಿದೆ. ಜೊತೆಗೆ ಸಂಧ್ಯಾ ಎಂಬುವರ ವೈಯ್ನಾಲಿಕಾವಲ್‌ ನಲ್ಲಿರುವ 35 ಲಕ್ಷಕ್ಕೂ ಅಧಿಕ ಮೊತ್ತದ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಎರಡೂ ಪ್ರತ್ಯೇಕ ಆಸ್ತಿಗಳನ್ನು ಖರೀದಿಸಿ ಹಲವು ವರ್ಷಗಳೇ ಉರುಳಿವೆ. ಈ ಸ್ವತ್ತುಗಳ ಪ್ರಸ್ತುತ ಮರುಕಟ್ಟೆ ಬೆಲೆ ಮೌಲ್ಯಮಾಪನ ಮಾಡಬೇಕಿದೆ.

ಬ್ಯಾಂಕ್‌ ದುಡ್ಡಿನಲ್ಲಿ ಬೇರೆಡೆ ಹೂಡಿಕೆ: ಬ್ಯಾಂಕ್‌ನ ಆಡಳಿತ ಮಂಡಳಿ ಹಾಗೂ ಅವರ ಸಹವರ್ತಿಗಳು ಠೇವಣಿದಾರರಿಂದ ಸಂಗ್ರಹಿಸಿದ ದುಡ್ಡಿನಲ್ಲಿ ಜಮೀನು, ಚರ ಹಾಗೂ ಸ್ಥಿರಾಸ್ತಿ ಸಂಪಾದಿಸಿರುವುದು ಗೊತ್ತಾಗಿದೆ. ಆ ಮೂಲಕ ಠೇವಣಿ ಹಾಗೂ ಹಣವನ್ನು ಪಡೆದಿರುವ ಉದ್ದೇಶಿತ ಉದ್ದೇಶಗಳಿಗೆ ಬಳಸದೇ ಬೇರೆ ಕಡೆ ವರ್ಗಾಯಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಜೊತೆಗೆ ಬ್ಯಾಂಕ್‌ನವರು ಠೇವಣಿದಾರರಿಂದ ಗುಟ್ಟಾಗಿ ಹಾಗೂ ಕಾನೂನು ಬಾಹಿರವಾಗಿ ಠೇವಣಿ ಇರಿಸಿರುವುದು ಮತ್ತು ಸಾರ್ವಜನಿಕರಿಂದ ದುಡ್ಡು ಸಂಗ್ರಹಿಸುವ ಮೋಸದ ವ್ಯವಹಾರಗಳಲ್ಲಿ ತೊಡಗಿದ್ದಾರೆ. ಗ್ರಾಹಕರು ಠೇವಣಿಯಿಟ್ಟಿರುವ ಅವಧಿ ಮುಗಿದ ಮೇಲೆ ಠೇವಣಿದಾರರಿಗೆ ಆಶ್ವಾಸನೆ ನೀಡಿದ ಬಡ್ಡಿ, ಸೇವೆಗಳು ಹಾಗೂ ಇತರೆ ಖಾತರಿ ಪ್ರಯೋಜನಗಳನ್ನು ಬ್ಯಾಕ್‌ ನೀಡಿಲ್ಲ ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ.

Advertisement

ಸ್ಥಿರಾಸ್ತಿ ಜಪ್ತಿ ಮಾಡಲು ಸರ್ಕಾರದ ಆದೇಶ: ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿಯ ಸಂರಕ್ಷಣಾ ಅಧಿನಿಯಮ, 2004 (2005ರ ಕರ್ನಾಟಕ ಅಧಿನಿಯಮ, 30)ರ 3ನೇ ಪ್ರಕರಣದ (2)ನೇ ಉಪ-ಪ್ರಕರಣದ ಪ್ರಕಾರ ಶ್ರೀ ವಸಿಷ್ಠ ಕ್ರೆಡಿಟ್‌ ಸೌಹಾರ್ದ ಸಹಕಾರ ಲಿ.ಗೆ ಸೇರಿದೆ ಎನ್ನಲಾದ ಸ್ಥಿರಾಸ್ತಿ ಮತ್ತು ಚರಾಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದು ಅವಶ್ಯಕವಾಗಿದೆ. ಹೀಗಾಗಿ ಈ ಸಂಸ್ಥೆಯ ಹಣ, ಇತರೆ ಸ್ವತ್ತುಗಳು, ಸಂಸ್ಥೆಯ ಪ್ರವರ್ತಕರ ಪಾಲುದಾರರ, ನಿರ್ದೇಶಕರ, ವ್ಯವಸ್ಥಾಪಕರ, ಸದಸ್ಯರ ಅಥವಾ ಯಾರೇ ಇತರೆ ವ್ಯಕ್ತಿಯ ವೈಯಕ್ತಿಕ ಆಸ್ತಿಗಳು, ಠೇವಣಿ, ಬಡ್ಡಿ ಅಥವಾ ಇತರೆ ಖಾತ್ರಿ ಪ್ರಯೋಜನ ಗಳನ್ನು ಠೇವಣಿದಾರರಿಗೆ ಮರುಸಂದಾಯ ಮಾಡುವು ದಕ್ಕೆ ಸಾಧ್ಯವಾಗಿಲ್ಲವೆಂದು ಗೊತ್ತಾದಲ್ಲಿ ಬ್ಯಾಂಕ್‌ ಸಂಗ್ರಹಿಸಲಾದ ಠೇವಣಿಗಳಿಂದ ಬ್ಯಾಂಕ್‌ನ ಹೆಸರಿ ನಲ್ಲಿರುವ ಅಥವಾ ಯಾರೇ ಇತರ ವ್ಯಕ್ತಿಗಳ ಹೆಸರಿನಲ್ಲಿದೆ ಎನ್ನಲಾದ ಸ್ಥಿರಾಸ್ತಿಗಳನ್ನು ಸರ್ಕಾರವು ಜಪ್ತಿ ಮಾಡಿ ಕೊಳ್ಳುತ್ತದೆ ಎಂದು ಆದೇಶದಲ್ಲಿ ಉಲ್ಲೇಖೀಸಲಾಗಿದೆ.

ಏನಿದು ವಂಚನೆ ಪ್ರಕರಣ?: ಹನುಮಂತನಗರ ಪೊಲೀಸ್‌ ಠಾಣಾ ವ್ಯಾಪ್ತಿ ಯಲ್ಲಿರುವ ಶ್ರೀ ವಸಿಷ್ಠ ಕ್ರೆಡಿಟ್‌ ಸೌಹಾರ್ದ ಸಹಕಾರ ಲಿ.ನ ವಂಚನೆಯು 2021ರಲ್ಲಿ ಬೆಳಕಿಗೆ ಬಂದಿತ್ತು. ನೂರಾರು ಗ್ರಾಹಕರು ಹೆಚ್ಚಿನ ಬಡ್ಡಿ ಆಮಿಷ ಕ್ಕೊಳಗಾಗಿ ಇಲ್ಲಿ ಹೂಡಿಕೆ ಮಾಡಿ ವಂಚನೆ ಗೊಳಗಾಗಿದ್ದರು. 2021ರ ಆಗಸ್ಟ್‌ನಲ್ಲಿ ಹನು ಮಂತನಗರ ಠಾಣೆಯಲ್ಲಿದ್ದ ಕೇಸ್‌ ಸಿಐಡಿಗೆ ವರ್ಗಾವಣೆಯಾಗಿತ್ತು. ಇನ್ನು ಬ್ಯಾಂಕ್‌ ಅವ್ಯವ ಹಾರದ ತನಿಖೆಯನ್ನು ಸಿಬಿಐಗೆ ವಹಿಸಿ ರಾಜ್ಯ ಸರ್ಕಾರವು 2023 ಡಿಸೆಂಬರ್‌ನಲ್ಲೇ ಆದೇಶಿಸಿತ್ತು. ಆದರೆ, ಸಿಬಿಐ ಮಾತ್ರ ಈ ವಂಚನೆಯ ತನಿಖೆಗೆ ಆಸಕ್ತಿ ವಹಿಸಿಲ್ಲ. ಹೀಗಾಗಿ ಕಳೆದ 3 ವರ್ಷಗಳಿಂದ ಸಿಐಡಿ ಪೊಲೀಸರೇ ತನಿಖೆ ನಡೆಸುತ್ತಿದ್ದಾರೆ.

ಠೇವಣಿದಾರರಿಗೆ ದುಡ್ಡು  ವಾಪಸ್‌ ಯಾವಾಗ?: ವಸಿಷ್ಠ ಬ್ಯಾಂಕ್‌ನಲ್ಲಿ 50 ಸಾವಿರ ರೂ. ನಿಂದ ಕೋಟಿಗೂ ಅಧಿಕ ಹಣವನ್ನು ಹೂಡಿಕೆ ಮಾಡಿ ವಂಚನೆಗೊಳಗಾದವರು ಅಸಲು ದುಡ್ಡು ಸಿಕ್ಕಿದರೆ ಸಾಕು ಎಂಬ ನಿರೀಕ್ಷೆಯಲ್ಲಿದ್ದಾರೆ. ಇದೀಗ ಸಿಐಡಿ ಪೊಲೀಸರು ಮುಟ್ಟುಗೋಲು ಹಾಕುವ ಆಸ್ತಿಗಳನ್ನು ಸರ್ಕಾರವು ಠೇವಣಿದಾರರಿಗೆ ಹಿಂದಿರುಗಿಸಲು ಚಿಂತಿಸಿದೆ. ಆದರೆ, ಈ ಪ್ರಕ್ರಿಯೆಗೆ ಸಾಕಷ್ಟು ವರ್ಷಗಳೇ ಉರುಳಲಿವೆ ಎಂದು ಮೂಲಗಳು ತಿಳಿಸಿವೆ.

ಶ್ರೀ ವಸಿಷ್ಟ ಕ್ರೆಡಿಟ್‌ ಸೌಹಾರ್ದ ಸಹಕಾರಿ ಲಿ. ವಂಚನೆ ಪ್ರಕರಣವನ್ನು ಸಿಐಡಿ ಪೊಲೀಸರು ಸೂಕ್ತ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ವಂಚನೆ ಎಸಗಿರುವ ಕುರಿತು ಸಾಕ್ಷ್ಯಗಳನ್ನು ಕಲೆ ಹಾಕಲಾಗುತ್ತಿದೆ. ಡಾ.ಎಂ.ಎ.ಸಲೀಂ, ಪೊಲೀಸ್‌ ಮಹಾನಿರ್ದೇಶಕರು, ಸಿಐಡಿ.

Advertisement

Udayavani is now on Telegram. Click here to join our channel and stay updated with the latest news.

Next