Advertisement

ತಾರಸಿಯಲ್ಲೇ ಕುಂಬಳ, ಕಲ್ಲಂಗಡಿ!

12:30 AM Feb 04, 2020 | Lakshmi GovindaRaj |

ಬೆಂಗಳೂರು: ನಗರದ ತಾರಸಿಗಳಲ್ಲಿ ಸಾಮಾನ್ಯವಾಗಿ ಟೊಮೆಟೊ, ಮೆಣಸಿನಕಾಯಿ ಹೆಚ್ಚೆಂದರೆ ಬದನೆ ಕಾಯಿ ಬೆಳೆಯುವುದು ಮಾಮೂಲು. ಆದರೆ, ಕುಂಬ ಳ ಕಾಯಿ, ಕಲ್ಲಂಗಡಿ ಬೆಳೆದಿದ್ದನ್ನು ಕಂಡಿದ್ದೀರಾ? ಸಾಮಾನ್ಯ ಜಮೀನುಗಳಲ್ಲಿ ಬೆಳೆಯುವಂತೆ ತಾರಸಿಯಲ್ಲಿ ಕೂಡ ಇಂತಹ ಕ್ಲಿಷ್ಟಕರವಾದ ಹಣ್ಣು ಮತ್ತು ತರಕಾರಿಗಳನ್ನು ಬೆಳೆಯಬಹುದು. ಅದೂ ಮಣ್ಣುರಹಿತವಾಗಿ, ಯಾವುದೇ ರಸಗೊಬ್ಬರ ಸಿಂಪಡಣೆ ಮಾಡದೆ ವರ್ಷದ 12 ತಿಂಗಳೂ ನಿರಂತರವಾಗಿ ಈ ಬೆಳೆಗಳನ್ನು ಪಡೆಯಲು ಸಾಧ್ಯವಿದೆ.

Advertisement

ಈ ಸಂಬಂಧ ಗೊಬ್ಬರ ತಯಾರಿಕೆಯಿಂದ ಹಿಡಿದು ಇಳುವರಿವರೆಗಿನ ಸಮಗ್ರ ತಾರಸಿ ತರಕಾರಿ ಬೆಳೆ ಪದ್ಧತಿಯ ತಂತ್ರಜ್ಞಾನವನ್ನು ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್‌ಆರ್‌) ಅಭಿವೃದ್ಧಿಪಡಿಸಿದೆ. ಬುಧವಾರದಿಂದ ಆರಂಭಗೊಳ್ಳಲಿರುವ ದೇಶದ ಅತಿದೊಡ್ಡ ರಾಷ್ಟ್ರೀಯ ತೋಟಗಾರಿಕಾ ಮೇಳದಲ್ಲಿ ಈ ಅಚ್ಚರಿಯನ್ನು ನೀವು ಕಾಣಬಹುದು.

ನಾಲ್ಕು ದಿನಗಳ ಮೇಳದಲ್ಲಿ 90 ಪ್ರಕಾರದ 26 ತರಕಾರಿಗಳ ಪ್ರಾತ್ಯಕ್ಷಿಕೆ ಇಡಲಾಗಿದೆ. ಅವುಗಳಲ್ಲಿ ಇತ್ತೀಚೆಗೆ ಹೆಚ್ಚು ಜನಪ್ರಿಯಗೊಳ್ಳುತ್ತಿರುವ “ತಾರಸಿ ತೋಟ’ ಆಕರ್ಷಣೆಯ ಕೇಂದ್ರಬಿಂದು ಆಗಿದೆ. ಐಐಎಚ್‌ಆರ್‌ ನಿರ್ಮಿಸಿದ ಈ ತಾರಸಿ ತೋಟವು 30×90 ಅಡಿಯಲ್ಲಿ ಬಹುತೇಕ ಎಲ್ಲ ಅಂದರೆ ಸುಮಾರು 58 ಪ್ರಕಾರದ 20 ತರಕಾರಿ ಬೆಳೆಗಳನ್ನು ಒಳಗೊಂಡಿದೆ. ಅದರಲ್ಲಿ ನುಗ್ಗೆಗಿಡ, ಕಲರ್‌ ಕ್ಯಾಪ್ಸಿಕಂ, ಹೂಕೋಸು, ಬಟಾಣಿ, ಕುಂಬಳಕಾಯಿ, ಕಲ್ಲಂಗಡಿಯಂತಹ ಕ್ಲಿಷ್ಟಕರವಾದ ಬೆಳೆಗಳೂ ಇವೆ.

ಈ ಪೈಕಿ 12 ತರಕಾರಿಗಳನ್ನು ಸಂಸ್ಥೆಯು ಸಾವಯವ ಗೊಬ್ಬರದಲ್ಲಿ ಬೆಳೆಯಬಹುದು ಎಂದು ಪ್ರಮಾಣೀಕರಿಸಿದೆ. ಇವೆಲ್ಲವೂ ಸ್ವತಃ ಸಂಸ್ಥೆ ಅಭಿವೃದ್ಧಿಪಡಿಸಿದ ತಳಿಗಳಾಗಿರುವುದರಿಂದ ಸಾಮಾನ್ಯ ತರಕಾರಿ ಬೆಳೆಗಳಿಗೆ ಹೋಲಿಸಿದರೆ, ಹೆಚ್ಚು ರೋಗನಿರೋಧಕ ಶಕ್ತಿ ಒಳಗೊಂಡಿರುವುದರಿಂದ ನಿರ್ವಹಣಾ ವೆಚ್ಚ ಕಡಿಮೆ ಹಾಗೂ ಇಳುವರಿ ಅಧಿಕ ಎಂದು ಸಂಸ್ಥೆ ವಿಜ್ಞಾನಿಗಳು “ಉದಯವಾಣಿ’ಗೆ ಮಾಹಿತಿ ನೀಡಿದರು.

“ಪ್ರಸ್ತುತ ಹವ್ಯಾಸಕ್ಕಾಗಿ ತಾರಸಿ ತೋಟಗಾರಿಕೆ ಪ್ರಚಲಿತದಲ್ಲಿದೆ. ಐಐಎಚ್‌ಆರ್‌ ಈ ಹವ್ಯಾಸವನ್ನು ಇನ್ನೂ ಒಂದು ಹೆಜ್ಜೆ ಮುಂದೆಹೋಗಿ, ಬೆಳೆಯುವ ವಿಧಾನ ಸರಳೀಕರಣಗೊಳಿಸುವುದರ ಜತೆಗೆ ಅದರಲ್ಲಿ ವೈವಿಧ್ಯತೆಯನ್ನು ತಂದಿದೆ. ಏರೋಪೋನಿಕ್ಸ್‌ ಮತ್ತು ಹೈಡ್ರೋಪೋನಿಕ್ಸ್‌ ವಿಧಾನಗಳಿವೆ. ಒಂದು ಕೊಕೊಪೀಟ್‌ನಿಂದ ಮತ್ತೂಂದು ಕೇವಲ ನೀರಿನಿಂದ ಬೆಳೆಯುವ ವಿಧಾನಗಳು.

Advertisement

ಜತೆಗೆ ಯಾವಾಗ ಬೇಕಾದಾಗ ಯಾವ್ಯಾವುದೋ ತರಕಾರಿ ಬೆಳೆಯಲು ಕೈಹಾಕಿ ವಿಫ‌ಲರಾಗುತ್ತಾರೆ. ಆದ್ದರಿಂದ ಬೆಳೆಗಳಿಗೂ ಒಂದು ಶಿಷ್ಟಾಚಾರ ರೂಪಿಸಲಾಗಿದೆ. ಅದರಿಂದ 30×40 ಅಥವಾ 40×60 ಅಡಿ ಜಾಗದಲ್ಲಿ 12 ತಿಂಗಳೂ ನಿತ್ಯ ಒಂದಿಲ್ಲೊಂದು ತಾಜಾ ತರಕಾರಿ ಸಿಗಲಿದೆ. ಕುಂಬಳಕಾಯಿ, ಐಸ್‌ಬಾಕ್ಸ್‌ ಗಾತ್ರದ ಕಲ್ಲಂಗಡಿ, ನಿತ್ಯ ಬಳಸುವ ಔಷಧೀಯ ಸಸಿಗಳನ್ನೂ ಬೆಳೆಯಬಹುದು. ಈ ಹಿನ್ನೆಲೆಯಲ್ಲಿ ನಾವು ಪರಿಚಯಿಸಿದ ಪದ್ಧತಿ ಭಿನ್ನವಾಗಿದೆ’ ಎಂದು ಐಐಎಚ್‌ಆರ್‌ ಪ್ರಧಾನ ವಿಜ್ಞಾನಿ ಡಾ.ಸಿ. ಅಶ್ವಥ್‌ ತಿಳಿಸುತ್ತಾರೆ.

ಕುಂಡ ಬೇಡ, ಚೀಲಗಳು ಸಾಕು: “ಇದರಲ್ಲೇ ಹೈಡ್ರೋಪೋನಿಕ್ಸ್‌ ಪದ್ಧತಿ ಪರಿಚಯಿಸಲಾಗಿದೆ. ಇದರಲ್ಲಿ ಪಾಲಕ್‌, ಹಕ್ಕರಕಿ, ಟೊಮೆಟೊದಂತಹ ಬೆಳೆಗಳನ್ನು ಅಪಾಯಕಾರಿ ಅಂಶಗಳನ್ನು ಒಳಗೊಂಡಿರದ ಕಲುಷಿತ ನೀರು ಹೊರತುಪಡಿಸಿ ಸಾಮಾನ್ಯ ನೀರಿನಲ್ಲಿ ಬೆಳೆಯಬಹುದು. ಕೇವಲ ನೀರು ಪೂರೈಸುವ ಬಟನ್‌ ಆನ್‌ ಅಥವಾ ಆಫ್ ಮಾಡಿದರೆ ಸಾಕು. ತೋಟಗಾರಿಕೆ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿದ ಅರ್ಕ ಸೂಕ್ಷ್ಮಾಣು ಜೀವಾಣುಗಳ ಗೊಬ್ಬರ ಹಾಗೂ ಮನೆಯಲ್ಲಿ ನಿತ್ಯ ಉತ್ಪಾದನೆಯಾಗುವ ಹಸಿತ್ಯಾಜ್ಯದಿಂದ ತಯಾರಿಸಿದ ಗೊಬ್ಬರ ಈ ತರಕಾರಿಗಳಿಗೆ ನಿಯಮಿತವಾಗಿ ಸಿಂಪಡಿಸಬಹುದು.

ಹೀಗೆ ಮಣ್ಣು ರಹಿತವಾಗಿ ರುವುದರಿಂದ ತಾರಸಿಗೆ ಕೊಂಡೊಯ್ಯಲಿಕ್ಕೂ ಸುಲಭವಾಗುತ್ತದೆ’ ಎಂದು ಡಾ.ಅಶ್ವಥ್‌ ವಿವರಿಸಿದರು. ಇನ್ನು ತರಕಾರಿ ಬೆಳೆಗೆ ಕುಂಡಗಳನ್ನೇ ಬಳಸಬೇಕಾಗಿಲ್ಲ. ಥರ್ಮೋಕೋಲ್‌ ಬಾಕ್ಸ್‌ಗಳನ್ನು ಪರಿಚಯಿಸಲಾಗಿದೆ (ಥರ್ಮೋಕೋಲ್‌ ವಿಲೇವಾರಿ ಕಷ್ಟವಾಗಿರುವುದರಿಂದ ಇದನ್ನು ಪರಿಚಯಿಸಲಾಗಿದೆ). ಅಥವಾ 1x1x1 ಅಡಿ ಹಾಗೂ ಅರ್ಧ ಅಡಿ ಗಾತ್ರದ ಬ್ಯಾಗ್‌ಗಳಲ್ಲಿ ಬೆಳೆಯಬಹುದು. ಇವುಗಳ ಬೆಲೆ ಕ್ರಮವಾಗಿ 50- 60 ರೂ. ಹಾಗೂ 15-20 ರೂ. ಇವುಗಳು ಹೆಚ್ಚು ಬಾಳಿಕೆ ಬರುತ್ತವೆ ಎಂದು ಸ್ಪಷ್ಟಪಡಿಸಿದರು.

ತೋಟದಿಂದ ಊಟದ ಮನೆಗೆ: ನಗರ ತೋಟಗಾರಿಕೆಗೆ ಸಂಬಂಧಿಸಿದಂತೆ ಐಐಎಚ್‌ಆರ್‌ ಈ ಬಾರಿಯ ಮೇಳದಲ್ಲಿ “ತೋಟದಿಂದ ಊಟದ ಮನೆಗೆ’ ಎಂಬ ಪರಿಕಲ್ಪನೆಯಲ್ಲಿ ಪರಿಚಯಿಸಿದೆ. ಈ ಕುರಿತು ಕಾರ್ಯಾಗಾರ ನಡೆಯಲಿದ್ದು, ಅದರಲ್ಲಿ ಜಾಗದ ಆಯ್ಕೆ ವಿಧಾನ, ತೋಟಗಾರಿಕೆಗೆ ಬೇಕಾದ ಸೂಕ್ತ ವಸ್ತುಗಳ ಆಯ್ಕೆ, ಬಳಸುವ ಮಾದ್ಯಮ, ಬೀಜ, ಗೊಬ್ಬರ, ನೀರು, ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸುವ ವಿಧಾನ, ಶೃಂಗೀಯ ತೋಟಗಾರಿಕೆ ವಿಧಾನಗಳ ಬಗ್ಗೆ ಹೇಳಿಕೊಡಲಾಗುವುದು. ಕಾರ್ಯಾಗಾರದಲ್ಲಿ ಭಾಗವಹಿಸಲಿಚ್ಛಿಸುವವರಿಗೆ 1500 ರೂ. ನೋಂದಣಿ ಶುಲ್ಕ ನಿಗದಿಪಡಿಸಲಾಗಿದೆ. ಮಾಹಿತಿಗೆ ಮೊ: 99025 22229 ಸಂಪರ್ಕಿಸಬಹುದು.

ವಿಶೇಷತೆಗಳು
-ಏರೋಪೋನಿಕ್ಸ್‌ ವಿಧಾನ
-ಹೈಡ್ರೋಪೋನಿಕ್ಸ್‌ ವಿಧಾನ
-ಥರ್ಮೋಕೋಲ್‌, ಚೀಲಗಳಲ್ಲೂ ಬೆಳೆಯಬಹುದು
-4 ಎಲ್‌ಪಿಎಚ್‌ ಡ್ರಿಪರ್‌ ಅಳವಡಿಕೆ (ಗಂಟೆಗೆ 4 ಲೀ.)
-ಸಾಕಷ್ಟು ಜಾಗದ ಲಭ್ಯತೆ ಇದ್ದರೆ, ವಾಣಿಜ್ಯ ಉದ್ದೇಶಕ್ಕೂ ಅನ್ವಯ

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next