Advertisement

ಬಡವರಿಗೆ ಸೂರು ಒದಗಿಸಿ: ಸೋಮಣ್ಣ

04:30 PM Feb 27, 2020 | Suhan S |

ಕೊಪ್ಪಳ: ಬಡವರು, ಅನಾಥರು, ನಿರ್ಗತಿಕರು ಮತ್ತು ವಸತಿ ರಹಿತರಿಗೆ ಸೂರು ಒದಗಿಸಿ ಎಂದು ವಸತಿ ಸಚಿವ ವಿ. ಸೋಮಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಸತಿ ಯೋಜನೆಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮ ಮಟ್ಟದಲ್ಲಿ ಅನೇಕರು ವಸತಿ ರಹಿತರಿದ್ದಾರೆ. ಅಂತಹವರನ್ನು ಗುರುತಿಸಿ ಅರ್ಹ ಫಲಾನುಭವಿಗೆ ವಸತಿ ಯೋಜನೆಗಳ ಸೌಲಭ್ಯ ತಲುಪಿಸಿ. ಫಲಾನುಭವಿಗಳ ಆಯ್ಕೆ ವೇಳೆ ಯಾವುದೇ ಜನಪ್ರತಿನಿಧಿಗಳ ಅಥವಾ ಪ್ರಭಾವಿಗಳ ಒತ್ತಡಕ್ಕೆ ಒಳಗಾಗದೇ ಸರ್ಕಾರದ ಸೌಲಭ್ಯವನ್ನು ಅರ್ಹರಿಗೆ ತಲುಪಿಸಿ. ತಾಲೂಕು ಮಟ್ಟದ ಅಧಿ ಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ತಮ್ಮ ಅಧಿಧೀನ ಅಧಿಕಾರಿಗಳಿಂದ ಗ್ರಾಮಗಳಲ್ಲಿ ಸಮೀಕ್ಷೆ ನಡೆಸಿ ವಾಸ್ತವಾಂಶ ಸಂಗ್ರಹಿಸಿ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವಾಸ್ತವ ದತ್ತಾಂಶಗಳ ವರದಿ ಸಲ್ಲಿಸಿ. ಯಾವುದೇ ಬೇಜವಾಬ್ದಾರಿ ವರ್ತನೆ, ಅಕ್ರಮ ನಡೆದರೆ ಸಹಿಸುವುದಿಲ್ಲ. ಅಕ್ರಮದಲ್ಲಿ ಪಾಲ್ಗೊಂಡ ಅಧಿಕಾರಿ ಕುರಿತು ಮಾಹಿತಿ ದೊರೆತರೆ ತಕ್ಷಣವೇ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಆದ್ದರಿಂದ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯಿಂದ ಬಡವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಕಾರ್ಯ ನಿರ್ವಹಿಸಿ ಎಂದರು.

ಜಿಲ್ಲಾಧಿಕಾರಿ, ಜಿಪಂ ಸಿಇಒ ಕಡ್ಡಾಯವಾಗಿ ಗ್ರಾಮ ಅದಾಲತ್‌ ಹಾಗೂ ಗ್ರಾಮಸಭೆ ಆಯೋಜಿಸಬೇಕು. ಪ್ರತಿ ತಿಂಗಳು ಒಂದೊಂದು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸಭೆ ನಡೆಸಿ ಅಲ್ಲಿನ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. ಉಪವಿಭಾಗಾಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಕೂಡ ಗ್ರಾಮಸಭೆ ನಡೆಸಿ ಸರ್ಕಾರದ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೊಪ್ಪಳ ನಗರದಲ್ಲಿ ವಸತಿ ಇಲಾಖೆಯಿಂದ 2 ಸಾವಿರ ಮನೆಗಳ ನಿರ್ಮಾಣ ಹಾಗೂ ಹಂಚಿಕೆ ಕುರಿತು ಅಗತ್ಯ ದಾಖಲೆಗಳೊಂದಿಗೆ ಸಂಪೂರ್ಣ ವಿವರಗಳನ್ನು ನೀಡಿದರೆ ಅದಕ್ಕೆ ಬೇಕಾಗುವ ಅನುದಾನವನ್ನು ಬಿಡುಗಡೆ ಮಾಡಲಾಗುವುದು. ವಸತಿ ಹಂಚಿಕೆ ಮೂಲಕ ನಗರದಲ್ಲಿ ವಸತಿ ರಹಿತರಿಗೆ ಸೂರು ಒದಗಿಸುವಲ್ಲಿ ಕೊಪ್ಪಳ ನಗರ ಮಾದರಿ ನಗರವಾಗಬೇಕು. ಸರ್ಕಾರದ ವಿವಿಧ ಸೌಲಭ್ಯಗಳನ್ನು ಬಡವರಿಗೆ, ಅರ್ಹರಿಗೆ ತಲುಪಿಸುವಲ್ಲಿ ಈ ಜಿಲ್ಲೆಯು ಮಾದರಿ ಜಿಲ್ಲೆಯಾಗಬೇಕು ಎಂದರು.

ಗುಳೆ ಹೋಗುವ ಬಡವರ ಮಕ್ಕಳಿಗಾಗಿ ವಿಶೇಷ ಕೌಶಲ್ಯ ತರಬೇತಿ ನೀಡುವ ಕುರಿತು ಕರ್ನಾಟಕದ ನಾಲ್ಕರಿಂದ ಐದು ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು, ಅದರಲ್ಲಿ ಕೊಪ್ಪಳವೂ ಒಂದಾಗಿದೆ. ಆಯ್ಕೆಯಾದ ಜಿಲ್ಲೆಗಳಲ್ಲಿ 2ರಿಂದ 3 ಸಾವಿರ ಜನರಿಗೆ ಕೌಶಲ್ಯ ತರಬೇತಿ ನೀಡಲಾಗುವುದು. ಮತ್ತು ಇಡೀ ರಾಜ್ಯದಲ್ಲಿ ಪ್ರತಿವರ್ಷ 50 ಸಾವಿರ ಜನರಿಗೆ ಈ ತರಬೇತಿಯನ್ನು ನೀಡುವುದರ ಜೊತೆಗೆ ತರಬೇತಿಯ ನಂತರ ಅವರಿಗೆ 10ರಿಂದ 15 ಲಕ್ಷದವರೆಗೂ ಸ್ವಯಂ ಉದ್ಯೋಗಕ್ಕಾಗಿ ಸಹಾಯಧನ ನೀಡಲಾಗುವುದು. ಈ ಯೋಜನೆ ಮಾರ್ಚ್‌ ತಿಂಗಳಿನಿಂದ ಜಾರಿ ಮಾಡುವ ಗುರಿ ಹೊಂದಲಾಗಿದೆ ಎಂದರು.

Advertisement

ಸಭೆಯಲ್ಲಿ ಸಂಸದರಾದ ಸಂಗಣ್ಣ ಕರಡಿ, ಶಾಸಕರಾದ ಬಸವರಾಜ ದಢೇಸುಗೂರು, ವಸತಿ ಇಲಾಖೆ ವ್ಯವಸ್ಥಾಪಕ ಮಹದೇವ ಪ್ರಸಾದ, ಜಿಲ್ಲಾಧಿಕಾರಿ ಪಿ. ಸುನೀಲ್‌ ಕುಮಾರ್‌, ಜಿಪಂ ಸಿಇಒ ರಘುನಂದನ್‌ ಮೂರ್ತಿ, ಎಡಿಸಿ ಎಂ.ಪಿ. ಮಾರುತಿ, ಎಸಿ ಸಿ.ಡಿ. ಗೀತಾ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿದ್ದರಾಮೇಶ್ವರ, ನಗರಸಭೆ ಪೌರಾಯುಕ್ತ ಮಂಜುನಾಥ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next