Advertisement

ಪ್ರವಾಸಿಗರಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಿ: ಡಿಸಿ

08:34 PM Sep 29, 2021 | Team Udayavani |

ಉಡುಪಿ: ಮಲ್ಪೆ ಬೀಚ್‌ಗೆ ಆಗಮಿಸುವ ಪ್ರವಾಸಿಗರಿಗೆ ಅಗತ್ಯ ಮೂಲ ಸೌಕರ್ಯಗಳು ಸೇರಿದಂತೆ ಅವರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡ ಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಎಂ. ಹೇಳಿದರು.

Advertisement

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಮಲ್ಪೆ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಲ್ಪೆ ಬೀಚ್‌ಗೆ ದೇಶ-ವಿದೇಶಗಳಿಂದ ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದು, ಪ್ರವಾಸಿಗರ ಅನುಕೂಲಕ್ಕೆ ಅಗತ್ಯವಿರುವ ಮೂಲ ಸೌಕರ್ಯ ಗಳಾದ ಕುಡಿಯುವ ನೀರು, ವಾಹನಗಳ ಸುಗಮ ಸಂಚಾರಕ್ಕೆ ಉತ್ತಮ ರಸ್ತೆ, ಪಾರ್ಕಿಂಗ್‌ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಸೇರಿದಂತೆ ಮತ್ತಿತರ ಅಗತ್ಯ ಮೂಲ ಸೌಕರ್ಯಗಳಿಗೆ ಆದ್ಯತೆ ಕಲ್ಪಿಸಿ ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸುವಂತೆ ನೋಡಿಕೊಳ್ಳಬೇಕು ಎಂದರು.

ಕಾಮಗಾರಿ ಶೀಘ್ರ ಪೂರ್ಣಗೊಳಿಸಿ
ಮಲ್ಪೆ ಬೀಚ್‌ನಲ್ಲಿ ಈಗಾಗಲೇ ಕೈಗೊಂಡಿರುವ ಮೂಲ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರದಲ್ಲಿ ಉತ್ತಮ ಗುಣಮಟ್ಟದೊಂದಿಗೆ ಪೂರ್ಣ ಗೊಳಿಸಿ, ಪ್ರವಾಸಿಗರ ಉಪಯೋಗಕ್ಕೆ ಅನುವು ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ:ಗಾಂಧಿ ಕುಟುಂಬ ಟೀಕಿಸಿದ ಕಾಂಗ್ರೆಸ್ ನಾಯಕ ಕಪಿಲ್ ವಿರುದ್ಧ ಪ್ರತಿಭಟನೆ| ಕಾರಿನ ಮೇಲೆ ದಾಳಿ

Advertisement

ನೀಲ ನಕಾಶೆ ಸಿದ್ಧಪಡಿಸಿ
ಮಲ್ಪೆ ಬೀಚ್‌ನಲ್ಲಿ ಅತ್ಯಾಧುನಿಕ ಮೂಲ ಸೌಕರ್ಯಗಳನ್ನೊಳಗೊಂಡ ಸಮಗ್ರ ಅಭಿವೃದ್ಧಿಯ ನೀಲ ನಕಾಶೆಯನ್ನು ಮುಂದಿನ 20 ವರ್ಷದ ಕಲ್ಪನೆಯೊಂದಿಗೆ ತಯಾರಿಸಲು, ಸಮಾಲೋಚಕರೊಂದಿಗೆ ಚರ್ಚಿಸಿ ಶೀಘ್ರವಾಗಿ ಕರಡು ತಯಾರಿಸಿ ತಿಳಿಸಬೇಕು ಎಂದರು.

ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚನೆ
ಮಲ್ಪೆ ಬೀಚ್‌ ಪ್ರದೇಶದಿಂದ ಸೈಂಟ್‌ಮೇರೀಸ್‌ ದ್ವೀಪಕ್ಕೆ ಹೋಗುವ ಸ್ಪೀಡ್‌ಬೋಟ್‌ಗಳು, ಮಲ್ಪೆ ಬಂದರಿನಿಂದ ಹೋಗುವ ದೊಡ್ಡ ಬೋಟ್‌ಗಳು, ಮಲ್ಪೆ ಬೀಚ್‌ ಪ್ರದೇಶದಲ್ಲಿ ರೌಂಡಿಂಗ್‌ ಬೋಟ್‌ ಹಾಗೂ ವಾಟರ್‌ ಸ್ಕೂಟಿ ಬೋಟ್‌ಗಳು ಮತ್ತಿತರ ಜಲಕ್ರೀಡೆಗಳನ್ನು ನಡೆಸಲು ಟೆಂಡರ್‌ ಪ್ರಕ್ರಿಯೆಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಿ, ಅವುಗಳಿಗೆ ಚಾಲನೆ ನೀಡುವಂತೆ ಸೂಚನೆ ನೀಡಿದರು.

ನಿರ್ವಹಣೆಗೆ ಸಮಿತಿ
ಶಾಸಕ ಕೆ.ರಘುಪತಿ ಭಟ್‌ ಮಾತ ನಾಡಿ, ಪಡುಕರೆ ಬೀಚ್‌ ಸಹ ಉತ್ತಮ ಪ್ರವಾಸಿ ಸ್ಥಳವಾಗಿದೆ. ಅಲ್ಲಿಯೂ ಸಹ ಪ್ರವಾಸಿಗರ ಆಗಮನ ದಿನೇ ದಿನೇ ಹೆಚ್ಚುತ್ತಿದೆ. ಅಲ್ಲಿನ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕು. ಬೀಚ್‌ನ ಅಭಿವೃದ್ಧಿ ನಿರ್ವಹಣೆಗೆ ಸ್ಥಳೀಯ ಭಜನ ಮಂದಿರದ ಸದಸ್ಯರು ಮತ್ತು ಸಂಘ-ಸಂಸ್ಥೆಗಳ ಪದಾಧಿಕಾರಿ ಗಳ ನ್ನೊಳಗೊಂಡ ಸಮಿತಿ ಮಾಡುವು ದರಿಂದ ನಿರ್ವಹಣೆಗೆ ಹೆಚ್ಚಿನ ಅನುಕೂಲ ವಾಗಲಿದೆ ಎಂದರು.

ಹಲವು ಚಟುವಟಿಕೆ
ಬೀಚ್‌ನಲ್ಲಿ ಪ್ರವಾಸಿಗರ ಮನೋ ರಂಜನೆ ಹಾಗೂ ಪ್ರಕೃತಿ ಸೌಂದರ್ಯ ಸವಿಯಲು ಅನುಕೂಲವಾಗುವಂತೆ ಹೆಚ್ಚು ಹೆಚ್ಚು ಪ್ರವಾಸಿ ಬೋಟ್‌ಗಳು, ಜಲಕ್ರೀಡೆ ಹಾಗೂ ಮತ್ತಿತರ ಉತ್ತಮ ಚಟುವಟಿಕೆಗಳನ್ನು ಕೈಗೊಂಡಾಗ ಪ್ರವಾಸಿಗರಿಗೆ ಹೆಚ್ಚಿನ ಮನೋಲ್ಲಾಸ ಸಿಗುತ್ತದೆ. ಅದಕ್ಕೆ ಆಸ್ಪದ ನೀಡಬೇಕು ಎಂದರು.

ಸರಕಾರಕ್ಕೆ ಪತ್ರ
ಪಡುಕರೆ ಸಮುದ್ರತೀರಕ್ಕೆ ಹೊಂದಿ ಕೊಂಡಿರುವ ಸರಕಾರಿ ಜಾಗವನ್ನು ಮರಿನ್‌ ಬೋರ್ಡ್‌ಗೆ ಹಸ್ತಾಂತರಿಸಲು ಸರಕಾರಕ್ಕೆ ಪತ್ರ ಬರೆಯುವಂತೆ ತಿಳಿಸಿದರು.

ಮಾರುಕಟ್ಟೆ ಮಳಿಗೆ
ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ| ನವೀನ್‌ ಭಟ್‌ ಮಾತನಾಡಿ, ಜಿಲ್ಲೆಯ ಕಲೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸ್ಥಳೀಯ ಕರಕುಶಲ ವಸ್ತಗಳನ್ನು ಮಾರಾಟ ಮಾಡಲು ಅನುಕೂಲವಾಗುವಂತೆ ಸೀವಾಕ್‌ ಪ್ರದೇಶದಲ್ಲಿ ಮಾರುಕಟ್ಟೆ ಮಳಿಗೆಯನ್ನು ಕಲ್ಪಿಸಬೇಕು. ಪ್ರವಾಸಿಗರು ಹೆಚ್ಚಾಗಿ ಆಗಮಿಸುವುದರಿಂದ ಸ್ಥಳೀಯ ಜನರಿಗೆ ಉದ್ಯೋಗ ದೊರೆಯುವುದರ ಜತೆಗೆ ಅರ್ಥಿಕ ಲಾಭ ದೊರೆಯುತ್ತದೆ ಎಂದರು.

ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್‌, ನಗರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್‌ ಕೊಳ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕುಮಾರ್‌ಚಂದ್ರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರ ಸಭೆ ಆಯುಕ್ತ ಉದಯ ಶೆಟ್ಟಿ, ನಗರಸಭೆ ಸದಸ್ಯರಾದ ಎಡ್ಲಿನ್‌ ಕರ್ಕಡ, ಸುಂದರ್‌ ಕಲ್ಮಾಡಿ, ವಿಜಯ್‌ ಕೊಡವೂರು, ವಿಜಯ್‌ ಕುಂದರ್‌, ಅಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಜೀವರಕ್ಷಕ ಸಿಬಂದಿ ನಿಯೋಜಿಸಿ
ಇತ್ತೀಚಿನ ದಿನಗಳಲ್ಲಿ ಬೀಚ್‌ಗೆ ಬರುವ ಪ್ರವಾಸಿಗರಿಗೆ ಸಮುದ್ರದ ಅಪಾಯದ ಸ್ಥಳಗಳ ಬಗ್ಗೆ ಮಾಹಿತಿ ಕೊರತೆಯಿಂದಾಗಿ ಪ್ರಾಣಾಪಾಯಗಳು ಸಂಭವಿಸುತ್ತಿವೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲು, ಸಮುದ್ರ ತೀರದಲ್ಲಿ ಮೈಕ್‌ ಮೂಲಕ ಎಚ್ಚರಿಕೆ ಸಂದೇಶಗಳನ್ನು ರವಾನಿಸಬೇಕು. ಒಂದೊಮ್ಮೆ ಅಪಾಯಕ್ಕೆ ಒಳಗಾದವರನ್ನು ರಕ್ಷಿಸಲು ಜೀವರಕ್ಷಕ ಸಿಬಂದಿಯನ್ನು ನಿಯೋಜಿಸಬೇಕು ಎಂದು ಡಿಸಿ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next