Advertisement

ಮಜೂರಿ ಹೆಚ್ಚಳಕ್ಕಾಗಿ ಆಗ್ರಹಿಸಿ ಪ್ರತಿಭಟನೆ

06:09 PM Jan 29, 2022 | Team Udayavani |

ರಬಕವಿ-ಬನಹಟ್ಟಿ: ಜೋಡಣಿದಾರರ ನೇಕಾರರು ಮಜೂರಿ ಹೆಚ್ಚಳಕ್ಕಾಗಿ ಮೂರು ದಿನಗಳಿಂದ ತಮ್ಮ ಮಗ್ಗಗಳನ್ನು ಬಂದ್‌ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದಾಗಿ ಅಂದಾಜು 3000ಕ್ಕೂ ಹೆಚ್ಚು ಮಗ್ಗಗಳು ಮೂರು ದಿನಗಳಿಂದ ಬಂದ್‌ ಆಗಿವೆ.

Advertisement

ಜೋಡಣಿದಾರರ ಮಗ್ಗಗಳು ಬಂದಾಗಿರುವುದರಿಂದ ಅಂದಾಜು 15 ಸಾವಿರಕ್ಕೂ ಹೆಚ್ಚು ಜನ ಅವಲಂಬಿತರು ಎರಡು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜೋಡಣಿದಾರರ ನೇಕಾರರ ಮುಖಂಡರಾದ ಕುಬೇರ ಸಾರವಾಡ ಮತ್ತು ಕುಮಾರ ಬೀಳಗಿ ಹೇಳಿದರು. ಜೋಡಣಿದಾರ ನೇಕಾರರು ಮಜೂರಿ ಹೆಚ್ಚಳಕ್ಕಾಗಿ ಆಗ್ರಹಿಸಿ ಉಪ ತಹಶೀಲ್ದಾರ್‌ ಎಸ್‌. ಎಲ್‌.ಕಾಗಿಯವರ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

ಪ್ರತಿ ಸೀರೆಗೆ 9 ರೂ. ಹೆಚ್ಚು ಮಾಡುವಂತೆ ಮಾಲೀಕರಿಗೆ ಜನವರಿ 7ರಂದು ನೊಟೀಸ್‌ ನೀಡಲಾಗಿತ್ತು. ಆದರೆ, ಜೋಡಣಿದಾರ ಮಾಲೀಕರು 4.50 ರೂ. ಹೆಚ್ಚಳ ಮಾಡುವುದಾಗಿ ತಿಳಿಸಿದ್ದಾರೆ. ಆದ್ದರಿಂದ ಮಾಲೀಕರು ಬೇಡಿಕೆಗೆ ಸ್ಪಂದಿಸದೆ ಇರುವುದರಿಂದ ಮೂರು ದಿನಗಳಿಂದ ಮಗ್ಗಗಳನ್ನು ಬಂದ್‌ ಮಾಡಿ ಪ್ರತಿಭಟನೆ ನಡೆಸುತ್ತಿದ್ದೇವೆ.

ಈಗಾಗಲೇ ಪಕ್ಕದ ರಬಕವಿ ನಗರದಲ್ಲಿ 9ರೂ. ಹೆಚ್ಚಳ ಮಾಡಿದ್ದಾರೆ. ಆದ್ದರಿಂದ ನಮಗೂ ಕೂಡಾ 9 ರೂ. ನೀಡಬೇಕು ಎಂದು ಕೇಳಿದ್ದೇವೆ. ಈಗ ಜೋಡಣಿದಾರರ ನೇಕಾರರಿಗೆ ಒಂದು ಸೀರೆಗೆ 93 ರೂ. ಕೊಡಲಾಗುತ್ತಿದೆ ಎಂದರು.

ಜೋಡಣಿದಾರರ ನೇಕಾರರು ಕೂಡಾ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. 2015ರಿಂದ ಮಜೂರಿ ಹೆಚ್ಚಳಕ್ಕಾಗಿ ಬೇಡಿಕೆ ಇಟ್ಟಿಲ್ಲ. ಏಳು ವರ್ಷಗಳಿಂದ ಒಂದೇ ಮಜೂರಿಯಲ್ಲಿ ಉದ್ಯೋಗ ಮಾಡುತ್ತಿದ್ದೇವೆ. ಮಾರುಕಟ್ಟೆಯಲ್ಲಿ ಆಹಾರ ಪದಾರ್ಥ, ತರಕಾರಿ ಬೆಲೆಗಳು ಸೇರಿದಂತೆ ಇನ್ನೀತರ ಅವಶ್ಯಕ ವಸ್ತುಗಳ ಬೆಲೆಗಳು ಹೆಚ್ಚಾಗಿವೆ. ಅದೇ ರೀತಿಯಾಗಿ ಕೋವಿಡ್‌ ಸಂದರ್ಭದಲ್ಲಿ ಉದ್ಯೋಗ ಇಲ್ಲದೆ ಇರುವುದರಿಂದ ಬಹಳಷ್ಟು ನೇಕಾರರು ತೊಂದರೆ ಅನುಭವಿಸಿದ್ದಾರೆ.

Advertisement

ಅದೇ ರೀತಿಯಾಗಿ ವಿದ್ಯುತ್‌ ದರ ಕೂಡಾ ಹೆಚ್ಚಾಗಿದೆ. ಒಂದು ಎಚ್‌.ಪಿ ಮೋಟಾರ್‌ಗೆ ಕನಿಷ್ಟ ದರವನ್ನು 25 ರೂ. ಇದ್ದ ಬೆಲೆಯನ್ನು 75 ರೂ.ಗೆ ಹೆಚ್ಚಳ ಮಾಡಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ನೀಡಿದ ರಿಯಾಯ್ತಿಯನ್ನು ವಿದ್ಯುತ್‌ ಇಲಾಖೆಯವರು ಈಗ ಮರಳಿ ಪಡೆದುಕೊಳ್ಳುತ್ತಿದ್ದಾರೆ. ಇದು ಭಾರಿ ಹೊಣೆಯಾಗಿದೆ. ಮಾರುಕಟ್ಟೆಯಲ್ಲಿ ಮಗ್ಗದ ಬಿಡಿ ಭಾಗಗಳು ದುಬಾರಿಯಾಗಿವೆ. ಇದರಿಂದಾಗಿ ಮಗ್ಗಗಳ ನಿರ್ವಹಣೆ ಕೂಡಾ ಸಮಸ್ಯೆಯಾಗಿದೆ ಎನ್ನುತ್ತಾರೆ ಜೋಡಣಿದಾರರು.

ಆದ್ದರಿಂದ ಜೋಡಣಿದಾರ ನೇಕಾರಿಕೆ ಅವಲಂಬಿಸಿದ ಕುಟುಂಬಗಳು ಎರಡು ಹೊತ್ತಿನ ಊಟ ಮಾಡಬೇಕಾದರೆ 9 ರೂ. ಮಜೂರಿ ಹೆಚ್ಚಳವಾಗಬೇಕಾಗಿದೆ ಎಂದು ಮುಖಂಡರಾದ ಬಸವರಾಜ ಮುರಗೋಡ, ಪರಮಾನಂದ ಭಾವಿಕಟ್ಟಿ,ಮಹಾದೇವ ನುಚ್ಚಿ, ಬಾಗಪ್ಪ ಬಾಣಕಾರ, ನಾಮದೇವ ಮಾನೆ, ರಮೇಶ ಸುಪ್ತಾನಪುರ ಸೇರಿದಂತೆ ನೂರಾರು ನೇಕಾರರು ಆಗ್ರಹಿಸಿದರು. ಬನಹಟ್ಟಿಯಲ್ಲಿ ಜೋಡಣಿದಾರ ನೇಕಾರರು ಮಜೂರಿ ಹೆಚ್ಚಳಕ್ಕಾಗಿ ಆಗ್ರಹಿಸಿ ಉಪ ತಹಶೀಲ್ದಾರ್‌ ಎಸ್‌.ಎಲ್‌.ಕಾಗಿಯವರ ಅವರಿಗೆ ಮನವಿ ಸಲ್ಲಿಸಿದರು.

ನೇಕಾರ ಮಾಲೀಕರ ಮುಖಂಡರಾದ ಶಂಕರ ಜಾಲಿಗಿಡದ ಮಾತನಾಡಿ, ಈಗಾಗಲೇ ನಾವು 4.50 ರೂ. ಹೆಚ್ಚಳ ಮಾಡುತ್ತೇವೆ ಎಂದು ಹೇಳಿದ್ದೇವೆ. ಇದಕ್ಕೆ ಸ್ಪಂದಿಸಿದ ಕೆಲವು ನೇಕಾರರು ಉದ್ಯೋಗದಲ್ಲಿ ತೊಡಗಿದ್ದಾರೆ. ನೇಕಾರ ಮಾಲೀಕರ ಮುಖಂಡರಿಗೂ ಸಾಕಷ್ಟು ಸಮಸ್ಯೆಗಳಿವೆ. ನೇಕಾರಿಕೆಯ ಉದ್ಯೋಗಕ್ಕೆ ಬೇಕಾದ ಕಚ್ಚಾ ನೂಲು, ಬಣ್ಣ, ಝರಿ, ಚಮಕಾ ಜೊತೆಗೆ ಜಿಎಸ್ಟಿ ಏರಿಕೆಯಿಂದಾಗಿ ನಮಗೂ ಕೂಡಾ ಹೊರೆಯಾಗಿದೆ. ಇವೆಲ್ಲವುಗಳಿಂದ ಮುಖ್ಯವಾಗಿ ನಮ್ಮ ಸೀರೆಗಳಿಗೆ ಮಾರುಕಟ್ಟೆಯೂ ಕೂಡಾ ಕಡಿಮೆಯಾಗುತ್ತಿದೆ. ನಾವು ನೇಕಾರರಿಗೂ ಮುಂಗಡ ಹಣ ನೀಡಬೇಕಾಗಿದೆ. ಜೊತೆಗೆ ಸೀರೆ ಖರೀದಿ ಮಾಡಿದವರಿಗೂ ಕೂಡಾ ಉದ್ರಿ ನೀಡಬೇಕಾಗಿದೆ. ಆದ್ದರಿಂದ ನಾವು 4.50 ರೂ. ಕೊಡಲು ಸಂಪೂರ್ಣ ಒಪ್ಪಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next