ಬೆಂಗಳೂರು: ಸಾಲ ಮನ್ನಾ ಘೋಷಣೆಯಿಂದ ಹೆಚ್ಚಿನ ರೈತರಿಗೆ ಅನುಕೂಲವಾಗುವುದಿಲ್ಲ ಎಂದು ಆರೋಪಿಸಿರುವ ರೈತ ಸಂಘ, ಸಂಪೂರ್ಣ ಸಾಲ ಮನ್ನಾಗೆ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಲು ನಿರ್ಧರಿಸಿದೆ.
ಸೋಮವಾರ ನಗರದ ಮೌರ್ಯ ವೃತ್ತದಲ್ಲಿರುವ ಗಾಂಧಿ ಪ್ರತಿಮೆ ಬಳಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ. ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳ ರೈತರು ಇದರಲ್ಲಿ ಭಾಗವಹಿಸಲಿದ್ದಾರೆಂದು ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಹಾವೇರಿನಲ್ಲಿ ಜುಲೈ 21ರಂದು ರಾಜ್ಯಮಟ್ಟದ ಬೃಹತ್ ಸಮಾವೇಶ ಸಹ ಹಮ್ಮಿಕೊಳ್ಳಲಾಗಿದೆ. ಸಂಪೂರ್ಣ ಸಾಲಮನ್ನಾ ಘೋಷಣೆಯಾಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು.
ರಾಜ್ಯದ ಒಟ್ಟು ರೈತರ ಸಾಲ 1.20 ಲಕ್ಷ ಕೋಟಿ ರೂ. ಇದೆ. ಪ್ರಸ್ತುತ ಘೋಷಣೆಯಾಗಿರುವ ಸಾಲ ಮನ್ನಾದಿಂದ ಹೆಚ್ಚು ಪ್ರಯೋಜನವಾಗದು. ಬಜೆಟ್ನಲ್ಲಿ 34 ಸಾವಿರ ಕೋಟಿ ರೂ.ಸಾಲಮನ್ನಾ ಆಗಲಿದೆ ಎಂದು ಪ್ರಸ್ತಾಪಿಸಲಾಗಿದೆ.
1.20 ಲಕ್ಷ ಕೋಟಿ ರೂ.ಪೈಕಿ 34 ಸಾವಿರ ಕೋಟಿ ರೂ.ಮಾತ್ರ ಮನ್ನಾ ಆದರೆ ಉಳಿದ ಸಾಲದ ಕಥೆ ಏನು ಎಂಬುದು ನಮ್ಮ ಪ್ರಶ್ನೆ. ನಾವು ಸಂಪೂರ್ಣ ಸಾಲ ಮನ್ನಾ ಮಾಡಿ ರೈತರನ್ನು ಋಣಮುಕ್ತರನ್ನಾಗಿ ಮಾಡಿ ಎಂದು ಆಗ್ರಹಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.