Advertisement

ಜಿಲ್ಲೆಯಲ್ಲಿ ಹರತಾಳ: ಜನಜೀವನ ಅಸ್ತವ್ಯಸ್ತ

08:53 PM Dec 17, 2019 | Team Udayavani |

ಕಾಸರಗೋಡು: ಪೌರತ್ವ ಕಾಯ್ದೆ ತಿದ್ದುಪಡಿಯನ್ನು ಪ್ರತಿಭಟಿಸಿ ಸಂಯುಕ್ತ ಸಮಿತಿ ಕರೆ ನೀಡಿದ ಹರತಾಳದಿಂದ ಕಾಸರಗೋಡು ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು. ಎಸ್‌.ಡಿ.ಪಿ.ಐ, ವೆಲ್ಫೆàರ್‌ ಪಾರ್ಟಿ, ಬಿ.ಎಸ್‌.ಪಿ. ಮೊದಲಾದ ಸಂಘಟನೆಗಳ ಸಂಯುಕ್ತ ಸಮಿತಿ ಹರತಾಳಕ್ಕೆ ಕರೆ ನೀಡಿತ್ತು.

Advertisement

ಹರತಾಳದ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳು, ಕೆಎಸ್‌ಆರ್‌ಟಿಸಿ ಬಸ್‌ಗ ಸಂಚಾ ರ ಸಂಪೂರ್ಣ ಮೊಟಕುಗೊಂಡಿತ್ತು. ಮಂಗಳವಾರ ಬೆಳಗ್ಗೆ ಕೇರಳ ಕೆ.ಎಸ್‌.ಆರ್‌.ಟಿ.ಸಿ.ಯ ಕೆಲವೊಂದು ಬಸ್‌ಗಳು ಪೊಲೀಸ್‌ ಬೆಂಗಾವಲಿನಲ್ಲಿ ಕಾಂಞಂಗಾಡ್‌, ಪಯ್ಯನ್ಯೂರಿಗೆ ಸರ್ವಿಸ್‌ ನಡೆಸಿತ್ತು. ಆ ಬಳಿಕ ನಿಲುಗಡೆಗೊಂಡಿದ್ದವು. ಕಾಸರಗೋಡಿನಲ್ಲಿ ಖಾಸಗಿ ವಾಹನಗಳು ಯಾವುದೇ ಅಡ್ಡಿಯಿಲ್ಲದೆ ಸಂಚರಿಸಿದವು. ಆಟೋ ರಿಕ್ಷಾ, ದ್ವಿಚಕ್ರ ವಾಹನಗಳು, ಕಾರು ಮೊದಲಾದವು ಸಂಚಾರ ನಡೆಸಿವೆ. ಸರಕು ಲಾರಿಗಳನ್ನು ಅಲ್ಲಲ್ಲಿ ರಸ್ತೆ ಬದಿಗಳಲ್ಲಿ ನಿಲುಗಡೆಗೊಳಿಸಲಾಗಿದೆ. ಕಾಂಞಂಗಾಡ್‌ನ‌ಲ್ಲಿ ಖಾಸಗಿ ಬಸ್‌ಗಳು ಸರ್ವಿಸ್‌ ನಡೆಸಿವೆ. ಬೆಳಗ್ಗೆ ಆರು ಗಂಟೆಗೆ ಆರಂಭಗೊಂಡ ಹರತಾಳ ಸಂಜೆ ಆರು ಗಂಟೆಯ ವರೆಗೆ ನಡೆಯಿತು. ಶಾಲೆಗಳು, ಸರಕಾರಿ ಕಚೇರಿಗಳು ಎಂದಿನಂತೆ ಕಾರ್ಯಾಚರಿಸಿದವು.

ಹರತಾಳ ಘೋಷಿಸಿದ್ದರೂ ಶಾಲೆಗಳಲ್ಲಿ ಪರೀಕ್ಷೆಗೆ ಸಂಬಂಧಿಸಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಸಾರ್ವಜನಿಕ ವಿದ್ಯಾಭ್ಯಾಸ ನಿರ್ದೇಶಕ ಕೆ.ಜೀವನ್‌ಬಾಬು ಅವರು ಶಾಲಾ ಪರೀಕ್ಷೆಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಹೇಳಿದ್ದರು.

ಕಾಸರಗೋಡಿನಲ್ಲಿ ಅಂಗಡಿ ಮುಂಗಟ್ಟುಗಳು ತೆರೆಯಲಿಲ್ಲ. ಆದರೆ ಕಾಂಞಂಗಾಡ್‌ನ‌ಲ್ಲಿ ಭಾಗಿಕವಾಗಿ ತೆರೆದಿದ್ದವು. ಕೆಲವೊಂದು ಕಡೆ ವಾಹನಗಳಿಗೆ ತಡೆ ನಡೆದಿದ್ದರೂ, ಪೊಲೀಸರು ಬಿಗು ಬಂದೋಬಸ್ತು ಏರ್ಪಡಿಸಿದ ಹಿನ್ನೆಲೆಯಲ್ಲಿ ಹರತಾಳ ಬಹುತೇಕ ಶಾಂತಿಯುತವಾಗಿತ್ತು. ಇದೇ ವೇಳೆ ಮಾಯಿಪ್ಪಾಡಿಯಲ್ಲಿ ಕೆಲವು ಮನೆಗಳಿಗೆ ಕಲ್ಲೆಸೆದು ಹಾನಿಗೊಳಿಸಿದ ಘಟನೆ ನಡೆದಿದೆ.

ಪ್ರತಿಭಟನ ಮೆರವಣಿಗೆ
ಪೌರತ್ವ ಕಾಯ್ದೆ ತಿದ್ದುಪಡಿಯನ್ನು ಪ್ರತಿಭಟಿಸಿ ಸಂಯುಕ್ತ ಸಮಿತಿ ನೇತೃತ್ವದಲ್ಲಿ ಕಾಸರಗೋಡು ನಗರದಲ್ಲಿ ಮೆರವಣಿಗೆ ನಡೆಯಿತು. ಕಾಸರಗೋಡು ಹೊಸ ಬಸ್‌ ನಿಲ್ದಾಣ ಪರಿಸರದಿಂದ ಆರಂಭಿಸಿದ ಮೆರವಣಿಗೆ ಹಳೆ ಬಸ್‌ ನಿಲ್ದಾಣ ಪರಿಸರದಲ್ಲಿ ಸಮಾಪ್ತಿಗೊಂಡಿತು. ಮೆರವಣಿಗೆಗೆ ಎಸ್‌ಡಿಪಿಐ ನೇತಾರರಾದ ಎನ್‌.ಯು. ಅಬ್ದುಲ್‌ ಸಲಾಂ, ಖಾದರ್‌ ಅರಫ, ವೆಲ್ಫೆರ್‌ ಪಾರ್ಟಿ ನೇತಾರರಾದ ಮುಹಮ್ಮದ್‌ ವಡಕ್ಕೆಕರ, ಅಂಬುಂಞಿ ತಲಕ್ಲಾಯಿ, ಪಿ.ಕೆ.ಅಬ್ದುಲ್ಲ, ಎಸ್‌ಡಿಟಿಯು ನೇತಾರ ಅಶ್ರಫ್‌ ಕೋಳಿಯಡ್ಕಂ, ಎಫ್‌ಐಟಿಯು ನೇತಾರ ಹಮೀದ್‌ ಕಕ್ಕಂಡಿ, ಸಾಲಿಡಾರಿಟಿ ನೇತಾರ ಸಿ.ಎ.ಯೂಸುಫ್‌, ಎಸ್‌.ಐ.ಒ. ನೇತಾರ ಎ.ಜಿ.ಜಾಸೀರ್‌, ಫಟೆರ್ನಿಟಿ ಮೂವ್‌ಮೆಂಟ್‌ ನೇತಾರ ಸಿರಾಜ್‌ ಮೊದಲಾದವರು ಮೆರವಣಿಗೆಗೆ ನೇತೃತ್ವ ನೀಡಿದರು.

Advertisement

ಮಾರಾರ್‌ ಜೀ ಸ್ಮಾರಕಕ್ಕೆ ಹಾನಿ
ಹರತಾಳದ ಹಿನ್ನೆಲೆಯಲ್ಲಿ ತೃಕ್ಕರಿಪುರದಲ್ಲಿ ಬಿಜೆಪಿಯ ಮಾರಾರ್‌ ಜೀ ಸ್ಮಾರಕ ಮಂದಿರ ಕಚೇರಿಗೆ ಮಂಗಳವಾರ ಮುಂಜಾನೆ ಅಕ್ರಮಿಗಳು ದಾಳಿ ನಡೆಸಿ ಧ್ವಂಸಗೊಳಿಸಿದ್ದಾರೆ. ಕಚೇರಿಯ ಬಾಗಿಲು ಮುರಿದು, ಅದರೊಳಗಿದ್ದ ಟಿವಿ, ಪೀಠೊಪಕರಣಗಳು ಇತ್ಯಾದಿಗಳನ್ನು ಧ್ವಂಸಗೊಳಿಸಲಾಗಿದೆ. ಇದರಿಂದ ಸಾವಿರಾರು ರೂ. ನಷ್ಟವಾಗಿದೆ. ಈ ಬಗ್ಗೆ ನೀಡಲಾದ ದೂರಿನಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಹಿಂದೆ ಇದೇ ಸ್ಮಾರಕವನ್ನು ಮೂರು ಬಾರಿ ಹಾನಿಗೊಳಿಸಲಾಗಿತ್ತು.

ಆಂಶಿಕ ಪ್ರತಿಕ್ರಿಯೆ
ಬದಿಯಡ್ಕ, ಮುಳ್ಳೇರಿಯ, ಪೆರ್ಲ ಮೊದಲಾದೆಡೆಗಳಲ್ಲಿ ಹರತಾಳಕ್ಕೆ ಆಂಶಿಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಪ್ರದೇಶಗಳಲ್ಲಿ ವ್ಯಾಪಾರ ಸಂಸ್ಥೆಗಳು ಆಂಶಿಕವಾಗಿ ತೆರೆದಿವೆೆ. ಖಾಸಗಿ ವಾಹನಗಳು, ಕೆಲವು ಆಟೋ ರಿಕ್ಷಾಗಳು ಸಂಚಾರ ನಡೆಸಿವೆ. ಆದರೆ ಬಸ್‌ ಸಂಚಾರವಿಲ್ಲದುದರಿಂದ ಜನ ಸಂಚಾರ ವಿರಳವಾಗಿತ್ತು. ಪೆರ್ಲದಲ್ಲಿ ಬಹುತೇಕ ಅಂಗಡಿಗಳು ತೆರೆದಿವೆ. ಆಟೋ ರಿಕ್ಷಾ, ಟ್ಯಾಕ್ಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸಿವೆ. ಕರ್ನಾಟಕದಿಂದ ಕಾಸರಗೋಡಿಗೆ ಆಗಮಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚಾರ ಮೊಟಕುಗೊಳಿಸಿವೆ.
ಮಂಜೇಶ್ವರ, ಉಪ್ಪಳ, ಕುಂಬಳೆ

ಪೇಟೆಯಲ್ಲಿ ಹರತಾಳದಿಂದಾಗಿ ಯಾವುದೇ ಅಂಗಡಿಗಳು ತೆರೆಯಲಿಲ್ಲ. ಬಸ್‌ಗಳು ಓಡಾಟ ನಡೆಯಲಿಲ್ಲ. ಆದರೆ ಕೆಲವೊಂದು ಆಟೋ ರಿಕ್ಷಾಗಳು, ಕಾರುಗಳು, ಬೈಕ್‌ಗಳು ಸಂಚಾರ ನಡೆಸಿತು. ಹೊಸಂಗಡಿಯಲ್ಲಿ ಅಂಗಡಿ, ಹೊಟೇಲ್‌ಗ‌ಳು ಮುಚ್ಚಿವೆ. ಉಪ್ಪಳ, ಕುಂಬಳೆಯಲ್ಲೂ ಅಂಗಡಿಗಳು, ಹೊಟೇಲ್‌ಗ‌ಳು ಮುಚ್ಚಿವೆ. ಆಟೋ ರಿಕ್ಷಾಗಳು ಕುಂಬಳೆಯಲ್ಲಿ ಸಂಚಾರ ನಡೆಸಿತು. ಉಪ್ಪಳ ಮೀನು ಮಾರುಕಟ್ಟೆಯಲ್ಲಿ ಮೀನು ಏಲಂ ನಡೆಸುತ್ತಿದ್ದ ಸ್ಥಳಕ್ಕೆ ತಲುಪಿದ ಹರತಾಳ ಬೆಂಬಲಿಗರು ಮೀನು ಏಲಂ ತಡೆಯಲು ಯತ್ನಿಸಿದರು. ಇದರಿಂದ ಕೆಲವು ಹೊತ್ತು ಉದ್ರಿಕ್ತ ಸ್ಥಿತಿಗೆ ಕಾರಣವಾಯಿತು. ಮಂಜೇಶ್ವರ ಸಿ.ಐ. ದಿನೇಶ್‌ ನೇತೃತ್ವದಲ್ಲಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ಶಾಂತಗೊಳಿಸಿದರು.

ಮೀನು ಲಾರಿಗೆ ತಡೆ
ಹರತಾಳ ಬೆಂಬಲಿಗರು ಮೆರವಣಿಗೆಯ ಸಂದರ್ಭದಲ್ಲಿ ಹಳೆ ಬಸ್‌ ನಿಲ್ದಾಣ ಪರಿಸರದಲ್ಲಿ ಮೀನಿನ ಲಾರಿಯನ್ನು ತಡೆದು ನಿಲ್ಲಿಸಿದರು. ಹರತಾಳ ಬೆಂಬಲಿಗರನ್ನು ತೆರವುಗೊಳಿಸಲು ಯತ್ನಿಸುತ್ತಿದ್ದಾಗ ಯುವಕನೋರ್ವ ಕಾಸರಗೋಡು ಟೌನ್‌ ಸಿ.ಐ. ಅಬ್ದುಲ್‌ ರಹೀಮ್‌ ಅವರ ಕಾಲರ್‌ ಹಿಡಿದೆಳೆದ ಘಟನೆ ನಡೆಯಿತು. ಈ ಯುವಕನನ್ನು ವಶಕ್ಕೆ ತೆಗೆದುಕೊಳ್ಳಲು ಪೊಲೀಸರು ಯತ್ನಿಸಿದಾಗ ಇತರರು ತಡೆದರು. ಈ ಸಂದರ್ಭದಲ್ಲಿ ಪೊಲೀಸರು ಬಲ ಪ್ರಯೋಗಿಸಿ ಕಾಲರ್‌ ಹಿಡಿದ ಯುವಕನ ಸಹಿತ ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಅನುಮತಿ ರಹಿತ ಮೆರವಣಿಗೆ
ಹರತಾಳಕ್ಕೆ ಬೆಂಬಲ ನೀಡಿ ಅನುಮತಿ ರಹಿತ ಮೆರವಣಿಗೆ ನಡೆಸಿದ 20 ಮಂದಿ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ. ಸಿದ್ದಿಕ್‌, ಮುಸ್ತಫ ಚಕ್ಕುಡಲ್‌, ಆಸಿಫ್‌ ಮೂಕಂಪಾರೆ, ಕರೀಂ ಕಾಡಮನೆ ಸಹಿತ 20 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಡಿ. 16ರಂದು ರಾತ್ರಿ ಬದಿಯಡ್ಕ ಪೇಟೆಯಲ್ಲಿ ಗುಂಪೊಂದು ಮೆರವಣಿಗೆ ನಡೆಸಿತ್ತು.

91 ಮಂದಿ ವಿರುದ್ಧ ಕೇಸು
ಪೌರತ್ವ ಕಾಯ್ದೆ ತಿದ್ದುಪಡಿಯನ್ನು ಪ್ರತಿಭಟಿಸಿ ಹರತಾಳಕ್ಕೆ ಮುನ್ನ ನಗರದಲ್ಲಿ ಮೆರವಣಿಗೆ ನಡೆಸಿದ ಸಂಯುಕ್ತ ಸಮಿತಿಯ ನೇತಾರರ ಸಹಿತ 91 ಮಂದಿ ವಿರುದ್ಧ ಕಾಸರಗೋಡು ನಗರ ಪೊಲೀಸರು ಕೇಸು ದಾಖಲಿಸಿದ್ದಾರೆ. ಎಸ್‌ಡಿಪಿಐ ಜಿಲ್ಲಾ ಅಧ್ಯಕ್ಷ ಎನ್‌.ಯು.ಅಬ್ದುಲ್‌ ಸಲಾಂ, ಸಕರಿಯಾ, ಗಫೂರ್‌, ಬಶೀರ್‌, ಮುಹಮ್ಮದ್‌ ಬಾವಿಕರೆ, ಸಮೀರ್‌ ತಳಂಗರೆ, ನೌಫಲ್‌ ಉಳಿಯತ್ತಡ್ಕ, ಸಿದ್ದಿಕ್‌ ಪೆರಿಯ, ಮುಸ್ತಫ ಸಹಿತ 91 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಐಪಿಸಿ 143, 145, 283, 149 ಪೊಲೀಸ್‌ ಕಾಯ್ದೆಯಂತೆ ಕೇಸು ದಾಖಲಿಸಲಾಗಿದೆ.

8 ಮಂದಿ ವಶಕ್ಕೆ
ಹರತಾಳದ ನೆಪದಲ್ಲಿ ಉಳಿಯತ್ತಡ್ಕದಲ್ಲಿ ವಾಹನ ತಡೆಗೆ ಯತ್ನಿಸಿದ ಎಂಟು ಮಂದಿಯನ್ನು ವಿದ್ಯಾನಗರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next